Advertisement

Shirva ವಿದ್ಯಾವರ್ಧಕ ಸಂಘ: ನಿಟ್ಟೆ ವಿನಯ ಹೆಗ್ಡೆಯವರಿಗೆ ಸಮ್ಮಾನ‌;ವಿನಯಾಭಿವಂದನೆ

07:31 PM Oct 20, 2023 | Team Udayavani |

ಶಿರ್ವ : ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ, ನಿಟ್ಟೆ ಎಜುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಎನ್‌.ವಿನಯ ಹೆಗ್ಡೆ ಅವರಿಗೆ ಶಿರ್ವ ವಿದ್ಯಾವರ್ಧಕ ಸಂಘದ ವತಿಯಿಂದ ಸಮ್ಮಾನ-ವಿನಯಾಭಿವಂದನೆ ಕಾರ್ಯಕ್ರಮವು ವಿದ್ಯಾವರ್ಧಕ ಸಂಘದ ಅಧ್ಯಕ್ಷ , ಕಾಪು ಶಾಸಕ ಸುರೇಶ್‌.ಪಿ ಶೆಟ್ಟಿ ಗುರ್ಮೆ ಅವರ ಅಧ್ಯಕ್ಷತೆಯಲ್ಲಿ ಅ. 20 ರಂದು ವಿದ್ಯಾವರ್ಧಕ ಕ್ಯಾಂಪಸ್‌ನಲ್ಲಿ ನಡೆಯಿತು.

Advertisement

ವಿದ್ಯಾವರ್ಧಕ ಸಂಘದ ವತಿಯಿಂದ ಎನ್‌.ವಿನಯ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು. ಆಡಳಿತ ಮಂಡಳಿಯ ಸದಸ್ಯ ಶ್ರೀನಾಥ್‌ ಹೆಗ್ಡೆ ಸಮ್ಮಾನ ಪತ್ರ ವಾಚಿಸಿದರು. ಶಿರ್ವ ಗ್ರಾ.ಪಂ.,ಶಿರ್ವ ಆರೋಗ್ಯ ಮಾತಾ ದೇವಾಲಯ ಮತ್ತು ಎಂಎಸ್‌ಆರ್‌ಎಸ್‌ ಕಾಲೇಜು ಅಲುಮ್ನಿ ಎಸೋಸಿಯೇಶನ್‌ ಮುಂಬಯಿ ವತಿಯಿಂದ ಗೌರವಿಸಲಾಯಿತು.

ಅಭಿನಂದನಾ ಭಾಷಣ ಮಾಡಿದ ಸುರೇಶ್‌ .ಪಿ ಶೆಟ್ಟಿ ಗುರ್ಮೆ, ಮನುಷ್ಯ ಸಂಸಾರಮುಖೀಯಾಗಿ ಬದುಕದೆ ಸಮಾಜಮುಖಿಯಾಗಿ ಬದುಕಿದಾಗ ಮಾನ ಸಮ್ಮಾನಗಳು ಒಲಿದು ಬರುತ್ತವೆ. ಕಾಯಕದಲ್ಲಿ ಕೈಲಾಸವನ್ನು ಕಂಡ ಕರ್ಮಯೋಗಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧಕನಾಗಿ,ವಿದ್ಯಾ ಸಂಸ್ಥೆಗಳ ಏಳಿಗೆಯಲ್ಲಿ ಸುಖ ಕಂಡ,ದುಡಿಯುವ ಸಾವಿರಾರು ಕೈಗಳಿಗೆ ಬದುಕಿನ ಪಥ ತೋರಿಸಿದ ವಿನಯ ಹೆಗ್ಡೆಯವರ ಬದುಕು ಯುವಜನಾಂಗಕ್ಕೆ ಸ್ಪೂರ್ತಿಯಾಗಲಿ ಎಂದು ಹೇಳಿದರು.

ಮುಖ್ಯ ಅತಿಥಿ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಮಾತನಾಡಿ ಮನುಷ್ಯನ ಜೀವನದಲ್ಲಿ ಆರೋಗ್ಯ ಮತ್ತು ವಿದ್ಯೆ ಬಹಳ ಮುಖ್ಯವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ನ್ಯೂನತೆ ಇದೆ.ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆ ಗಳು ಇದ್ದು , ಗ್ರಾಮೀಣ ಆರೋಗ್ಯ ಕೇಂದ್ರವನ್ನು ಲೋಕಾರ್ಪಣೆಗೊಳಿಸಲಾಗಿದೆ. ಸೇವೆ ಮಾಡಿದವರನ್ನು ಗುರುತಿಸಿ ಸಮ್ಮಾನಿಸುವುದು ಸಮಾಜದ ಕರ್ತವ್ಯವಾಗಿದೆೆ ಎಂದು ಹೇಳಿದರು.

Advertisement

ಸಮ್ಮಾನ ಸ್ವೀಕರಿಸಿದ ಎನ್‌.ವಿನಯ ಹೆಗ್ಡೆ ಮಾತನಾಡಿ ನನ್ನ ಜೀವನದಲ್ಲಿ ಪಡೆದ ಮೊದಲ ಸಮ್ಮಾನ ಇದಾಗಿದ್ದು,ತಂದೆ ತಾಯಿ ಮತ್ತು ದೇವರ ಆಶೀರ್ವಾದದ ಬಲದಿಂದ ಎತ್ತರಕ್ಕೆ ಬೆಳೆದು ಬಂದಿದ್ದೇನೆ. 18 ವರ್ಷಗಳಲ್ಲಿ ಶಿರ್ವ ಸಂಘದ ಚುಕ್ಕಾಣಿ ಹಿಡಿದು, ಗ್ರಾಮೀಣ ಆರೋಗ್ಯ ಕೇಂದ್ರವನ್ನು ನಿರ್ಮಿಸಿ ತಂದೆ ತಾಯಿಗೆ ಸಮರ್ಪಿಸಿದ್ದೇನೆ. ವಿದ್ಯಾರ್ಥಿಗಳು ವಿದ್ಯೆಗೆ ಗಮನ ನೀಡಿ ತಂದೆ ತಾಯಿಯ ಋಣ ತೀರಿಸುವ ಶಪಥ ಮಾಡಬೇಕಿದೆ ಎಂದರು.

ನಿಟ್ಟೆ ವಿವಿ ಸಹಕುಲಾಧಿಪತಿ ಡಾ|ಎಂ. ಶಾಂತಾರಾಮ್‌ ಶೆಟ್ಟಿ, ಶಿರ್ವ ಗ್ರಾ. ಪಂ.ಅಧ್ಯಕ್ಷೆ ಸವಿತಾ ರಾಜೇಶ್‌ ಮಾತನಾಡಿದರು. ಹಳೆವಿದ್ಯಾರ್ಥಿಗಳ ಪರವಾಗಿ ಎಂಎಸ್‌ಆರ್‌ಎಸ್‌ ಕಾಲೇಜು ಮುಂಬಯಿ ಅಲುಮ್ನಿ ಎಸೋಸಿಯೇಶನ್‌ ಅಧ್ಯಕ್ಷ ಉದಯ ಸುಂದರ್‌ ಶೆಟ್ಟಿ ಮಾತನಾಡಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ|ಎಂ.ಎಸ್‌. ಮೂಡಿತ್ತಾಯ, ದೇರಳಕಟ್ಟೆ ಕ್ಷೇಮದ ಡೀನ್‌ ಡಾ| ಪಿ.ಎಸ್‌. ಪ್ರಕಾಶ್‌, ನಿಟ್ಟೆ ವಿವಿಯ ಕುಲಸಚಿವ ಡಾ| ಹರ್ಷ ಹಾಲಹಳ್ಳಿ ಮತ್ತು ನಿಟ್ಟೆ ಸಮುದಾಯ ಆರೋಗ್ಯ ವಿಭಾಗದ ನಿರ್ದೇಶಕಿ ಡಾ| ಆಡ್ರಿ ಡಿಕ್ರೂಜ್‌ ವೇದಿಕೆಯಲ್ಲಿದ್ದರು.

ಶಿರ್ವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿ.ಸುಬ್ಬಯ್ಯ ಹೆಗ್ಡೆ, ಕೋಶಾಧಿಕಾರಿ ದಿನೇಶ್‌ ಶೆಟ್ಟಿ, ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಧರ್ಮಗುರು ಸಿರಾಜುದ್ದೀನ್‌ ಝೈನಿ, ಶಿರ್ವ ಆರೋಗ್ಯ ಮಾತಾ ದೇವಾಲಯದ ಸಹಾಯಕ ಧರ್ಮಗುರು ರೆ|ಫಾ|ರೋನ್ಸನ್‌ಪಿಂಟೋ, ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಸಂಘಗಳ ಪದಾಧಿಕಾರಿಗಳು, ಸದಸ್ಯರು,ನಿಟ್ಟೆ,ದೇರಳಕಟ್ಟೆ ಮತ್ತು ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಬೋಧಕ- ಬೋಧಕೇತರ ವೃಂದ ,ಹಳೆವಿದ್ಯಾರ್ಥಿಗಳು,ವಿದ್ಯಾರ್ಥಿಗಳು ಮತ್ತು ಹಿತೈಷಿಗಳು ,ಗಣ್ಯರು ಉಪಸ್ಥಿತರಿದ್ದರು.

ವಿದ್ಯಾವರ್ಧಕ ಸೆಂಟ್ರಲ್‌ ಸ್ಕೂಲ್‌ನ ಸಂಚಾಲಕ ಮಟ್ಟಾರು ರತ್ನಾಕರ ಹೆಗ್ಡೆ ಸ್ವಾಗತಿಸಿದರು. ಎನ್‌.ಆರ್‌.ದಾಮೋದರ ಶರ್ಮಾ ನಿರೂಪಿಸಿ, ಆಡಳಿತಾಧಿಕಾರಿ ಪ್ರೊ|ವೈ. ಭಾಸ್ಕರ ಶೆಟ್ಟಿ ವಂದಿಸಿದರು. ಸಂಗೀತ ವಿದ್ಯಾನಿಧಿ ಡಾ|ವಿದ್ಯಾಭೂಷಣ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.

ಗ್ರಾಮೀಣ ಆರೋಗ್ಯ ಕೇಂದ್ರ ಲೋಕಾರ್ಪಣೆ
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ವತಿಯಿಂದ ಶಿರ್ವದ ವಿದ್ಯಾವರ್ಧಕ ಕ್ಯಾಂಪಸ್‌ ನಲ್ಲಿ ಸುಮಾರು 2 ಕೋ.ರೂ. ವೆಚ್ಚದಲ್ಲಿ ನಿರ್ಮಿಸಿ ನಿರ್ವಹಿಸಲ್ಪಡುವ ಜಸ್ಟಿಸ್‌ ಕೆ.ಎಸ್‌. ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರವನ್ನು ಭಾರತದ ಸರ್ವೋತ್ಛ ನ್ಯಾಯಲಯದ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಲೋಕಾರ್ಪಣೆಗೊಳಿಸಿದರು. ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್‌. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾವಿನಯಭೂಷಣ ಪ್ರಶಸ್ತಿ ಪ್ರದಾನ
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾಗಿ, ನಿಟ್ಟೆ ಎಜುಕೇಶನ್‌ ಟ್ರಸ್ಟ್‌ನ ಅಧ್ಯಕ್ಷರಾಗಿ,ಕೈಗಾರಿಕೋದ್ಯಮಿಯಾಗಿ,ಶಿರ್ವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ,ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕಳೆದ ಆರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ, ಕರಾವಳಿ ಜಿಲ್ಲೆಗಳಲ್ಲಿ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕ್ರಾಂತಿಯ ಮೂಲಕ ಸಾವಿರಾರು ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗ ನೀಡಿದ ದೂರದೃಷ್ಟಿಯ ದೃಷ್ಟಾರ ಎನ್‌.ವಿನಯ ಹೆಗ್ಡೆ ಅವರನ್ನು ಶಿರ್ವ ವಿದ್ಯಾವರ್ಧಕ ಸಂಘದ ವತಿಯಿಂದ ಸಮ್ಮಾನಿಸಿ, ವಿದ್ಯಾವಿನಯಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next