Advertisement

ರುದ್ರಾಕ್ಷಿ ರೂಪದ ಕೋಟಿ ಶಿವಲಿಂಗ; ಇದು ಪ್ರಸಿದ್ಧ ಕೋಟೇಶ್ವರದ ಕೋಟಿಲಿಂಗೇಶ್ವರ ಸನ್ನಿಧಿ

03:04 PM Mar 11, 2021 | ಶ್ರೀರಾಜ್ ವಕ್ವಾಡಿ |

ಇಂದು ದೇಶದೆಲ್ಲೆಡೆ ಮಹಾ ಶಿವರಾತ್ರಿಯ ಸಂಭ್ರಮ. ದೇಶದಾದ್ಯಂತ ಶಿವನ ಆರಾಧನೆ ಇಂದು ನಡೆಯುತ್ತಿದೆ. ಎಲ್ಲೆಡೆ ಶಿವರಾತ್ರಿಯ ಸಂಭ್ರಮದ ಸಡಗರ. ಶಿವಾಲಯಗಳಲ್ಲಿ ಶಿವನ ಪ್ರೀತ್ಯರ್ಥವಾಗಿ ಇಂದು ರುದ್ರಾಭಿಷೇಕಾದಿ ಹಲವು ಪೂಜಾ ಪುನಸ್ಕಾರಗಳು ನಡೆಯುತ್ತಿವೆ.

Advertisement

ಭಾರತ ದೇವಾಲಯಗಳ ತವರು, ಅಡಿಗಡಿಗೂ ಇಲ್ಲಿ ದೇವಾಲಯ ಸಾನಿಧ್ಯವನ್ನು ನಾವು ಕಾಣುತ್ತೇವೆ. ಇಂದು ಶಿವನ ದೇವಾಲಯಗಳು ವಿಶೇಷವಾಗಿ ಪೂಜಾ ಪುನಸ್ಕಾರಗಳಿಂದ ಕೂಡಿರುತ್ತವೆ. ಭಕ್ತರ ಸಮೂಹ ಶಿವಾಲಯದಲ್ಲಿ ಕೂಡುವುದು ಸಹಜ.

ಇಂದು ವಿಶೇಷವಾಗಿ ಶಿವನ ದೇವಸ್ಥಾನಕ್ಕೆ ತೆರಳಿ ಭಕ್ತಿಯನ್ನು ಸಮರ್ಪಿಸಿದ್ದಲ್ಲಿ ಶಿವ ಒಲಿಯುತ್ತಾನೆ ಎಂಬುವುದು ನಂಬಿಕೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ (ಧ್ವಜಪುರ)ದ ಪುರಾಣ ಪ್ರಸಿದ್ಧ ದೇವಾಲಯ ಕೋಟಿಲಿಂಗೇಶ್ವರನಿಗೆ ಮಾನಸ ಪ್ರದಕ್ಷಿಣೆ ಮಾಡಿ ಬರುವ. ಕ್ಷೇತ್ರ ದರುಶನಕ್ಕೆ ನಾವೆಲ್ಲರೂ ಪ್ರಾರ್ಥಿಸಿಕೊಳ್ಳೋಣ.

ಪೌರಾಣಿಕ ಹಿನ್ನಲೆ :

Advertisement

ಭಾರತವು ವಿಶಾಲವಾದ ಬಹು ಸಂಸ್ಕೃತಿಯ ನೆಲ ಭೂಮಿ. ಉತ್ತರದಲ್ಲಿ ಹಿಮ ಶೃಂಗ, ಮೂರ್ದಿಕ್ಕುಗಳಲ್ಲಿ ಭೋರ್ಗರೆಯುವ ಶರಧಿಯನ್ನು ಹೊಂದಿರುವುದರಿಂದ ವಿಶ್ವ ಭೂಪಟದಲ್ಲಿ ಭಾರತ ದೇಶ ಒಂದು ಪರ್ಯಾಯ ದ್ವೀಪದಂತೆ ಭಾಸವಾಗುತ್ತದೆ. ನಮ್ಮ ಅನುಕೂಲಕ್ಕಾಗಿ ವಿಂಧ್ಯ ಪರ್ವತದ ಉತ್ತರ ಭಾಗವನ್ನು ಉತ್ತರ ಭಾರತವೆಂದೂ, ದಕ್ಷಿಣ ಭಾಗವನ್ನು ದಕ್ಷಿಣ ಭಾರತವೆಂದೂ ಕರೆಯುತ್ತೇವೆ. ಮಹರ್ಷಿಗಳಾದ ಅಗಸ್ತ್ಯ, ವಿಶ್ವಾಮಿತ್ರರನ್ನೊಳಗೊಂಡು ಹಲವರು ಹಿಂದಿನ ಕಾಲದಲ್ಲಿ ದುರ್ಗಮ ವಿಂಧ್ಯ ಪರ್ವತವನ್ನು ದಾಟಿ ದಕ್ಷಿಣ ಭಾರತಕ್ಕೆ ಇಳಿದು ಬಂದಿದ್ದಾರೆ ಎಂದು ಪುರಾಣ ಹೇಳುತ್ತದೆ.

ಪರಶುರಾಮ ಕ್ಷೇತ್ರ :

ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಹೇಳಿದಂತೆ ಮಹಾವಿಷ್ಣುವಿನ ಅವತಾರವಾದ ಪರಶುರಾಮನು ಈ ಭಾರತ ಭೂಮಿಯನ್ನು ಇಪ್ಪತ್ತೊಂದು ಬಾರಿ ಸುತ್ತಿ ಭೂಮಿಯಲ್ಲಿ ತಾನು ಇರಲಾಗದು ಎಂದು ನಿಶ್ಚಯಿಸಿ, ಪಶ್ಚಿಮ ಸಮುದ್ರ ತೀರಕ್ಕೆ ಬಂದು ಶೂರ್ಪಾರಕವೆಂಬ ಈ ದೇಶವನ್ನು ಹೊಸದಾಗಿ ನಿರ್ಮಿಸಿದನು (ಮಹಾರಾಷ್ಟ್ರದ ರತ್ನಗಿರಿಯಿಂದ ಕನ್ಯಾಕುಮಾರಿಯ ತನಕ ಹರಡಿರುವ ಈ ಪ್ರದೇಶ 970 ಕಿ. ಮೀ ನಷ್ಟು ವಿಸ್ತಾರಗೊಂಡಿದೆ)

ಪರಶುರಾಮ ಸಮುದ್ರದಿಂದ ಸೆಳೆದುಕೊಂಡನೆಂದು ಹೇಳಲಾದ ಈ ತೀರ ಭೂಮಿಯನ್ನು ತೆಂಕಿನಿಂದ ಬಡಗಲಾಗಿ ಕೂಪಕ, ಕೇರಲ, ಮೂಷಿಕ, ಆಲುವ, ಪಶು ಕೊಂಕಣ, ಪರಕೊಂಕಣಗಳೆಂಬ ಏಳು ದೇಶಗಳನ್ನಾಗಿ ವಿಂಗಡಿಸಲಾಗಿದೆ. ಇದನ್ನೇ ಬಡಗಿನಿಂದ ತೆಂಕಲಾಗಿ ಕರಾಟ, ವರಾಟ, ಮರಾಟ, ಕೊಂಕಣ, ಹೈವ, ತೌಳವ, ಕೇರಳ ಎಂದು ಸ್ವಲ್ಪ ವ್ಯತ್ಯಾಸವಾಗಿ ವಿಭಾಗಿಸಿದ ಕ್ರಮವೂ ಕಂಡುಬರುತ್ತದೆ.

ಸಪ್ತ ಕ್ಷೇತ್ರಗಳು :

ಸಹ್ಯಾದ್ರಿಯ ಈ ಪರಶುರಾಮ ಕ್ಷೇತ್ರದಲ್ಲಿ ನೂರು ಪವಿತ್ರ ತೀರ್ಥಗಳು, ಎಂಬತ್ತು ಪುಣ್ಯ ಕ್ಷೇತ್ರಗಳು ಇವೆ. ಅವುಗಳಲ್ಲಿ ಉಡುಪಿ, ಸುಬ್ರಹ್ಮಣ್ಯ, ಕುಂಭಾಸಿ, ಕೋಟೇಶ್ವರ, ಶಂಕರನಾರಾಯಣ, ಗೋಕರ್ಣ, ಮತ್ತು ಕೊಲ್ಲೂರು ಈ ಏಳು ಕ್ಷೇತ್ರಗಳು ಮೋಕ್ಷದಾಯಕ ಪುಣ್ಯ ಸ್ಥಳಗಳು ಎಂದು ಪರಿಗಣಿಸಲ್ಪಟ್ಟಿವೆ. ಪರಶುರಾಮ ಕ್ಷೇತ್ರವು ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ತ್ರ್ಯಂಬಕೇಶ್ವರದವರೆಗೆ ಮಲೆಯಾಳ, ತುಳು, ಕನ್ನಡ ಹಾಗೂ ಮರಾಠಿ ಭಾಷೆ ಮಾತನಾಡುವ ಭಾಗದಲ್ಲಿ ಹರಡಿ ಕೊಂಡಿದ್ದರೂ ಈ ಸಪ್ತ ಕ್ಷೇತ್ರಗಳು ತುಳು–ಕನ್ನಡ ಭಾಷಾ ಪ್ರದೇಶದಲ್ಲೇ ಇರುವುದು ಗಮನಿಸಬೇಕಾದ ಅಂಶವಾಗಿದೆ.

ಈ ಎಲ್ಲಾ ಕ್ಷೇತ್ರಗಳು ಪ್ರಮುಖವಾಗಿ ಶೈವಶಾಕ್ತ ಸಂಬಂಧಿಸಿದ್ದನ್ನು ಡಾ. ಪಿ. ಗುರುರಾಜ್ ಭಟ್ ಅವರು ಗುರುತಿಸಿದ್ದಾರೆ. “ರಜತ ಪೀಠ ಪುರ(ಉಡುಪಿ) ದಲ್ಲಿ ಮಹಾದೇವ, ಕುಮಾರಾದ್ರಿಯಲ್ಲಿ ಸುಬ್ರಹ್ಮಣ್ಯ, ಕುಂಭಾಶಿಯಲ್ಲಿ ಸದಾಶಿವ, ಧ್ವಜೇಶ್ವರದಲ್ಲಿ ಕೋಟೇಶ್ವರ, ಕ್ರೋಢದಲ್ಲಿ ಹರಿಹರ, ಗೋಕರ್ಣದಲ್ಲಿ ಮಹಾಬಲೇಶ್ವರ ಮತ್ತು ಕೊಲ್ಲೂರಿನಲ್ಲಿ ಮೂಕಾಂಬಿಕೆ ಅಧಿಷ್ಠಾನ ದೇವತೆಗಳಾಗಿವೆ. ಈ ಕ್ಷೇತ್ರಗಳು ಎಷ್ಟು ಹಳೆಗಾಲದಿಂದ ಪ್ರಸಿದ್ಧಿ ಪಡೆದಿವೆ ಎಂಬುವುದನ್ನು ಐತಿಹಾಸಿಕವಾಗಿ ನಿರ್ಧರಿಸುವುದು ಕಷ್ಟ. ಪ್ರತಿಯೊಂದು ಕ್ಷೇತ್ರಕ್ಕೂ ಅದರದರ ಸ್ಥಳ ಪುರಾಣಗಳಿವೆ. ಪ್ರಾಯಶಃ ವಿಜಯನಗರ ಕಾಲದಲ್ಲಿ ಇವುಗಳು ಸಪ್ತಕ್ಷೇತ್ರಗಳಾಗಿ ಪರಿಗಣಿಸಲ್ಪಟ್ಟವು”  ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ(ತುಳುನಾಡಿನ ಸಪ್ತ ಕ್ಷೇತ್ರಗಳು) (ಪು.34)

ಈ ಹಿನ್ನಲೆಯಲ್ಲಿ ಪದ್ಮ ಪುರಾಣದ ಪುಷ್ಕರ ಖಂಡ, ಸ್ಕಂದ ಪುರಾಣದ ಸಹ್ಯಾದ್ರಿ ಖಂಡ ಹಾಗೂ ಬ್ರಾಹ್ಮ ಪುರಾಣದಲ್ಲಿ ಹೇಳಿದ ಅಂಶಗಳನ್ನು ಗಮನಿಸಲಾಗುವುದು.

ಪದ್ಮ ಪುರಾಣದ ಪುಷ್ಕರಖಂಡದಲ್ಲಿ ಉಕ್ತವಾದ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದ ಸ್ಥಳಪುರಾಣ :

ಇದೀಗ ಉಪಲಬ್ಧವಿರುವ ಪದ್ಮ ಪುರಾಣ ಪುಷ್ಕರಖಂಡದ್ದೆಂದು ಹೇಳಲಾದ ‘ಕೋಟೇಶ್ವರನ ಸ್ಥಳ ಪುರಾಣ’ ಎಂಬ ಕನ್ನಡ ಹಸ್ತ ಪ್ರತಿಯಲ್ಲಿ ಮೂಲ ಸಂಸ್ಕ್ಋತ ಶ್ಲೋಕಗಳೂ, ಕನ್ನಡದಲ್ಲಿ ಭಾವಾನುವಾದವೂ ಇವೆ.

ಉಡುಪಿ ಜಿಲ್ಲೆಯ ಉತ್ತರ ತುದಿಯ ತಾಲ್ಲೂಕಿನ ಕೇಂದ್ರವಾದ ಕುಂದಾಪುರದಿಂದ 4 ಕಿ.ಮೀ. ದೂರಕ್ಕಿರುವ ಪಟ್ಟಣವೇ ಅಂದಿನ ಧ್ವಜಪುರ ಇಂದಿನ ಕೋಟೇಶ್ವರ.

ಓದಿ :  ಇಂದಿನ ಗ್ರಹಬಲ: ಈ ರಾಶಿಯವರಿಂದು ಆದಷ್ಟು ಪ್ರಯಾಣವನ್ನು ಕಡಿಮೆ ಮಾಡಿದರೆ ಉತ್ತಮ!

ಸುಮಾರು 1400 ವರ್ಷಗಳ ಇತಿಹಾಸ ಹೊಂದಿರುವ ಏಳು ಪ್ರದಕ್ಷಿಣವಿರುವ ಪ್ರಾಚೀನ ದೇವಾಲಯ ಇದು, ಅತ್ಯಂತ ಸುಂದರವಾದ ಪಾವಟಿಗೆಯನ್ನು ಹೊಂದಿರುವ ನಾಲ್ಕುವರೆ ಎಕರೆ ಸ್ಥಳವನ್ನು ಕ್ರಮಿಸಿರುವ ಕೋಟಿತೀರ್ಥ (ಇದು ಕರಾವಳಿಯಲ್ಲಿಯೇ ಅತ್ಯಂತ ದೊಡ್ಡದಾದ ಪುಷ್ಕರಣಿಯೆಂಬ ಅಭಿದಾನ ಪಡೆದಿದೆ), ಐದು ಅಂತಸ್ತುಗಳಿಂದ ನಿರ್ಮಿತವಾಗಿರುವ ಬೃಹತ್ ಬ್ರಹ್ಮರಥ, ನೇರವಾದ ಅಗಲವಾದ ರಥಬೀದಿಯಿಂದ ಈ ಕ್ಷೇತ್ರ ಕಂಗೊಳಿಸುತ್ತದೆ.

ಸಪ್ತಕ್ಷೇತ್ರಗಳಲ್ಲಿ ವಿಶಿಷ್ಟ ಸ್ಥಾನ ಹೊಂದಿದ ಕೋಟೇಶ್ವರ (ಧ್ವಜಪುರ) ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ. ಪರಶುರಾಮ ಸೃಷ್ಠಿಯ ಪುರಾಣ ಪುಣ್ಯಕ್ಷೇತ್ರಗಳಲ್ಲಿ ಮಧ್ಯಮ ಕ್ಷೇತ್ರವೆಂದು ಕರೆಯುತ್ತಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲೇ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದೆ. ಪುರಾಣ ಕಾಲದಲ್ಲಿ ಧ್ವಜಪುರವೆಂದೂ ವರ್ತಮಾನದಲ್ಲಿ ಕೋಟೇಶ್ವರವೆಂದು ಪ್ರಸಿದ್ಧವಾಗಿದೆ. ಒಂದು ಕಾಲದಲ್ಲಿ ಕೋಟೇಶ್ವರದ ಪರಿಸರವು ಬಹಳ ಬರಗಾಲದಿಂದ ತತ್ತರಿಸಿ ಹೋಗಿತ್ತು. ಆಗ ವಿಭಾಂಡ ಋಷಿಯ ಮುಖಂಡತ್ವದಲ್ಲಿ ಒಂದು ಕೋಟಿ ಮುನಿಗಳು ತಪಸ್ಸನ್ನು ಮಾಡಿ ಶಿವನನ್ನು ಒಲಿಸಿಕೊಳ್ಳುತ್ತಾರೆ. ಆಗ ಪರಮೇಶ್ವರ ಇಲ್ಲಿ ಕೋಟಿ ಲಿಂಗಗಳ ರೂಪದಲ್ಲಿ ತೋರಿಸಿಕೊಂಡು ಬರಗಾಲ ದೂರ ಮಾಡಿ ಜನರನ್ನು ರಕ್ಷಿಸಿದ ಎನ್ನುವುದು ಪುರಾಣ ಹೇಳುತ್ತದೆ. ಶಿವನು ಅಸಂಖ್ಯಾತ ಶಿಲೆಗಳಲ್ಲಿ(ಕೋಟಿಲಿಂಗಳಲ್ಲಿ) ಐಕ್ಯನಾಗಿದ್ದರಿಂದ ಇಲ್ಲಿನ ಶಿವನನ್ನು  ಕೋಟಿಲಿಂಗೇಶ್ವರನೆಂದು ಪೂಜಿಸಲಾಗುತ್ತದೆ. ಆದ್ದರಿಂದ ಈ ಕ್ಷೇತ್ರವನ್ನು ಕೋಟೇಶ್ವರವೆಂದು ಕರೆಯುವುದು ರೂಢಿಯಲ್ಲಿದೆ.

ಬಸ್ರೂರಿನ ಮಹಾರಾಜ ವಸು ಚಕ್ರವರ್ತಿಗೆ ಮಕ್ಕಳಿಲ್ಲವೆಂಬ ಕೊರಗು ಕಾಡುತ್ತಿತ್ತು. ಶ್ರೀ ಕೋಟೇಶ್ವರನಲ್ಲಿ ತನಗೆ ಮಕ್ಕಳಾದರೆ ದೇವಾಲಯ ನಿರ್ಮಿಸುತ್ತೇನೆ ಎಂಬ ಹರಕೆ ಹೊರುತ್ತಾನೆ. ಅವನ ಹರಕೆ ಫಲಿಸಿ ಮಕ್ಕಳಾಗುತ್ತವೆ. ತನ್ನ ಮಾತಿನಂತೆ ದೇವಸ್ಥಾನ, ಬೃಹತ್ ಕೆರೆ ನಿರ್ಮಿಸಿದನಂತೆ. ಆತನಿಗೆ ಮನಸ್ಸಿನಲ್ಲಿ ಕೋಟೇಶ್ವರನಿಗೆ ರಥೋತ್ಸವ ಮಾಡಬೇಕೆಂಬ ಮನಸ್ಸುಂಟಾಗಿ ಅದರ ಸಿದ್ಧತೆಗೆ ಆರಂಭಿಸುತ್ತಾನೆ. ಅವನ ನಿರೀಕ್ಷೆಯಂತೆ ಸಮಯಕ್ಕೆ ಸರಿಯಾಗಿ ಬ್ರಹ್ಮರಥ ತಯಾರಾಗುವುದಿಲ್ಲ. ಆದರೆ ಸಂಕಲ್ಪದಂತೆ ರಥೋತ್ಸವ ಮಾಡಲೇಬೇಕೆಂಬ ಬಲವಾದ ಇಚ್ಛೆಯಿತ್ತು. ಆಗ ಬಿದಿರು(ಕೊಡಿ) ಕಬ್ಬಿನ ಜಲ್ಲೆಗಳಿಂದ ರಥ ತಯಾರಿಸಿ ಪ್ರಥಮವಾಗಿ ಕೊಡಿ ಕಬ್ಬಿನ ಜಲ್ಲೆಗಳಿಂದ ನಿರ್ಮಿತವಾದ ರಥವಾದ್ದರಿಂದ ಆ ರಥೋತ್ಸವಕ್ಕೆ ‘ಕೊಡಿ ಹಬ್ಬ’ ಹೆಸರು ಬಂತೆಂದು ತಿಳಿದು ಬರುತ್ತದೆ. ಕ್ರಮೇಣ ಬೃಹತ್ ಬ್ರಹ್ಮರಥೋತ್ಸವವಾಗಿ ಜನಾಕರ್ಷಣೆಯ ಕೊಡಿ ಹಬ್ಬವಾಗಿ ಇಂದು ಬಹಳ ವೈಭವದಿಂದ ನಡೆಯುತ್ತದೆ. ಕೋಟೇಶ್ವರ ಕೊಡಿ ಹಬ್ಬದ ವಿಚಾರಕ್ಕೆ ತುಂಬಾ ಖ್ಯಾತಿ ಪಡೆದಿದೆ ಎಂದರೆ ತಪ್ಪಿಲ್ಲ.

ಏಳು ಪ್ರದಕ್ಷಿಣವಿರುವ ಪ್ರಾಚೀನ ಕೋಟೆಲಿಂಗೇಶ್ವರ ದೇವಸ್ಥಾನ ಆರಂಭದಲ್ಲಿ ಬೃಹತ್ ಹೆಬ್ಬಾಗಿಲು ಪ್ರವೇಶಕ್ಕೆ ಮುನ್ನ ರಥಬೀದಿಯಿಂದ ಬರುವ ಹೊರಸುತ್ತಿನಲ್ಲಿ (ಚಿಕ್ಕರಥದ ದಾರಿ) ಪ್ರದಕ್ಷಿಣವೊಂದಿದ್ದು ಅಲ್ಲಿಂದ ಹೆಬ್ಬಾಗಿಲ ಮೂಲಕ ಬೃಹತ್ ಧ್ವಜಸ್ತಂಭದ ದರ್ಶನ ಮಾಡಬಹುದು. ಏಕಮರದಲ್ಲಿ ತಯಾರಿಸಲ್ಪಟ್ಟ ಧ್ವಜಸ್ತಂಭದ(ನೂತನ ಏಕಮರ ಧ್ವಜ ಸ್ತಂಭವನ್ನು ಸ್ಥಾಪಿಸಲಾಗಿದೆ) ತುದಿಗೆ ಉತ್ಸವದ ಗರ್ನಪಟ ಕಟ್ಟುವುದಾಗಿದೆ. ಅದರ ಪಕ್ಕದಲ್ಲಿ ಅತಿದೊಡ್ಡ ಬಲಿಕಲ್ಲು (ತಂತ್ರ ಪಾರಾಗಮ)ದಂತೆ ಪೂಜಿಸಲ್ಪಡುತ್ತದೆ. ಇಲ್ಲಿ ಬಲಮೂಲೆಯಲ್ಲಿ ಆದಿಗಣಪನ ಗುಡಿ ಅದರ ಎದುರು ಭಾಗದಲ್ಲಿ ಗೋಪಾಲಕೃಷ್ಣ ದೇವರ ಗುಡಿ – ಆ ಸುತ್ತಿನ ಮೂಲೆಯಲ್ಲಿ ಆಂಜನೇಯನ ಗುಡಿ ಈ ಪ್ರದಕ್ಷಿಣದ ವೈಶಿಷ್ಟ್ಯ. ಅಲ್ಲಿಂದ ಮತ್ತೊಂದು ಪ್ರಾಚೀನ ದ್ವಾರದ ಮೂಲಕ ನಾಲ್ಕನೇ ಪ್ರದಕ್ಷಿಣದಲ್ಲಿ ಕರಿಕಲ್ಲಿನ ಮುಖಮಂಟಪ ಅದ್ಭುತ ತಂತ್ರಜ್ಞಾನದ ನಿರ್ಮಾಣವಾಗಿದೆ. ಅಲ್ಲಿ ಬಸವನ ಶಿಲಾಮೂರ್ತಿ ಸ್ಥಾಪಿಸಲ್ಪಟ್ಟಿದೆ. ಆ ಪ್ರದಕ್ಷಿಣದಲ್ಲಿ ಮುಂದುವರಿದರೆ ಮೂಲೆ ಗಣಪತಿಯ ದರ್ಶನ ಮಾಡಬಹುದಾಗಿದೆ. ಪ್ರಧಾನ ಗರ್ಭಗುಡಿಯ ಮೇಲ್ಛಾವಣಿ ತಾಮ್ರದ ಹೊದಿಕೆಯಿಂದ ಕೂಡಿದ್ದು ಪ್ರಾಚೀನ ಶಿಲ್ಪ ಶಾಸ್ತ್ರದ ದರ್ಶನ ನೀಡುತ್ತದೆ. ಪ್ರಸ್ತುತ ಉಪಯೋಗಿಸಲ್ಪಡುವ ನಾಲ್ಕನೆಯ ಪ್ರದಕ್ಷಿಣದಲ್ಲಿ ಸಪ್ತಮಾತೃಕೆಯರ ಶಿಲಾ ಬಿಂಬಗಳಿವೆ. ಅವುಗಳೊಂದಿಗೆ ಗಣೇಶ, ವೀರಭದ್ರ ವಿಗ್ರಹಗಳೂ ಸ್ಥಾಪಿಸಲ್ಪಟ್ಟಿವೆ. ಈ ಪ್ರದಕ್ಷಿಣದಲ್ಲಿ ಬಲಿಕಲ್ಲುಗಳು ಕೂಡ ಇವೆ.

ಓದಿ : ಮಹಾಶಿವರಾತ್ರಿ: ಭಾರತದ ಪವಿತ್ರ 12 ಜ್ಯೋತಿರ್ಲಿಂಗ, ಶಿವ ದೇಗುಲದ ಬಗ್ಗೆ ತಿಳಿದುಕೊಳ್ಳಿ…

ಪ್ರಧಾನ ಗರ್ಭಗುಡಿಯಲ್ಲಿ ಶಿಲಾನಿರ್ಮಿತ ಚಿಕ್ಕಬಾವಿಯಲ್ಲಿ  ರುದ್ರಾಕ್ಷಿಯಂತಿರುವ ಅಸಂಖ್ಯಾತ ಶಿವಲಿಂಗಗಳಿವೆ. ಇದನ್ನು ಕೋಟಿಲಿಂಗೇಶ್ವರನ ಮೂಲಸ್ಥಾನ ಎಂದು ಹೇಳಲಾಗುತ್ತದೆ.

(ಕೋಟಿ ಲಿಂಗೇಶ್ವರ ದೇವ ಸ್ಥಾನದ ಸುಮಾರು ನಾಲ್ಕುವರೆ ಎಕರೆಯಷ್ಟು ದೊಡ್ಡದಾದ ಕೋಟಿ ತೀರ್ಥ)

ಆರನೇ ಸುತ್ತಿನ ಉತ್ತರ ದಿಕ್ಕಿನಲ್ಲಿ ಬೃಹತ್ ಕೋಟೀತೀರ್ಥವೆಂಬ ಪುಷ್ಕರಣಿಯಿದ್ದು ಎಂತಹ ಬರಗಾಲದಲ್ಲೂ ನೀರಿನ ಮಟ್ಟ ಕಡಿಮೆಯಾಗದಂತೆ ನಿರ್ಮಿಸಲಾದ ಪುಷ್ಕರಣಿಯಾಗಿದೆ. ಈ ಪುಷ್ಕರಣಿ ನಾಲ್ಕೂವರೆ ಎಕರೆ ವಿಸ್ತೀರ್ಣ ಹೊಂದಿದೆ. ಈ ಕೆರೆಯಲ್ಲಿ ಹದಿನೆಂಟು ಪುಣ್ಯ ನದಿಗಳ ಸಂಗಮವಿದೆ ಎಂದು ಪುರಾಣಗಳಿಂದ ತಿಳಿದುಬರುತ್ತದೆ. ಪುರಾಣ ಕಾಲದಲ್ಲಿ ಈ ಕೆರೆಯನ್ನು ‘ಬ್ರಹ್ಮ ತೀರ್ಥ’ವೆಂದು ಕರೆಯುತ್ತಿದ್ದರಂತೆ. ಈ ಕೋಟಿ ತೀರ್ಥದಲ್ಲಿ ಸ್ನಾನ ಮಾಡಿದರೆ ಸರ್ವ ರೋಗಗಳು ನಾಶವಾಗಿ ಆರೋಗ್ಯವಂತರಾಗುತ್ತಾರೆ ಎನ್ನುವುದು ನಂಬಿಕೆ. ಈ ದೇವಾಲಯವು ಬೃಹತ್ತಾದ ದೇವಸ್ಥಾನವಾದ್ದರಿಂದ  ‘ಮಹತೋಬಾರ ಕೋಟಿಲಿಂಗೇಶ್ವರ ದೇವಸ್ಥಾನ’ ಎಂದು ಕರೆಯಲಾಗುತ್ತದೆ.

ಗ್ರಂಥಋಣ : ಶ್ರೀ ಕ್ಷೇತ್ರ ಕೋಟೇಶ್ವರ (ಕೋಟೇಶ್ವರದ ಸ್ಥಳ ಪುರಾಣ, ಇತಿಹಾಸ, ಸಾಹಿತ್ಯ ಹಾಗೂ ಸಂಸ್ಕೃತಿಗಳ ಅಧ್ಯಯನ ಲೇಖನ : ಡಾ. ಶಂಕರನಾರಾಯಣ ಉಡುಪ)

ಸಂಗ್ರಹ : ಶ್ರೀರಾಜ್ ವಕ್ವಾಡಿ 

ಓದಿ : ಶಿವರಾತ್ರಿ ಮಹಿಮೆ! ಬೇಟೆಗಾಗಿ ಜಾಗರಣೆ ಮಾಡಿದ ಬೇಡನಿಗೆ ಒಲಿದ ಶಿವ

Advertisement

Udayavani is now on Telegram. Click here to join our channel and stay updated with the latest news.

Next