Advertisement

ಆಹಾರ ಅಸಮತೋಲನ ನಿವಾರಣೆಗೆ ಆದ್ಯತೆ ನೀಡಿ

06:59 PM Oct 18, 2019 | Team Udayavani |

ಶಿವಮೊಗ್ಗ: ಭಾರತವು ಇಂದು ಅಗತ್ಯಕ್ಕಿಂತ ಹೆಚ್ಚಿನ ಅಹಾರ ಧಾನ್ಯ, ಹಾಲು ಮತ್ತು ಮತ್ಶ್ಯ ಪದಾರ್ಥಗಳನ್ನು ಉತ್ಪಾದಿಸುತ್ತಿದ್ದರೂ ಸಹ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 102ನೇ ಸ್ಥಾನ ಪಡೆದಿದೆ. ಈ ಅಸಮತೋಲನ ನಿವಾರಣೆಯತ್ತ ಜೀವ ವಿಜ್ಞಾನಗಳ ಸಂಶೋಧಕರು ಗಮನ ನೀಡಬೇಕು ಎಂದು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕ ವಿವಿಯ ಕುಲಪತಿ ಪ್ರೊ| ಮಂಜುನಾಥ ಕೆ. ನಾಯ್ಕ ಅಭಿಪ್ರಾಯಪಟ್ಟರು.

Advertisement

ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಸಚಿವಾಲಯದ ಸಹಯೋಗದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಜೀವ ವಿಜ್ಞಾನ ನಿಖಾಯದಿಂದ ಒಟ್ಟಾಗಿ “ಚಿಕಿತ್ಸಕ ಸಂಯುಕ್ತಗಳನ್ನು ಉತ್ಪಾದಿಸುವಲ್ಲಿ ಸಸ್ಯ ಸೂಕ್ಷ್ಮಜೀವಿಗಳ ಪಾತ್ರ’ ವಿಷಯ ಕುರಿತು ಆಯೋಜಿಸಿರುವ ಹತ್ತು ದಿನಗಳ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿಯೇ ಮೊದಲ ಬಾರಿಗೆ ಆಹಾರ ಭದ್ರತಾ ಹಕ್ಕು ನೀಡಿದ ಭಾರತದಲ್ಲಿ ಇಂದು ಪೋಷಕಾಂಶಗಳ ಭದ್ರತೆಯು ಮರೀಚಿಕೆಯಾಗಿದೆ. ಮಣ್ಣಿನ ಜೀವ ವೈವಿಧ್ಯತೆಯನ್ನು ನಾಶ ಮಾಡಿರುವ ಕಾರಣದಿಂದ ಬೆಳೆಯ ಉತ್ಪಾದನೆಯು ಪೌಷ್ಟಿಕವಾಗಿಲ್ಲ. ಅದನ್ನು ಸೇವಿಸುತ್ತಿರುವ ದೇಶದ ಜನರು ರಕ್ತಹೀನತೆ, ರೋಗ ನಿರೋಧಕ ಶಕ್ತಿಯ ಕೊರತೆಗಳಿಂದ ಬಳಲುತ್ತಿದ್ದು, ಡೆಂಘೀ, ಮಂಗನ ಕಾಯಿಲೆಯಂತಹ ಸೋಂಕು ರೋಗಗಳಿಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಸ್ಯ ಮತ್ತು ಸೂಕ್ಷ್ಮಜೀವಿಗಳನ್ನೊಳಗೊಂಡು ಚಿಕಿತ್ಸಕ ಔಷಧೋತ್ಪನ್ನಗಳನ್ನು ತಯಾರಿಸಲು ಸಂಶೋಧಕರಿಗೆ ಇಂತಹ ಕಾರ್ಯಾಗಾರಗಳು ಸಹಾಯಕ ಎಂದು ತಿಳಿಸಿದರು.

ಭಾರತದ ಶೇ. 42ರಷ್ಟು ಮಹಿಳೆಯರು ಅನಿಮೀಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. 5ವರ್ಷಕ್ಕಿಂತ ಕಡಿಮೆ ವಯಸ್ಸಿನ 10 ಲಕ್ಷ ಮಕ್ಕಳು ಪ್ರತಿ ವರ್ಷ ಅಪೌಷ್ಟಿಕತೆಯಿಂದಾಗಿ ಸಾವನ್ನಪ್ಪುತ್ತಿದ್ದಾರೆ ಎನ್ನುತ್ತವೆ ವರದಿಗಳು. ಮಣ್ಣು, ಬೆಳೆಧಾನ್ಯಗಳು ಮತ್ತು ಆಹಾರದಲ್ಲಿ ಪೌಷ್ಟಿಕಾಂಶಗಳ ಇರುವಿಕೆಯನ್ನು ಖಾತರಿ ಪಡಿಸುವ ಬೃಹತ್‌ ಸವಾಲನ್ನು ಸರಿಯಾಗಿ ನಿಭಾಯಿಸಿದಲ್ಲಿ ಮಾತ್ರವೇ 2030ರ 2ನೇ ಹಂತದ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ತಲುಪಲು ಸಾಧ್ಯ ಎಂದು ಪ್ರೊ| ಮಂಜುನಾಥ ಕೆ. ನಾಯ್ಕ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಸಚಿವ ಪ್ರೊ| ಎಸ್‌.ಎಸ್‌. ಪಾಟೀಲ್‌, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಬಾರದು. ತಮ್ಮ ಕ್ಷೇತ್ರದಲ್ಲಿ ಈಗಾಗಲೇ ಇರುವ ಜ್ಞಾನವನ್ನು ವಿಶ್ಲೇಷಣೆಗೆ ಒಳಪಡಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಜೊತೆಗೆ ವೈಯಕ್ತಿಕ ಕೊಡುಗೆಯನ್ನು ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಿಲೀಂಧ್ರಶಾಸ್ತ್ರದ ಹಿರಿಯ ವಿಜ್ಞಾನಿ ಬೆಂಗಳೂರಿನ ಕೃಷಿ ವಿವಿಯ ಪ್ರೊ| ಭಾಗ್ಯರಾಜ್‌, ಕಾರ್ಯಾಗಾರದ ಸಂಘಟಕ ಡಾ| ವಿ. ಕೃಷ್ಣ, ಪ್ರೊ| ಕೃಷ್ಣಪ್ಪ, ಹಣಕಾಸು ಅಧಿಕಾರಿ ಪ್ರೊ| ರಮೇಶ್‌ ಮಾತನಾಡಿದರು. ಪ್ರೊ| ನಾರಾಯಣ್‌, ಡಾ| ಬಿ. ತಿಪ್ಪೇಸ್ವಾಮಿ, ಡಾ| ನಾಗರಾಜ್‌ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಇದ್ದರು. ಕಾರ್ಯಾಗಾರಕ್ಕೆ ನೆರೆಯ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಮೂವತ್ತು ಶಿಬಿರಾರ್ಥಿಗಳು ಆಗಮಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next