Advertisement

ವಿಪಾಸನದಿಂದ ವೈರತ್ವ ನಿರ್ಮೂಲನೆ

05:31 PM Dec 09, 2019 | Naveen |

ಶಿವಮೊಗ್ಗ: ವಿಪಾಸನ ಮನುಷ್ಯನ ಮಾನಸಿಕ ಸ್ಥಿತಿ ಬದಲಿಸುತ್ತದೆ. ಹಾಗೆಯೇ ಧ್ಯಾನ, ವೈರತ್ವ ಭಾವನೆ ತೊಲಗಿಸುತ್ತದೆ ಎಂದು ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ| ಕೆ. ಚಿದಾನಂದ ಗೌಡ ತಿಳಿಸಿದರು.

Advertisement

ಕೇಂದ್ರ ಕಾರಾಗೃಹ ಆವರಣದಲ್ಲಿ ಶನಿವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೇಂದ್ರ ಕಾರಾಗೃಹ ಮತ್ತು ಮಹಿಳಾ ಕೇಂದ್ರ ಕಾರಾಗೃಹ ಸಹಯೋಗದಲ್ಲಿ ಕೇಂದ್ರ ಕಾರಾಗೃಹ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿನಿತ್ಯ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಮಾನಸಿಕ ಸ್ಥಿಮಿತ ವೃದ್ಧಿಯಾಗಲಿದೆ. ವಿಪಾಸನ ಧ್ಯಾನದಿಂದ ಮನಸ್ಸಿನ ಚಿಂತನೆಗಳು ದೂರ ಆಗಲಿವೆ ಎಂದರು. ಜೀವನದಲ್ಲಿ ಆರು “ಆ’ಗಳಿದ್ದರೆ ಯಶಸ್ವಿ ಆಗಲು ಸಾಧ್ಯ. ಆ ಆರು “ಆ’ಗಳೇ ಇಲ್ಲವಾದರೆ ಬದುಕು ಕಷ್ಟಕರವಾಗಲಿದೆ ಎಂದ ಅವರು, ಆರೋಗ್ಯ, ಆರಾಮ, ಆಶ್ಚರ್ಯ, ಅಹಂ, ಆನಂದ ಮತ್ತು ಆಯುಷ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಮಹಿಳಾ ಕೇಂದ್ರ ಕಾರಾಗೃಹದ ಶಾಖಾ ಗ್ರಂಥಾಲಯದ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಸಾಹಿತಿ ಆರ್‌. ರಾಜೇಶ್ವರಿ ತೇಜಸ್ವಿ, ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜವು ಎಂದಿಗೂ ಫಲವತ್ತಾಗುತ್ತದೆ. ಅದರಂತೆ ಕಾರಾಗೃಹವಾಸಿಗಳು ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಜ್ಞಾನಾರ್ಜನೆ ವೃದ್ಧಿ ಆಗಲಿದೆ ಎಂದರು.

ಕಾರಾಗೃಹ ವಾಸಿಗಳು ಕನಿಷ್ಠ ದಿನಕ್ಕೊಂದು ಪುಟ ಬರೆಯುವುದನ್ನು ರೂಢಿ ಮಾಡಿಕೊಳ್ಳಬೇಕು. ಪುಸ್ತಕ ಓದುವುದು ಮತ್ತು ತೋಚಿದ್ದನ್ನು ಬರೆಯುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗಲಿದೆ ಎಂದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ| ಸತೀಶ್‌ಕುಮಾರ್‌ ಹೊಸಮನಿ ಮಾತನಾಡಿ, ಗ್ರಾಪಂನಿಂದ ಕೇಂದ್ರ ಗ್ರಂಥಾಲಯಗಳಿಗೆ ರಾಜ್ಯದಲ್ಲಿ 7 ಸಾವಿರಕ್ಕೂ ಅಧಿಕ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿವೆ. 15ಕ್ಕೂ ಅಧಿಕ ಜೈಲು ಗ್ರಂಥಾಲಯಗಳಿದ್ದು ಮಾನಸಿಕ ಪರಿವರ್ತನೆ, ಸಾಮಾಜಿಕ ಬದಲಾವಣೆ ತರಲು ಗ್ರಂಥಾಲಯಗಳು ಸಹಕಾರಿ ಆಗುತ್ತಿವೆ ಎಂದರು.

Advertisement

ಕಾರಾಗೃಹದ ಮುಖ್ಯ ಅಧಿಧೀಕ್ಷಕ ಪಿ.ರಂಗನಾಥ ಮಾತನಾಡಿ, ಕಳೆದ ಜುಲೈ ತಿಂಗಳಲ್ಲಿ ಗುರುಪೂರ್ಣಿಮೆಯಿಂದ ಆರಂಭಗೊಂಡ ಸಾಂಸ್ಕೃತಿಕ ಚಟುವಟಿಕೆಗಳು ಇಂದಿಗೂ ಮುಂದುವರಿದಿದ್ದು 22ನೇ ಕಾರ್ಯಕ್ರಮ ಇದಾಗಿದೆ. ಅಪರಾಧ ಕೃತ್ಯಗಳಿಗೆ ಶಿಕ್ಷಕೆಗೆ ಒಳಗಾಗಿರುವವರಿಗೆ ಪಶ್ಚಾತ್ತಾಪಕ್ಕೆ ವಾತಾವರಣ ಸೃಷ್ಟಿಸಲಾಗಿದೆ ಎಂದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಡಿ.ಎನ್‌.ಹಾಲಸಿದ್ದಪ್ಪ ಮಾತನಾಡಿದರು. ವಿಚಾರಣಾ ಧೀನ ಬಂಧಿಗಳ ಹಕ್ಕುಗಳು ಮತ್ತು ಪ್ಲೀ ಬಾರ್ಗೆನಿಂಗ್‌ ಕುರಿತು ವಿಚಾರಣಾಧೀ ನ ಕೈದಿ ಉಪನ್ಯಾಸ ನೀಡಿದರು. ರಸಪ್ರಶ್ನೆ, ಚಿತ್ರಕಲೆ, ಸ್ವರಚಿತ ಕವನ, ಜ್ಞಾಪಕ ಶಕ್ತಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಹಿತಿ ತಾರಿಣಿ ಚಿದಾನಂದ, ರೈತ ಮುಖಂಡ ಕಡಿದಾಳು ಶಾಮಣ್ಣ, ಪ್ರಾಚಾರ್ಯೆ ಪ್ರೊ| ಶಶಿರೇಖಾ, ಬಿ. ಚಂದ್ರೇಗೌಡ, ಪ್ರೇಮಲತಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next