Advertisement

ಶಿಕ್ಷಕರೇ ವಿದ್ಯಾರ್ಥಿಗಳ ದಾರಿದೀಪ: ಎಚ್.ಹರಿಯಪ್ಪ

06:47 PM Sep 08, 2019 | Team Udayavani |

ಶಿವಮೊಗ್ಗ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳ ಭವಿಷ್ಯವನ್ನು ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ. ಇವರೇ ವಿದ್ಯಾರ್ಥಿಗಳ ಭವಿಷ್ಯದ ದಾರಿದೀಪ ಎಂದು ಎನ್‌ಇಎಸ್‌ನ ಉಪಕುಲ ಸಚಿವ ಎಚ್. ಹರಿಯಪ್ಪ ಹೇಳಿದರು.

Advertisement

ಎಟಿಎನ್‌ಸಿಸಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಗುರು ಪರಂಪರೆಯ ನಮ್ಮ ದೇಶದಲ್ಲಿ ಗುರುಗಳು ಯಾವಾಗಲೂ ಇತರರಿಗೆ ಆದರ್ಶವಾಗಿರಬೇಕು ಎಂದು ಸಮಾಜ ಬಯಸುತ್ತದೆ. ಆಚಾರ್ಯ ದೇವೋ ಭವ ಎಂಬ ಸಂಸ್ಕೃತಿ ನಮ್ಮದು. ಹೆತ್ತ ತಾಯಿ, ಬದುಕು ಕಲಿಸಿದ ತಂದೆ ಮತ್ತು ಸಂಸ್ಕಾರ ನೀಡಿದ ಗುರು ಮೂವರನ್ನೂ ಪೂಜನೀಯ ಸ್ಥಾನದಲ್ಲಿಟ್ಟು ಗೌರವಿಸುವುದು ಭಾರತೀಯ ಸಂಸ್ಕೃತಿಯ ಹೆಗ್ಗಳಿಕೆಯಾಗಿದೆ ಎಂದರು.

ಅಸಂಖ್ಯ ಮಕ್ಕಳ ಭವಿಷ್ಯ ರೂಪಿಸಿ, ಆ ಮೂಲಕ ರಾಷ್ಟ್ರಕ್ಕೆ ಕೊಡುಗೆ ನೀಡಿದ ಶಿಕ್ಷ‌ಕರ ನೆನಕೆಗಾಗಿ ರಾಷ್ಟ್ರೀಯ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಗುರುಗಳು ದೇವರ ಸಮಾನರು. ದೇವರಂತೆಯೇ ಶಿಕ್ಷಕರನ್ನು ಪೂಜಿಸಿ ಗೌರವಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಎಚ್. ಎಂ. ಸುರೇಶ್‌ ಮಾತನಾಡಿ, ಎಟಿಎನ್‌ಸಿಸಿ ಕಾಲೇಜ್‌ ಕುವೆಂಪು ವಿಶ್ವವಿದ್ಯಾಲಯದ ಪ್ರಮುಖ ಕಾಲೇಜುಗಳಲ್ಲಿ ಒಂದಾಗಿದೆ. ಈ ಕಾಲೇಜಿನ ಪ್ರಖ್ಯಾತಿಗೆ ಪ್ರಾಧ್ಯಾಪಕರ ಪರಿಶ್ರಮವೇ ಕಾರಣ. ಶಿಕ್ಷಕರಾದವರು ತಮ್ಮ ವೃತ್ತಿಗೆ ದ್ರೋಹ ಬಗೆಯದೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಯಾಗುತ್ತವೆ ಎಂದರು. ನಿವೃತ್ತ ಪ್ರಾಧ್ಯಾಪಕರಾದ ಡಾ| ಡಿ. ಜಿ. ರಮೇಶ್‌, ಪ್ರೊ| ಡಿ. ಆರ್‌. ದಯಾನಂದ, ಡಾ| ಪದ್ಮನಾಭ್‌ ಅಡಿಗ ಅವರನ್ನು ಸನ್ಮಾನಿಸಲಾಯಿತು.ಕಾಮರ್ಸ್‌ ಕಾಲೇಜಿನ ಅಧ್ಯಾಪಕರು ಸಂಘದ ಅಧ್ಯಕ್ಷ ಎಸ್‌. ಜಗದೀಶ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರೊ| ಕೆ.ಎಂ.ನಾಗರಾಜ್‌, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ| ಆರ್‌.ಜಗದೀಶ್‌, ಅತಿಥಿ ಉಪನ್ಯಾಸಕ ಬಿ.ಎನ್‌.ಪ್ರವೀಣ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next