Advertisement

ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ: ಸಲಗ ಸಕ್ಸಸ್‌ ಸಂಭ್ರಮದಲ್ಲಿ ಶಿವಣ್ಣ ಕಿವಿಮಾತು

01:13 PM Feb 08, 2022 | Team Udayavani |

“ನಮ್ಮಲ್ಲೇ ಒಳ್ಳೊಳ್ಳೆಯ ನಟಿಯರಿದ್ದಾರೆ. ಹೀಗಾಗಿ ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ’ ಇದು ಕನ್ನಡದ ಹಲವು ನಿರ್ಮಾಪಕ ಮತ್ತು ನಿರ್ದೇಶಕರಿಗೆ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಹೇಳಿದ ಕಿವಿಮಾತು.

Advertisement

ಕನ್ನಡದಲ್ಲಿ ಇತ್ತೀಚೆಗೆ ಬಿಗ್‌ ಬಜೆಟ್‌ ಸ್ಟಾರ್ ಸಿನಿಮಾಗಳಿಗೆ ಪರಭಾಷೆಯ ನಟಿಯರನ್ನು ಕರೆತರುತ್ತಿರುವುದರ ಬಗ್ಗೆ ಮಾತನಾಡಿದ ಶಿವಣ್ಣ, “ನಮ್ಮಲ್ಲಿ ತುಂಬ ಒಳ್ಳೆಯ ನಟಿಯರಿದ್ದಾರೆ. ಪ್ರತಿಭಾವಂತರಿದ್ದಾರೆ. ಹೀಗಿರುವಾಗ ಕನ್ನಡದ ಪ್ರತಿಭೆಗಳಿಗೆ ಅವಕಾಶ ಕೊಟ್ಟರೆ ಅವರು ಇನ್ನೂ ಬೆಳೆಯುತ್ತಾರೆ’ ಎಂಬುದು ಶಿವಣ್ಣ ಅವರ ಅಭಿಪ್ರಾಯ.

ಶುಕ್ರವಾರ ಸಂಜೆ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ “ಸಲಗ’ ಚಿತ್ರದ ಸಕ್ಸಸ್‌ ಮೀಟ್‌ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಚಿತ್ರತಂಡಕ್ಕೆ ಸ್ಮರಣಿಕೆ ನೀಡಿ ಮಾತನಾಡಿದ ಅವರು, “ನಾವು ಒಟ್ಟಿಗೆ ಇದ್ದಾಗೆಲ್ಲಾ ನಮಗೆ ವಯಸ್ಸಾಗಿದೆ ಅನ್ಕೋಳ್ಳೋದಿಲ್ಲ. ನಾವು ಪಾಸಿಟಿವ್‌ ಥಿಂಕ್‌ ಮಾಡಬೇಕು, ಅದೇ ಒಳ್ಳೆಯದು. ವಿಜಿ ಮೊದಲ ಸಿನಿಮಾ ದುನಿಯಾ ಮುಹೂರ್ತಕ್ಕೂ ಬಂದಿದ್ದೆ, ಈಗಲೂ ಜೊತೆ ಇರ್ತೀನಿ. ಕನ್ನಡದ ನಟಿ ಸಂಜನಾ ಅವರು ಸಿನಿಮಾದಲ್ಲಿ ಒಳ್ಳೆಯ ರೀತಿ ನಟಿಸಿದ್ದಾರೆ. ನಮ್ಮಲ್ಲೇ ಒಳ್ಳೊಳ್ಳೆ ನಟಿಯರಿದ್ದಾರೆ. ಎಲ್ಲರಿಗೂ ಹೇಳ್ಳೋದೇನು ಅಂದ್ರೆ ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಿ’ ಎಂದು ಶಿವಣ್ಣ ಸಲಹೆ ನೀಡಿದರು.

ವೇದಿಕೆಯಲ್ಲಿ ಅಪ್ಪು ನೆನೆದು ಭಾವುಕ ಇದೇ ವೇಳೆ ವೇದಿಕೆಯಲ್ಲಿ ಅಪ್ಪು ನೆನೆದು ಶಿವಣ್ಣ ಭಾವುಕರಾದರು. “”ಸಲಗ’ ಪ್ರೀ-ರಿಲೀಸ್‌ ಇವೆಂಟ್‌ ಯಾವಾಗ್ಲೂ ನೆನಪಿರುತ್ತೆ. ನಾನು ಮತ್ತು ಅಪ್ಪು ಇಬ್ಬರೂ ಆ ಕಾರ್ಯಕ್ರಮದಲ್ಲಿದ್ದೆವು. ಅದರಲ್ಲಿ ಹಲವು ನೆನಪುಗಳಿವೆ. ಈಗಿಲ್ಲ ಅಂತ ಅಂದುಕೊಂಡ್ರೆ ತುಂಬಾ ಕಷ್ಟ ಆಗುತ್ತೆ. ಆದರೆ ಅವನು ಇಲ್ಲೇ ಇದ್ದಾನೆ, ಅವನ ಹಾರೈಕೆ ಇದ್ದೇ ಇರುತ್ತೆ. ಅಪ್ಪು ಇಲ್ಲ ಅಂತ ಅಂದುಕೊಳ್ಳೋದಕ್ಕೆ ಆಗುವುದಿಲ್ಲ. ಅಪ್ಪು ಇಲ್ಲೇ ಇದ್ದಾನೆ’ ಎಂದು ಶಿವಣ್ಣ ಗದ್ಗದಿತರಾದರು.

ಕಣ್ಣೀರಿಡುತ್ತಲೇ ಖುಷಿ ಹಂಚಿಕೊಂಡ ವಿಜಿ “ಸಲಗ’ ಸಕ್ಸಸ್‌ ಮೀಟ್‌ನಲ್ಲಿ ಮಾತನಾಡಿದ ನಟ ಕಂ ನಿರ್ದೇಶಕ ದುನಿಯಾ ವಿಜಯ್‌, “”ಸಲಗ’ ಸಿನಿಮಾ ನಿರ್ಮಾಣ ಮಾಡುವಂತೆ ಕೆ. ಪಿ ಶ್ರೀಕಾಂತ್‌ ಅವರನ್ನು ಹುಡುಕಿಕೊಂಡು ಎಸ್‌ಎಲ್‌ವಿ ಹತ್ರ ಹೋದಾಗ ನನ್ನ ಜೇಬಿನಲ್ಲಿ ಅಂದು ಕೇವಲ 40 ರುಪಾಯಿ ಹಣವಿತ್ತು. ಆ 40 ರೂಪಾಯಿಯನ್ನು ಫೋಟೊ ತೆಗೆದು ಇಟ್ಟುಕೊಂಡಿದ್ದೇನೆ. ಈ ವಿಷಯ ನನ್ನ ಮಗ ಸಾಮ್ರಾಟ್‌, ಕೀರ್ತಿ, ಡ್ರೈವರ್‌ ಮೊಹಮ್ಮದ್‌ ಹಾಗೂ ನನಗೆ ಅಷ್ಟೆ ಗೊತ್ತು. ಬೇರೆ ಯಾರಿಗೂ ಈ ವಿಷಯ ಗೊತ್ತಿಲ್ಲ. ಆ 40 ರೂಪಾಯಿಯಿಂದಲೇ “ಸಲಗ’ ಸಿನಿಮಾ ಶುರುವಾಯ್ತು’ ಎಂದು ಭಾವುಕರಾದರು ನಟ ದುನಿಯಾ ವಿಜಯ್.

Advertisement

ಇದನ್ನೂ ಓದಿ:ಕೇಳಿಸಿಕೊಳ್ಳಿ ಯೋಗಿ, ಕೇಳಿಸಿಕೊಳ್ಳಿ ಕೇಜ್ರಿವಾಲ್: ಪ್ರಧಾನಿ ಆರೋಪಕ್ಕೆ ಟ್ವೀಟ್ ಸಮರ!

ಸಕ್ಸಸ್‌, ಅಪ್ಪ-ಅಮ್ಮ-ಅಪ್ಪುಗೆ ಅರ್ಪಣೆ “ಅಮ್ಮ ತೀರಿಕೊಳ್ಳುವ ಮೊದಲು, ಮನೆಯಲ್ಲಿ ಶಿವಲಿಂಗ ಇದೆ ಅದಕ್ಕೆ ಪೂಜೆ ಮಾಡುತ್ತಾ ಇರು, ಮತ್ತೆ ಒಳ್ಳೆಯದಾಗುತ್ತೆ ಅಂಥ ಹೇಳಿದ್ದರು. ಅದರಂತೆಯೇ ಎಲ್ಲ ಒಳ್ಳೆಯದಾಯ್ತು. ನಾನು ಮತ್ತೆ ಕೆಲಸಕ್ಕೆ ಹೋಗುವಂತಾಯ್ತು. ಈ ಸಕ್ಸಸ್‌ ಅನ್ನು ನಾನು ನನ್ನ ಅಪ್ಪ-ಅಪ್ಪ-ಅಪ್ಪು ಹಾಗೂ ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ಎರಡು ವರ್ಷದಿಂದ ನಾನು ಬಹಳ ಕಷ್ಟದಲ್ಲಿದ್ದೆ. ಎಲ್ಲೂ ಮಾತನಾಡಿರಲಿಲ್ಲ. ಈಗ ಮಾತನಾಡುವ ಸಮಯ ಬಂದಿದೆ. ಇನ್ನೂ ಸಾಕಷ್ಟು ಜನರಿಗೆ ನಾನು ಹೃದಯಪೂರ್ವಕ ಧನ್ಯವಾದ ಹೇಳಬೇಕು. ಮುಂದಿನ ದಿನಗಳಲ್ಲಿ ನಾನು ಇನ್ನಷ್ಟು ಮಾತನಾಡಲಿದ್ದೇನೆ’ ಎಂದರು ದುನಿಯಾ ವಿಜಯ್.

“ಇನ್ನೂ ಮಾಡುವುದಕ್ಕೆ ಸಾಕಷ್ಟು ಕೆಲಸವಿದೆ. ಅದಕ್ಕೆ ಎಲ್ಲರ ಆಶೀರ್ವಾದ ಬೇಕು. ಶಿವಣ್ಣನ ಆಶೀರ್ವಾದ ಸದಾ ಇರಬೇಕು. ಕೆ.ಪಿ ಶ್ರೀಕಾಂತ್‌ ಅವರು ನನಗೆ ಪುನರ್ಜನ್ಮ ಕೊಟ್ಟಂಥ ವ್ಯಕ್ತಿ. ನಿಮ್ಮ ಸಂಸ್ಥೆಗೆ ಯಾವಾಗ ಕೆಲಸ ಮಾಡಬೇಕು ಹೇಳಿ ಬಂದು ಕೆಲಸ ಮಾಡುತ್ತೇನೆ. ಮುಳುಗುತ್ತಿದ್ದ ನನ್ನನ್ನು ಕಾಪಾಡಿದವರು ನೀವು’ ಎಂದು ನಿರ್ಮಾಪಕ ಕೆ. ಪಿ ಶ್ರೀಕಾಂತ್‌ ಅವರನ್ನು ಸ್ಮರಿಸಿದರು ದುನಿಯಾ ವಿಜಯ್.

“ಸಲಗ’ ಸಕ್ಸಸ್‌ ಮೀಟ್‌ಗೆ ಸ್ಟಾರ್ ಸಾಥ್‌ ಇನ್ನು “ಸಲಗ’ ಸಕ್ಸಸ್‌ಮೀಟ್‌ ಸಂಭ್ರಮದಲ್ಲಿ ತಾರೆಯರ ದಂಡೇ ನೆರೆದಿತ್ತು. ನಟರಾದ ಗೋಲ್ಡನ್‌ ಸ್ಟಾರ್‌ ಗಣೇಶ್‌, ನೆನಪಿರಲಿ ಪ್ರೇಮ್, ಶ್ರೀನಗರ ಕಿಟ್ಟಿ, ಡಾಲಿ ಧನಂಜಯ್‌ ಸೇರಿದಂತೆ ಅನೇಕ ಸ್ಟಾರ್ ಹಾಜರಿದ್ದು, “ಸಲಗ’ ಸಂಭ್ರಮದ ಬಗ್ಗೆ ಖುಷಿಯ ಮಾತುಗಳನ್ನಾಡಿದರು.

ನಟಿ ಸಂಜನಾ ಆನಂದ್‌, ಕಾಕ್ರೋಚ್‌ ಸುಧಿ, ನಾಗಭೂಷಣ್‌, ಸಂಗೀತ ನಿರ್ದೇಶಕ ಚರಣ್‌ ರಾಜ್‌ ಸೇರಿದಂತೆ “ಸಲಗ’ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಕಾರ್ಯಕ್ರಮದಲ್ಲಿ ಹಾಜರಿದ್ದು ತಮ್ಮ ಅನುಭವ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next