Advertisement

ರಾಮನವಮಿ ಉತ್ಸವಕ್ಕೆ ಶೀರೂರು ಮೂಲಮಠ ಸಜ್ಜು

11:27 PM Apr 08, 2019 | sudhir |

ಉಡುಪಿ: ಹಿರಿಯಡಕ ಬಳಿಯಲ್ಲಿರುವ ಜೀರ್ಣಗೊಂಡಿದ್ದ ಶೀರೂರು ಮೂಲಮಠವನ್ನು ಸುಮಾರು 25 ಲ.ರೂ. ವೆಚ್ಚದಲ್ಲಿ ಸಂಪೂರ್ಣವಾಗಿ ಜೀರ್ಣೋದ್ಧಾರಗೊಳಿಸಲಾಗಿದೆ. ಎ. 12ರಿಂದ 19ರ ವರೆಗೆ ರಾಮನವಮಿ ಮತ್ತು ಹನುಮಜ್ಜಯಂತಿ ಉತ್ಸವಕ್ಕೆ ಶ್ರೀಮಠ ಮದುವಣಗಿತ್ತಿಯಂತೆ ಶೋಭಿತವಾಗಿ ನಿಂತಿದೆ.

Advertisement

ರಾಮನವಮಿ ಉತ್ಸವಕ್ಕಾಗಿ ಜೀರ್ಣಗೊಂಡಿದ್ದ ಶೀರೂರು ಮಠವನ್ನು ಜೀರ್ಣೋದ್ಧಾರ ಗೊಳಿಸಲು ಹೋದ ವರ್ಷ ನಿರ್ಯಾಣಗೊಂಡಿದ್ದ ಶ್ರೀಲಕ್ಷ್ಮೀವರತೀರ್ಥರು ಸಂಕಲ್ಪಿಸಿದ್ದರು. ಈ ಕೆಲಸವನ್ನು ಈಗ ಪೂರ್ತಿಗೊಳಿಸಲಾಗುತ್ತಿದೆ. ಶೀರೂರು ಮಠದ ವಾಣಿಜ್ಯ ಸಂಕೀರ್ಣದಿಂದ ಬರುತ್ತಿದ್ದ ಬಾಡಿಗೆ ಹಣದಿಂದ ಇದನ್ನು ನಿರ್ಮಿಸಲಾಗಿದೆ.

ಹೊಸ ರೂಪ, ದುರಸ್ತಿ
ಮಠದ ಗರ್ಭಗುಡಿಯ ಹೊರಭಾಗದ ಸುತ್ತ ಹೊಸ ಗ್ರಾನೈಟ್‌ ಹಾಸುಗಳನ್ನು ಹಾಕಲಾಗಿದೆ. ಬಿದ್ದು ಹೋಗುತ್ತಿದ್ದ ಗೋಡೆಗಳಿಗೆ ಆಧಾರಗಳನ್ನು ಕೊಟ್ಟು ಸುಸಜ್ಜಿತಗೊಳಿಸಲಾಗಿದೆ. ಹಾಳಾದ ಹೆಂಚುಗಳನ್ನು ತೆಗೆದು ಹೊಸದಾಗಿ ಹಾಕುವುದೂ ಸಹಿತ ಹಳೆಯ ಹೆಂಚುಗಳಿಗೆ ಹೆಂಚಿನ ಬಣ್ಣ ಕೊಟ್ಟಿರುವುದರಿಂದ ಹೊಸ ರೂಪ ತೋರುತ್ತಿದೆ. ಸ್ವಾಮೀಜಿಯವರು ಕುಳಿತುಕೊಳ್ಳುವ ಕೊಠಡಿಗೆ ಗಾಳಿ ಬೆಳಕು ಬರುವಂತೆ ವ್ಯವಸ್ಥೆ ಮಾಡಲಾಗಿದೆ.

ಮಠದ ಆವರಣದಲ್ಲಿರುವ ತೆಂಗಿನ ತೋಟದಿಂದ ಬರುವ ತೆಂಗಿನ ಕಾಯಿ ದಾಸ್ತಾನು ಇರಿಸಲು ಕೊಠಡಿ ನಿರ್ಮಿಸಲಾಗಿದೆ. ಪಕ್ಕದಲ್ಲಿಯೇ ಇರುವ ಸ್ವರ್ಣಾ ನದಿಗೆ ಇಳಿದು ಹೋಗಲು ಮೆಟ್ಟಿಲುಗಳನ್ನು ದುರಸ್ತಿಪಡಿಸಲಾಗಿದೆ. ಸಾರ್ವಜನಿಕರು ಮತ್ತು ಮಠದ ಸಿಬಂದಿಯ ಅನುಕೂಲಕ್ಕಾಗಿ ಶೌಚಾಲಯಗಳನ್ನು ನಿರ್ಮಿಸ ಲಾಗಿದೆ. ವಿದ್ಯುದ್ದೀಕರಣದ ದುರಸ್ತಿಯ ಜತೆ ಹಲವೆಡೆ ಹೊಸದಾಗಿ ಮಾಡಲಾಗಿದೆ. ಅಡುಗೆಗೆ ಬೇಕಾದ ವ್ಯವಸ್ಥೆಗಳನ್ನೂ ಹೊಸದಾಗಿ ಮಾಡಲಾಗಿದೆ.

ಮುಂದೆ 10 ಎಕ್ರೆಯಲ್ಲಿ ಭತ್ತ ಕೃಷಿ
ಮೂರು ಎಕ್ರೆ ಪ್ರದೇಶದಲ್ಲಿ ಸಾಗುವಾನಿ ನೆಡುತೋಪಿನಲ್ಲಿ 350 ಗಿಡಗಳನ್ನು ನೆಡಲಾಗಿದೆ. ಈ ವರ್ಷ 1.25 ಎಕ್ರೆ ಜಾಗದಲ್ಲಿ ಭತ್ತದ ಕೃಷಿ ಮಾಡಲಾಗಿದೆ. ಮುಂದೆ 10 ಎಕ್ರೆಯಲ್ಲಿ ಭತ್ತದ ಕೃಷಿ ಮಾಡುವ ಚಿಂತನೆ ಮಠದ ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್ಟರಿಗೆ ಇದೆ.

Advertisement

ಮಠದ ಮೇಲ್ಭಾಗವನ್ನು ಜೀರ್ಣೋದ್ಧಾರಗೊಳಿಸಿದ್ದರೂ ಜಂತಿ, ದಾರಂದ, ರೀಪು ಮೊದಲಾದ ಮರದ ಭಾಗಗಳಿಗೆ ಎಣ್ಣೆಯನ್ನು ಕೊಟ್ಟಿಲ್ಲ. ಇದಕ್ಕೆ ಗೇರು ಬೀಜದ ಎಣ್ಣೆಯನ್ನು ಕೊಡಬೇಕಾಗಿರುವುದರಿಂದ ಮಳೆ ಗಾಲದಲ್ಲಿ ಈ ಕೆಲಸ ಮಾಡಲು ನಿರ್ಧರಿಸಲಾಗಿದೆ. ಮಠದ ಗದ್ದೆ ಪ್ರದೇಶದಲ್ಲಿ ನಿರ್ಮಿಸಲಾದ ತಗಡಿನ ಹಾಲ್‌ನ್ನು ಮಠದ ಸಮೀಪ ಸ್ಥಳಾಂತರಿಸಿದರೆ ಒಂದು ಸಭಾಂಗಣ ನಿರ್ಮಿಸಿದಂತಾಗುತ್ತದೆ. ಈಗ ಹಾಲ್‌ ಇರುವಲ್ಲಿ ಮಳೆಗಾಲದಲ್ಲಿ
ನೀರು ನಿಲ್ಲುತ್ತದೆ. ಸ್ಥಳಾಂತರ ಮತ್ತು ಇತರ ಕೆಲಸಗಳಿಗೆ ಸೇರಿ ಸುಮಾರು 5 ಲ.ರೂ. ತಗಲಬಹುದು ಎಂದು ಅಂದಾಜಿಸಲಾಗಿದೆ.

ಪಣತದ ಆಕರ್ಷಣೆ
ಕೃಷಿ ಪ್ರಧಾನವಾಗಿದ್ದ ಕಾಲದಲ್ಲಿ ನಿರ್ಮಾಣಗೊಂಡಿದ್ದ ಪಣಜ ನೋಡುಗರಿಗೆ ಆಕರ್ಷಣೆಯಾಗದಿರದು. ಪೂರ್ಣ ಮರದಿಂದ ಮಾಡಿದ ಪಣಜವು 43.5 ಅಡಿ ಉದ್ದ, 11.5 ಅಡಿ ಅಗಲವಿದೆ. ಇಲ್ಲಿ ಹಿಂದೆ ಭತ್ತ, ಅಕ್ಕಿಯನ್ನು ದಾಸ್ತಾನು ಇಡುತ್ತಿದ್ದರು. ಪಣಜದ ಎದುರು ಇದ್ದ ಮಣ್ಣಿನ ಗೋಡೆಯನ್ನು ತೆಗೆದು ಈಗ
ಮರದ ಭಾಗ ತೋರುವಂತೆ ಮಾಡಲಾಗಿದೆ. ಭತ್ತದ ತೆನೆ ಬೇರ್ಪಡಿಸುವುದೇ ಇತ್ಯಾದಿ ಕೆಲಸಗಳನ್ನು ನಿರ್ವಹಿಸಲು 1962ರಲ್ಲಿ ಶ್ರೀಲಕ್ಷ್ಮೀ ಮನೋಜ್ಞತೀರ್ಥರು ನಿರ್ಮಿಸಿದ ಹಾಲ್‌ನ್ನು ಸುಸಜ್ಜಿತಗೊಳಿಸಲಾಗಿದೆ.

ಗೋಶಾಲೆಯಲ್ಲಿ 125 ದನಗಳು
ಗೋಶಾಲೆಯಲ್ಲಿ ಒಟ್ಟು 125 ದನ, ಕರು, ಹೋರಿಗಳಿವೆ. ಇವುಗಳಲ್ಲಿ ಬಹುತೇಕ ಅನಾಥ ಗೋವುಗಳು. ಇವುಗಳನ್ನು ಬೇರೆಯವರು ತಂದು ಬಿಟ್ಟು ಹೋಗಿದ್ದರು. ಇವು ಬೆಳಗ್ಗೆ ಹೊರಗೆ ಹೋದರೆ ಸಂಜೆ ತಾವಾಗಿ ಬರುತ್ತವೆ. ಕೆಲವು ಹೊರಗೆ ಉಳಿಯುವುದೂ ಇದೆ. ಇವುಗಳೆಲ್ಲ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಕಾಲದಲ್ಲಿಯೇ ಇದ್ದವು.

300 ಲೀ. ಗೋಪಾಲ್‌ ವಾರ್ಣಿಶ್‌
ಎಲ್ಲ ಕಡೆಯ ಪ್ರಾಚೀನ ಮಠಗಳಂತೆ ಇಲ್ಲಿಯೂ ದಾರುಶಿಲ್ಪಗಳನ್ನು ಒಳಗೊಂಡ ಮುಚ್ಚಿಗೆ, ಕಂಬಗಳಿವೆ. ಮುಚ್ಚಿಗೆಗೆ ಸುಮಾರು 300 ಲೀ. ಗೋಪಾಲ್‌ ವಾರ್ಣಿಶ್‌ ಎಣ್ಣೆಯನ್ನು ಕೊಡಲಾಗಿದೆ. ಕಂಬಗಳಿಗೆ ಉತ್ತಮ ಗುಣಮಟ್ಟದ ಫ್ರೆಂಚ್‌ ಪಾಲಿಶ್‌ ಮಾದರಿಯ 30 ಲೀ. ಎಣ್ಣೆಯನ್ನು ಕೊಡಲಾಗಿದೆ.

ಇಲ್ಲೊಂದು ರಾಜಾಂಗಣ
ಸಭೆ ಸಮಾರಂಭ ನಡೆಯಲು ಇಲ್ಲಿ ರಾಜಾಂಗಣವೂ ಇದೆ. ಇಲ್ಲಿ ರಾಮನವಮಿ ಉತ್ಸವ ನಡೆಯುವಾಗ ಓಲಗ ಮಂಟಪದ ಸೇವೆ ನಡೆಯುತ್ತದೆ. ಇದು ಹಿಂದಿನ ಕಾಲದಲ್ಲಿ ನ್ಯಾಯಪೀಠವಾಗಿತ್ತು.
-ಸುಬ್ರಹ್ಮಣ್ಯ ಭಟ್‌, ಮಠದ ವ್ಯವಸ್ಥಾಪಕರು

ಜೀರ್ಣೋದ್ಧಾರ
ಶೀರೂರು ಮೂಲಮಠವನ್ನು 25 ಲ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ. ಇಲ್ಲಿ ಶನಿವಾರ ನಡೆಯುವ ಮುಖ್ಯಪ್ರಾಣ ದೇವರ ರಂಗಪೂಜೆ ಸಹಿತ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
– ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು, ಶ್ರೀಸೋದೆ ಮಠ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next