Advertisement

110 ದೇಗುಲಗಳಲಿ ಸಾಮೂಹಿಕ ವಿವಾಹ

11:39 AM Jan 13, 2020 | Naveen |

ಶಿವಮೊಗ್ಗ: ರಾಜ್ಯ ಸರ್ಕಾರದ ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯು ಎ’ ಶ್ರೇಣಿ ಮತ್ತು ಬಿ’ ಶ್ರೇಣಿಯ ದೇವಾಲಯಗಳ ಆದಾಯವನ್ನು ಬಳಸಿಕೊಂಡು ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಏ. 26ರಂದು ರಾಜ್ಯದ ಆಯ್ದ 110 ದೇವಸ್ಥಾನಗಳಲ್ಲಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಮುಜರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮುಜರಾಯಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾತಿ, ಧರ್ಮ, ಮತ ಭಾಷೆ ಬಣ್ಣಗಳ ಎಲ್ಲೆಗಳೆಲ್ಲವನ್ನೂ ಮೀರಿ ಎಲ್ಲಾ ಧರ್ಮದವರಿಗೂ ಏಕರೀತಿಯ ಅವಕಾಶ ಮಾಡಿಕೊಡಲಾಗುವುದು. ಸರಳವಾಗಿ ಮದುವೆಯಾಗಬೇಕೆಂದ ಆಶಯ ಹೊಂದಿರುವವರಿಗೆ ಇದು ಸಹಕಾರಿಯಾಗಲಿದೆ. ಈ ಸಂದರ್ಭದಲ್ಲಿ ವಧುವಿಗೆ 40,000 ರೂ. ಮೌಲ್ಯದ ಮಾಂಗಲ್ಯ ಹಾಗೂ 10,000 ರೂ. ಮತ್ತು ವರನಿಗೆ 5,000 ರೂ. ಸೇರಿದಂತೆ
ಪ್ರತಿ ಸಂಗಾತಿಗಳಿಗೆ 55,000 ರೂ.ಗಳ ಆರ್ಥಿಕ ನೆರವನ್ನು ಒದಗಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳು ಸಪ್ತಪದಿ ಲಾಂಛನವನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದ್ದಾರೆ. ಸಾರ್ವಜನಿಕರು ಹಾಗೂ ಇಲಾಖಾ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಅವರು ನುಡಿದರು.

ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಪದಾಧಿ ಕಾರಿಗಳ ನೇಮಕಕ್ಕೆ ಮುಂದಿನ 15ದಿನಗಳಲ್ಲಿ ಅನುಮತಿ ನೀಡಲಾಗುವುದು. ಇದರಿಂದಾಗಿ ಆಡಳಿತಾತ್ಮಕ ವ್ಯವಸ್ಥೆ ಸರಿಪಡಿಸಲು ಸಾಧ್ಯವಾಗಲಿದೆ ಎಂದ ಅವರು, 650 ದೇವಸ್ಥಾನಗಳ ಸಿಬ್ಬಂದಿಗಳ ನೇಮಕಕ್ಕೆ ಇನ್ನೂ ಒಂದು ವಾರದಲ್ಲಿ ಅನುಮೋದನೆ ದೊರೆಯಲಿದೆ ಎಂದರು.

ರಾಜ್ಯದ ಅನೇಕ ದೇವಸ್ಥಾನಗಳ ಭೂಮಿ ಸರ್ಕಾರಿ ವ್ಯಕ್ತಿಗಳು ಅಕ್ರಮವಾಗಿ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿ ಬರುತ್ತಿವೆ. ಈ ಅಕ್ರಮವನ್ನು ನಿಯಂತ್ರಿಸಲು ದೇವಸ್ತಾನಗಳ ಆಸ್ತಿಪಾಸ್ತಿಯನ್ನು ಕಂಪ್ಯೂಟರೀಕರಿಸಿ ದಾಖಲಿಸಲು, ಇದರ ಉಸ್ತುವಾರಿಗಾಗಿ ಸಮಿತಿಯನ್ನು ರಚಿಸಲು ಉದ್ದೇಶಿಸಲಾಗಿದೆ. ದೇವಸ್ಥಾನಗಳಲ್ಲಿನ ಅರ್ಚಕರಿಗೆ ನೀಡಲಾಗುತ್ತಿದ್ದ ತಸ್ತೀಕ್‌ ಅನುದಾನ ಬಹುದಿನಗಳಿಂದ ಮಂಜೂರಾಗದಿರುವ ಬಗ್ಗೆಯೂ ಅನೇಕ ಅಹವಾಲುಗಳಿವೆ. ತಹಶೀಲ್ದಾರರು ಈ ಅಹವಾಲುಗಳನ್ನು ಪರಿಶೀಲಿಸಿ ಅನುದಾನವನ್ನು ಮಂಜೂರು ಮಾಡುವಂತೆ ಹಾಗೂ ಅದರ ವರದಿಯನ್ನು ಕೂಡಲೇ ನೀಡುವಂತೆ ಸೂಚಿಸಿದರು.

Advertisement

ತೊಗರ್ಸಿ ಮಲ್ಲಿಕಾರ್ಜುನ ದೇವಳದಲ್ಲಿ ಪ್ರತಿವರ್ಷ ಸಾಮೂಹಿಕ ವಿವಾಹ ಕಾರ್ಯಗಳು ನಡೆಯುತ್ತಿದ್ದು, ಸಪ್ತಪದಿ ಯೋಜನೆಗೆ ಒಳಪಡಿಸುವಂತೆ ಕೋರಿದ್ದಾರೆ. ಪರಿಶೀಲಿಸಿ ವರದಿ ನೀಡುವಂತೆ ಅವರು ಸೂಚಿಸಿದ ಸಚಿವರು ಸಾಮೂಹಿಕ ವಿವಾಹವಾದ ಜೋಡಿಗಳ ನೋಂದಣಿ ಮಾಡಿಸುವ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಈ ವಿವಾಹದಲ್ಲಿ 2ನೇ ವಿವಾಹಕ್ಕೆ ಅವಕಾಶವಿರುವುದಿಲ್ಲ ಎಂದರು. ಶೀಘ್ರದಲ್ಲಿ ಗೋರಕ್ಷಣಾ ಮಂಡಳಿಯನ್ನು ಪುನರ್‌ ರಚಿಸಲು ಕ್ರಮ ವಹಿಸಲಾಗುವುದು ಎಂದರು.

ಬಹುಜನರಲ್ಲಿ ಮುಜರಾಯಿ ದೇವಸ್ಥಾನಗಳ ಉಳಿತಾಯ ಬೇರೆ-ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿದೆ ಎಂಬ ಆರೋಪ ನಿರಾಧಾರವಾದುದು. ಈ ಹಣ ಸದ್ವಿನಿಯೋಗವಾಗುತ್ತಿದೆ. ವದಂತಿಗಳಿಗೆ ಅವಕಾಶ ಬೇಡ ಎಂದರು.

ಮೀನುಮರಿಗಳ ಬೀಜೋತ್ಪಾದನೆಗೆ ಕೇಂದ್ರ ಆರಂಭಿಸಲು ಸರ್ಕಾರ ಈಗಾಗಲೇ 115.00 ಲಕ್ಷ ರೂ. ಗಳನ್ನು ಮಂಜೂರು ಮಾಡಿದೆ. ತುಂಗಾ ಮೇಲ್ದಂಡೆ ಯೋಜನೆಯ ಅಭಿಯಂತರರು ಈಗಿರುವ ಮೀನುಮರಿ ಉತ್ಪಾದನಾ ಕೇಂದ್ರಕ್ಕೆ ಹೊಂದಿಕೊಂಡಂತೆ ಅಗತ್ಯವಿರುವ ಇನ್ನಷ್ಟು ಭೂಮಿಯನ್ನು ಒದಗಿಸಬೇಕು. ಈ ಸಂಬಂಧ ಜಿಲ್ಲಾ ಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಕೂಡಲೇ ಕ್ರಮ ವಹಿಸುವಂತೆ ಸಚಿವರು ಯು.ಟಿ.ಪಿ. ಅಭಿಯಂತರರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಇರಬಹುದಾದ ಸಾಧ್ಯತೆಗಳ ಬಗ್ಗೆಯೂ ಅಧಿಕಾರಿಗಳು ಗಮನಹರಿಸಿ, ಅಭಿವೃದ್ಧಿಪಡಿಸಬಹುದಾದ ವಿಧಾನಗಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ ಅವರು, ಸೊರಬ ತಾಲೂಕಿನ 28 ಕೆರೆಗಳ ಹರಾಜನ್ನು ಆದಾಯ ಕೊರತೆಯ ಕಾರಣದಿಂದ ಶಾಸಕರ ಸೂಚನೆ ಮೇರೆಗೆ ಸ್ಥಗಿತಗೊಳಿಸಲಾಗಿದೆ. ಮುಂದಿನ 3-45ದಿನಗಳಲ್ಲಿ ಶಾಸಕರೊಂದಿಗೆ ಮಾತನಾಡಿ, ಸೂಕ್ತ
ನಿರ್ದೇಶನ ನೀಡುವುದಾಗಿ ತಿಳಿಸಿದರು.

ಅತಿ ಹೆಚ್ಚು ಮೀನು ಮರಿ ಉತ್ಪಾದನೆ ಮಾಡುತ್ತಿರುವ ಶೆಟ್ಟಿಹಳ್ಳಿ, ಹಾತಿಕಟ್ಟೆ ಮತ್ತು ಮಾಳೂರುಗಳಲ್ಲಿನ 170ಮೀನು ಕೃಷಿಕರು ಇಲಾಖೆಯ ಕೋರಿಕೆಯಂತೆ ಬೆಳೆದ ಮೀನುಮರಿಗಳನ್ನು ಸಕಾಲದಲ್ಲಿ ಎತ್ತುವಳಿ ಮಾಡದೆ ಉತ್ಪಾದಕರಿಗೆ ಆರ್ಥಿಕವಾಗಿ ನಷ್ಟ ಉಂಟಾಗುತ್ತಿದೆ ಎಂದು ಶಾಸಕ ಕೆ.ಬಿ.ಅಶೋಕನಾಯ್ಕ ಅವರು ಸಚಿವರ ಗಮನ ಸೆಳೆದರು. ಅದಕ್ಕೆ ಇಲಾಖೆಯ ಅನುದಾನ ಕೊರತೆ ಇರುವುದನ್ನು ಅಧಿಕಾರಿಗಳು ಸಚಿವರ ಗಮನ ಸೆಳೆದರು. ಕೂಡಲೇ ಈ ಬಗ್ಗೆ ಗಮನ ಹರಿಸಿ ಸಮಸ್ಯೆಯ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವುದಾಗಿ ಹಾಗೂ ಇಲಾಖಾ ಆಯುಕ್ತರಿಗೆ ಕ್ರಮಕ್ಕೆ ಸೂಚಿಸುವುದಾಗಿ ಅವರು ತಿಳಿಸಿದರು.

ಕೆರೆಗಳ ಹರಾಜು ಪಾರದರ್ಶಕವಾಗಿ ನಡೆಯುತ್ತಿಲ್ಲ. ಒಳಒಪ್ಪಂದಗಳಿಗೆ ಅವಕಾಶವಿಲ್ಲದಂತೆ ಹರಾಜು ಪ್ರಕ್ರಿಯೆಗಳು ನಡೆಯಬೇಕು. ಮೀನು ಕೃಷಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಆಶಯಗಳು ಈಡೇರುವಂತಾಗಬೇಕು. ಅರ್ಹರು ಕೆರೆಗಳ ಮೀನು ಪಾಶುವಾರು ಹಕ್ಕನ್ನು ಪಡೆಯುವಂತಾಗಬೇಕೆಂದರು.

ಮುಂದಿನ ಒಂದು ತಿಂಗಳಲ್ಲಿ ಜಿಲ್ಲೆಯ ಅರ್ಚಕರ, ವ್ಯವಸ್ಥಾಪನಾ ಸಮಿತಿ ಪದಾಧಿ ಕಾರಿಗಳ, ಅಧಿಕಾರಿಗಳ ಕಾರ್ಯಾಗಾರವನ್ನು ಆಯೋಜಿಸುವುದಾಗಿ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಅವರು ಮಾತನಾಡಿ, ಸರ್ವ ಧರ್ಮಗಳ ಸಂಗಮ ಕ್ಷೇತ್ರವೆನಿಸಿರುವ ಹಣಗೆರೆಯಲ್ಲಿನ ಸ್ವತ್ಛತೆ ಸಮಸ್ಯೆಗೆ, ಮಾಂಸತ್ಯಾಜ್ಯದ ವ್ಯವಸ್ಥಿತ ವಿಲೇವಾರಿಗೆ ಕ್ರಮ ವಹಿಸಲಾಗಿದೆ.

ದೇವಸ್ಥಾನದ ಹುಂಡಿಗೆ ಬೀಳುತ್ತಿದ್ದ ಹಣ ಮಧ್ಯವರ್ತಿಗಳಿಂದಾಗಿ
ಆದಾಯಕ್ಕೆ ಕೊರತೆ ಆಗುತ್ತಿದೆ, ಅಭಿವೃದ್ಧಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಕಸ ವಿಲೇವಾರಿ ಸರಿಯಿಲ್ಲ ಎಂಬಿತ್ಯಾದಿ ಸಮಸ್ಯೆಗಳ ಇತ್ಯರ್ಥಕ್ಕೆ ಜಿಲ್ಲಾಡಳಿತದ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಹಣಗೆರೆ ಧಾರ್ಮಿಕ ಸ್ಥಳದಲ್ಲಿ ಸಿಸಿ ಟಿ.ವಿ.ಅಳವಡಿಕೆ, ಅರ್ಚಕರ ನೇಮಕಕ್ಕೆ ಕ್ರಮ ವಹಿಸಲಾಗಿದೆ. ಮಲೆಶಂಕರ ಮತ್ತು ಚಂದ್ರಗುತ್ತಿ ದೇವಾಲಯಗಳ ಜೀರ್ಣೊದ್ಧಾರ ಮತ್ತು ಅವುಗಳ ನಿರ್ವಹಣೆಗಾಗಿ ಕಂದಾಯ ಇಲಾಖಾ ಅಧಿಕಾರಿಗಳಿಗೆ ತಾತ್ಕಾಲಿಕವಾಗಿ ಹೊಣೆಗಾರಿಕೆ ನೀಡಲಾಗಿದೆ. ಇದನ್ನು ಅಧಿಕೃತವಾಗಿ ಆದೇಶ ಹೊರಡಿಸಿದಲ್ಲಿ ಇನ್ನಷ್ಟು ಪರಿಣಾಮಕಾರಿ ನಿರ್ವಹಿಸಲು ಸಾಧ್ಯವಾಗಲಿದೆ. ಅದಕ್ಕಾಗಿ ಮುಜರಾಯಿ ಇಲಾಖಾ ಆಯುಕ್ತರಿಗೆ ಪ್ರಸ್ತಾವನೆಯೊಂದನ್ನು ಸಲ್ಲಿಸುವುದಾಗಿ ಅವರು ತಿಳಿಸಿದರು.

ಶಾಸಕ ಕೆ.ಬಿ. ಅಶೋಕನಾಯ್ಕ, ಉಪಮಹಾಪೌರ ಚನ್ನಬಸಪ್ಪ, ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್‌, ಜಿಪಂ ಮುಖ್ಯ ಕಾರ್ಯನಿ ರ್ವಾಹಕ ಅಧಿಕಾರಿ ಎಂ.ಎಲ್‌. ವೈಶಾಲಿ, ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next