Advertisement

ಇಲ್ಲ ಮಳೆಯ ರಭಸ-ಕೃಷಿ ಕಾರ್ಯ ನೀರಸ

12:29 PM Jun 13, 2019 | Team Udayavani |

ಶರತ್‌ ಭದ್ರಾವತಿ
ಶಿವಮೊಗ್ಗ:
ಹಿಂಗಾರು, ಮುಂಗಾರು ಪೂರ್ವ ಮಳೆ ಕೈಕೊಟ್ಟ ಕಾರಣ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ನೀರಸವಾಗಿವೆ. ಮುಂಗಾರು ಸಹ ವಿಳಂಬವಾಗಿದ್ದು ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಚದುರಿದಂತೆ ಮಳೆಯಾಗುತ್ತಿದ್ದು ಕೃಷಿ ಇಲಾಖೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಗೆ ಸಿದ್ಧತೆ ಮಾಡಿಕೊಂಡಿದೆ.

Advertisement

ಕೈಕೊಟ್ಟ ಮಳೆ:ಜಿಲ್ಲೆಯಲ್ಲಿ ಹಿಂಗಾರು ಮಳೆ ಶೇ.43ರಷ್ಟು ಕೊರತೆಯಾಗಿ ಯಾವುದೇ ಬೆಳೆ ಬಿತ್ತನೆಯಾಗಿರಲಿಲ್ಲ. ಶಿವಮೊಗ್ಗ ತಾಲೂಕಿನಲ್ಲಿ 200ಮಿಮೀ ವಾಡಿಕೆ ಮಳೆ ಇದ್ದು 83 ಮಿಮೀ ಮಳೆಯಾಗಿದೆ. ಭದ್ರಾವತಿಯಲ್ಲಿ 198 ಮಿಮೀ ಮಳೆ ಬದಲು 93 ಮಿಮೀ, ತೀರ್ಥಹಳ್ಳಿಯಲ್ಲಿ 219 ಮಿಮೀ ಬದಲು 103 ಮಿಮೀ, ಸಾಗರ ತಾಲೂಕಿನಲ್ಲಿ 200 ಮಿಮೀ ವಾಡಿಕೆ ಬದಲು 125 ಮಿಮೀ, ಹೊಸನಗರದಲ್ಲಿ 227 ವಾಡಿಕೆ ಬದಲು 130 ಮಿಮೀ, ಶಿಕಾರಿಪುರದಲ್ಲಿ 179 ಮಿಮೀ ಬದಲು 126 ಮಿಮೀ, ಸೊರಬ 177 ಮಿಮೀ ವಾಡಿಕೆಗೆ 148 ಮಿಮೀ ಮಾತ್ರ ಮಳೆಯಾಗಿತ್ತು. ಇದರಿಂದ ಹಿಂಗಾರಿನಲ್ಲಿ ಬಿತ್ತನೆ ಆಗಲೇ ಇಲ್ಲ.

ಇನ್ನು ಮುಂಗಾರು ಪೂರ್ವ ಮಳೆಯೂ ಬಾರದ್ದರಿಂದ ಭೂಮಿ ಹದಗೊಳಿಸಲು ರೈತರಿಗೆ ತೊಂದರೆಯಾಗಿದೆ. ಮುಂಗಾರು ಪೂರ್ವ ಮಳೆ ಸಂಪೂರ್ಣ ವಿಫಲವಾದ ಕಾರಣ ರೈತರು ಬೇಸಾಯ ಮಾಡಿಲ್ಲ. ಮಲೆನಾಡು ಭಾಗದಲ್ಲಿ ಜೂನ್‌ನಲ್ಲಿ ಆರಂಭವಾಗಬೇಕಿದ್ದ ಮುಂಗಾರು ಮಳೆ ಇನ್ನೂ ಸುರಿಯುತ್ತಿಲ್ಲ. ಆದರೆ ಕಳೆದ ಎರಡು ದಿನದಿಂದ ಸ್ವಲ್ಪ ಮಳೆಯಾಗುತ್ತಿದ್ದು, ರೈತರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಮೆಕ್ಕೆಜೋಳ ಬಿತ್ತನೆಗೆ ಜೂನ್‌ ತಿಂಗಳ ಪ್ರಶಸ್ತವಾಗಿದ್ದು ರೈತರು ಕೃಷಿ ಚಟುವಟಿಕೆ ಆರಂಭಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಮುಂಗಾರು ಪೂರ್ವದಲ್ಲಿ ಅಂದರೆ ಮೇ 31ರವರೆಗೆ ಜಿಲ್ಲೆಯಲ್ಲಿ ವಾಡಿಕೆಯಂತೆ 146 ಮಿಮೀ ಮಳೆಯಾಗಬೇಕಿತ್ತು. ಆದರೆ 33.5 ಮಿಮೀ ಮಳೆಯಾಗಿದೆ. 2018ನೇ ಸಾಲಿನಲ್ಲಿ 211 ಮಿಮೀ ಮಳೆ ದಾಖಲಾಗಿತ್ತು.

ಕೇಂದ್ರದಲ್ಲೇ ಉಳಿದ ಗೊಬ್ಬರ-ಬೀಜ: ಜಿಲ್ಲೆಯಲ್ಲಿ 21 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು ಈಗಾಗಲೇ 26 ಸಾವಿರ ಕ್ವಿಂಟಾಲ್ ಲಭ್ಯತೆ ಇದೆ. 83 ಸಾವಿರ ಮೆಟ್ರಿಕ್‌ ಟನ್‌ ರಸಗೊಬ್ಬರ ಬೇಡಿಕೆ ಇದ್ದು, 32 ಸಾವಿರ ಮೆಟ್ರಿಕ್‌ ಟನ್‌ ದಾಸ್ತಾನು ಇದೆ. ಸರಕಾರದ ಅಂಗಸಂಸ್ಥೆಗಳಲ್ಲಿ ಬೇಡಿಕೆಗಿಂತ ಹೆಚ್ಚಿನ ದಾಸ್ತಾನು ಇದ್ದು, ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಬೇಡಿಕೆಗೆ ತಕ್ಕಂತೆ ಪೂರೈಸಲಾಗುವುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು.

Advertisement

ಮಳೆ ವಿವರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 43.60 ಮಿಮೀ ಮಳೆಯಾಗಿದ್ದು, ಸರಾಸರಿ 6.23 ಮಿಮೀ ಮಳೆ ದಾಖಲಾಗಿದೆ. ಜೂನ್‌ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 390.67 ಮಿಮೀ ಇದ್ದು, ಇದುವರೆಗೆ ಸರಾಸರಿ 18.57 ಮಿಮೀ ಮಳೆ ದಾಖಲಾಗಿದೆ.

ಶಿವಮೊಗ್ಗ 01.80 ಮಿಮೀ, ಭದ್ರಾವತಿ 01.20 ಮಿಮೀ, ತೀರ್ಥಹಳ್ಳಿ 06.00 ಮಿಮೀ, ಸಾಗರ 05.60 ಮಿಮೀ, ಶಿಕಾರಿಪುರ 02.60 ಮಿಮೀ, ಸೊರಬ 04.00 ಮಿಮೀ ಹಾಗೂ ಹೊಸನಗರ 22.40 ಮಿಮೀ ಮಳೆಯಾಗಿದೆ.

ಬಿತ್ತನೆ ಗುರಿ: ಜಿಲ್ಲೆಯಲ್ಲಿ ಭತ್ತ ಪ್ರಮುಖ ಬೆಳೆಯಾಗಿದ್ದು, ನಂತರ ಸ್ಥಾನದಲ್ಲಿ ಮೆಕ್ಕೆಜೋಳ ಇದೆ. ಮುಂಗಾರು ಹಂಗಾಮಿನಲ್ಲಿ 99 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ ಗುರಿ ಹೊಂದಿದ್ದರೆ, 55 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, ಹತ್ತಿ 1397 ಹೆಕ್ಟೇರ್‌, ತೊಗರಿ 800 ಹೆಕ್ಟೇರ್‌, 1598 ಹೆಕ್ಟೇರ್‌ನಲ್ಲಿ ಕಬ್ಬು ಸೇರಿ 1,59,546 ಹೆಕ್ಟೇರ್‌ ಬಿತ್ತನೆಗೆ ಗುರಿ ಹೊಂದಲಾಗಿದೆ.

ಮುಂಗಾರು ಪೂರ್ವ ಮಳೆ ಕೊರತೆಯಾದ ಕಾರಣ ರೈತರು ಬಿತ್ತನೆಗೆ ಭೂಮಿಯನ್ನು ಸಿದ್ಧಪಡಿಸಿಕೊಂಡಿಲ್ಲ. ಎರಡು ದಿನಗಳಿಂದ ಚದುರಿದಂತೆ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಮುಂಗಾರು ಸಹ ವಿಳಂಬವಾಗಿರುವುದರಿಂದ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಕಳೆದ ವರ್ಷ ಈ ವೇಳೆಗೆ 5ರಿಂದ 6 ಸಾವಿರ ಹೆಕ್ಟೇರ್‌ ಬಿತ್ತನೆಯಾಗಿತ್ತು. ಈ ವರ್ಷ 30ರಿಂದ 40 ಹೆಕ್ಟೇರ್‌ ಮಾತ್ರ ಬಿತ್ತನೆ ಮಾಡಲಾಗಿದೆ. ಮೆಕ್ಕೆಜೋಳ ಬಿತ್ತನೆಗೆ ಈ ಅವಧಿ ಪ್ರಶಸ್ತವಾಗಿದ್ದು ಅಗತ್ಯ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಇದೆ. ಭತ್ತ, ಹತ್ತಿ, ತೊಗರಿ ಬಿತ್ತನೆ ಬೀಜ ಸಹ ದಾಸ್ತಾನು ಇದ್ದು, ವಿತರಣೆಗೆ ಕೃಷಿ ಇಲಾಖೆ ಸರ್ವಸನ್ನದ್ಧವಾಗಿದೆ.
•ಡಾ| ಎಂ. ಕಿರಣ್‌ಕುಮಾರ್‌
ಜಂಟಿ ನಿರ್ದೇಶಕ, ಕೃಷಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next