Advertisement
ವಿಧಾನ ಪರಿಷತ್ ಸದಸ್ಯೆ ಡಾ| ತೇಜಸ್ವಿನಿ ರಮೇಶ್ ಮಾತನಾಡಿ, ಯಾವುದೇ ಕಾಮಗಾರಿ ಸಾರ್ವಜನಿಕರ ಉಪಯೋಗಕ್ಕೆ ಬರಬೇಕೇ ವಿನಾ ವಿಳಂಬನೀತಿಯಿಂದ ಜನಸಾಮಾನ್ಯರಿಗೆ ತೊಂದರೆಯಾಗುವಂತೆ ಮಾಡಬಾರದು. ನಾವು ಅಭಿವೃದ್ಧಿ ಕಾರ್ಯವನ್ನು ವಿರೋಧಿಸುತ್ತಿಲ್ಲ, ಆದರೆ ಮಂಗಳೂರು – ಬೆಂಗಳೂರು ಸಂಪರ್ಕದ ಮಡಿಕೇರಿ ರಸ್ತೆ ಬಂದ್ ಆಗಿದೆ, ಚಾರ್ಮಾಡಿಯಲ್ಲಿ ವಾಹನ ದಟ್ಟಣೆ ಅತಿಯಾಗಿದೆ, ಇದೀಗ ಶಿರಾಡಿ ರಸ್ತೆಯನ್ನೂ ಬಂದ್ ಮಾಡಿದರೆ ಸಮಸ್ಯೆಗೆ ಪರಿಹಾರ ದೊರಕುತ್ತದೆಯೇ ಎಂದು ಪ್ರಶ್ನಿಸಿದರು. ಜಿಲ್ಲಾಧಿಕಾರಿ ಭೇಟಿ ನೀಡಿ, ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ಕಂಡು ಕೊಳ್ಳಬೇಕು ಎಂದು ಆಗ್ರಹಿಸಿದರು. ಸ್ಥಳದಿಂದಲೇ ದ.ಕ. ಜಿಲ್ಲಾಧಿಕಾರಿಗೆ ಕರೆ ಮಾಡಿದ್ದು, ಅವರು ಸ್ವೀಕರಿಸದಾಗ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಕರೆ ಮಾಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಕಾರು, ಮಿನಿ ಟೆಂಪೋ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಕೇಳಿಕೊಂಡರು. ಈ ಬಗ್ಗೆ ಅವರು ಪೂರಕವಾಗಿ ಸ್ಪಂದಿಸಿ ಜಿಲ್ಲಾಡಳಿತದೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು ಎಂದು ತೇಜಸ್ವಿನಿ ಸಭೆಗೆ ತಿಳಿಸಿದರು.
ಶಿರಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ಪ್ರಾರಂಭವಾಗಿದೆ ಎಂದು ಇಲ್ಲಿಗೆ ಬಂದ ಇಂದೋರ್ ಮೂಲದ 6 ಟ್ರೇಲರ್ಗಳು ಕಳೆದ 15 ದಿನಗಳಿಂದ ಗುಂಡ್ಯದಲ್ಲೇ ಬಾಕಿಯಾಗಿವೆ. ಅವುಗಳ ಚಾಲಕರು ಕೈಯಲ್ಲಿ ಹಣವಿಲ್ಲದೆ ಕಂಗಾಲಾಗಿದ್ದಾರೆ. ಅವರ ಸಂಕಷ್ಟ ಆಲಿಸಿದ ತೇಜಸ್ವಿನಿ ರಮೇಶ್ ಅವರು ಪೊಲೀಸ್ ಭದ್ರತೆಯಲ್ಲಿ ಮಾನವೀಯ ನೆಲೆಯಿಂದ ಕಳುಹಿಸುವಂತೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.