Advertisement

ಮಲೆನಾಡಿನಲ್ಲಿ ಬಿಜೆಪಿ ವಿರಾಟ್‌ ದರ್ಶನ!

12:28 PM May 25, 2019 | |

ಶಿವಮೊಗ್ಗ: ಆರು ತಿಂಗಳಲ್ಲಿ ನಾಲ್ಕು ಪಟ್ಟು ಮತಗಳನ್ನು ಹೆಚ್ಚಿಸಿಕೊಂಡ ಬಿಜೆಪಿಯು ಮತ್ತೂಮ್ಮೆ ತನ್ನ ವಿರಾಟ್‌ ಸ್ವರೂಪವನ್ನು ಪ್ರದರ್ಶಿಸಿದೆ. ಜೆಡಿಎಸ್‌- ಕಾಂಗ್ರೆಸ್‌ ಮತಗಳನ್ನು ಒಗ್ಗೂಡಿಸಿದಲ್ಲಿ ಬಿಜೆಪಿಯನ್ನು
ಶಿವಮೊಗ್ಗದಲ್ಲೇ ಬಗ್ಗು ಬಡಿಯಬಹುದು ಎಂಬುದು ಮೈತ್ರಿಕೂಟದ ಮುಖಂಡರ ಲೆಕ್ಕಾಚಾರ ಲೆಕ್ಕಾಚಾರವಾಗಿತ್ತು. ಶಿವಮೊಗ್ಗದಲ್ಲಿ ರಾಘವೇಂದ್ರ
ಅವರನ್ನು ಮಣಿಸಿದಲ್ಲಿ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಪ್ರಭಾವ
ಕಡಿಮೆಯಾಗಿ ಸಮ್ಮಿಶ್ರ ಸರಕಾರವನ್ನು ನಿರಾತಂಕವಾಗಿ ಮುನ್ನಡೆಸುವುದು ಸಹ ಮಿತ್ರಪಕ್ಷಗಳ ಗುರಿಯಾಗಿತ್ತು. ಆದರೆ, ಅವರ ಆಲೋಚನೆಗಳನ್ನು ತಲೆಕೆಳಗೆ ಮಾಡಿದ ಬಿಜೆಪಿ ದಾಖಲೆ ಅಂತರದ ವಿಜಯ ಸಾಧಿ ಸಿ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ.

Advertisement

2018ರ ವಿಧಾನಸಭೆಯಲ್ಲಿ ಭದ್ರಾವತಿ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡ ಬಿಜೆಪಿಯು ಲೋಕಸಭೆಯಲ್ಲೂ ತನ್ನ ಪ್ರಭುತ್ವವನ್ನು ಮುಂದುವರಿಸಿದೆ. ಆ ಮೂಲಕ ಕ್ಷೇತ್ರದಲ್ಲಿ ಸತತ ನಾಲ್ಕನೇ ಬಾರಿ ವಿಜಯ ಸಾಧಿಸಿದ ದಾಖಲೆ ನಿರ್ಮಿಸಿದೆ. ಶಿವಮೊಗ್ಗದಲ್ಲಿ ಸದ್ಯದ ಮಟ್ಟಿಗೆ ಬಿಜೆಪಿಯನ್ನು ಸರಿಗಟ್ಟಲು ಸಾಧ್ಯವಿಲ್ಲ ಎಂಬುದನ್ನು
ಮುಖಂಡರು ಮತ್ತೂಮ್ಮೆ ಸಾಬೀತುಪಡಿಸಿದ್ದಾರೆ.

ಸಾರ್ವತ್ರಿಕ ಚುನಾವಣೆ ಸಿದ್ಧತೆಯನ್ನು ಬಿಜೆಪಿ ಮುಖಂಡರು
ಒಂದೂವರೆ ವರ್ಷದ ಹಿಂದೆಯೇ ನಡೆಸಿದ್ದರು. ಅಚಾನಕ್ಕಾಗಿ ಎದುರಾದ ಉಪ
ಚುನಾವಣೆಯನ್ನು ವಾರ್ಷಿಕ ಪರೀಕ್ಷೆಗೆ ಪೂರ್ವ ಸಿದ್ಧತೆಯನ್ನಾಗಿ ಬಳಸಿಕೊಂಡರು. ಚುನಾವಣೆಯಲ್ಲಿ ಪಕ್ಷದ ಗೆಲುವಿನ ಅಂತರ 52 ಸಾವಿರಕ್ಕೆ ಇಳಿದಾಗಲೇ ಬಿಜೆಪಿ ಆಂತರಿಕ ವಲಯದಲ್ಲಿ ಚಿಂತೆ ಆವರಿಸಿತ್ತು.
ಇದನ್ನು ಎಚ್ಚರಿಕೆ ಗಂಟೆ ಎಂದು ಭಾವಿಸಿದ ಮುಖಂಡರು ಮೈತ್ರಿಯ
ಸವಾಲನ್ನು ಮೆಟ್ಟಿ ನಿಲ್ಲುವ ಪ್ರಯತ್ನವನ್ನು ಸದ್ದು-ಗದ್ದಲವಿಲ್ಲದಂತೆ ನಡೆಸಿದರು. ಲೋಪಗಳನ್ನು ಗುರುತಿಸಿ ನಿರಂತರವಾಗಿ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿ ಸರಿಪಡಿಸಿದರು. ಇದು ದಾಖಲೆ ವಿಜಯಕ್ಕೆ ಕಾರಣವಾಯಿತು.

ಈ ವಿಜಯದೊಂದಿಗೆ ರಾಘವೇಂದ್ರ ಅವರ ಪ್ರಭಾವ ಮತ್ತಷ್ಟು
ವಿಸ್ತರಣೆಗೊಂಡಿದೆ. ಯಡಿಯೂರಪ್ಪ ಪುತ್ರ ಎಂಬ ಹಣೆಪಟ್ಟಿ ಕಳಚಿ ಒಮ್ಮೆ
ವಿಧಾನಸಭೆ, ಮೂರು ಬಾರಿ ಲೋಕಸಭೆ ಪ್ರವೇಶಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಇದು ಪಕ್ಷದೊಳಗೆ ಅವರನ್ನು ಮತ್ತಷ್ಟು ಪ್ರಭಾವಿಯನ್ನಾಗಿ ಮಾಡಿದ್ದು ಜಿಲ್ಲೆಯಲ್ಲಿರುವ ಬೆರಳೆಣಿಕೆಯ ಮೊದಲ ಹಂತದ ನಾಯಕರ ಬಳಿಕದ ಸ್ಥಾನ ಕೊಡಿಸಿದೆ.

ಬಿಜೆಪಿಯ ಪ್ರಚಂಡ ವಿಜಯ ಯಡಿಯೂರಪ್ಪ ಅವರ ವೈಯಕ್ತಿಕ ವರ್ಚಸ್ಸನ್ನು ಮತ್ತಷ್ಟು ವೃದ್ಧಿಸಿದೆ. ತವರು ಜಿಲ್ಲೆಯಲ್ಲಿ ಮತದಾರರು ತಮ್ಮ
ಬೆನ್ನಿಗಿದ್ದಾರೆ ಎಂಬುದನ್ನು ಮತ್ತೂಮ್ಮೆ ತೋರಿಸಿದ್ದಾರೆ. ಮಿತ್ರಪಕ್ಷಗಳ ಮುಖಂಡರ ಒಳ ಜಗಳದಿಂದಾಗಿ ಸಮ್ಮಿಶ್ರ ಸರಕಾರ ಕುಸಿಯುವ ಭೀತಿಯಲ್ಲಿದ್ದು ಯಾವುದೇ ಸಮಯದಲ್ಲಿ ಸರಕಾರ ರಚಿಸಲು ಬಲ
ತುಂಬಿದಂತಾಗಿದೆ. ಕೈ ತಪ್ಪಿ ಹೋದ ರಾಜ್ಯ ಸರಕಾರದ ಅ ಧಿಕಾರವನ್ನು ಮರಳಿ ಪಡೆಯುವ ಪ್ರಯತ್ನಕ್ಕೆ ರಾಜ್ಯ ಮತ್ತು ರಾಷ್ಟ್ರಮಟ್ಟದ ವರಿಷ್ಠರಿಂದ
ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ಸಿಕ್ಕಿರಲಿಲ್ಲ. ಪಕ್ಷದ ಪ್ರಚಂಡ ವಿಜಯವೇ
ಅವರ ಕಾರ್ಯಕ್ಕೆ ಮತ್ತಷ್ಟು ಬಲ ತುಂಬಿದೆ. ಸೋತರೂ ಮೀಸೆ
ಮಣ್ಣಾಗಲಿಲ್ಲ ಎಂಬಂತೆ ಉಪ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಅಂತರವನ್ನು ತಗ್ಗಿಸಿದ್ದನ್ನೇ ಮಿತ್ರಪಕ್ಷಗಳ ಮುಖಂಡರು ನೈತಿಕ ವಿಜಯವೆಂದು ಬೀಗಿದರು. ಈ ಸೋಲನ್ನೇ ಸಾರ್ವತ್ರಿಕ ಚುನಾವಣೆಗೆ ಗೆಲುವಿನ
ಸೋಪಾನವನ್ನಾಗಿ ಮಾಡಿಕೊಂಡು ಬಿಜೆಪಿಯನ್ನು ಮಣಿಸುತ್ತೇವೆ ಎಂದು ಸಾರಿದ್ದರು. ಅದರೆ, ಆಡಿದ ಮಾತನ್ನು ಜಾರಿಗೊಳಿಸಲು ಪ್ರಯತ್ನ ಮಾತ್ರ ಆಗಲೇ ಇಲ್ಲ. ಸಾರ್ವತ್ರಿಕ ಚುನಾವಣೆವರೆಗೆ ಮೈ ಮರೆತು ಕುಳಿತವರು
ಏಕಾಏಕಿ ಪ್ರಚಾರಕ್ಕೆ ಇಳಿದಾಗ ಜನ ಬೆಂಬಲ ಸಿಗಲಿಲ್ಲ. ಉಪ ಚುನಾವಣೆಯಲ್ಲಿ ಕೈಗೆ ಸಿಕ್ಕಿದ್ದು ಸಾರ್ವತ್ರಿಕ ಚುನಾವಣೆಯಲ್ಲಿ ಬಾಯಿಗೆ
ಬಾರದಂತೆ ಮಾಡಿಕೊಂಡರು. ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲೇಬೇಕು ಎಂದು ಪಣ ತೊಟ್ಟ ಟ್ರಬಲ್‌ ಶೂಟರ್‌ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ಪ್ರಚಾರ ಜವಾಬ್ದಾರಿ ವಹಿಸಿಕೊಂಡು ಆರಂಭದಲ್ಲಿ
ಎರಡು ದಿನ ಮತ್ತು ಕಡೆಯಲ್ಲಿ ಮೂರು ದಿನ ತಮ್ಮ ಸಹೋದರ ಡಿ.ಕೆ. ಸುರೇಶ್‌ ಅವರೊಂದಿಗೆ ಅಬ್ಬರದ ಪ್ರಚಾರ ನಡೆಸಿದ್ದರು. ಅದರಲ್ಲೂ ಭದ್ರಾವತಿ ಮತ್ತು ತೀರ್ಥಹಳ್ಳಿ ಒಕ್ಕಲಿಗರ ಮನ ಸೆಳೆಯುವ ಪ್ರಯತ್ನ ನಡೆಸಿದ್ದರು. ಮೈತ್ರಿ ಮುಖಂಡರು ಹೋದಲ್ಲೆಲ್ಲ ಜನ ಪ್ರಚಾರಕ್ಕೆ ಬಂದರಾದರೂ ಅವರ ಮನದಲ್ಲಾಗಲೇ ಬಿಜೆಪಿ ಪ್ರತಿಷ್ಠಾಪನೆಯಾಗಿತ್ತು. ಹೀಗಾಗಿ ಅಬ್ಬರದ ಮತ್ತು ಸ್ಟಾರ್‌ ಪ್ರಚಾರಕರ ಗಿಮಿಕ್‌ಗಳು ಮತದಾರರ ಮೇಲೆ ಪ್ರಭಾವ ಬೀರಲಿಲ್ಲ.

Advertisement

ಮಧು ಬಂಗಾರಪ್ಪ ಅವರನ್ನು ಕಾಂಗ್ರೆಸ್‌ ನ ಹಿರಿಯ ಮುಖಂಡ ಕಾಗೋಡು
ತಿಮ್ಮಪ್ಪ ಅವರೇ ಅಭ್ಯರ್ಥಿಯನ್ನಾಗಿ ಸೂಚಿಸಿದ್ದರಿಂದ ಕಾಂಗ್ರೆಸ್‌ನ ಜಿಲ್ಲೆಯ
ಯಾವೊಬ್ಬ ಮುಖಂಡರೂ ಅಸಮಾಧಾನ ಹೊರ ಹಾಕಿರಲಿಲ್ಲ. ಹೊರಗೆ ಒಗ್ಗಟ್ಟು ಪ್ರದರ್ಶಿಸಿದರೂ ಪ್ರಚಾರ ಮಾತ್ರ ಸಂಘಟನಾತ್ಮಕವಾಗಿರಲಿಲ್ಲ. ವರಿಷ್ಠರು ಬಂದಾಗ ಕಚೇರಿ ಮತ್ತು ವೇದಿಕೆಗಳ ಮೇಲೆ ಹಾಜರಿ ತೋರಿಸಿದ್ದು ಬಿಟ್ಟರೆ ತಳಮಟ್ಟದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡವರು ಬಹಳ ಕಡಿಮೆ. ಇದು ದಯನೀಯ ಸೋಲಿಗೆ ಕಾರಣವಾಯಿತು.

ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next