Advertisement

ಶಿವಮೊಗ್ಗೆಯ ಫೌಂಡ್ರಿ ಉದ್ಯಮದಲ್ಲಿ ತಳಮಳ

12:26 PM Aug 30, 2019 | Naveen |

•ಶರತ್‌ ಭದ್ರಾವತಿ
ಶಿವಮೊಗ್ಗ:
ಏಷ್ಯಾ ಖಂಡದಲ್ಲೇ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾಗಿದ್ದ ಶಿವಮೊಗ್ಗದ ಫೌಂಡ್ರಿ ಉದ್ಯಮಕ್ಕೆ ಆರ್ಥಿಕ ಹಿಂಜರಿತ ಹೊಡೆತ ಬಿದ್ದಿದೆ. ಜಿಲ್ಲೆಯಲ್ಲಿ ಈಗಾಗಲೇ ಹತ್ತಾರು ಉದ್ಯಮಗಳು ಈಗಾಗಲೇ ಬಾಗಿಲು ಹಾಕಿದ್ದು ಫೌಂಡ್ರಿ ಉದ್ಯಮದಲ್ಲಿ ಜೀವನ ಕಂಡುಕೊಂಡಿದ್ದ ಸಾವಿರಾರು ಕಾರ್ಮಿಕರ ಬದುಕಿನ ಮೇಲೆ ಕರಿನೆರಳು ಆವರಿಸಿದೆ. ಫೌಂಡ್ರಿ ಮಾಲೀಕರು ಮುಂದೇನು ಎಂಬಂತೆ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.

Advertisement

ಆಡಿ, ಮಾರುತಿ, ಟಾಟಾ ಮುಂತಾದ ದೊಡ್ಡ ದೊಡ್ಡ ಕಾರು, ವಾಹನ ಉತ್ಪಾದನಾ ಕಂಪನಿಗಳಿಗೆ ಬಿಡಿ ಭಾಗಗಳನ್ನು ಶಿವಮೊಗ್ಗದಿಂದಲೇ ಪೂರೈಸಲಾಗುತ್ತದೆ. ಗುಣಮಟ್ಟದ ಕಾರಣಕ್ಕೆ ಫೌಂಡ್ರಿ ಉದ್ಯಮದಲ್ಲಿ ಶಿವಮೊಗ್ಗ ಏಷ್ಯಾದಲ್ಲೇ ನಂ. 1 ಸ್ಥಾನದಲ್ಲಿದೆ. ಹೀಗಾಗಿ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳಲ್ಲದೆ, ಅಮೆರಿಕ, ಯೂರೋಪ್‌ ಮತ್ತು ಆಸ್ಪ್ರೇಲಿಯಾದಿಂದಲೂ ಬೇಡಿಕೆ ಇದೆ. ವಿಶ್ವದಾದ್ಯಂತ ಎಲೆಕ್ಟ್ರಿಕ್‌ ವಾಹನಗಳಿಗೆ ಆದ್ಯತೆ ನೀಡಲು ನಿರ್ಧರಿಸುವುದರಿಂದ ಬಹುತೇಕ ಕಾರು ಉತ್ಪಾದನೆ ಬಂದ್‌ ಮಾಡಿವೆ. ಬಿಡಿ ಭಾಗಗಳಿಗೆ ಬೇಡಿಕೆ ಕುಸಿದಿದೆ. ಹೀಗಾಗಿ ಕೋಟ್ಯಂತರ ರೂ. ಬಂಡವಾಳ ಹೂಡಿದ ಉದ್ಯಮಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಉತ್ಪಾದನೆ ಕಡಿಮೆ ಮಾಡಿವೆ.

ಬೇಡಿಕೆ ಇಲ್ಲದೇ ಹಲವು ಫೌಂಡ್ರಿಗಳು ಕೆಲಸ ಸ್ಥಗಿತಗೊಳಿಸುತ್ತಿವೆ. ಈ ಕೈಗಾರಿಕಾ ವಸಾಹತುವಿನಲ್ಲಿ ಸುಮಾರು 4,500 ಕಾರ್ಮಿಕರಿದ್ದಾರೆ. ಇವರಲ್ಲಿ ನೂರಾರು ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗಿದೆ. ಹಲವು ಕಾರ್ಖಾನೆಗಳು ವಾರಕ್ಕೆ ಎರಡು ದಿನ ಕಡ್ಡಾಯ ರಜೆ ಮಾಡುತ್ತಿವೆ. ಇದೇ ವಸಾಹತುವಿನಲ್ಲಿರುವ ಟೆಕ್ನೋರಿಂಗ್‌ ಸಂಸ್ಥೆ ಇದೇ ಆ. 1ರಿಂದ 8ರ ವರೆಗೆ ಲೇ ಆಫ್‌ ಆಗಿತ್ತು. ಪರ್ಫೆಕ್ಟ್ ಅಲಾಯ್ಸ ಸಹ 20 ದಿನಗಳಲೇ ಆಫ್‌ ಘೋಷಿಸಿತ್ತು. ದೊಡ್ಡ ಫೌಂಡ್ರಿಗಳಿಗೆ ಬೇಡಿಕೆ ಶೇ.75ರಷ್ಟು ಕುಸಿತವಾದರೆ, ಕೆಲವು ಫೌಂಡ್ರಿಗಳಿಗೆ ಬೇಡಿಕೆ ಸಂಪೂರ್ಣ ನಿಂತು ಹೋಗಿದೆಯಂತೆ. ದೊಡ್ಡ ಫೌಂಡ್ರಿಗಳನ್ನು ಅವಲಂಬಿಸಿ ನಡೆಯುತ್ತಿರುವ ಸಣ್ಣಪುಟ್ಟ ಕೈಗಾರಿಕಾ ಕೇಂದ್ರಗಳ ಪಾಡಂತೂ ಚಿಂತಾಜನಕವಾಗಿದೆ.

ಫೌಂಡ್ರಿಗಳೇ ಜೀವಾಳ: ಶಿವಮೊಗ್ಗ ರಾಜ್ಯದ ಪ್ರಮುಖ ಫೌಂಡ್ರಿ ಕೈಗಾರಿಕಾ ಕೇಂದ್ರವಾಗಿದೆ. ಗಂಧದ ಎಣ್ಣೆ, ಸಕ್ಕರೆ, ಕಾಗದ, ಕಬ್ಬಿಣ ಉತ್ಪಾದಿಸುವ ಬೃಹತ್‌ ಉದ್ಯಮಗಳು ಮುಚ್ಚಿದ ಬಳಿಕ ಕೈಗಾರಿಕಾ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆ ಅಸ್ತಿತ್ವ ಉಳಿಸಿರುವುದು ಆಟೊಮೊಬೈಲ್ ಇಂಡಸ್ಟ್ರಿ. ಈ ಕೈಗಾರಿಕೆಗಳಲ್ಲಿ 8ರಿಂದ 10 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಸುಮಾರು 20 ಸಾವಿರ ಜನ ಪರೋಕ್ಷವಾಗಿ ಇವುಗಳನ್ನು ಅವಲಂಬಿಸಿದ್ದಾರೆ. ಈ ಉದ್ಯಮಗಳಲ್ಲೂ ಆರ್ಥಿಕ ಹಿಂಜರಿತದ ಪರಿಣಾಮಗಳು ಬೀರುತ್ತಿರುವುದು ಆತಂಕವನ್ನು ಉಂಟು ಮಾಡಿದೆ.

ಎಲೆಕ್ಟ್ರಿಕ್‌ ವಾಹನಗಳಿಗೆ ಆದ್ಯತೆ: ವಿಶ್ವಮಟ್ಟದಲ್ಲಿ ಆರ್ಥಿಕ ಹಿಂಜರಿತದ ಪರಿಣಾಮಗಳು ವಾಹನಗಳ ಉತ್ಪಾದನಾ ಉದ್ಯಮಗಳ ಮೇಲೆ ಪರಿಣಾಮ ಬೀರಿವೆ. ಮತ್ತೂಂದು ಕಡೆ ಕೇಂದ್ರ ಸರಕಾರ 2025ರ ವೇಳೆಗೆ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳಿಗಿಂತ ಎಲೆಕ್ಟ್ರಿಕ್‌ ವಾಹನಗಳ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡುವುದಾಗಿ ಘೋಷಿಸಿದೆ. ಹೀಗಾಗಿ ಉತ್ಪಾದಕರು ವಾಹನಗಳ ಉತ್ಪಾದನೆಯನ್ನು ತೀವ್ರವಾಗಿ ಕಡಿತಗೊಳಿಸಿದ್ದಾರೆ. ಇದೇ ಕಾರಣದಿಂದ ಫೌಂಡ್ರಿ ಉದ್ಯಮಗಳಿಗೆ ಬೇಡಿಕೆ ಬರುತ್ತಿಲ್ಲ

Advertisement

ವಾಹನಗಳ ತಯಾರಿಕೆಯಲ್ಲಿ ನೇರ ಸಂಪರ್ಕ ಹೊಂದಿರುವ ಶಿವಮೊಗ್ಗದ ಫೌಂಡ್ರಿ ಉದ್ಯಮಗಳಿಗೆ ಕಳೆದ ಮೂರು ತಿಂಗಳಿಂದ ಬೇಡಿಕೆ ತೀವ್ರವಾಗಿ ಕುಸಿದಿದೆ. ಮೊದಲ ಹಂತದ ಕ್ರಮವಾಗಿ ಪರ್ಫೆಕ್ಟ್ ಅಲಾಯ್ಸನಂತಹ ದೊಡ್ಡ ಫೌಂಡ್ರಿಗಳಲ್ಲೆ ಲೇಆಫ್‌ ಮಾಡಲಾಗುತ್ತಿದೆ.

ಎನ್‌ಪಿ ಭಯ: ವಾಹನ ತಯಾರಕರಿಂದ ಬೇಡಿಕೆ ಇಲ್ಲದ ಕಾರಣ ಫೌಂಡ್ರಿಗಳಲ್ಲಿ ವಾಹನಗಳ ಬಿಡಿ ಭಾಗಗಳನ್ನು ಉತ್ಪಾದಿಸಿ ದಾಸ್ತಾನು ಮಾಡುವುದನ್ನು ನಿಲ್ಲಿಸಲಾಗಿದೆ. ಈಗಾಗಲೇ ಇರುವ ದಾಸ್ತಾನು ಮಾರಾಟಕ್ಕೆ ಆದ್ಯತೆ ನೀಡಲಾಗಿದೆ. ಇದರ ಮಧ್ಯೆ ಬಿಡಿಭಾಗಗಳಿಗೆ ಬೇಡಿಕೆ ಬರದೇ ಹೋದಲ್ಲಿ ಮುಂದೇನು ಗತಿ ಎಂಬ ಚಿಂತೆ ಆವರಿಸಿದೆ. ಉದ್ಯಮ ಅಭಿವೃದ್ಧಿಗೆ ಮಾಡಿದ ಸಾಲದ ಮರುಪಾವತಿ ಸತತ 3 ತಿಂಗಳು ಬಾಕಿ ಉಳಿಸಿಕೊಂಡಲ್ಲಿ ಎನ್‌ಪಿ ಆಗಿ ಭವಿಷ್ಯದಲ್ಲಿ ಬ್ಯಾಂಕ್‌ಗಳಿಂದ ಆರ್ಥಿಕ ನೆರವು ಸಿಗದ ಭಯ ಒಂದು ಕಡೆಯಾದರೆ, ತಮ್ಮನ್ನು ನಂಬಿರುವ ಕಾರ್ಮಿಕರಿಗೆ ಹೇಗೆ ಕೆಲಸ ಕೊಡುವುದು, ವೇತನ ಕೊಡುವುದು ಎಂಬ ಭಯ ಸಹ ಆವರಿಸಿದೆ.

ವಿಶ್ವದ ಎಲ್ಲ ರಾಷ್ಟ್ರಗಳು ಎಲೆಕ್ಟ್ರಿಕ್‌ ವಾಹನಗಳಿವೆ ಆದ್ಯತೆ ನೀಡಿದ ಕಾರಣ ಕಾರು ಮತ್ತು ಇತರೆ ವಾಹನ ಕಂಪನಿಗಳು ಉತ್ಪಾದನೆ ಕಡಿತಗೊಳಿಸಿವೆ. ಕೇಂದ್ರ ಸರಕಾರ ತಕ್ಷಣಕ್ಕೆ ನಿಷೇಧ ಜಾರಿ ಮಾಡುವ ಬದಲು ಹಂತವಾಗಿ ಹಂತವಾಗಿ ಮಾಡಿದರೆ ಈಗಾಗಲೇ ಹೂಡಿಕೆಯಾಗಿರುವ ಸಾವಿರಾರು ಕೋಟಿ ವಾಪಸ್‌ ಬರಲಿದೆ. ಉದ್ಯಮಿಗಳು ಸಾಲ ಮಾಡಿ ಹಾಕಿದ ಹಣ ವಾಪಾಸ್‌ ಬರಲಿದೆ. ಜತೆಗೆ ಪ್ರತಿ ವಾಹನಕ್ಕೆ 15ರಿಂದ 20 ವರ್ಷ ಆಯಸ್ಸು ನಿಗದಿಪಡಿಸಲಾಗಿದೆ. ನಂತರ ಅವುಗಳನ್ನು ವಿಲೇವಾರಿ ಮಾಡಬೇಕು. ಆದರೆ ಭಾರತದಂತಹ ದೇಶದಲ್ಲಿ ತಾತನ ಕಾಲದ ವಾಹನಗಳೂ ಇವೆ. ಇದೂ ಸಹ ಆಟೋ ಮೊಬೈಲ್ ಕ್ಷೇತ್ರದ ಮೇಲೆ ಕರಿನೆರಳು ಬೀರಿದೆ. ಶಿವಮೊಗ್ಗದ ಫೌಂಡ್ರಿ ಉದ್ಯಮಿಗಳ ಜತೆ ಶೀಘ್ರ ಸಭೆ ನಡೆಸಿ ಮುಂದೇನು ಮಾಡಬೇಕು ಎಂಬ ಬಗ್ಗ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಸರಕಾರದಿಂದ ಆಗಬೇಕಿರುವ ಪರಿಹಾರದ ಬಗ್ಗೆಯೂ ಗಮನ ಸೆಳೆಯಲಾಗುವುದು.
ಜೆ.ಆರ್‌. ವಾಸುದೇವ್‌,
 ಅಧ್ಯಕ್ಷ, ಛೇಂಬರ್‌ ಆಫ್‌ ಕಾಮರ್ಸ್‌

ಫೌಂಡ್ರಿ ಭವಿಷ್ಯ ಅತಂತ್ರ
ಕೇಂದ್ರ ಸರಕಾರ ಎಲೆಕ್ಟ್ರಿಕ್‌ ವಾಹನಗಳಿಗೆ ಆದ್ಯತೆ ನೀಡುವ ಘೋಷಣೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ. ಆದರೆ ಭವಿಷ್ಯದಲ್ಲಿ ಜಾರಿಯಾಗುವುದು ನಿಶ್ಚಿತ. ಒಂದು ಕಾರಿನಲ್ಲಿ 2 ಸಾವಿರ ಬಿಡಿಭಾಗಗಳಿವೆ. ಇದರಲ್ಲಿನ ಶೇ.50ರಷ್ಟು ಬಿಡಿಭಾಗಗಳನ್ನು ಶಿವಮೊಗ್ಗದಲ್ಲೇ ಉತ್ಪಾದಿಸಲಾಗುತ್ತದೆ. ಎಲೆಕ್ಟ್ರಿಕ್‌ ವಾಹನದಲ್ಲಿ 25ರಿಂದ 30 ಬಿಡಿ ಭಾಗಗಳು ಮಾತ್ರ ಇರಲಿವೆ. ಎಲೆಕ್ಟ್ರಿಕ್‌ ವಾಹನಗಳಿಗೆ ಬೇಕಾದ ಬಿಡಿಭಾಗ ತಯಾರು ಮಾಡಲು ಈಗಿರುವಷ್ಟು ಮಾನವ ಸಂಪನ್ಮೂಲ ಬೇಕಾಗಿಲ್ಲ. ಮಾಲೀಕರ ಹಾಗೂ ನೌಕರರ ಭವಿಷ್ಯದ ಮೇಲೆ ಕಾರ್ಮೋಡ ಆವರಿಸಿದೆ.
Advertisement

Udayavani is now on Telegram. Click here to join our channel and stay updated with the latest news.

Next