Advertisement

ಶಿರಸಿ: ಅರಣ್ಯ ಇಲಾಖೆ ದಿನಗೂಲಿ ನೌಕರರ ಮುಷ್ಕರ

06:11 PM Feb 13, 2024 | Team Udayavani |

ಉದಯವಾಣಿ ಸಮಾಚಾರ
ಶಿರಸಿ: ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಕಳೆದ 15 ವರ್ಷಗಳಿಂದ ಪಿಸಿಪಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸೇವಾ ಕಾಯಮಾತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಇಲ್ಲಿನ ಸಿಸಿಎಫ್‌ ಕಚೇರಿ ಎದುರು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಯಿತು.

Advertisement

ಪ್ರತಿಭಟನೆ ನೇತೃತ್ವ ವಹಿಸಿದ್ದ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಚಂದ್ರಶೇಖರ ಹಿರೇಮಠ ಮಾತನಾಡಿ, ಅರಣ್ಯ ಇಲಾಖೆ ಕಾಯಂ ನೌಕರರು ಮಾಡುವ ಎಲ್ಲ ಕೆಲಸವನ್ನು ದಿನಗೂಲಿ ನೌಕರರೂ ಮಾಡುತ್ತಿದ್ದು, ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ದಟ್ಟ ಅರಣ್ಯ ಪ್ರದೇಶಗಳಲ್ಲಿ ಹಗಲು ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದು, ವೈಲ್ಡ್‌ ಲೈಫ್‌ನಲ್ಲಿ ಸೇವೆ ಸಲ್ಲಿಸುವರು, ದಟ್ಟ ಕಾಡಿನಲ್ಲಿ ಜೀವವನ್ನೇ ಪಣಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇವರಿಗೆ ಯಾವುದೇ ಸೇವಾ ಭದ್ರತೆ ಇಲ್ಲ. ಕೇವಲ 5000ದಿಂದ 8000 ರೂ. ಸಂಬಳ ನೀಡಲಾಗುತ್ತಿದೆ.

ಈವರೆಗೆ ಕಾಯಮಾತಿ ಮಾಡುವುದು, ವೇತನ, ಭತ್ಯೆ ವಿಸ್ತರಿಸುವ ಕುರಿತು ಇಲಾಖೆ ಮಾತನಾಡಿಲ್ಲ. ಹೀಗಾಗಿ ಅರಣ್ಯ ಇಲಾಖೆ
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ
ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ನೌಕರರ ಬಗ್ಗೆ ಸಂಬಂಧ ಪಟ್ಟ ಪ್ರಾದೇಶಿಕ ಕಚೇರಿಯಿಂದ ನೌಕರರ ವಿವರ ಕೇಳಲಾಗಿತ್ತು. ಆದರೆ ಈ ವರೆಗೆ ಶಿರಸಿ ವಿಭಾಗದಿಂದ ಯಾವುದೇ ವರದಿ ಹೋಗಿಲ್ಲ. ಅಲ್ಲದೇ ಶಿರಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಈವರೆಗೂ ಸಲ್ಲಿಸಿದ ಯಾವ ಮನವಿಗೂ ಸ್ಪಂದಿಸಿಲ್ಲ. ಇದನ್ನು ಖಂಡಿಸಿ ಅನಿರ್ದಿಷ್ಟಕಾಲ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ. ತಕ್ಷಣ ನೌಕರರ ವಿವರವನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವಂತೆ ಒತ್ತಾಯಿಸುವುದಾಗಿ ಹೇಳಿದರು.

ದಿನಗೂಲಿ ನೌಕರರಾಗಿ ಈಗಾಗಲೇ ನಿವೃತ್ತಿ ಹೊಂದಿದ ನೌಕರರಿಗೆ ಪಿಂಚಿಣಿ ಸೌಲಭ್ಯ ಸಿಗುವಂತೆ ಮಾಡಬೇಕು. 2012 ರಲ್ಲಿ ಕಾಯಂ ಆದ ದಿನಗೂಲಿ ನೌಕರರಿಗೆ 1 ವರ್ಷದ ಬಾಕಿ ಮೊತ್ತದ ಹಣ ಸರ್ಕಾರಕ್ಕೆ ಸಲ್ಲಿಸಿದ್ದು, ಕೂಡಲೇ ಆ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿ ಕೊಡಬೇಕು. ಕಾಯಂ ಆದ ಕ್ಷೇಮಾಭಿವೃದ್ಧಿ ಡಿ ನೌಕರರಿಗೆ ಅರಣ್ಯ ವೀಕ್ಷಕ ಹುದ್ದೆಗೆ 10400
ರೂ. ನೀಡಲಾಗುತ್ತಿತ್ತು. ಆದರೆ ಈಗ ಅದನ್ನು ಮೊಟಕುಗೊಳಿಸಿದ್ದು, ಖಂಡನೀಯ. ಈ ಹಿಂದೆ ಅರಣ್ಯ ವೀಕ್ಷಕ ಹುದ್ದೆಗೆ ನೀಡಲಾಗುತ್ತಿದ್ದ 1400 ರೂ. ಸಂಬಳವನ್ನು ಮರು ನಿಗದಿ ಮಾಡಬೇಕು ಎನ್ನುವ ಮನವಿಯನ್ನು ಸಿಸಿಎಫ್‌ ವಸಂತ ರೆಡ್ಡಿ
ಅವರಿಗೆ ನೀಡಲಾಯಿತು.

ಈ ವೇಳೆ ಸಿಸಿಎಫ್‌ ವಸಂತ ರೆಡ್ಡಿ ಮಾತನಾಡಿ, ಈ ಕುರಿತ ಸಮಗ್ರ ವರದಿಯನ್ನು ಸರಕಾರದ ಗಮನಕ್ಕೆ ತರಲಾಗುವುದು. ದಿನಗೂಲಿ ನೌಕರರನ್ನು ಕಾಯಮಾತಿ ಮಾಡಲು ಬೇಕಾಗುವ ಎಲ್ಲ ಪ್ರಯತ್ನ ಮಾಡಲು ಇನ್ನು 15 ದಿನಗಳ ಒಳಗೆ ಸರಕಾರಕ್ಕೆ ವರದಿ ಸಲ್ಲಿಸುವ ಭರವಸೆ  ನೀಡಿದರು. ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕೃಷ್ಣ ಹೆಗಡೆ, ಡಿಎಫ್‌ಒ ಅಜ್ಜಯ್ಯ, ಆರ್‌ಎಫ್‌ಒ
ಶಿವಾನಂದ ನಿಂಗಾಣಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next