Advertisement

ಶಿಗ್ಗಾವಿ: ಪಕ್ಷಿ ಸಂಕುಲ ರಕ್ಷಣೆಗೆ ಆದ್ಯತೆ ನೀಡಿ: ಪ್ರೊ| ಭಾಸ್ಕರ್‌

05:15 PM Mar 21, 2024 | Team Udayavani |

ಉದಯವಾಣಿ ಸಮಾಚಾರ
ಶಿಗ್ಗಾವಿ: ಗುಬ್ಬಚ್ಚಿ ಅತ್ಯಂತ ಮೃದು ಸ್ವಭಾವದಿಂದ ಗೂಡಿಗೆ ಬೇಕಾದ ರೀತಿಯಲ್ಲಿ ಹುಲ್ಲಿನ ಎಸಳುಗಳನ್ನು ತಂದು ಗೂಡು
ಕಟ್ಟಿಕೊಳ್ಳುತ್ತದೆ. ಅಮ್ಮನ ವಾತ್ಸಲ್ಯ, ಗುಬ್ಬಚ್ಚಿ ವಾತ್ಸಲ್ಯ ಒಂದೇ ಆಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ| ಟಿ.ಎಂ. ಭಾಸ್ಕರ್‌ ಅವರು ಹೇಳಿದರು.

Advertisement

ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನಾ ಕೋಶದಿಂದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಆಯೋಜಿಸಲಾದ ವಿಶ್ವ ಗುಬ್ಬಚ್ಚಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂತಃಕರಣದ ಗುಣಸ್ವಭಾವ ಇರುವುದು ತಾಯಿ ಮತ್ತು ಗುಬ್ಬಚ್ಚಿಗೆ ಮಾತ್ರ, ಮಕ್ಕಳ ಪರಿಪಾಲನೆಗೆ ಗುಬ್ಬಚ್ಚಿ ಮಾದರಿಯಾಗಿದೆ.
ಅದು ಪರಿಸರದಲ್ಲಿ ಅತ್ಯಂತ ಮಾದರಿ ಮನೆಯನ್ನು ಕಟ್ಟಿಕೊಳ್ಳುತ್ತದೆ, ನಾವೆಲ್ಲ ಪ್ರೀತಿಯಿಂದ ಆ ಪಕ್ಷಿ ಸಂಕುಲ ರಕ್ಷಣೆ
ಮಾಡಬೇಕು ಎಂದರು.

ಕುಲಸಚಿವರಾದ ಪ್ರೊ| ಸಿ.ಟಿ. ಗುರುಪ್ರಸಾದ ಮಾತನಾಡಿ, ಗುಬ್ಬಚ್ಚಿ ದಿನವನ್ನು ಪ್ರಪಂಚದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಗುಬ್ಬಚ್ಚಿ ಸಂಕುಲ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದು ಅತ್ಯಂತ ಸಣ್ಣ ಪಕ್ಷಿ ಆಗಿರುವುದರಿಂದ ಇದನ್ನು ರಕ್ಷಿಸುವ ಸಲುವಾಗಿ ಪರಿಸರವಾದಿಗಳು ಈ ಆಚರಣೆ ಜಾರಿಗೆ ತಂದಿದ್ದಾರೆ. ಮಗುವನ್ನು ಸಂರಕ್ಷಿಸಿಕೊಳ್ಳಲು ಗುಬ್ಬಚ್ಚಿ ಹೇಗೆ ಗೂಡು ಕಟ್ಟಿಕೊಳ್ಳುತ್ತದೆಯೋ ಹಾಗೆ ಆ ಗುಬ್ಬಚ್ಚಿ ಗೂಡು ಪ್ರೀತಿಯ ಸಂಕೇತವಾಗಿ ಮಾನವ ಕುಲಕ್ಕೆ ಮಾದರಿಯಾಗಿದೆ. ಪ್ರಾಣಿ, ಪಕ್ಷಿಗಳನ್ನು ರಕ್ಷಿಸಿಕೊಳ್ಳಬೇಕು. ಈ ಬಿಸಿಲು ಬೇಗುದಿಯ ಸಂದರ್ಭದಲ್ಲಿ ಆಹಾರ, ನೀರು ಇಡುವ ಪ್ರತಿಜ್ಞೆ ಮಾಡುವ ಮೂಲಕ ಈ ಆಚರಣೆಯನ್ನು ಅರ್ಥಪೂರ್ಣವಾಗಿಸೋಣ ಎಂದರು.

ಮೌಲ್ಯಮಾಪನ ಕುಲಸಚಿವರಾದ ಪ್ರೊ| ಎನ್‌.ಎಂ. ಸಾಲಿ ಮಾತನಾಡಿ, ಪಕ್ಷಿಗಳಿಂದ ನಾವು ಮಾನವೀಯ ಮೌಲ್ಯಗಳನ್ನು
ಕಲಿಯೋಣ. ಅವುಗಳನ್ನು ರಕ್ಷಣೆ ಮಾಡಿಕೊಳ್ಳೋಣ ಎಂದರು.

Advertisement

ಹಿರಿಯ ಸಂಶೋಧನಾಧಿಕಾರಿಗಳಾದ ಡಾ| ಕೆ. ಪ್ರೇಮಕುಮಾರ ಅವರು ಮಾತನಾಡಿ, ಪರಿಸರಕ್ಕೆ ಪಕ್ಷಿಗಳು ಮಿತ್ರರು. ಸಸ್ಯ ಸಂಕುಲ ಬೆಳೆಯಬೇಕಾದರೆ ಪಕ್ಷಿಗಳ ಕಾರ್ಯ ಶ್ಲಾಘನೀಯ ನಮ್ಮ ಮಿತಿಯಲ್ಲಿ ಪಕ್ಷಿ ಸಂಕುಲ ರಕ್ಷಣೆಗೆ ನಿಲ್ಲಬೇಕು ಎಂದರು.

ಸಹಾಯಕ ಕುಲಸಚಿವರಾದ ಶಹಜಹಾನ್‌ ಮುದಕವಿ ಮಾತನಾಡಿ, ನಮ್ಮ ಅಕ್ಕಪಕ್ಕದ ಗಿಡಮರಗಳಲ್ಲಿ ಪಕ್ಷಿಗಳಿಗೆ ಕಾಳು,
ನೀರು ಒದಗಿಸಬೇಕು. ಜೊತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಹಾಯಕ ಪ್ರಾಧ್ಯಾಪಕ ಡಾ| ಗಿರೇಗೌಡ ಅರಳಿಹಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ದೊಡ್ಡಾಟ ಕಲಾವಿದರಾದ ಗೋವಿಂದಪ್ಪ ತಳವಾರ ಪ್ರಾರ್ಥಿಸಿದರು. ಕಿರಿಯ ಸಹಾಯಕ ಶರೀಫ್‌ ಮಾಕಪ್ಪನವರ ಪರಿಸರ ಗೀತೆ ಹಾಡಿದರು.

ಸಹಾಯಕ ಪ್ರಾಧ್ಯಾಪಕಿ ಡಾ| ವಿಜಯಲಕ್ಷ್ಮೀ ಗೇಟಿಯವರ ನಿರೂಪಿಸಿದರು, ಡಾ| ರಜಿಯಾ ನದಾಫ್‌ ವಂದಿಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next