Advertisement

ಬ್ರಾಹ್ಮಣ್ಯ ಮರೆಯುತ್ತಿರುವುದು ವಿಷಾದನೀಯ

05:30 PM Apr 08, 2019 | Naveen |

ಶಿವಮೊಗ್ಗ: ನಮ್ಮ ಸಮಾಜವನ್ನು ಹಿಂದೆ ಬಡ ಸಮಾಜ ಎನ್ನುತ್ತಿದ್ದರು. ಆದರೆ ಇಂದು ಬ್ರಾಹ್ಮಣ ಸಮಾಜ ಬಡ ಸಮಾಜವಾಗಿದ್ದು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದುವರಿದಿದ್ದೇವೆ. ಆದರೆ ಬ್ರಾಹ್ಮಣ್ಯವನ್ನು ಮರೆಯುತ್ತಿದ್ದೇವೆ ಎಂದು ನಿವೃತ್ತ ನ್ಯಾಯಾ ಧೀಶ ಎನ್‌. ಕುಮಾರ್‌ ವಿಷಾದ ವ್ಯಕ್ತಪಡಿಸಿದರು.

Advertisement

ನಗರದ ಶ್ರೀ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಭಾನುವಾರ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಹಮ್ಮಿಕೊಂಡಿದ್ದ ಮಹಾಸಭಾದ ಶತಮಾನೋತ್ಸವದ ಸಂಭ್ರಮಾಚರಣೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ನಾವೆಲ್ಲ ಕೇವಲ ಸಾಮಾಜಿಕವಾಗಿ ಬ್ರಾಹ್ಮಣರಾಗಿದ್ದೇವೆಯೇ ಹೊರತು ಆಧ್ಯಾತ್ಮಿಕವಾಗಿ ಒಬ್ಬ ಬ್ರಾಹ್ಮಣರಾಗಿದ್ದೇವೆಯೆ ಎಂದು ಯೋಚಿಸಬೇಕಿದೆ. ಕಳೆದ 20 ವರ್ಷದ ಹಿಂದೆ ಕರ್ನಾಟಕದಲ್ಲಿ ನಮ್ಮ ಸಮಾಜದವರು ಶೇ. 5
ರಷ್ಟು ಜನರು ಇದ್ದರು. ಆದರೆ ಆಗ ಕೇವಲ ಶೇ.2 ಜನರಿದ್ದಾರೆ. ಇದಕ್ಕೆ ಕಾರಣ ಕುಟುಂಬಕ್ಕೆ ಒಂದು ಮಗು ಸಾಕು ಎಂಬ ತೀರ್ಮಾನ. ಇದರ ಪರಿಣಾಮ ನಮ್ಮ ಜನಾಂಗದ ಸಂಖ್ಯೆ ಕಡಿಮೆಯಾಗುವಂತಾಗಿದೆ.

ಇದು ಹೀಗೆ ಮುಂದುವರಿದರೆ ಕೆಲ ತಲೆಮಾರುಗಳ ನಂತರ ಬ್ರಾಹ್ಮಣ ಸಮಾಜ ಇಲ್ಲದಂತಾಗುತ್ತದೆ ಎಂದರು. ಶತಮಾನಗಳಿಂದಲೂ ದೇಶದಲ್ಲಿ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದೇವೆ. ಇದು ಬ್ರಾಹ್ಮಣರ ಕರ್ತವ್ಯ. ಇದನ್ನು ಮುಂದಿನ ಪೀಳಿಗೆಗೂ ನೀಡಬೇಕಿದೆ. ಆದರೆ ಜನಸಂಖ್ಯೆಯೇ ಇಲ್ಲದೆ ಹೋದರೆ ಯಾರಿಗೆ ನೀಡಲು ಸಾಧ್ಯ. ಹಾಗಾಗಿ ಸಮಾಜದವರು ಕೇವಲ ತಮ್ಮ ಸ್ವಾರ್ಥಕ್ಕಾಗಿ ಅಲ್ಲದೆ ಸಮಾಜ, ಸನಾತನಧರ್ಮದ ಬಗ್ಗೆ ಕಾಳಜಿಯಿಂದಾಗಿ ಈ ಬಗ್ಗೆ ಯೋಚಿಸಬೇಕಿದೆ. ಆಗ ಸಮಾಜ ಹಾಗೂ ಸನಾತನ ಧರ್ಮ ಉಳಿಯುತ್ತದೆ ಎಂದರು.

ಬ್ರಾಹ್ಮಣ ಸಮಾಜ ಉತ್ತಮ ಹಾಗೂ ಮುಂದುವರಿದ ಸಮಾಜ ಎಂದು ಹೇಳಿಕೊಳ್ಳುತ್ತೇವೆ. ಬೇರೆ ಸಮಾಜದವರು ಸಹ ನಮ್ಮನ್ನು ಮೀರಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಪ್ರಬಲರಾಗಿದ್ದಾರೆ. ಉನ್ನತ ಹುದ್ದೆಗಳಲ್ಲಿದ್ದಾರೆ. ಹಾಗಾದರೆ ನಮ್ಮ ಸಮಾಜ ಹೇಗೆ ಮುಂದುವರಿದ ಸಮಾಜ. ನಮಗೂ ಬೇರೆ ಸಮಾಜದವರಿಗೂ ಏನು ವ್ಯತ್ಯಾಸ ಎಂದು ಪ್ರಶ್ನಿಸಿದ ಅವರು, ನಮ್ಮ ಸಮಾಜದವರು ಬ್ರಾಹ್ಮಣತ್ವವನ್ನು ಉಳಿಸಿಕೊಂಡಾಗ ಮಾತ್ರ ಬೇರೆಯವರಿಗೂ
ನಮಗೂ ವ್ಯತ್ಯಾಸ ತಿಳಿಯುತ್ತದೆ. ಇಲ್ಲವಾದರೆ ಬಹಳ ಹಿಂದುಳಿದ ಸಮಾಜದವರಾಗುತ್ತೇವೆ ಎಂದರು.

Advertisement

ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ. ನಟರಾಜ ಭಾಗವತ್‌ ಮಾತನಾಡಿ, ಶತಮಾನೋತ್ಸವ ಆಚರಿಸುತ್ತಿರುವ ಮಹಾಸಭಾ ಸಂಘಟನೆ ಕಟ್ಟುವಲ್ಲಿ ಅನೇಕ ಮಹನೀಯರ ಶ್ರಮವಿದೆ. ಹಣವನ್ನು ಸಮಾಜಕ್ಕಾಗಿ ವಿನಿಯೋಗಿಸುತ್ತ ಸಾರ್ಥಕ ಕಾರ್ಯ
ನಡೆಸುತ್ತಿದೆ. ಆಧುನಿಕ ಶಿಕ್ಷಣದ ಜತೆ ಸಂಸ್ಕಾರ ಕಲಿಸುವ ಆಶಯದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಿದೆ. ವೈವಾಹಿಕ ಕಾರ್ಯಕ್ರಮಗಳಿಗೆ ಅನುಕೂಲ ಒದಗಿಸಲು ಸಮುದಾಯ ಭವನ ಕಟ್ಟಲಾಯಿತು ಎಂದು ತಿಳಿಸಿದರು.

ಕರ್ನಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಂ.ಎಸ್‌. ಮಹಾಬಲೇಶ್ವರ ಮಾತನಾಡಿ, ನಾನು ಎಂಬುದರ ಬದಲಿಗೆ ನಾವು ಎಂಬ ಎರಡು
ಅಕ್ಷರವನ್ನು ಅಳವಡಿಸಿಕೊಳ್ಳುವ ಮೂಲಕ ಜಿಲ್ಲಾ ಬ್ರಾಹ್ಮಣರು ಸಂಘಟಿತರಾಗಿ ಶತಮಾನವನ್ನು ಪೂರೈಸಿ ಬ್ರಾಹ್ಮಣರು ಸಂಘಟಿತರಾಗುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದ ಅವರು, ಬ್ರಾಹ್ಮಣ ಎನ್ನುವುದು ಹುಟ್ಟಿನಿಂದ ಬರುವುದಲ್ಲ, ಕರ್ಮದಿಂದ ಬರಬೇಕು. ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿನಿ ನಿಲಯ,
ಹಿರಿಯ ನಾಗರಿಕರಿಗೆ ವೃದ್ಧಾಶ್ರಮ ಹಾಗೂ ಮಹಾಸಭಾದಿಂದ ಗೋಶಾಲೆ ನಿರ್ಮಿಸುವ ಉದ್ದೇಶವಿದೆ. 4-5 ವರ್ಷಗಳಲ್ಲಿ ಯೋಜನೆ
ಪೂರ್ಣಗೊಳಿಸುವ ಆಶಯವಿದೆ ಎಂದರು.

ಇದೇ ಸಂದರ್ಭದಲ್ಲಿ ಸಮಾಜದ ಅರಸಾಳು ರಂಗನಾಥ್‌ ರಾವ್‌, ಬೆನಕ ಭಟ್ಟರು, ಚಂದ್ರಶೇಖರ್‌ ಭಟ್‌ ಅವರನ್ನು ಸನ್ಮಾನಿಸಲಾಯಿತು. ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಅಶೋಕ್‌ ಹಾರ್ನಳ್ಳಿ, ಡಾ| ಎಚ್‌.ವಿ ಸುಬ್ರಹ್ಮಣ್ಯ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next