Advertisement

ಡೋಂಟ್ ವರಿ ಇನ್ನೊಂದು 20 ವರ್ಷ ನಾನು ಹಿಂಗೆ ಇರ್ತೀನಿ..

09:53 AM Jan 08, 2020 | Suhan S |

ಶಿವರಾಜ ಕುಮಾರ್‌ ಎಲ್ಲೇ ಹೋಗಲಿ, ಯಾವುದೇ ಸಂದರ್ಶನ ಕೊಡಲಿ ಅಲ್ಲಿ ಅವರಿಗೆ ಎದುರಾಗುವ ಖಾಯಂ ಪ್ರಶ್ನೆಯೊಂದಿದೆ. ಅದೇನೆಂದರೆ ನಿಮ್ಮ ಎನರ್ಜಿಯ ಗುಟ್ಟೇನು ಹಾಗೂ ಇಷ್ಟೊಂದು ಯಂಗ್‌ ಆಗಿ ಕಾಣಲು ಏನೂ ಮಾಡುತ್ತೀರಿ ಎಂಬುದು. ಆ ಪ್ರಶ್ನೆಗೆ ಕಾರಣ ಶಿವರಾಜಕುಮಾರ್‌ ಅವರ ಉತ್ಸಾಹ ಹಾಗೂ ಇವತ್ತಿನ ಯಂಗ್‌ಸ್ಟಾರ್‌ ನಾಚುವ ಮಟ್ಟಿಗೆ ಆ್ಯಕ್ಟೀವ್‌ ಆಗಿರೋದು. ಇಂತಿಪ್ಪ ಶಿವಣ್ಣ ಇನ್ನೂ 20 ವರ್ಷ ಇದೇ ರೀತಿ, ಹೀರೋ ಆಗಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ! ಈ ಮಾತು ಕೇಳಿ ನೀವು ಆಶ್ಚರ್ಯ ಪಡಬೇಕಾಗಿಲ್ಲ. ಏಕೆಂದರೆ ಇದನ್ನು ಹೇಳಿರೋದು ಬೇರಾರು ಅಲ್ಲ, ಸ್ವತಃ ಶಿವರಾಜಕುಮಾರ್‌.

Advertisement

ಹೌದು, ಇತ್ತೀಚೆಗೆ ನಡೆದ “ಸಲಗ’ ಚಿತ್ರದ “ಸೂರಿಯಣ್ಣ…’ ಹಾಡಿನ ಬಿಡುಗಡೆ ವೇಳೆ ಶಿವರಾಜ ಕುಮಾರ್‌, “ನಾನು ಇನ್ನೂ 20 ವರ್ಷ ಹಿಂಗೆ ಇರಿತ್ತೀನಿ ಎನ್ನುವ ಮೂಲಕ ಅಭಿಮಾನಿಗಳನ್ನು ಇನ್ನಷ್ಟು ವರ್ಷ ರಂಜಿಸುವ ಬಗ್ಗೆ ಮಾತನಾಡಿದರು. “ದುನಿಯಾ ವಿಜಯ್‌ ಡೈರೆಕ್ಷನ್‌ಗೆ ಬಂದಿದ್ದಾರೆ. ಹಾಗಂತ ನಾನು ಬರಲ್ಲ. ನನ್ನನ್ನು ಬರೋಕೂ ಬಿಡಲ್ಲ. ಸಾಕು ಸಾಕು ಅಂದ್ರು, ಇಲ್ಲ ನೀವು ಬೇಕು ಬೇಕು ಅಂತ ಮಾಡ್ತಾನೆ ಇದ್ದಾರೆ. ನೋಡೋಣ ದೇವ್ರು ನನಗೆ ಎಲ್ಲಿವರೆಗೆ ಸ್ಟ್ರೆಂಥ್‌ ಕೊಡ್ತಾನೋ ಅಲ್ಲಿವರೆಗೆ ಸಿನಿಮಾ ಮಾಡ್ತಾನೇ ಇರುತ್ತೀನಿ. ಡೋಂಟ್‌ವರಿ ಇನ್ನೊಂದು 20 ವರ್ಷ ನಾ ಹಿಂಗೆ ಇರಿತ್ತೀನಿ ಎನ್ನುವ ಮೂಲಕ ಹೀರೋ ಆಗಿಯೇ ಮುಂದುವರಿಯುವ ಬಗ್ಗೆ ಹೇಳಿದರು.

ಶಿವರಾಜ ಕುಮಾರ್‌ ಮಾತು ನಿಜ ಕೂಡಾ. ಚಿತ್ರರಂಗಕ್ಕೆ ಯಾರೇ ಬರಲಿ, ಅವರಿಗೆ ಶಿವರಾಜ ಕುಮಾರ್‌ ಅವರ ಜೊತೆ ಸಿನಿಮಾ ಮಾಡುವ ಆಸೆ ಇದ್ದೇ ಇರುತ್ತದೆ. ಅದೇ ಕಾರಣದಿಂದ ಕಥೆಯೊಂದಿಗೆ ಶಿವಣ್ಣ ಮನೆ ಬಾಗಿಲು ಬಡಿಯುವ ನಿರ್ದೇಶಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಿನಿಮಾಗಳ ಸೋಲು-ಗೆಲುವು ಏನೇ ಇರಬಹುದು. ಶಿವರಾಜ ಕುಮಾರ್‌ ಅವರ ಸಿನಿಮಾಗಳ ಪಟ್ಟಿಗೆ ಹೊಸದು ಸೇರಿಕೊಳ್ಳುತ್ತಲೇ ಇರುತ್ತವೆಯೇ ಹೊರತು ಕಡಿಮೆಯಾಗಿಲ್ಲ. ಸದ್ಯ ಶಿವರಾಜಕುಮಾರ್‌ ಅವರ “ಭಜರಂಗಿ-2′ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. ಈ ನಡುವೆಯೇ ಅವರ ಹೊಸ ಚಿತ್ರ ಮುಂದಿನ ತಿಂಗಳು ಸೆಟ್ಟೇರಲಿದೆ. ತಮಿಳು ನಿರ್ಮಾಣ ಸಂಸ್ಥೆ ಹಾಗೂ ತಮಿಳು ನಿರ್ದೇಶಕರೊಬ್ಬರು ಶಿವರಾಜಕುಮಾರ್‌ ಅವರಿಗೆ ಸಿನಿಮಾ ಮಾಡುತ್ತಿದ್ದು, ಚಿತ್ರಕ್ಕೆ “ಆರ್‌ಡಿಎಕ್ಸ್‌’ ಎಂದು ಟೈಟಲ್‌ ಇಡಲಾಗಿದೆ.  ಚಿತ್ರ ಫೆ.19 ರಂದು ಆರಂಭವಾಗಲಿದೆ. ವಿಶೇಷವೆಂದರೆ ಶಿವರಾಜಕುಮಾರ್‌ ಅವರ ಮೊದಲ ಚಿತ್ರ “ಆನಂದ್‌’ ಕೂಡಾ ಅಂದೇ ಆರಂಭವಾಗಿತ್ತು. ಈಗ ಅವರ ಹೊಸ ಚಿತ್ರಕ್ಕೂ ಅದೇ ದಿನ ಮುಹೂರ್ತ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next