Advertisement

ಪ್ರಿಯಕರನ ಮದುವೆ ಸುದ್ದಿ ಕೇಳಿ ಪ್ರಿಯತಮೆ ಆತ್ಮಹತ್ಯೆ, ಮದುವೆ ಮಂಟಪದಿಂದ ಪ್ರಿಯಕರ ಪರಾರಿ

08:05 PM Mar 20, 2022 | Team Udayavani |

ಶಿವಮೊಗ್ಗ :  ಬೇರೆ ಯುವತಿ ಜೊತೆಗೆ ಪ್ರಿಯಕರ ಮದುವೆ ಆಗುತ್ತಿರುವುದರಿಂದ ಮನನೊಂದು ಪ್ರಿಯತಮೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಚಾರ ತಿಳಿಯುತ್ತಿದ್ದಂತೆ ಪ್ರಿಯಕರ ಮದುವೆ ಮಂಟಪದಿಂದಲೇ ಪರಾರಿಯಾಗಿದ್ದಾನೆ.

Advertisement

ಶಿವಮೊಗ್ಗದ ಓ.ಟಿ.ರಸ್ತೆಯ ರೂಪಶ್ರೀ, ಮನೆಯಲ್ಲೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾಲ್ಕು ಪುಟದ ಡೆತ್ ನೋಟ್ ಬರೆದಿದ್ದು, ಪ್ರಿಯಕರನ ವಿರುದ್ಧ ಆರೋಪ ಮಾಡಿದ್ದಾಳೆ.

ಪ್ರಿಯಕರನ ಮದುವೆ ದಿನವೇ ನೇಣಿಗೆ

ಮುರಳಿ ಎಂಬಾತನನ್ನು ರೂಪಶ್ರೀ ಬಹು ವರ್ಷದಿಂದ ಪ್ರೀತಿಸುತ್ತಿದ್ದಳು. ಶಿವಮೊಗ್ಗದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮುರಳಿಯ ಮದುವೆ ನಿಶ್ಚಯವಾಗಿತ್ತು. ಮದುವೆ ದಿನವೇ ರೂಪಶ್ರೀ ನೇಣಿಗೆ ಶರಣಾಗಿದ್ದಾರೆ.

ಡೆತ್ ನೋಟ್ ಪತ್ತೆ

Advertisement

ಸಾವಿಗೂ ಮುನ್ನ ರೂಪಶ್ರೀ ಅವರು ಡೆತ್ ನೋಟ್ ಬರೆದಿಟ್ಟಿದ್ದಾರೆ. ಇದು ಪತ್ತೆಯಾಗಿದೆ. ‘ಇಬ್ಬರೂ ಪ್ರೀತಿ ಮಾಡುತ್ತಿದ್ದೆವು. ಮದುವೆ ಆಗಲು ಕೂಡ ನಿರ್ಧಾರ ಮಾಡಿಕೊಂಡಿದ್ದೆವು. ಈಗ ತನ್ನನ್ನು ಬಿಟ್ಟು ಬೇರೊಬ್ಬರ ಜೊತೆಗೆ ಮದುವೆ ಆಗುತ್ತಿದ್ದಾನೆ. ಆ ಕಾರಣಕ್ಕೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ರೂಪಶ್ರೀ ಡೆತ್ ನೋಟ್’ನಲ್ಲಿ ಬರೆದಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಅಡಿ ಪ್ರಕರಣ ದಾಖಲು ಮಾಡಿದ್ದೇವೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಸೇರುತ್ತೇನೆ ಎನ್ನುವುದು ಸುಳ್ಳು ಸುದ್ದಿ: ಗೋವಾ ಶಾಸಕ ವಿಜಯ್ ಸರ್ದೇಸಾಯಿ

ಮದುವೆ ಮನೆಯಿಂದಲೇ ಪರಾರಿ

ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಿಶ್ಚಯವಾಗಿದ್ದ ಯುವತಿಗೆ ಮುರಳಿ ತಾಳಿ ಕಟ್ಟಿದ್ದಾನೆ. ರೂಪಶ್ರೀ ಆತ್ಮಹತ್ಯೆಯ ವಿಚಾರ ತಿಳಿಯುತ್ತಿದ್ದ ಹಾಗೆ ಕಲ್ಯಾಣ ಮಂಟಪದಿಂದಲೇ ಮುರಳಿ ಪರಾರಿಯಾಗಿದ್ದಾನೆ. ‘ಮುರಳಿಯ ಬಂಧನ ಪ್ರಕ್ರಿಯೆ ನಡೆಯುತ್ತಿದೆ. ಸದ್ಯದಲ್ಲೇ ಆತನನ್ನು ಬಂಧಿಸುತ್ತೇವೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದರು.

ಇಬ್ಬರೂ ಉಪನ್ಯಾಸಕರಾಗಿದ್ದರು

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ರೂಪಶ್ರೀ ಅತಿಥಿ ಉಪನ್ಯಾಸಕರಾಗಿದ್ದರು. ಪಿ.ಹೆಚ್.ಡಿ ಮಾಡುತ್ತಿದ್ದರು. ಇನ್ನು, ಮುರಳಿ ಕೂಡ ಉಪನ್ಯಾಸಕನಾಗಿದ್ದ. ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ. ಬಹು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಈಚೆಗೆ ರೂಪಶ್ರೀಯನ್ನು ಬಿಟ್ಟು ಮನೆಯಲ್ಲಿ ನಿಶ್ಚಯಿಸಿದ್ದ ಯುವತಿ ಜೊತೆಗೆ ಮುರಳಿ ಮದುವೆ ಆಗಿದ್ದಾನೆ.

ಆತ್ಮಹತ್ಯೆ ಪ್ರಕರಣ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುರಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next