Advertisement

ಸೈನಿಕ ಶಿಲ್ಪ ಉದ್ಯಾನಕ್ಕೆ ಅಂತಿಮ ಸ್ಪರ್ಶ

11:15 AM Jul 24, 2019 | Naveen |

ಶಿವಮೊಗ್ಗ: ನಗರದಲ್ಲಿ ನಿರ್ಮಾಣವಾಗುತ್ತಿರುವ ಸೈನಿಕರ ವಿವಿಧ ಭಾವಾಭಿವ್ಯಕ್ತಿಯ ಶಿಲ್ಪಗಳನ್ನು ಒಳಗೊಂಡ ಸೈನಿಕ ಶಿಲ್ಪ ಉದ್ಯಾನವನ ಅಂತಿಮ ರೂಪ ಪಡೆಯುತ್ತಿದ್ದು, ಒಂದೆರಡು ದಿನಗಳಲ್ಲಿ ಶಿಲ್ಪ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

Advertisement

ಸರಕಾರಿ ನೌಕರರ ಭವನದ ಮಗ್ಗುಲಿನಲ್ಲಿರುವ, ಸೈನಿಕ ಕಲ್ಯಾಣ ಇಲಾಖೆ ಎದುರಿನ ಈ ಉದ್ಯಾನವನ ಸೈನಿಕ ಶಿಲ್ಪದಿಂದಾಗಿ ಹೊಸ ಮೆರುಗು ಪಡೆಯುತ್ತಿದೆ. ಇಲ್ಲಿ ನಿರ್ಮಾಣವಾಗುತ್ತಿರುವ ಸೈನಿಕರ ವಿವಿಧ ಭಂಗಿಗಳ ಶಿಲ್ಪಗಳು ನೋಡುಗರನ್ನು ಆಕರ್ಷಿಸುತ್ತಿವೆ. ರಾಜ್ಯ ಶಿಲ್ಪಕಲಾ ಅಕಾಡೆಮಿ ಸಹಯೋಗದಲ್ಲಿ ಜಿಲ್ಲಾಡಳಿತ ಸೈನಿಕರಿಗೆ ನಿಜವಾದ ಅರ್ಥದಲ್ಲಿ ಗೌರವ ಸಲ್ಲಿಸುವಂತಹ ಕಾರ್ಯದಲ್ಲಿ ತೊಡಗಿದ್ದು, ಇಲ್ಲಿರುವ ಕಲಾಕೃತಿಗಳು ಸೈನಿಕರ ಕರ್ತವ್ಯ ನಿಷ್ಠೆ, ಹೋರಾಟದ ಬದುಕು, ದೇಶಪ್ರೇಮವನ್ನು ಅನಾವರಣಗೊಳಿಸುವಂತಿವೆ.

ದೇಶ ರಕ್ಷಣೆಯೇ ನಮ್ಮ ಗುರಿ ಎನ್ನುವಂತೆ ಎದೆಯುಬ್ಬಿಸಿ ನಿಂತಿರುವ ಸೈನಿಕ ಅಧಿಕಾರಿ, ಹೋರಾಟದಲ್ಲಿ ಶತ್ರುಗಳ ಗುಂಡೇಟು ತಿಂದು ಗಾಯಾಳಾದ ಇನ್ನೊಬ್ಬ ಯೋಧನನ್ನು ಹೊತ್ತು ಹೋಗುತ್ತಿರುವ ಕಲಾಕೃತಿ, ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ವೃದ್ಧ, ಮಗುವಿನ ರಕ್ಷಣಾ ಕಾರ್ಯದಲ್ಲಿ ನಿರತ ವೀರ ಯೋಧ, ಸೈನಿಕ ತನ್ನ ಸಂಸಾರವನ್ನು ತೊರೆದು ಸೈನ್ಯಕ್ಕೆ ಹೋಗುತ್ತಿರುವ ಭಾವನಾತ್ಮಕ ಸನ್ನಿವೇಶ, ವೀರ ಹುತಾತ್ಮತೆಯ ಸಂಕೇತ ಅಮರ್‌ ಜವಾನ್‌, ಅಧಿಕಾರಿ ಸೆಲ್ಯೂಟ್ ಹೊಡೆಯುತ್ತಿರುವುದು, ವಿಜಯೋತ್ಸವ ಆಚರಣೆ ದೃಶ್ಯ, ವಾಯುಸೇನೆ , ನೌಕಾಸೇನೆ, ಭೂಸೇನಾ ಅಧಿಕಾರಿಗಳು, ರಕ್ಷಣಾ ಕಾರ್ಯಾಚರಣೆಯಲ್ಲಿ ಹಿಂದೂ, ಮುಂಸ್ಲಿ ಎಲ್ಲರೂ ಒಂದೇ ಎನ್ನುವ ಸಂದೇಶ ನೀಡುವ ಕಲಾಕೃತಿ, ಇನ್ನೂ ಹಲವು ಈ ರೀತಿಯ ದೇಶ ಪ್ರೇಮ ಉಕ್ಕಿಸುವ ಸೈನಿಕ ಕಾರ್ಯಚಟುವಿಕೆಯ ಕಲಾಕೃತಿಗಳು ಸಿದ್ಧಗೊಂಡು, ನೋಡುಗರ ಗಮನ ಸೆಳೆಯುತ್ತಿವೆ. ಈ ಕಲಾಕೃತಿಗಳನ್ನು ಸಿಮೆಂಟ್, ಮರಳು ಹಾಗೂ ಇಟ್ಟಿಗೆಗಳಿಂದ ನಿರ್ಮಾಣ ಮಾಡಲಾಗಿದೆ. ಸುಮಾರು 20 ಕಲಾಕೃತಿಗಳು ಈಗಾಗಲೇ ಅಂತಿಮ ರೂಪು ಪಡೆದಿದ್ದು, ದೇಶವನ್ನು ಕಾಯುವ ಸೈನಿಕರ ಬಗ್ಗೆ ಅಭಿಮಾನ ಮೂಡಿಸುವಂತಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಆಯ್ದ ಹಿರಿಯ ಕಲಾವಿದರು ಈ ಅಪರೂಪದ ಕಲಾಕೃತಿಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಿರಿಯ ಕಲಾವಿದರು ಇವರಿಗೆ ಕಲಾಕೃತಿ ರಚನೆಯಲ್ಲಿ ಹಗಲು ಇರುಳೆನ್ನದೆ ಸಾಥ್‌ ನೀಡುತ್ತಿದ್ದಾರೆ. ಶಿವಮೊಗ್ಗ, ಉಡುಪಿ, ದಾವಣಗೆರೆ, ಬೆಂಗಳೂರು, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಈ ಕಲಾವಿದರ ವಸತಿ, ಊಟದ ವ್ಯವಸ್ಥೆ ಜಿಲ್ಲಾಡಳಿತವೇ ಮಾಡಿಕೊಟ್ಟಿದೆ. ಚಳಿ, ಮಳೆ ಎನ್ನದೆ ಗಡಿಯಲ್ಲಿ ದೇಶದ ರಕ್ಷಣೆ ಮಾಡುತ್ತಿರುವ ವೀರ ಸೈನಿಕರ ಬಗ್ಗೆ ಮಕ್ಕಳು ಹಾಗೂ ಯುವ ಜನಾಂಗದಲ್ಲಿ ಅರಿವು ಮೂಡಿಸಲು ಹಾಗೂ ಅವರಲ್ಲಿ ಸೈನಿಕರ ಬಗ್ಗೆ ಅಭಿಮಾನ ಹಾಗೂ ಕುತೂಹಲ ಮೂಡಿಸುವ ಉದ್ದೇಶದಿಂದ ಶಿವಮೊಗ್ಗ ನಗರದಲ್ಲಿ ಸೈನಿಕರ ಶಿಲ್ಪ ಉದ್ಯಾನವನ ನಿರ್ಮಿಸಲಾಗುತ್ತಿದ್ದು, ಅಂತಿಮ ಹಂತದಲ್ಲಿದೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಹಕಾರದೊಂದಿಗೆ ಈ ಶಿಲ್ಪ ಉದ್ಯಾನವನ ತಲೆ ಎತ್ತಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿಗರ ಆಕರ್ಷಣೆ ತಾಣವೂ ಆಗುವ ವಿಶ್ವಾಸವಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಅವರು ತಿಳಿಸಿದ್ದಾರೆ. ಕರ್ನಾಟಕದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ರೀತಿಯ ಸೈನಿಕ ಶಿಲ್ಪ ಉದ್ಯಾನವನ ನಿರ್ಮಿಸಲಾಗುತ್ತಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ವಿಭಿನ್ನ ಥೀಮ್‌ನ ಶಿಲ್ಪ ಉದ್ಯಾನಗಳನ್ನು ನಿರ್ಮಿಸಲಾಗಿದೆ. ಆದರೆ ಸೈನಿಕ ಉದ್ಯಾನ ನಿರ್ಮಾಣ ನಮ್ಮಲ್ಲಿ ಹೊಸ ಚೈತನ್ಯ ಮೂಡಿಸಿದೆ ಎಂದು ರಾಜ್ಯ ಶಿಲ್ಪಕಲಾ ಅಕಾಡೆಮಿ ಸದಸ್ಯ ಎಂ.ರಘು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

25ಕ್ಕೆ ಸಮಾರೋಪ
15 ದಿನಗಳ ಈ ಶಿಲ್ಪ ಶಿಬಿರದ ಸಮಾರೋಪ ಸಮಾರಂಭ ಜು. 25ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಶಿಲ್ಪಗಳ ಲೋಕಾರ್ಪಣೆ ಮಾಡುವರು. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಶಿಲ್ಪಿ ರು.ಕಾಳಾಚಾರ್‌ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸೈನಿಕ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚಂದ್ರಪ್ಪ ಎನ್‌. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ ಹಾಗೂ ಬಿ. ಪಾಪಯ್ಯ ಅವರು ಭಾಗವಹಿಸುವರು.

Advertisement

Udayavani is now on Telegram. Click here to join our channel and stay updated with the latest news.

Next