Advertisement

ಸಿಗಂದೂರು; ಮಕರ ಸಂಕ್ರಮಣ ಜಾತ್ರೆ ರದ್ದು

08:37 AM Jan 12, 2022 | Suhan S |

ಸಾಗರ: ನಾಡಿನ ಪ್ರಸಿದ್ಧ ಶಕ್ತಿ ಕ್ಷೇತ್ರವಾಗಿರುವ ತಾಲೂಕಿನ ಸಿಗಂದೂರಿನಲ್ಲಿ ಮಕರ ಸಂಕ್ರಮಣ ಜಾತ್ರೆಯನ್ನು ಸರಳವಾಗಿ ಆಚರಿಸಲು ಅಲ್ಲಿನ ಆಡಳಿತ ಸಮಿತಿ ನಿರ್ಧರಿಸಿದೆ. ಜಾತ್ರೆಯ ವಿಶೇಷ ಸೇವೆ, ಪೂಜೆಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ದೇವಿಯ ದರ್ಶನಕ್ಕೆ ಮಾತ್ರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

Advertisement

ಕೋವಿಡ್ ಹಾಗೂ ಓಮೈಕ್ರಾನ್ ವೈರಸ್ ಸೋಂಕು ಹೆಚ್ಚುತ್ತಿರುವ ಕಾರಣ ಜಿಲ್ಲೆಯ ಕೆಲವು ಜಾತ್ರೆಗಳು ರದ್ದಾಗಿದ್ದು, ಈ ನಡುವೆ ಸಿಗಂದೂರು ದೇವಸ್ಥಾನದಲ್ಲಿ ಎರಡು ದಿನಗಳ ಬದಲು ಜನವರಿ 14ರಂದು ಒಂದೇ ದಿನ ಜಾತ್ರೆಯ ಎಲ್ಲಾ ಪೂಜಾ ಕೈಂಕರ್ಯಗಳು ಮುಗಿಯಲಿದ್ದು, ಸರಳವಾಗಿ ನಡೆಯಲಿವೆ.

ನಿಗದಿಯಂತೆ ಜಾತ್ರಾ ಮಹೋತ್ಸವ ಸರಳವಾಗಿ ನಡೆಯಲಿದೆ. ಆದರೆ ಸಾರ್ವಜನಿಕರ ಸಹಭಾಗಿತ್ವಕ್ಕೆ ಅವಕಾಶವಿಲ್ಲ. ಜಾತ್ರೆಯ ಮೊದಲ ದಿನ 14 ರಂದು ಬೆಳಿಗ್ಗೆ 8ಕ್ಕೆ ಮೂಲ ಸ್ಥಳವಾದ ಸೀಗೆ ಕಣಿವೆಯಿಂದ ಪ್ರಥಮ ಪೂಜೆಗೆ ಧರ್ಮಾಧಿಕಾರಿಗಳು ಹಾಗೂ ಕುಟುಂಬಸ್ಥರ ಜೊತೆಗೆ ದೇವಸ್ಥಾನದ ಸಿಬ್ಬಂದಿ ಹೊರತುಪಡಿಸಿ ಉಳಿದವರಿಗೆ ಪ್ರವೇಶವಿಲ್ಲ. ಆ ದಿನ ಬೆಳಿಗ್ಗೆ 7 ರಿಂದ ರಾತ್ರಿ 7 ರವರೆಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ರವಿಕುಮಾರ್ ಪ್ರತಿಕ್ರಿಯಿಸಿದರು.

ಯಾವುದೇ ವಿಶೇಷ ಪೂಜೆ ಹಾಗೂ ಸೇವೆಗಳಿಗೆ ಭಕ್ತರಿಗೆ ಅವಕಾಶವಿಲ್ಲ. ವೇದಿಕೆ ಕಾರ್ಯಕ್ರಮಗಳನ್ನೂ ರದ್ದುಮಾಡಿದ್ದು, 2ನೇ ದಿನವಾದ ಶನಿವಾರ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವುದರಿಂದ ದೇವರ ದರ್ಶನಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಭಕ್ತರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಧರ್ಮಾಧಿಕಾರಿ ಡಾ. ಎಸ್.ರಾಮಪ್ಪ ಮನವಿ ಮಾಡಿದ್ದಾರೆ.

ವರ್ಷಕ್ಕೊಮ್ಮೆ ನಡೆಯುವ ಮಕರ ಸಂಕ್ರಮಣದ ಜಾತ್ರೆಯ ಎರಡು ದಿನಗಳಲ್ಲಿ ಸಿಗಂದೂರಿಗೆ ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಭಕ್ತರು ಭೇಟಿ ನೀಡುತ್ತಿದ್ದರು. ಈ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಅನ್ನದಾಸೋಹ ನಡೆಯುತ್ತಿದ್ದುದನ್ನು ಸ್ಮರಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next