Advertisement

ಕೃಷಿ ಚಟುವಟಿಕೆಗಿಲ್ಲ ನಿರ್ಬಂಧ: ಪಾಟೀಲ್‌

04:35 PM Apr 11, 2020 | Naveen |

ಶಿವಮೊಗ್ಗ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅನಾನಸ್‌ ಬೆಳೆಯನ್ನು ಉತ್ತರ ಭಾರತದ ಮಾರುಕಟ್ಟೆಗೆ ಕಳುಹಿಸಲು ಸಾಧ್ಯವಾಗದೇ ಸಂಕಷ್ಟ ಎದುರಿಸುತ್ತಿರುವ ಜಿಲ್ಲೆಯ ಅನಾನಸ್‌ ಬೆಳೆಗಾರರ ಸಮಸ್ಯೆ ಬಗೆಹರಿಸಲು ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದರು.

Advertisement

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ರೈತ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು, ಜಿಲ್ಲೆಯಲ್ಲಿ ಪ್ರಸ್ತುತ 50 ಸಾವಿರ ಟನ್‌ ಅನಾನಸ್‌ ಕಟಾವಿಗೆ ಬಂದಿದ್ದು, ದೆಹಲಿ ಮತ್ತು ಕೊಲ್ಕತ್ತಾ ಇದರ ಪ್ರಮುಖ ಮಾರುಕಟ್ಟೆಗಳಾಗಿವೆ. ಆದರೆ, ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಅಲ್ಲಿನ ಜ್ಯೂಸ್‌ ಫ್ಯಾಕ್ಟರಿಗಳು ಚ್ಚಿರುವುದರಿಂದ ಸಮಸ್ಯೆ ಎದುರಾಗಿದೆ. ಈ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಹ ಚರ್ಚಿಸಲಾಗಿದೆ ಎಂದು ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವರು, ಜಿಲ್ಲೆಯ ಅನಾನಸ್‌ ಬೆಳೆಗಾರರ ಸಮಸ್ಯೆ ಬಗ್ಗೆ ಮತ್ತೂಮ್ಮೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಲಾಗುವುದು. ಉತ್ತರ ಭಾರತದ ಜ್ಯೂಸ್‌ ಫ್ಯಾಕ್ಟರಿಗಳನ್ನು ತೆರೆಯಲು ಮನವಿ ಮಾಡುವುದು ಸೇರಿದಂತೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಅದೇ ರೀತಿ, ಶುಂಠಿ ಕ್ಯೂರಿಂಗ್‌ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೃಷಿ ಉತ್ಪನ್ನಗಳ ಸಾಗಾಟ ಸೇರಿದಂತೆ ಕೃಷಿ ಚಟುವಟಿಕೆಗಳ ಮೇಲೆ ಯಾವುದೇ ನಿರ್ಬಂಧ ವಿಧಿಸುವಂತಿಲ್ಲ. ಈ ಕುರಿತು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದು, ಕೃಷಿ ಚಟುವಟಿಕೆಗಳಿಗೆ ಚೆಕ್‌ಪೋಸ್‌ rಗಳಲ್ಲಿ ಯಾವುದೇ ನಿರ್ಬಂಧ ವಿಧಿಸಬಾರದು. ಇದೇ ರೀತಿ ಪಂಪ್‌ಸೆಟ್‌ಗಳು, ಪೈಪ್‌ಗ್ಳು ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಅಂಗಡಿ- ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಬೇಕು.ಕೃಷಿ ಚಟುವಟಿಕೆ ವಾಹನಗಳಿಗೆ ಪೆಟ್ರೋಲ್‌, ಇಂಧನ
ಪೂರೈಸಬೇಕು. ಎಪಿಎಂಸಿ ಮಾರುಕಟ್ಟೆಗಳನ್ನು ತೆರೆಯುವಂತೆ ನಿರ್ದೇಶನ ನೀಡಲಾಗಿದೆ. ಆದರೆ, ಎಲ್ಲಾ ಕಡೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಕೃಷಿ ಚಟುವಟಿಕೆ ಆಧಾರಿತ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ, ಸಾಮಗ್ರಿಗಳನ್ನು ರೈತರು ನೇರವಾಗಿ ಖರೀದಿ ಮಾಡಲು ಅವಕಾಶವಿಲ್ಲ. ವ್ಯಾಪಾರಿಗಳು ನೇರವಾಗಿ ರೈತರ ಮನೆ ಬಾಗಿಲಿಗೇ ತಲುಪಿಸಲು ಅನುಮತಿ ನೀಡಲಾಗಿದೆ. ಬೋರ್‌ವೆಲ್‌ಗ‌ಳನ್ನು ಕೊರೆಯಲು ಯಾವುದೇ ನಿರ್ಬಂಧವಿರುವುದಿಲ್ಲ. ಆದರೆ ಎಂದಿನಂತೆ ಗ್ರಾಮೀಣ ಭಾಗದಲ್ಲಿ ಸಂಬಂಧಪಟ್ಟ ಪಿಡಿಒಗಳ ಅನುಮತಿಯೊಂದಿಗೆ ಬೋರ್‌ವೆಲ್‌ ಕೊರೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಸ್ಪಷ್ಟನೆ ನೀಡಿದರು.

Advertisement

ರೈತ ಮುಖಂಡರಾದ ಕೆ.ಟಿ.ಗಂಗಾಧರ್‌ ಅವರು ಮಾತನಾಡಿ, ಮಲೆನಾಡಿನಲ್ಲಿ ಹಣ್ಣು ಎಂದರೆ ಅನಾನಸ್‌ ಒಂದೇ. ಅದರಲ್ಲೂ ನಿರುದ್ಯೋಗಿಗಳನ್ನು ಆಕರ್ಷಿಸಿರುವ ದೊಡ್ಡ ಉದ್ಯಮವಾಗಿದೆ. ಈ ಉದ್ಯಮವನ್ನು ಕಾಪಾಡೋದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಸರ್ಕಾರ ಅನಾನಸ್‌ ಕಟಾವಿನ ನಂತರ ಸರಬರಾಜು ಮಾಡಿ, ಮಾರುಕಟ್ಟೆಗೆ ತಲುಪಿಸಬೇಕು ಎಂದರು.

ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ಕೃಷಿ ಚಟುವಟಿಕೆಗೆ ಸಂಬಂಧಿಸಿದ ಅಂಗಡಿಗಳನ್ನು ತೆರೆಯಲು ಪೊಲೀಸರು ಅವಕಾಶ ನೀಡುತ್ತಿಲ್ಲ. ಅಂಗಡಿಯವರಿಗೆ
ಹೊಡೆದು ಬಂದ್‌ ಮಾಡಿಸುತ್ತಿದ್ದಾರೆ ಎಂದು ದೂರಿದರು. ಜಿಲ್ಲಾಧಿಕಾರಿ ಮಾತನಾಡಿ, ಕೃಷಿ ಚಟುವಟಿಕೆ ಆಧಾರಿತ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಸಾಮಗ್ರಿಗಳನ್ನು ರೈತರು ನೇರವಾಗಿ ಖರೀದಿ ಮಾಡಲು ಅವಕಾಶವಿಲ್ಲ. ವ್ಯಾಪಾರಿಗಳು ನೇರವಾಗಿ ರೈತರ ಮನೆ ಬಾಗಿಲಿಗೆ ತಲುಪಿಸಲು ಅನುಮತಿ ನೀಡಲಾಗಿದೆ. ಅದಕ್ಕಾಗಿ ವಾಹನಗಳ ಪಾಸ್‌ಗಳನ್ನು ನೀಡಲಾಗಿದೆ ಎಂದರು.

ಕೃಷಿ ಸಚಿವರು ಮಾತನಾಡಿ, ಕೃಷಿ ಪರಿಕರಗಳನ್ನು ನೇರವಾಗಿ ರೈತರ ಮನೆ ಬಾಗಿಲಿಗೆ ತಲುಪಿಸಲು ಕಷ್ಟವಾಗುತ್ತದೆ. ಎಲ್ಲಾ ರೈತರು ಒಟ್ಟಿಗೆ ಖರೀದಿಸಲು
ಹೋಗುವುದಿಲ್ಲ. ಪಂಪ್‌ಸೆಟ್‌ಗಳು, ಪೈಪ್‌ಗ್ಳು ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಅಂಗಡಿ- ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಿದರೆ ಸಾಕು. ರೈತರು ತಮಗೆ ಅವಶ್ಯಕ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ, ಎಲ್ಲಾ ಕಡೆ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಮುಂಗಾರು ಬಿತ್ತನೆಗೆ ಈಗಲೇ ಅಗತ್ಯ ರಸಗೊಬ್ಬರ, ಬಿತ್ತನೆ ಬೀಜಗಳ ದಾಸ್ತಾನು ಆರಂಭಿಸುವಂತೆ ಸಚಿವರು ಈ ಸಂದರ್ಭದಲ್ಲಿ ಸೂಚನೆ ನೀಡಿದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಅರಗ ಜ್ಞಾನೇಂದ್ರ, ಅಶೋಕ ನಾಯ್ಕ, ಆಯನೂರು ಮಂಜುನಾಥ, ಹರತಾಳು ಹಾಲಪ್ಪ, ಪ್ರಸನ್ನ ಕುಮಾರ್‌, ಜಿಪಂ ಅಧ್ಯಕ್ಷ ಜ್ಯೋತಿ ಎಸ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next