Advertisement

Shirva: ಕೊರಗರೂ ಮನುಷ್ಯರೆಂಬ ಭಾವನೆ ಸಾರ್ವತ್ರಿಕವಾಗಲಿ

05:41 PM Oct 15, 2024 | Team Udayavani |

ಶಿರ್ವ: ಸಾಹಿತ್ಯ ಸಮ್ಮೇಳನದಲ್ಲಿ ತಳಮಟ್ಟದ ಜನರ ಬದುಕಿನ ಚರ್ಚೆಯೂ ನಡೆಯಬೇಕು ಎಂಬ ಅಭಿಪ್ರಾಯ ವನ್ನು ವ್ಯಕ್ತಪಡಿಸಿದ್ದಾರೆ ಕಾಪು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪಾಂಗಾಳ ಬಾಬು ಕೊರಗ. ಎಲ್ಲದಕ್ಕಿಂತ ಮುಖ್ಯವಾಗಿ ಕೊರಗು ಕೂಡಾ ಮನುಷ್ಯರು ಎಂಬ ಭಾವನೆ ಸಾರ್ವತ್ರಿಕವಾಗಬೇಕು ಎಂಬ ಆಗ್ರಹವನ್ನು ಅವರು ಮಂಡಿಸಿದ್ದಾರೆ. ಬೆಳ್ಳೆ ಗ್ರಾಮದ ಪಾಂಬೂರಿನ ಮುಂಚಿಕಾಡು ಕೊರಗರ ಬಲೆಪಿನಲ್ಲಿ ನವೋದಯ ಸಾಂಸ್ಕೃತಿಕ ಕಲಾತಂಡವನ್ನು ಸ್ಥಾಪಿಸಿ ಮುನ್ನಡೆಸುತ್ತಿರುವ ಅವರು ಕನ್ನಡ ಭಾಷೆ, ಕೊರಗರ ಸಾಂಸ್ಕೃತಿಕ ಅನನ್ಯತೆ ಮತ್ತು ಕೊರಗ ಸಮುದಾಯ ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಖಡಕ್‌ ಆಗಿ ಮಾತನಾಡಿದ್ದಾರೆ.

  1. ನೆಲಮೂಲ ಪರಂಪರೆಯ ಕೊರಗ ಸಮುದಾಯದ ತುಡಿತಕ್ಕೆ ಸಮಾಜದ ಪ್ರತಿಸ್ಪಂದನೆ ಹೇಗಿದೆ?
    ಸಮಾಜದಲ್ಲಿ ಹಿಂದಿನ ಮನಸ್ಥಿತಿ ಈಗ ಇಲ್ಲ. ಸಾರ್ವಜನಿಕರಲ್ಲಿ ಶಿಕ್ಷಣದ ಪ್ರಮಾಣ ಹೆಚ್ಚಾದಂತೆ, ಸಾಮಾಜಿಕ ಜಿಗುಟುತನ ಸಡಿಲಗೊಳ್ಳುತ್ತಿದೆ. ಕೊರಗರು ಕೂಡ ತಮ್ಮಂತೆ ಮನುಷ್ಯರು ಎಂಬ ಭಾವನೆ ಸಾರ್ವತ್ರಿಕವಾಗಬೇಕು.
  2. ಸ್ಥಳೀಯರ ಬದುಕು, ಬವಣೆ, ಪರಿಸರ ಸಾಹಿತ್ಯ ಸಮ್ಮೇಳನಗಳ ವಸ್ತುವಲ್ಲವೇ?
    ಹೌದು. ಸಾಹಿತ್ಯವೆಂದರೆ ತಳಮಟ್ಟದ ಜನರ ಬದುಕನ್ನು ಪ್ರತಿಫಲಿಸುವಂತಿರಬೇಕು. ಜನ ಜೀವನದ ಬವಣೆಗಳ ಚಿಂತನ-ಮಂಥನಗಳಿಗೆ ಸಾಹಿತ್ಯ ಸಮ್ಮೇಳನ ವೇದಿಕೆ ಒದಗಿಸಬೇಕು. ಪರಿಸರ, ಪರಿಸ್ಥಿತಿಗಳ ಅವಲೋಕನ ನಡೆಯಬೇಕು.
  3. ಕರಾವಳಿಯಲ್ಲಿ ಭಾಷಾ ಸಾಮರಸ್ಯ ಹೇಗಿದೆ ಎಂದು ನಿಮಗಿಸುತ್ತಿದೆ?
    ಕರಾವಳಿ ಒಂದು ವಿಶಿಷ್ಟ ವಲಯ. ಇಲ್ಲಿರುವಷ್ಟು ಭಾಷಾ ವೈವಿಧ್ಯ ರಾಜ್ಯದ ಬೇರೆಲ್ಲೂ ಇರಲಾರದು. ಇಲ್ಲಿ ಹದಿನೈದರಷ್ಟು ಭಾಷೆಗಳು, ಉಪ ಭಾಷೆಗಳು ಇರಬಹುದು. ಆದರೂ ಇಲ್ಲಿ ತುಳು ಪ್ರಧಾನ ಭಾಷೆಯಾಗಿ ಬಳಸಲಾಗುತ್ತದೆ. ಅನ್ಯ ಭಾಷೆಗಳನ್ನಾಡುವ ಧರ್ಮೀಯರೂ, ಬುಡಕಟ್ಟು ಜನರೂ ಪರಸ್ಪರ ಸಂವಹನ, ಸಂಪರ್ಕ ಭಾಷೆಯಾಗಿ ತುಳುವನ್ನು ಬಳಸಿ ಭಾಷಾ ಸಾಮರಸ್ಯವನ್ನು ಕಾಯ್ದುಕೊಂಡಿದ್ದಾರೆ. ಭಾಷಾ ಸಾಮರಸ್ಯದಲ್ಲಿ ನಾವು ಕರಾವಳಿಗರೇ ಅಗ್ರ ಸ್ಥಾನೀಯರು.
  4. ಕೊರಗ ಸಮುದಾಯದ ಆರೋಗ್ಯ, ಆಹಾರ, ಪೌಷ್ಟಿಕತೆ ಮತ್ತು ಜನಸಂಖ್ಯೆ ಇಳಿಕೆ ಗಂಭೀರ ವಿಷಯವಲ್ಲವೇ?
    ಬುಡಕಟ್ಟು ಕೊರಗ ಸಮುದಾಯವು ಇಂದು ಅವನತಿಯ ಅಂಚಿಗೆ ತಳ್ಳಲ್ಪಟ್ಟಿರುವುದು ಇಲ್ಲಿನ ದುರಂತ. ಈ ಹಿಂದೆ ಇಲ್ಲಿದ್ದ ಸಾಮಾಜಿಕ ಕಟ್ಟುಪಾಡುಗಳೇ ಕೊರಗರ ಇಂದಿನ ಸ್ಥಿತಿಗೆ ನೇರ ಕಾರಣವಾಗಿವೆ. ಆಹಾರದ ಕೊರತೆ, ಅಪೌಷ್ಟಿಕತೆಗಳಿಂದಾಗಿ ಇವರ ಸರಾಸರಿ ಆಯುಷ್ಯ 40 ವರ್ಷಕ್ಕೆ ಇಳಿದಿದೆ. ಕೊರಗರ ಇಂದಿನ ಒಟ್ಟು ಜನಸಂಖ್ಯೆ 15 ಸಾವಿರದ ಗಡಿ ದಾಟುವುದಿಲ್ಲ.
  5. ತಾವು ಸ್ಥಾಪಿಸಿದ ನವೋದಯ ಕಲಾತಂಡದ ಬಗ್ಗೆ…
    ಕೊರಗರಲ್ಲಿ ಅನನ್ಯವಾದ ಸಾಂಸ್ಕೃತಿಕ ಕಲೆ ಇದೆ. ಅದರೆ ಅದು ಕೋಲ, ಕಂಬುಲ ಮೊದಲಾದ ಜಾತ್ರೆಗಳಲ್ಲಿ ಮುಖ್ಯಕೇಂದ್ರದಿಂದ ದೂರದ ಮರದಡಿಯಲ್ಲೋ, ಬೇಲಿಯ ಬದಿಯಲ್ಲೋ ಬಳಸಲ್ಪಡುತ್ತದೆ. ಅದಕ್ಕೊಂದು ಸೂಕ್ತ ಸ್ಥಾನಮಾನ ಇಲ್ಲ. ಅದಕ್ಕಾಗಿ ಈ ಕಲಾ ತಂಡವನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಇಂತಹ ನಾಲ್ಕೈದು ತಂಡಗಳಿವೆ. ಈ ತಂಡದ ಮೂಲಕ ನಾವು ಇದೇ ದೋಲು ವಾದನವನ್ನು ಹಲವಾರು ಸರಕಾರಿ/ ಖಾಸಗಿ ಪ್ರಾಯೋಜಿತ ಇಪ್ಪತ್ತಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ರಾಜ್ಯದಾದ್ಯಂತ ಮೊಳಗಿಸಿದ್ದೇವೆ. ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದೊಳಗೂ ದೋಲು ಮೊಳಗಿಸಿದ ಹಿರಿಮೆ ನಮ್ಮ ಕಲಾ ತಂಡಕ್ಕಿದೆ.
  6. ಕಾಪು ತಾ| ವ್ಯಾಪ್ತಿಯ ಜನರ ತಲ್ಲಣಗಳಿಗೆ ಸಾಹಿತ್ಯ ಪರಿಷತ್ತಿನ ಸ್ಪಂದನೆ ಯಾವ ರೀತಿ ಇರಬೇಕು?
    ಕಾಪು ತಾಲೂಕು ಭೌಗೋಳಿಕವಾಗಿ ಕರಾವಳಿಯ ಇತರ ತಾಲೂಕುಗಳಿಗಿಂತ ಹೆಚ್ಚೇನೂ ಭಿನ್ನವಾಗಿಲ್ಲ. ಆದರೆ ಹಿಂದಿನ ಇತಿಹಾಸವನ್ನು ಪ್ರಾಮಾಣಿಕವಾಗಿ ಅವಲೋಕಿಸಿದರೆ ಸಾಮಾಜಿಕವಾಗಿ ಹಿಂದುಳಿದಿರುವುದು ಗೋಚರಿಸುತ್ತದೆ. ಜಾತಿ, ಅಸ್ಪೃಶ್ಯತೆಯಂತಹ ಅನಿಷ್ಟ ಆಚರಣೆಗಳು ಇನ್ನೂ ಚಾಲ್ತಿಯಲ್ಲಿವೆ. ಇದು ಇಲ್ಲ ಅಂತ ಮೇಲ್ನೋಟಕ್ಕೆ ಅನಿಸಿದರೂ ತಳಪದರದಲ್ಲಿ ಇದರ ಅಸ್ತಿತ್ವ ವ್ಯಾಪಕವಾಗಿದೆ. ಇದು ಇಂತಹ ಸಾರ್ವಜನಿಕ ಸಮ್ಮೇಳನಗಳ ವಸ್ತು ವಿಷಯಗಳಾಗಬೇಕು.
Advertisement

-ಸತೀಶ್ಚಂದ್ರ ಶೆಟ್ಟಿ , ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next