Advertisement

ದಯಾಳ್‌ ಶಾಸನದಲ್ಲಿ ಶಿವಲಿಂಗ ಮಿಂಚು

04:55 PM Apr 21, 2019 | Lakshmi GovindaRaju |

“ಮಗಳೇ ಹುಷಾರು….’ ಮಗಳು ಹೊರಗೆ ಹೊರಟರೆ ಸಾಕು ತಂದೆ ಪ್ರತಿ ಸಲವೂ ಈ ಡೈಲಾಗ್‌ ಹೇಳುತ್ತಲೇ ಇರುತ್ತಾನೆ. ಅದಕ್ಕೆ ಕಾರಣ, ತನ್ನ ಕಣ್ಣೆದುರಲ್ಲೇ ಮಗಳಿಗೆ ಆ್ಯಕ್ಸಿಡೆಂಟ್‌ ಆಗಿ ಆಕೆ ಸಾವನ್ನಪ್ಪುವ “ಕನಸು’ ಪದೇ ಪದೇ ಬೀಳುತ್ತಲೇ ಇರುತ್ತದೆ. ಅಷ್ಟಕ್ಕೂ ಆ ಕನಸು ಬೀಳುವುದೇಕೆ? ಇಂತಹ ಗೊಂದಲ ಪ್ರಶ್ನೆಗಳಿಗೆ ಉತ್ತರ ಕೊಡುತ್ತಲೇ ಹೊಸತನದ ಚಿತ್ರಣ ಕೊಟ್ಟಿದ್ದಾರೆ ನಿರ್ದೇಶಕರು.

Advertisement

ಆರಂಭದಲ್ಲಿ ಕಥೆ ಕೊಂಚ ಗೊಂದಲ ಹುಟ್ಟಿಸುತ್ತದೆ. ಮೊದಲರ್ಧ ಸಣ್ಣ ಸಂಶಯಗಳ ಮಧ್ಯೆ, ಕುತೂಹಲವೂ ಇದೆ. ಹಾಗಂತ ಅದು ಹೆಚ್ಚು ಕಾಲ ಇರುವುದಿಲ್ಲ. ಚಿತ್ರಕಥೆಯಲ್ಲಿ ಹೊಸತನವಿದೆ. ನಿರೂಪಣೆಯಲ್ಲೂ ತಾಕತ್ತು ಇದೆ. ಪ್ರತಿ ಸಲವೂ ಒಂದೊಂದು ರೀತಿಯ ಕಥೆ ಹಿಡಿದು ಹೊಸ ಫೀಲ್‌ ಕಟ್ಟಿಕೊಡುತ್ತಿರುವ ನಿರ್ದೇಶಕ ದಯಾಳ್‌, “ತ್ರಯಂಬಕಂ’ ಚಿತ್ರದಲ್ಲೂ ಅದನ್ನು ಮುಂದುವರೆಸಿದ್ದಾರೆ.

ಒಂದೇ ಮಾತದಲ್ಲಿ ಹೇಳುವುದಾದರೆ, ಇಲ್ಲಿ ಭ್ರಮೆ ಮತ್ತು ವಾಸ್ತವತೆಯ ಚಿತ್ರಣವಿದೆ. ಇಲ್ಲಿ ಕಥೆಯೇ ಜೀವಾಳ. ಚುರುಕುತನದ ಚಿತ್ರಕಥೆ ಚಿತ್ರದ ವೇಗವನ್ನು ಹೆಚ್ಚಿಸಿದೆ. ಆರಂಭದಲ್ಲಿ ಕೊಂಚ ತಾಳ್ಮೆಗೆಡಿಸುತ್ತಾದರೂ, ತೆರೆ ಮೇಲೆ ಆಗುವ ಕೆಲ ಬದಲಾವಣೆಗಳು ಸಮಾಧಾನಕ್ಕೂ ಕಾರಣವಾಗುತ್ತವೆ.

ಇಡೀ ಕಥೆ ಅಪ್ಪ, ಮಗಳ ಸುತ್ತ ಸುತ್ತಿದರೂ, ಅದಕ್ಕೊಂದು ಬಲವಾದ ಕಾರಣವಿದೆ. ನೂರೆಂಟು ಪ್ರಶ್ನೆಗಳೂ ಇವೆ. ಕೆಲವೆಡೆ ಕಥೆ ಹೀಗೆ ಸಾಗಬಹುದಾ ಎಂಬ ಲೆಕ್ಕಾಚಾರ ಹಾಕಿದರೆ, ಅದು ಉಲ್ಟಾ ಆಗುತ್ತದೆ. ಕೊನೆಗೆ ಆ ಲೆಕ್ಕಾಚಾರ ಇನ್ನೊಂದು ತಿರುವು ಪಡೆದುಕೊಳ್ಳುತ್ತದೆ. ಆ “ತಿರುವು’ ಏನು ಎಂಬುದರ ಬಗ್ಗೆ ಕುತೂಹಲವಿದ್ದರೆ “ತ್ರಯಂಬಕಂ’ ನೋಡಲು ಯಾರ ಅಪ್ಪಣೆ ಬೇಡ.

“ತ್ರಯಂಬಕಂ’ ಬೇರೆಯದ್ದೇ ವಿಷಯವನ್ನು ಹೇಳುವ ಮತ್ತು ಹೀಗೂ ಉಂಟು ಎಂಬುದನ್ನು ಸಾರುವ ಚಿತ್ರಣ ಹೊಂದಿದೆ. ಈ ರೀತಿಯ ಚಿತ್ರಗಳನ್ನು ಕಟ್ಟಿಕೊಡುವಾಗ ಅಧ್ಯಯನ ಮುಖ್ಯವಾಗುತ್ತದೆ. ಅದಿಲ್ಲಿ ಸಿನಿಮಾದುದ್ದಕ್ಕೂ ಕಾಣುತ್ತದೆ. ಮನರಂಜನೆಗೆ ಹಾಡು ಬೇಕೆಂಬ ಕಾರಣಕ್ಕೆ ಇಲ್ಲಿ ಎಂಗೇಜ್‌ಮೆಂಟ್‌ ಸನ್ನಿವೇಶದಲ್ಲೊಂದು ಹಾಡು ಇಡಲಾಗಿದೆ.

Advertisement

ಅದು ಇರದಿದ್ದರೂ ಚಿತ್ರಕ್ಕೇನೂ ಪೆಟ್ಟು ಬೀಳುತ್ತಿರಲಿಲ್ಲ. ಆ ಹಾಡೇ ಆ ಕ್ಷಣದ ಅಡಚಣೆ ಎನ್ನಬಹುದು. ಹಿನ್ನೆಲೆ ಸಂಗೀತ ಕಡೆ ಇನ್ನಷ್ಟು ಗಮನಿಸುವ ಅಗತ್ಯವಿತ್ತು. ಅದು ಬಿಟ್ಟರೆ ಕಥೆಗೆ ತಕ್ಕಂತಹ ಪಾತ್ರಗಳ ಆಯ್ಕೆ ಕೂಡ ಚಿತ್ರದ ಪ್ಲಸ್‌ ಎನ್ನಬಹುದು. ಸಾವಿರಾರು ವರ್ಷಗಳ ಹಿಂದಿನ ಸಿದ್ಧಪುರುಷರು ಮಾಡಿದ ಸಾಧನೆಯ ಅಂಶಗಳನ್ನು ಹೊಂದಿದ ಕಥೆಯ ಎಳೆ ಇಲ್ಲಿದೆ.

ಅಷ್ಟೇ ಅಲ್ಲ, ಆಗಿನ ಮತ್ತು ಈಗಿನ ವಿಷಯಗಳನ್ನು ಸೇರಿಸಿಕೊಂಡು ಸಸ್ಪೆನ್ಸ್‌ ರೀತಿಯ ಚಿತ್ರ ಕಟ್ಟಿಕೊಟ್ಟಿರುವ ನಿರ್ದೇಶಕರು, ಸಿದ್ಧಪುರುಷರು ಸಿದ್ಧಪಡಿಸಿದ ಔಷಧಿ ಗುಣವಿರುವ ಒಂದು ವಸ್ತು ಹೇಗೆ ದುಷ್ಟರ ಕೈಗೆ ಸಿಕ್ಕು ಅಲ್ಲೊಂದು ಮಾಫಿಯಾ ಹುಟ್ಟಿಕೊಳ್ಳುತ್ತದೆ ಎಂಬುದನ್ನು ಸೂಕ್ಷ್ಮವಾಗಿ ತೋರಿಸಿದ್ದಾರೆ.

ಕಥೆ ಬಗ್ಗೆ ಹೇಳುವುದಕ್ಕಿಂತ ಒಮ್ಮೆ ಚಿತ್ರ ನೋಡಿದರೆ, ಸಿದ್ಧಪುರುಷರಿಗೂ ಈಗಿನ ಮಾಫಿಯಾಗೂ ಸಂಬಂಧಿಸಿದ ಆ ವಸ್ತು ಯಾವುದೆಂಬುದು ಅರ್ಥವಾಗುತ್ತೆ. ಶಿವರುದ್ರಯ್ಯ (ರಾಘಣ್ಣ)ನಿಗೆ ಮಗಳೆಂದರೆ ಪ್ರಾಣ. ಮಗಳಿಗೂ ಅಪ್ಪನೆಂದರೆ ಪ್ರೀತಿ. ಮಗಳು ಹೊರಗೆ ಹೊರಟರೆ ಸಾಕು ಅವಳಿಗೆ ಏನಾದರೂ ಆಗುತ್ತೆ ಎಂಬ ಭಯ ಆ ತಂದೆಯದ್ದು.

ಅವನ ಕನಸಲ್ಲಿ ಮಗಳ ಸಾವಿನ ದೃಶ್ಯಗಳು ಹೊರತಾಗಿ ಬೇರೇನೂ ಬರಲ್ಲ. ಹಾಗಾಗಿ ಅವನಿಗೆ ಮಗಳ ಮೇಲೆ ಕಾಳಜಿ. ಅದು ಭ್ರಮೆಯೋ, ವಾಸ್ತವವೋ ಎಂಬ ಪ್ರಶ್ನೆಗಳ ಜೊತೆಗೆ ಒಂದು ಘಟನೆ ಬಿಚ್ಚಿಕೊಳ್ಳುತ್ತದೆ. ಅಲ್ಲೊಂದಷ್ಟು ಸತ್ಯಾಂಶಗಳು ಆಚೆ ಬರುತ್ತವೆ. ತಂದೆಗೆ ಇಬ್ಬರು ಅವಳಿ -ಜವಳಿ ಹೆಣ್ಣು ಮಕ್ಕಳು ಆ ಪೈಕಿ ಹಿರಿಯ ಮಗಳು ಅಪಘಾತದಲ್ಲಿ ಮೃತಪಟ್ಟಿರುತ್ತಾಳೆ.

ಆಕೆ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಕೆಲಸ ಮಾಡುವಾಕೆ. ಅಧ್ಯಯನ ಮಾಡುವ ವೇಳೆ ಆಕೆಗೊಂದು ತಾಮ್ರದ ಶಾಸನದಲ್ಲಿ ಬರೆದ ರಹಸ್ಯವೊಂದು ತಿಳಿಯುತ್ತದೆ. ಸಿದ್ಧಪುರುಷರು ಸಾವಿರಾರು ವರ್ಷಗಳ ಹಿಂದೆ ನಾಲ್ಕು ಸಾವಿರ ವಸ್ತುಗಳನ್ನು ಕ್ರೂಢೀಕರಿಸಿ, ಒಂದು ನವಪಾಶಾಣ ಶಿವಲಿಂಗವನ್ನು ಮಾಡಿರುತ್ತಾರೆ.

ಆ ನವಪಾಶಾಣ ಲಿಂಗಕ್ಕೆ ಹಾಲಿನ ಅಭಿಷೇಕ, ನೀರಿನ ಅಭಿಷೇಕ ಮಾಡಿದ್ದನ್ನು ಸೇವಿಸಿದರೆ, ರೋಗ ನಿವಾರಣೆಯಾಗುತ್ತದೆ ಅಂತಹ ಶಕ್ತಿಯ ಲಿಂಗವದು. ಆ ಬಗ್ಗೆ ಆಕೆ, ಇಲಾಖೆಗೆ ತಿಳಿಸುತ್ತಾಳೆ. ಇಲಾಖೆ ಅಧಿಕಾರಿಗಳು ಆಕೆಗೆ ಮೋಸ ಮಾಡಿ, ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಅತ್ತ ತಂದೆಗೆ ಬ್ರೈನ್‌ಸ್ಟೋಕ್‌ ಆಗಿ, ನಿರ್ಧಿಷ್ಟ ನೆನಪಿನ ಶಕ್ತಿಯನ್ನು ಕಳೆದುಕೊಂಡಿರುತ್ತಾನೆ. ಅತ್ತ ದುಷ್ಟರ ಕೈ ಸೇರಿದ ನವಪಾಶಾಣ ಲಿಂಗ ಮೂರನೇ ಕಣ್ಣಿಗೆ ಬೀಳುತ್ತಾ ಇಲ್ಲವಾ ಅನ್ನೋದೇ ಕಥೆ. ರಾಘವೇಂದ್ರ ರಾಜಕುಮಾರ್‌ ಅವರು ಪಾತ್ರಕ್ಕೆ ಸರಿಹೊಂದಿದ್ದಾರೆ. ಮಗಳ ಬಗ್ಗೆ ಕಾಳಜಿ ತೋರುವ, ಪ್ರೀತಿ ಕಾಣುವ ಅಪ್ಪನಾಗಿ ಇಷ್ಟವಾಗುತ್ತಾರೆ.

ಅನುಪಮಾ ಎರಡು ಪಾತ್ರಕ್ಕೂ ಸೈ ಎನಿಸಿಕೊಂಡಿದ್ದಾರೆ. ಪತ್ತೆದಾರಿಯಾಗಿರುವ ರೋಹಿತ್‌ ಗಮನಸೆಳೆಯುತ್ತಾರೆ. ಶಿವಮಣಿ, ಸುಂದರ್‌ ಪಾತ್ರಗಳಿಗೆ ಮೋಸ ಮಾಡಿಲ್ಲ. ಗಣೇಶ್‌ ನಾರಾಯಣನ್‌ ಹಾಡಿನ ಬಗ್ಗೆ ಹೇಳುವಂತಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನೂ ಹೆಚ್ಚು ಒತ್ತು ಕೊಡಬಹುದಿತ್ತು. ಬಿ.ರಾಕೇಶ್‌ ಅವರ ಛಾಯಾಗ್ರಹಣದ ಬಗ್ಗೆ ದೂರುವಂಥದ್ದೇನೂ ಇಲ್ಲ.

ಚಿತ್ರ: ತ್ರಯಂಬಕಂ
ನಿರ್ಮಾಣ: ಫ್ಯೂಚರ್‌ ಎಂಟರ್‌ಟೈನ್‌ಮೆಂಟ್‌ ಫಿಲಂಸ್‌
ನಿರ್ದೇಶನ: ದಯಾಳ್‌ ಪದ್ಮನಾಭನ್‌
ತಾರಾಗಣ: ರಾಘವೇಂದ್ರ ರಾಜಕುಮಾರ್‌, ರೋಹಿತ್‌, ಅನುಪಮಾ, ವಿಜಯಲಕ್ಷ್ಮೀ ಸಿಂಗ್‌, ಶಿವಮಣಿ, ಸುಂದರ್‌ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next