Advertisement

ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಸಿದ್ಧತೆ: ಈಶ್ವರಪ್ಪ

10:54 PM Apr 30, 2021 | Shreeraj Acharya |

ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಲಾಗಿರುವ 34 ಕೊಳಚೆ ಪ್ರದೇಶಗಳ 5531 ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

Advertisement

ಗುರುವಾರ ಜಿಲ್ಲಾ ಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಮಾಲೀಕತ್ವದ ಜಮೀನಿನಲ್ಲಿರುವ ಘೋಷಿತ ಕೊಳಚೆ ಪ್ರದೇಶಗಳ ಕುಟುಂಬಗಳಿಗೆ ಸ್ವಂತ ಸೂರಿನ ಮಾಲೀಕತ್ವ ಹೊಂದಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಈಗಾಗಲೇ ಹಕ್ಕುಪತ್ರ ನೀಡಲು ಆದೇಶ ಹೊರಡಿಸಿದೆ ಎಂದರು.

ಈ ಹಕ್ಕುಪತ್ರಗಳನ್ನು ವಿತರಿಸಲು ಈ ಹಿಂದೆ ನಿಗದಿ ಪಡಿಸಿದ್ದ ದರವನ್ನು ಸಹ ಸರ್ಕಾರ ಕಡಿಮೆ ಮಾಡಿದೆ. ಅದರಂತೆ ಪುರಸಭೆ ಮತ್ತು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 1200 ಚದರ ಅಡಿಗಳಿಗೆ ಮೀರದಂತೆ ರೂ. 2ಸಾವಿರ ಹಾಗೂ ಪ.ಜಾತಿ, ಪಂಗಡ ಮತ್ತು ಅಂಗವಿಕಲರಿಗೆ 1ಸಾವಿರ ರೂ. ನಿಗದಿಪಡಿಸಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ 600 ಚದರ ಅಡಿಗಳಿಗೆ ಮೀರದಂತೆ ರೂ. 2 ಸಾವಿರ ಹಾಗೂ 1ಸಾವಿರ ನಿಗದಿಪಡಿಸಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 600 ಚದರ ಅಡಿಗಳಿಗೆ ಮೀರದಂತೆ 4ಸಾವಿರ ರೂ. ಹಾಗೂ ಪ.ಜಾತಿ, ಪಂಗಡ, ಅಂಗವಿಕಲರಿಗೆ 2ಸಾವಿರ ದರ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಶಿವಮೊಗ್ಗ ನಗರದಲ್ಲಿ ಘೋಷಿತ ಕೊಳಚೆ ಪ್ರದೇಶಗಳಲ್ಲಿರುವ 5531 ಕುಟುಂಬಗಳ 26,732 ನಿವಾಸಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಮಹಾನಗರ ಪಾಲಿಕೆ ಮತ್ತು ಇತರ ಸರ್ಕಾರಿ ಇಲಾಖೆಗಳ ಜಮೀನುಗಳಲ್ಲಿರುವ ಈ ಕೊಳಚೆ ಪ್ರದೇಶಗಳ ಜಮೀನನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಒಂದು ತಿಂಗಳ ಒಳಗಾಗಿ ಹಸ್ತಾಂತರಿಸಿ ಶೀಘ್ರ ಹಕ್ಕುಪತ್ರ ನೀಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಇದರಿಂದ ಕೊಳೆಗೇರಿ ನಿವಾಸಿಗಳ ದಶಕಗಳ ಕನಸು ನನಸಾಗಲಿದ್ದು, ಇದೇ ರೀತಿ ಜಿಲ್ಲೆಯ ಇತರ ತಾಲೂಕುಗಳಲ್ಲಿರುವ ಘೋಷಿತ ಕೊಳಚೆ ಪ್ರದೇಶಗಳ 13,943 ಕುಟುಂಬಗಳಿಗೆ ಸಹ ಹಕ್ಕುಪತ್ರ ನೀಡಲು ಸಿದ್ಧತೆ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.

Advertisement

ಮುಂದಿನ ಹಂತದಲ್ಲಿ ಖಾಸಗಿ ಜಮೀನುಗಳಲ್ಲಿರುವ ಘೋಷಿತ ಕೊಳಚೆ ಪ್ರದೇಶಗಳಲ್ಲಿ ವಾಸವಾಗಿರುವವರಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲಾಧಿ  ಕಾರಿ ಕೆ.ಬಿ. ಶಿವಕುಮಾರ್‌ ಮತ್ತಿತರ ಅಧಿ  ಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next