Advertisement

ಸಮಬಲದ ಕಣದಲ್ಲಿ ಸಮೀಕ್ಷೆ ಲೆಕ್ಕ!

01:09 PM May 06, 2019 | Naveen |

ಶಿವಮೊಗ್ಗ: ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಎಂಬಂತೆ ಚುನಾವಣೆ ಮುಗಿದರೂ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಎಲ್ಲರೂ ಗೆಲ್ಲೋದಾದರೆ ಸೋಲು ಯಾರಿಗೆ ಎಂಬ ಪ್ರಶ್ನೆಯನ್ನು ಮೂರು ಪಕ್ಷಗಳ ಸಮೀಕ್ಷೆ ಹುಟ್ಟುಹಾಕಿದೆ.

Advertisement

6 ಏಳು ತಿಂಗಳ ಹಿಂದೆ ನಡೆದ ಲೋಕಸಭೆ ಉಪ ಚುನಾವಣೆಯ ಫಲಿತಾಂಶಕ್ಕೂ ಸಾರ್ವತ್ರಿಕ ಚುನಾವಣೆಯ ಫಲಿತಾಂಶಕ್ಕೂ ಹೆಚ್ಚಿನ ಅಂತರವೇನು ಇಲ್ಲ ಎನ್ನುತ್ತಿವೆ ಎಲ್ಲ ಸಮೀಕ್ಷೆಗಳು. ಉಪ ಚುನಾವಣೆಗೂ ಇಲ್ಲಿಗೂ ಶೇ.11ರಷ್ಟು ಮತದಾನ ಪ್ರಮಾಣ ಹೆಚ್ಚಳವಾಗಿದೆ. ಗೆಲುವಿನ ಲೆಕ್ಕಾಚಾರವನ್ನೇ ಬದಲಿಸಬಲ್ಲ ಕ್ಷೇತ್ರಗಳಲ್ಲಿಯೂ ಉತ್ತಮ ಮತದಾನವಾಗಿದೆ. ಇದರ ಲಾಭ ಯಾರಿಗೆ ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ.

ಕುಸಿಯುತ್ತಿದೆ ಅಂತರ: 2014ರ ಚುನಾವಣೆಯಲ್ಲಿ ಬಿಜೆಪಿಗಳಿಸಿದ್ದ ಮತಕ್ಕೂ 2018ರ ಉಪ ಚುನಾವಣೆಯಲ್ಲಿ ಗಳಿಸಿದ್ದ ಮತಕ್ಕೂ ದೊಡ್ಡ ಅಂತರವಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ಗೆ ಸಿಕ್ಕ ಮತಗಳನ್ನು ಒಟ್ಟಗೂಡಿಸಿದರೆ ಜೆಡಿಎಸ್‌ ಉತ್ತಮ ಅಂತರದಿಂದ ಗೆಲುವು ಸಾಸಬೇಕಿತ್ತು. ಆದರೆ ಮತದಾರರು ವಿಧಾನಸಭೆಗೂ ಮತ್ತು ಲೋಕಸಭೆಗೂ ಬೇರೆ ಲೆಕ್ಕಾಚಾರದಲ್ಲ ಮತ ಚಲಾಯಿಸುತ್ತಿದ್ದಾರೆ.

2018 ಲೋಕಸಭೆ ಉಪ ಚುನಾವಣೆಯಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 77388, ಜೆಡಿಎಸ್‌ 51815 ಮತ ಪಡೆದಿತ್ತು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌ 67899, ಬಿಜೆಪಿ 75181, ಭದ್ರಾವತಿ ಕ್ಷೇತ್ರದಲ್ಲಿ ಜೆಡಿಎಸ್‌ 62415, ಬಿಜೆಪಿ 51469, ತೀರ್ಥಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್‌ 58105, ಬಿಜೆಪಿ 65319, ಶಿಕಾರಿಪುರ ಕ್ಷೇತ್ರದಲ್ಲಿ ಜೆಡಿಎಸ್‌ 58787, ಬಿಜೆಪಿ 77570, ಸೊರಬ ತಾಲ್ಲೂಕು ಜೆಡಿಎಸ್‌ 68605, ಬಿಜೆಪಿ 67108, ಸಾಗರ ತಾಲ್ಲೂಕು ಜೆಡಿಎಸ್‌ 68993, ಬಿಜೆಪಿ 60526, ಬೈಂದೂರು ಜೆಡಿಎಸ್‌ 54522, ಬಿಜೆಪಿ 68992 ಮತ ಪಡೆದಿವೆ. ಉಪ ಚುನಾವಣೆ ಫಲಿತಾಂಶ ಗಮನಿಸಿದಾಗ ಬಿಜೆಪಿ ಭದ್ರಾವತಿ, ಸೊರಬ, ಸಾಗರದಲ್ಲಿ ಹಿನ್ನಡೆ ಅನುಭವಿಸಿದ್ದು ಬಿಟ್ಟರೆ ಉಳಿದೆಲ್ಲ ಕ್ಷೇತ್ರಗಳಲ್ಲೂ ಮುನ್ನಡೆ ಸಾಸಿತ್ತು. ಈ ಬಾರಿ ಉಪ ಚುನಾವಣೆಗಿಂತಲೂ 2 ಲಕ್ಷ ಹೆಚ್ಚುವರಿ ಮತದಾನವಾಗಿದ್ದು, ಈ ಮತಗಳು ಯಾರ ಪಾಲಾಗಿವೆ ಎಂಬುದು ಕುತೂಹಲ ಮೂಡಿಸಿವೆ.

ಬೂತ್‌ವಾರು ತಂತ್ರ: ಕಳೆದ ಬಾರಿ ಕಡಿಮೆ ಮತ ಬಂದಿದ್ದ ಬೂತ್‌ಗಳ ಮೇಲೆ ಎರಡೂ ಪಕ್ಷಗಳು ನಿಗಾವಹಿಸಿದ್ದವು. ಅದರಲ್ಲೂ ಯುವ ಮತದಾರರು, ಬೇರೆ ಜಿಲ್ಲೆಗಳಲ್ಲಿರುವ ಮತದಾರರು ಕರೆತಂದು ಮತ ಹಾಕಿಸುವ ಪ್ರಯತ್ನವನ್ನು ಬಿಜೆಪಿ ಮಾಡಿದೆ. ಭದ್ರಾವತಿ, ಸಾಗರ, ಸೊರಬದಲ್ಲಿ ಲೀಡ್‌ ತರಲು ಹೆಚ್ಚಿನ ಕೆಲಸ ಮಾಡಿದೆ. ಅಮಿತ್‌ಶಾ, ಬಿಎಸ್‌ವೈ, ಎಸ್‌.ಎಂ.ಕೃಷ್ಣ, ನಿರ್ಮಲಾ ಸೀತಾರಾಮನ್‌, ಕೆ.ಎಸ್‌.ಈಶ್ವರಪ್ಪರ ರ್ಯಾಲಿಗಳ ಹೊರತಾಗಿಯೂ ಪೇಜ್‌ ಪ್ರಮುಖರು ಮನೆ ಮನೆ ತಲುಪಿ ಮತಯಾಚಿಸಿದ್ದರು. ಪೇಜ್‌ ಪ್ರಮುಖರು ನೀಡಿದ ಮಾಹಿತಿ ಮೇರೆಗೆ ಮತಗಳಿಕೆ ಪ್ರಮಾಣ ಲೆಕ್ಕ ಹಾಕಿದೆ. ಮೋದಿ ಟೀಂಕೂಡ ಬಂದು ಸಹ ಸಮೀಕ್ಷೆ ಮಾಡಿಕೊಂಡು ಹೋಗಿದೆ.

Advertisement

ಇನ್ನು ಜೆಡಿಎಸ್‌ ಸಹ 2021 ಬೂತ್‌ಗಳ ಪಟ್ಟಿ ಮಾಡಿಕೊಂಡು ಕಳೆದ ಬಾರಿ ಕಡಿಮೆ ಮತ ಬಂದ ಕೆಲಸ ಮಾಡಿದರೆ ಇನ್ನಷ್ಟು ಮತಗಳಿಸಲು ಸಾಧ್ಯವಾಗಬಹುದಾದ ಬೂತ್‌ಗಳ ಮೇಲೆ ಹೆಚ್ಚಿನ ಪ್ರಚಾರ ನಡೆಸಿತ್ತು. ಅತೃಪ್ತ ಮುಖಂಡರನ್ನು ಒಂದೇ ವೇದಿಕೆಗೆ ತರಲು ಸಹ ಯಶಸ್ವಿಯಾಗಿತ್ತು. ಜತೆಗೆ ಡಿ.ಕೆ.ಬದ್ರರ್ ಚುನಾವಣೆ ಉಸ್ತುವಾರಿ ತೆಗೆದುಕೊಂಡಿದ್ದು, ಸಿಎಂ ಕುಮಾರಸ್ವಾಮಿ ಬಹಿರಂಗ ಪ್ರಚಾರದ ಕೊನೆ ಎರಡು ದಿನ ಶಿವಮೊಗ್ಗದಲ್ಲೆ ಉಳಿದು ಪ್ರಚಾರ ಮಾಡಿದ್ದು, ಎಚ್.ಡಿ.ದೇವೇಗೌಡ, 15 ಮಂದಿ ಸಚಿವರು, ಶಾಸಕರು ಸಹ ಪ್ರಚಾರ ಮಾಡಿದ್ದು ಈಬಾರಿ ಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿದೆ.

ಮುಗಿಯದ ಲೆಕ್ಕಾಚಾರ
ಬೂತ್‌ವಾರು ಕಾರ್ಯಕರ್ತರಿಂದ ಮಾಹಿತಿ ತರಿಸಿಕೊಂಡರೂ ಯಾವ ಜಾತಿಯವರು ಯಾರ ಕೈಹಿಡಿದಿದ್ದಾರೆ ತಿಳಿಯದೇ ಪಕ್ಷದ ಮುಖಂಡರು ಹೈರಾಣಾಗಿದ್ದಾರೆ. ದಿನಕ್ಕೊಂದು ಸಮೀಕ್ಷೆ ವರದಿಗಳು ಅಭ್ಯರ್ಥಿಗಳ ಕೈಸೇರುತ್ತಿವೆ. ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿರುವ ಅಭ್ಯರ್ಥಿಗಳು, ಮತದಾರರು ಮೇ 23ರ ನಿರೀಕ್ಷೆಯಲ್ಲಿದ್ದಾರೆ.

ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next