Advertisement

ನಾಟಕ ಮನರಂಜನೆಗಷ್ಟೇ ಸೀಮಿತವಲ್ಲ: ಡಾ|ರಾಜೇಂದ್ರ ಚೆನ್ನಿ

05:15 PM Jun 24, 2019 | Team Udayavani |

ಶಿವಮೊಗ್ಗ: ನಾಟಕ ಸಂಸೃ್ಕತಿ ಕುಸಿಯುತ್ತಿರುವ ಇಂದಿನ ಸಂದರ್ಭದಲ್ಲಿ ಡಾ| ಸಾಸ್ವೆಹಳ್ಳಿ ಸತೀಶ್‌ ಅವರು ಒಳ್ಳೆಯ ನಾಟಕಗಳನ್ನು ನಿರ್ದೇಶಿಸಿ, ಅಭಿನಯಿಸಿ ಎಲ್ಲರಿಗೂ ತಲುಪಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ವಿಮರ್ಶಕ ಡಾ| ರಾಜೇಂದ್ರ ಚೆನ್ನಿ ಮೆಚ್ಚುಗೆ ಸೂಚಿಸಿದರು.

Advertisement

ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಹೊಂಗಿರಣ ಶಿವಮೊಗ್ಗದಿಂದ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ| ಸಾಸ್ವೆಹಳ್ಳಿ ಸತೀಶ್‌ ಅವರ ‘ಕಿತ್ತೂರ ನಿರಂಜನಿ’ ಹಾಗೂ ‘ವೀರ ಉತ್ತರಕುಮಾರ’ ನಾಟಕ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ನಾಟಕಗಳು ಕೇವಲ ಮನರಂಜನೆಗೆ ಸೀಮಿತವಲ್ಲ. ಎಲ್ಲರೂ ಒಂದೆಡೆ ಬೆರೆತು ಸಮುದಾಯವಾಗಿ ಕುಳಿತು ನೋಡುವಂತೆ ಮಾಡುವ ಒಂದು ಸಂಸ್ಕೃತಿ. ಆದರೆ, ಪ್ರಸ್ತುತ ದಿನಗಳಲ್ಲಿ ನಾಟಕ ಸಂಸ್ಕೃತಿ ಅಪಾಯದಲ್ಲಿದೆ. ಹೊಸ ಮಾಧ್ಯಮಗಳ ಪ್ರಭಾವದಿಂದಾಗಿ ನಾಗರಿಕ ಸಮುದಾಯ ಒಟ್ಟಿಗೆ ಕುಳಿತು ನಾಟಕ ನೋಡುವ ದಿನಗಳು ದೂರವಾಗುತ್ತಿವೆ. ಇಂತಹ ದಿನಗಳಲ್ಲೂ ಸತೀಶ್‌ ಅವರು ಒಳ್ಳೆಯ ನಾಟಕಗಳನ್ನು ಶಿವಮೊಗ್ಗದ ಜನರಿಗೆ ನೀಡುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.

ಉಪನ್ಯಾಸಕ ಸುರೇಶ್‌ ಶಿಕಾರಿಪುರ ‘ವೀರ ಉತ್ತರಕುಮಾರ’ ನಾಟಕದ ಕುರಿತು ಮಾತನಾಡಿ, ಲೇಖಕರು ವೀರ ಉತ್ತರ ಕುಮಾರ ನಾಟಕದ ಮೂಲಕ ಸಮಕಾಲೀನ ರಾಜಕೀಯ ಸಂದರ್ಭವನ್ನು ಹಾಗೂ ಪೋಷಕರು ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವ ರೀತಿಯನ್ನು ಮನದಟ್ಟು ಮಾಡಿದ್ದಾರೆ. ಉತ್ತರಕುಮಾರನ ಒಳಗಡೆ ಇರುವ ಮುಗ್ಧತೆ, ಅಂತಃಕರಣವನ್ನು ಲೇಖಕರು ಸೂಕ್ಷ್ಮವಾಗಿ ಗ್ರಹಿಸಿದ್ದಾರೆ. ನಾಜೂಕಾದ ಭಾಷೆ ಇಲ್ಲಿದೆ ಎಂದರು.

ಈ ದೇಶದಲ್ಲಿ ಮಾಧ್ಯಮಗಳು ಎಲ್ಲವನ್ನು ಸಮರವೆಂದು ಬಿಂಬಿಸುತ್ತಿರುವುದು ದೇಶದ ಬಹುದೊಡ್ಡ ದುರಂತ. ನಮ್ಮ ಜನರ ಮನಸ್ಥಿತಿಗಳು ಸಹ ಕ್ಷುಲ್ಲಕ ವಿಚಾರಗಳೇ ಈ ದೇಶದ ದೊಡ್ಡ ಸಮಸ್ಯೆ ಎಂದು ನಂಬುತ್ತಿವೆ. ಅಧಿಕಾರದಲ್ಲಿ ಕುಳಿತಿರುವವರು ಲವ್‌ ಜಿಹಾದ್‌, ರಾಮ, ಗೋವಿನ ಹೆಸರಿನಲ್ಲಿ ಕ್ಲುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಇವರಿಗೆ ಶಿಕ್ಷಣ, ಕೃಷಿ, ಉದ್ಯೋಗ ಎಂದಿಗೂ ದೊಡ್ಡ ಸಮಸ್ಯೆಗಳಾಗಿ ಕಾಣಲೇ ಇಲ್ಲ. ಇಂತಹ ವಿಡಂಬನಾತ್ಮಕ ವಿಚಾರಗಳನ್ನು ಉತ್ತರ ಕುಮಾರ ನಾಟಕದಲ್ಲಿ ನೋಡಬಹುದು ಎಂದು ಉಪನ್ಯಾಸಕ ಸುರೇಶ್‌ ಶಿಕಾರಿಪುರ’ ಅಭಿಪ್ರಾಯಪಟ್ಟರು.

Advertisement

ಬೆಂಗಳೂರಿನ ಉಪನ್ಯಾಸಕ ಶಿವಕುಮಾರ ಮಾವಲಿ ‘ಕಿತ್ತೂರ ನಿರಂಜನಿ’ ನಾಟಕದ ಕುರಿತು ಮಾತನಾಡಿ, ಎಲ್ಲಾ ಧರ್ಮಗಳ ಮೂಲಭೂತವಾದ ಕಿತ್ತೂರ ನಿರಂಜನಿ ನಾಟಕದಲ್ಲಿ ಕಟ್ಟಿಕೊಡಲಾಗಿದೆ. ಎರಡು ಧರ್ಮಗಳ ನಡುವಿನ ಸಾಮರಸ್ಯ ತಿಳಿಸುವ ಯತ್ನವನ್ನು ಲೇಖಕರು ಮಾಡಿದ್ದಾರೆ. ರಾಜಕೀಯ, ಪ್ರೀತಿ ಮತ್ತು ಧರ್ಮದ ಸೂಕ್ಷ್ಮತೆಯನ್ನು ನಾಟಕದ ಮೂಲಕ ತಿಳಿಯಬಹುದು ಎಂದರು. ಲೇಖಕ ಡಾ| ಸಾಸ್ವೆಹಳ್ಳಿ ಸತೀಶ್‌ ಮಾತನಾಡಿದರು. ಲೇಖಕ ಬಿ. ಚಂದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಅರವಿಂದ್‌ ಇಂಡಿಯಾದ ಸಚಿನ್‌ ಕುಡತೂರಕರ್‌, ಚಂದ್ರಶೇಖರ ಹಿರೇಗೋಣಿಗೆರೆ, ಚಂದ್ರಶೇಖರ ಶಾಸ್ತ್ರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next