Advertisement

ಶಿರಾಡಿ ಘಾಟಿ ರೈಲು ಮಾರ್ಗ: ಎರಡು ದಿನ ಸಂಚಾರ ಸ್ಥಗಿತ

02:27 AM Jul 21, 2019 | Team Udayavani |

ಮಂಗಳೂರು/ ಸುಬ್ರಹ್ಮಣ್ಯ: ಶಿರಾಡಿ ಘಾಟಿಯ ಸಿರಿಬಾಗಿಲು ಬಳಿ ರೈಲು ಹಳಿಗೆ ಉರುಳುವ ಸ್ಥಿತಿಯಲ್ಲಿದ್ದ ಬೃಹತ್‌ ಬಂಡೆಯನ್ನು ತೆರವುಗೊಳಿಸುವ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ- ಸಕಲೇಶಪುರ ಮಧ್ಯೆ ರೈಲು ಸಂಚಾರವನ್ನು ಜುಲೈ 20ರಂದು ಸ್ಥಗಿತಗೊಳಿಸಲಾಗಿದ್ದು, ಸಂಚಾರ ರವಿವಾರವೂ ಇರುವುದಿಲ್ಲ.

Advertisement

ಘಾಟಿ ಪ್ರದೇಶದಲ್ಲಿ ಗುರುವಾರದಿಂದ ಭಾರೀ ಮಳೆಯಾಗುತ್ತಿದ್ದು, ಸಿರಿಬಾಗಿಲು ಬಳಿ ಹಳಿಗಳ ಮೇಲೆ ಮೇಲಿನ ಪ್ರದೇಶದಿಂದ ಕಲ್ಲು ಮಣ್ಣು ಬೀಳುತ್ತಿವೆ. ಮಣಿಬಂಡ ಎಂಬಲ್ಲಿ ಭಾರೀ ಗಾತ್ರದ ಬಂಡೆಯೊಂದು ಹಳಿಗಳ ಮೇಲೆ ಉರುಳಿ ಬೀಳುವ ಅಪಾಯವಿದ್ದು, ಇದನ್ನು ತೆರವುಗೊಳಿಸುವ ಕಾರ್ಯಾಚರಣೆ ರೈಲ್ವೇ ಸಿಬಂದಿಯಿಂದ ನಡೆಯುತ್ತಿದೆ. ಹೀಗಾಗಿ ಪ್ರಯಾಣಿಕರ ಸುರಕ್ಷೆ ದೃಷ್ಟಿಯಿಂದ ಶನಿವಾರ ಮತ್ತು ರವಿವಾರ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಇಲಾಖೆಯ ಪ್ರಕಟನೆ ತಿಳಿಸಿದೆ.

ಬಂಡೆ ತೆರವು ಕಾರ್ಯಕ್ಕೆ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೈಲ್ವೇ ವಿಭಾಗದ 80 ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ನಾಲ್ಕು ಹಿಟಾಚಿ ಮತ್ತು ಮೂರು ಕಂಪ್ರಸರ್‌ ಬಳಸಿ ಬಂಡೆಗಲ್ಲನ್ನು ಪುಡಿ ಮಾಡಿ ತೆರವುಗೊಳಿಸಲಾಗುತ್ತಿದೆ. ಸತತ ಮಳೆ ಸುಗಮ ಕಾಮಗಾರಿಗೆ ಅಡ್ಡಿಯಾಗಿದೆ. ಕಂಪ್ರಸರ್‌ ಬಳಸಿ ಬಂಡೆ ಪುಡಿ ಮಾಡುವಾಗ ಕಂಪನದಿಂದಲೂ ಗುಡ್ಡ ಜರಿಯುತ್ತಿದೆ.

ಮೈಸೂರು ವಿಭಾಗದ ಸೀನಿಯರ್‌ ಎಂಜಿನಿಯರ್‌ ರವಿಚಂದ್ರ ಧೀರೆದಾರ್‌, ಅಸಿಸ್ಟೆಂಟ್‌ ಎಂಜಿನಿಯರ್‌ ಜಬೆದಾರ್‌, ಸೀನಿಯರ್‌ ಸೆಕ್ಷನ್‌ ಎಂಜಿನಿಯರ್‌ ಕೆ.ಪಿ. ನಾಯ್ಡು, ಹಳಿ ಮೇಲ್ವಿಚಾರಕ ನಾಗಪ್ಪ ಕೇಶವಾರ್‌, ಗುತ್ತಿಗೆದಾರರಾದ
ಸಂತೋಷ್‌ ಕುಮಾರ್‌, ರಾಥೋಡ್‌ ಮಾರ್ಗದರ್ಶನ ನೀಡುತ್ತಿದ್ದಾರೆ.

ಸಂಚಾರದಲ್ಲಿ ಬದಲಾವಣೆ
ರೈಲು ನಂ.16511/16513 ಕೆಎಸ್‌ಆರ್‌ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್‌ ಸಂಚಾರವನ್ನು ಶನಿವಾರ ಜೋಲಾರ್‌ಪೇಟೆ, ಸೇಲಂ, ಪಾಲ್ಗಾಟ್‌, ಶೋರ್ನೂರು ಜಂಕ್ಷನ್‌ ಮೂಲಕ ಮತ್ತು ರೈಲು ನಂ.16518/16524 ಕಣ್ಣೂರು/ ಕಾರವಾರ- ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ನ ಸಂಚಾರವನ್ನು ಶೋರ್ನೂರು ಜಂಕ್ಷನ್‌, ಪಾಲಾ^ಟ್‌, ಸೇಲಂ, ಜೋಲಾರ್‌ಪೇಟೆ ಮಾರ್ಗದ ಮೂಲಕ ಬದಲಾಯಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

ಉದಯವಾಣಿ ಎಚ್ಚರಿಸಿತ್ತು
ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಸಿರಿಬಾಗಿಲು ಸಮೀಪ ಹಳಿಗೆ ಬೃಹತ್‌ ಬಂಡೆ ಉರುಳಿ ಬೀಳುವ ಅಪಾಯವಿದೆ ಎಂಬುದಾಗಿ ಜು. 19ರಂದು “ಹಳಿಗೆ ಉರುಳಲು ಸಿದ್ಧವಾಗಿದೆ ಬಂಡೆ!’ ಎಂಬ ಶೀರ್ಷಿಕೆಯ ವರದಿ ಮೂಲಕ ಉದಯವಾಣಿ ಗಮನ ಸೆಳೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next