Advertisement

ಗಾಲಿಕುರ್ಚಿಯಲ್ಲಿ ವೈಕಲ್ಯವನ್ನು ಮೀರಿದ ಶಿಲ್ಪಾ

03:20 AM Nov 10, 2018 | |

ಬದುಕೊಂದು ಕುರುಕ್ಷೇತ್ರವೆಂದೇ ಎಲ್ಲರೂ ಭಾವಿಸುತ್ತಾರೆ. ಇದೊಂದು ನಿತ್ಯಯುದ್ಧ, ಇಲ್ಲಿ ನಿರಂತರ ಹೋರಾಟ ಅನಿವಾರ್ಯ. ಹೋರಾಟಕಾರಿ ಬದುಕಿಗೆ, ಅದು ನೀಡುವ ಕಷ್ಟಕ್ಕೆ ಹೆದರಿ ಧೈರ್ಯ ಕಳೆದುಕೊಂಡರೆ ಸಂಪೂರ್ಣ ವಿನಾಶ ನಮ್ಮನ್ನು ಕಾದುಕೊಂಡಿರುತ್ತದೆ. ಎಂತಹ ಸಂದರ್ಭದಲ್ಲೂ ತಿರುಗಿಬಿದ್ದು ಹೋರಾಡಿದರೆ ಅದ್ಭುತಗಳನ್ನು ಸಾಧಿಸಬಹುದು ಎಂಬುದಕ್ಕೆ ನಮಗೆ ಅಲ್ಲಲ್ಲಿ ಉದಾಹರಣೆಗಳು ಸಿಗುತ್ತಲೇ ಇರುತ್ತದೆ. ಅಂತಹ ಒಂದು ಉತ್ತಮ ಉದಾಹರಣೆ ಕೆ.ಪಿ.ಶಿಲ್ಪಾ. ಮಂಡ್ಯದ ಈಕೆ ಮಗುವಿದ್ದಾಗಲೇ ಎರಡೂ ಕಾಲು ಕಳೆದುಕೊಂಡರೂ ಗಾಲಿಕುರ್ಚಿ ಟೆನಿಸ್‌ ಮೂಲಕ ಬದುಕಿಗೆ ಸೆಡ್ಡು ಹೊಡೆದಿದ್ದಾರೆ. ಈಕೆಯ ಸಾಧನೆ ಕಾಲಿದ್ದವರಿಗೂ ಮಾದರಿ.

Advertisement

ಒಂದೂವರೆ ವರ್ಷವಿದ್ದಾಗಲೇ ಕಾಲು ಸ್ವಾಧೀನ ತಪ್ಪಿತು: ರಾಷ್ಟ್ರೀಯ ಗಾಲಿಕುರ್ಚಿ ಟೆನ್ನಿಸ್‌ ಆಟಗಾರ್ತಿಯರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಶಿಲ್ಪಾ ಮೂಲತಃ ಮಂಡ್ಯದವರು. ಒಂದೂವರೆ ವರ್ಷದ ಮಗುವಾಗಿದ್ದಾಗ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಜ್ವರದಿಂದ ತನ್ನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡರು. ಮನೆಯಲ್ಲಿ ಅನಕ್ಷರಸ್ಥರಾದ ತಂದೆ-ತಾಯಿಗೂ ಸರಿಯಾಗಿ ಚಿಕಿತ್ಸೆ ಕೊಡಿಸಬೇಕೆಂದು ತಿಳಿಯದಿದ್ದರಿಂದ ಸೂಕ್ತ ವೈದ್ಯಕೀಯ ಸೌಲಭ್ಯ ದೊರಕದೆ ಶಾಶ್ವತವಾಗಿ ಅಂಗ ವೈಕಲ್ಯ ಅನುಭವಿಸುವ ಸ್ಥಿತಿ ಉಂಟಾಯಿತು.

ಸಂದೇಶ ನೀಡಿದ ಸಂದೇಶ

 ಎರಡೂ ಕಾಲುಗಳಿಲ್ಲದ ಪರಿಣಾಮ ಅವುಗಳ ಬದಲಿಗೆ ಕೃತಕ ಕಾಲುಗಳನ್ನು ಬಳಸುತ್ತಿದ್ದರಿಂದ. ಇದರಿಂದ ಕಾಲುನೋವು ಹೆಚ್ಚಾಗುತ್ತಿತ್ತು. ಮತ್ತೂಂದೆಡೆ ನಡೆಯಲು ವಾಕಿಂಗ್‌ ಸ್ಟಿಕ್‌ ಬಳಸುತ್ತಿದ್ದರಿಂದ ಭುಜಗಳೂ ನೋವು ಬರುತ್ತಿದ್ದವು. ಹೀಗಾಗಿ ಚಿಕಿತ್ಸೆಗೆಂದು ಶಿಲ್ಪಾ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಬಿ.ಜಿ.ಸಂದೇಶ ಅವರ ಪರಿಚಯವಾಯಿತು. ಗಾಲಿಕುರ್ಚಿ ಅಥ್ಲೀಟ್‌ ಆಗಿರುವ ಬಿ.ಜಿ.ಸಂದೇಶ ಅವರು 2010ರಲ್ಲಿ ಗಾಲಿಕುರ್ಚಿ ಟೆನಿಸ್‌ ಆಟವನ್ನು ಬೆಂಗಳೂರಿನಲ್ಲಿ ಜನಪ್ರಿಯಗೊಳಿಸಲು ಶ್ರಮಿಸುತ್ತಿದ್ದರು. 

ಚಿಕಿತ್ಸೆ ಪಡೆದುಕೊಂಡು ಮಂಡ್ಯಕ್ಕೆ ಮರುಳಿದ ಶಿಲ್ಪಾ ಅವರಿಗೆ ಕೆಲವು ದಿನಗಳ ನಂತರ ಬಿ.ಜಿ.ಸಂದೇಶ ಅವರು ಕರೆ ಮಾಡಿ ಬೆಂಗಳೂರಿನಲ್ಲಿ ಗಾಲಿಕುರ್ಚಿ ಟೆನಿಸ್‌ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಹ್ವಾನಿಸಿದ್ದರು. ತನಗೆ ಈ ಕ್ರೀಡೆ ಬಗ್ಗೆ ಏನೂ ತಿಳಿಯದು. ಈ ಪಂದ್ಯಾವಳಿ ಆಡಲು ನನ್ನಿಂದ ಸಾಧ್ಯವೇ ಇಲ್ಲ ಎಂದು ಶಿಲ್ಪಾ ದುಃಖಪಟ್ಟಿದ್ದರು. ಆಗ ಬಿ.ಜಿ ಸಂದೇಶ ಅವರು ಸದಾ ಅನ್ಯರನ್ನು ಅವಲಂಬಿಸಿಕೊಂಡು ಬದುಕುವ ಕಷ್ಟ ಹಾಗೂ ಅದರಿಂದ ಹೊರಬರುವ ದಾರಿ ಎರಡನ್ನೂ ತೋರಿಸಿಕೊಟ್ಟರು. ಗಾಲಿಕುರ್ಚಿ ರೂಪದಲ್ಲಿ ಒದಗಿಬಂದ ಆ ಮಾರ್ಗದರ್ಶನ ಶಿಲ್ಪಾ ಬದುಕನ್ನೇ ಬದಲಿಸಿತು. 

Advertisement

ಬೆಂಗಳೂರಲ್ಲಿ ತರಬೇತಿ

 2010 ಡಿಸೆಂಬರ್‌ನಲ್ಲಿ ಬೆಂಗಳೂರಿಗೆ ಮರಳಿದ ಶಿಲ್ಪಾ ಒಂದು ವಾರಗಳ ಕಾಲ ಗಾಲಿಕುರ್ಚಿ ಟೆನಿಸ್‌ ತರಬೇತಿ ಪಡೆದುಕೊಂಡರು. ಬಿ.ಜಿ.ಸಂದೇಶ ಅವರ ನೇತೃತ್ವದಲ್ಲಿ ಕರ್ನಾಟಕ ಗಾಲಿಕುರ್ಚಿ ಟೆನಿಸ್‌ ಸಂಘದಿಂದ ನಡೆದ ರಾಷ್ಟ್ರೀಯ ಗಾಲಿಕುರ್ಚಿ ಟೆನಿಸ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದರು. ಹೀಗೆ ಟೆನಿಸ್‌ ಲೋಕ ಪ್ರವೇಶಿಸಿದ ಶಿಲ್ಪಾ ನಂತರ ಹಿಂತಿರುಗಿ ನೋಡಿಲ್ಲ.

ನೀಲಾಂಜನೇಯ ನೆರವು: ಸಮರ್ಥನಂ ಸಂಸ್ಥೆಯಲ್ಲಿ ಶಿಲ್ಪಾ ಕಂಪ್ಯೂಟರ್‌ ತರಬೇತಿ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಆಟೋ ಚಾಲಕ ನೀಲಾಂಜನೇಯ ಅವರ ಪರಿಚಯವಾಯಿತು. ಮುಂದೆ ಶಿಲ್ಪಾ ಅಂತಾರಾಷ್ಟ್ರೀಯ ಮಟ್ಟದ ಆಟಗಾರ್ತಿಯಾಗಿ ಹೊರಹೊಮ್ಮಲು ನೀಲಾಂಜನೇಯ ಪ್ರಮುಖ ಪಾತ್ರ ವಹಿಸಿದರು.  ಸ್ವತಃ ತಾವೇ ಒಂದು ಕಾಲು ಕಳೆದುಕೊಂಡಿದ್ದರಿಂದ ನೀಲಾಂಜನೇಯ ಅವರಿಗೂ ನೋವು ಗೊತ್ತಿತ್ತು. ಅವರು  ಮೂರು ವರ್ಷ ಪ್ರತಿದಿನ ಬೆಳಗ್ಗೆ ಸಂಜೆ ಶಿಲ್ಪಾ ಅವರನ್ನು ಟೆನಿಸ್‌ ತರಬೇತಿಗೆ ಕರೆದುಕೊಂಡು ಹೋಗುತ್ತಿದ್ದಿದಲ್ಲದೆ ತಾವು ಸಂಪಾದನೆ ಮಾಡಿದ ಹಣದಿಂದ ಟೆನಿಸ್‌ ಆಟಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಖರೀದಿಸಿ ಕೊಟ್ಟಿದ್ದರು. 

ನಂತರ 2013ರಲ್ಲಿ ಸಮಾಜ ಸೇವಕಿ ಮಂಗಳಾ ಶ್ರೀಧರ್‌ ಅವರ ನೆರವು ಪಡೆದುಕೊಂಡ ಶಿಲ್ಪಾ ಬ್ಯಾಂಕಾಕ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಗಾಲಿಕುರ್ಚಿ ಟೆನ್ನಿಸ್‌ ಪಂದ್ಯಾವಳಿಯಲ್ಲಿ ಭಾಗವಹಿಸಿ ದೇಶ ಹೆಮ್ಮೆಪಡುವಂತ ಸಾಧನೆ ಮಾಡಿದರು. ಅಲ್ಲಿಂದ ಸಾಧನೆಯ ಪಥದಿಂದ ಹಿಂದೆ ಸರಿಯದ ಶಿಲ್ಪಾ ಬೀಜಿಂಗ್‌, ಚೀನಾ, ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳ ಪದಕಗಳನ್ನು ಮುಡಿಗೇರಿಸಿಕೊಂಡರು.

ಇಷ್ಟು ವರ್ಷ ಸ್ಥಳೀಯ ಗಾಲಿಕುರ್ಚಿಯಲ್ಲೇ ಟೆನ್ನಿಸ್‌ ಆಡುತ್ತಿದ್ದ ಶಿಲ್ಪಾ ಅವರಿಗೆ ಬನಶಂಕರಿ ಮಹಿಳಾ ಸಮಾಜ ಹಾಗೂ ಒಕ್ಕಲಿಗರ ಮಹಾವೇದಿಕೆ ಅಂತಾರಾಷ್ಟ್ರೀಯ ಮಟ್ಟದ ಗಾಲಿಕುರ್ಚಿ ಖರೀದಿಗೆ ಸಹಾಯ ಮಾಡುತ್ತಿವೆ. ಸ್ಥಳೀಯ ಗಾಲಿಕುರ್ಚಿಯಲ್ಲಿ ಕುಳಿತು ದೇಶ ವಿದೇಶದಲ್ಲಿ ಕೀರ್ತಿ ಪತಾಕೆ ಹಾರಿಸಿರುವ ಶಿಲ್ಪಾ ಇದೀಗ ಹೊಸ ಗಾಲಿಕುರ್ಚಿಯಲ್ಲಿ ಕುಳಿತು 2020ರಲ್ಲಿ ನಡೆಯುವ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ.

ಆದರೆ, ಶ್ರೀಮಂತರ ಆಟ ಎನಿಸಿಕೊಂಡಿರುವ ಟೆನಿಸ್‌ನಲ್ಲಿ ಮುಂದುವರಿಯಲು ಅವರಿಗೆ ಹಣದ ಅಗತ್ಯವಿದೆ. ಹಾಗೆಂದು ಎಲ್ಲಕ್ಕೂ ಬೇರೆಯವರನ್ನು ನೆಚ್ಚಿಕೊಳ್ಳದೆ ಸ್ವಾಭಿಮಾನಿಯಾಗಿ ಬದಕು ನಡೆಸುವ ಛಲವೂ ಇದೆ. ಎಸ್‌ಎಸ್‌ಎಲ್‌ಸಿ ಶಿಕ್ಷಣ ಮುಗಿಸಿರುವ ಅವರು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ತಾನೇ ಸಂಪಾದಿಸಿ ಬದುಕುವುದರ ಜತೆಗೆ ಟೆನಿಸ್‌ನಲ್ಲೂ ಮುಂದುವರಿಯಬೇಕು ಎಂಬುದು ಅವರ ಬಯಕೆ.

ಅಂಗವೈಕಲ್ಯವನ್ನು ಕಂಡು ಕೆಲವರು ಹಾಸ್ಯ ಮಾಡಿದ್ದುಂಟು. ಆಗೆಲ್ಲಾ ಬದುಕೇ ಬೇಡ ಎಂದೆನ್ನಿಸುತ್ತಿತ್ತು. ಸದಾ ಅನ್ಯರನ್ನು ಅವಲಂಬಿಸುವ ಬದುಕಿನಿಂದ ದೂರ ಸರಿಯಬೇಕೆಂದು ಮನಸ್ಸು ಪದೇ ಪದೇ ಒತ್ತಿ ಹೇಳುತ್ತಿತ್ತು. ಅಂತಹ ಸಂದರ್ಭದಲ್ಲಿ ಬಿ.ಜಿ.ಸಂದೇಶ ಅವರು ಬದುಕಿನ ಬಗ್ಗೆ ಹೇಳಿಕೊಟ್ಟ ಪಾಠ ಇಂದಿಗೂ ನನಗೆ ಸ್ಪೂರ್ತಿ ನೀಡುತ್ತವೆ.
– ಕೆ.ಪಿ.ಶಿಲ್ಪಾ.

ಪ್ರಶಸ್ತಿ ಪಟ್ಟಿ
ಸಿಂಗಲ್ಸ್‌ ವಿಭಾಗದಲ್ಲಿ
2010 ಪ್ರಥಮ ರಾಷ್ಟ್ರೀಯ ಗಾಲಿಕುರ್ಚಿ ಟೆನಿಸ್‌ ಪಂದ್ಯಾವಳಿಯಲ್ಲಿ ಚಿನ್ನದ ಪದಕ
2013 ದ್ವಿತೀಯ ರಾಷ್ಟ್ರೀಯ ಗಾಲಿಕುರ್ಚಿ ಟೆನ್ನಿಸ್‌ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ
2013    ಬಾಂಕಾಂಕ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಟೆನಿಸ್‌ ಪಂದ್ಯಾವಳಿಯಲ್ಲಿ ರನ್ನರ್‌ ಅಪ್‌
2015 ತೃತೀಯ ರಾಷ್ಟ್ರೀಯ ಗಾಲಿಕುರ್ಚಿ ಟೆನಿಸ್‌ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ
2016 ಬೆಂಗಳೂರಿನಲ್ಲಿ ನಡೆದ ಟಬೂಬಿಯಾ ಪಂದ್ಯಾವಳಿಯಲ್ಲಿ ರನ್ನರ್‌ ಅಪ್‌
2017 ಮಲೇಷ್ಯಾ ಮತ್ತು ಬ್ಯಾಂಕಾಕ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಗಾಲಿಕುರ್ಚಿ ಟೆನಿಸ್‌ ಪಂದ್ಯಾವಳಿಯಲ್ಲಿ ಕಂಚಿನ ಪದಕ
2018 ಚೆನ್ನೈನಲ್ಲಿ ನಡೆದ ಮರಿನಾ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ
2018 ಹೈದಾರಬಾದ್‌ನಲ್ಲಿ ನಡೆದ ಚಾರ್‌ಮಿನಾರ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ

ಡಬಲ್ಸ್‌ ವಿಭಾಗದಲ್ಲಿ
2015 ತೃತೀಯ ರಾಷ್ಟ್ರೀಯ ಗಾಲಿಕುರ್ಚಿ ಪಂದ್ಯಾವಳಿಯಲ್ಲಿ ಬಂಗಾರದ ಪದಕ

ಶೃತಿ ಮಲೆನಾಡತಿ 

Advertisement

Udayavani is now on Telegram. Click here to join our channel and stay updated with the latest news.

Next