Advertisement

ಅನಂತ ನಮನ

09:04 AM May 19, 2019 | Vishnu Das |

ದಿನಸಿ ಅಂಗಡಿಯಲ್ಲಿ ಕೂತರೆ ಬರೀ ವ್ಯವಹಾರದ ಯೋಚನೆ ಮಾಡಬೇಕು. ಶಿಡ್ಲಘಟ್ಟದ ಅನಂತ್‌ ಹೀಗೆ ಮಾಡುವುದಿಲ್ಲ. ಈ ವಾರ ಯಾವ ವಿಜ್ಞಾನಿಯನ್ನು ಕರೆಸಿ, ಯಾವ ಶಾಲೆ ಮಕ್ಕಳಿಗೆ ಪಾಠ ಮಾಡಿಸಬೇಕು, ಯಾವ ಸಾಹಿತಿಗೆ ಸನ್ಮಾನ ಮಾಡಬೇಕು ಅಂತ ಚಿಂತಿಸುತ್ತಿರುತ್ತಾರೆ. ಇವರಿಗೆ ಅಕ್ಕಿ, ಬೇಳೆ ಮೇಲಿರುವಷ್ಟೇ ಪ್ರೀತಿ, ಸಮಾಜ ಕಾರ್ಯದ ಮೇಲೂ ಇದೆ. ಹೀಗಾಗಿ, ಎರಡೂ ಹೆಗಲುಗಳೂ ಸಮಾಜ ಕಾರ್ಯಕ್ಕೆ ಖಾಲಿ ಇರುತ್ತವೆ.

Advertisement

ಶಿಡ್ಲಘಟ್ಟದ ಅಶೋಕ ರಸ್ತೆಯಲ್ಲಿ ಎಸ್‌ಎಲ್‌ಎನ್‌ ಪ್ರಾವಿಜನ್‌ ಸ್ಟೋರ್‌ ಅಂತ ಇದೆ. ಒಳ ಹೊಕ್ಕರೆ, ಅಕ್ಕಿ, ಬೇಳೆ ಮೂಟೆಗಳ ಜೊತೆಗೆ ಚೂಪು ಮುಖದ, ಸಮತಟ್ಟು ಕ್ರಾಪಿನ ವ್ಯಕ್ತಿಯೊಬ್ಬರು ಕೂತಿರುತ್ತಾರೆ. ನೀವು ಇಂತಿಂಥ ಪದಾರ್ಥ ಬೇಕು ಅಂತ ಪಟ್ಟಿ ಕೊಡುವಂತೆಯೇ, ನಮಗೆ ಇಂತಿಂಥ ಸಹಾಯವೂ ಆಗಬೇಕು ಅಂತಲೂ ಪಟ್ಟಿ ಹೇಳಿ. ಅದರಲ್ಲೂ ಸಾಹಿತ್ಯಿಕ ಕೆಲಸಗಳಾದರೆ ಈ ಅನಂತಕೃಷ್ಣರ ಮುಖದಲ್ಲಿ ಫ‌ಳ್‌ ಅನ್ನೋ ನಗುವಿನ ಲೈಟು ಮೂಡುತ್ತದೆ.

ಇವರಿಗೆ ಅಂಗಡಿಯಲ್ಲಿ ಹೆಚ್ಚೆಚ್ಚು ವ್ಯಾಪಾರ ಆಗುವ ಖುಷಿಗಿಂತ ಇಂಥ ಸಮಾಜ ಸೇವೆಯಲ್ಲಿ ಸಿಗುವ ತೃಪ್ತಿ ಮುಖ್ಯವಂತೆ. ಬೀದಿ ಕೊನೆಯ ರಾಜ್ಯೋತ್ಸವಕ್ಕೆ ಫ್ಲಾಗ್‌ ಕಟ್ಟುವುದು, ಯಾರಾದರೂ ಸತ್ತರೆ ಅವರ ನೋವಿಗೆ ಹೆಗಲಾಗುವುದು, ಬೆಂಗಳೂರಿಂದ ವಿಜ್ಞಾನಿಗಳನ್ನು ಕರೆಸಿ, ಊರಿನ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಹೇಳಿಸಿದರೆ ಭರ್ತಿ ಊಟ ಮಾಡಿದ ತೃಪ್ತಿ ಇವರಿಗೆ. ಹೀಗಾಗಿ, ಶಿಡ್ಲಘಟ್ಟದಲ್ಲಿ ಅನಂತ ಕೃಷ್ಣರನ್ನು ಗುರುತಿಸುವುದೇ ಅವರ ಈ “ಸಮಾಜಮುಖ’ದಿಂದ. ಇವರಿಗೆ ಅಕ್ಕಿ-ಬೇಳೆಯ ನಿಖರ ಬೆಲೆಯಷ್ಟೇ, ಸಾಹಿತ್ಯದ ಮೌಲ್ಯವೂ ತಿಳಿದಿದೆ.
ಹಾಗೆ ನೋಡಿದರೆ ಇವರ ತಲೆಯಲ್ಲಿ ಈ ಸಾಹಿತ್ಯದ ಹುಚ್ಚು ಹೇಗೆ ಹಬ್ಬಿತೋ ಅನ್ನೋ ಅನುಮಾನ ಬರದೆ ಇರದು. ಏಕೆಂದರೆ, ಶಿಡ್ಲಘಟ್ಟ ಅನ್ನೋ ಪಟ್ಟಣ ಸಾಂಸ್ಕೃತಿಕವಾಗಿ ಬರಡೇ. ಹುಡುಕಿ ತಡಕಾಡಿದರೂ ಸಂಗೀತ, ಸಾಹಿತ್ಯ ಅಭಿರುಚಿ ಇರುವವರು ಬಲು ಆಪರೂಪ. ಬಹಳ, ಹಿಂದೆ ವಿದ್ವಾನ್‌ ನಾಗರಾಜ್‌ ಮೃದಂಗ ನುಡಿಸುತ್ತಿದ್ದರು, ಪಿಟೀಲು ನಾರಣಾಚಾರ್‌, ಹಿರಿಯ ಸಾಹಿತಿ ಹೆಚ್‌.ವಿ. ರಾಮಚಂದ್ರರಾವ್‌ ಇಲ್ಲಿನವರೇ ಅನ್ನೋದು ಬಿಟ್ಟರೆ ಹೇಳಿಕೊಳ್ಳುವ ಕಲಾವಿದರು, ಸಾಹಿತಿಗಳನ್ನೂ ಈ ಊರು ಕೊಟ್ಟಂತಿಲ್ಲ. ಆದರೆ, ಈ ಶಿಡ್ಲಘಟ್ಟ ರೇಷ್ಮೆಯ ತವರು. ಊರ ತುಂಬ ಮಗ್ಗದ ಸದ್ದು; ಅದೇ ಇಲ್ಲಿನವರಿಗೆ ಸಂಗೀತ.

ಇತಿಹಾಸ ಹೆಕ್ಕಿದರೆ, ಇನೊ³àಸಿಸ್‌ ನಾರಾಯಣ ಮೂರ್ತಿ ಅವರು ಪೂರ್ವಾಶ್ರಮದಲ್ಲಿ ಇದೇ ಊರಿನ, ಶಂಕರಮಠದ ಬೀದಿ ಕೊನೆಯಲ್ಲಿ ಇದ್ದರು ಅನ್ನೋ ವಿಚಾರ ರೋಮಾಂಚನ ಹುಟ್ಟಿಸುತ್ತದೆ. ಇದರ ಹೊರತಾಗಿ, ಅಂಥ ಸಾಧನೆಯ ಔನ್ನತ್ಯ ಕಾಣದ ಈ ûಾಮನೆಲದಲ್ಲಿ, ಈ ಅನಂತರ ಹಾದಿ ಎಷ್ಟೋ ಜನಕ್ಕೆ ಆರಂಭದಲ್ಲಿ ಹುಚ್ಚುಚ್ಚಾಗಿ ಕಂಡಿದ್ದಿದೆ.

ವಿಶೇಷ ಎಂದರೆ, ಅನಂತ್‌, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ ಮಾಡಿದ ಕಾರ್ಯಗಳು. ದಾನಿಗಳನ್ನು ಹಿಡಿದು, ತಾವೇ ಕೈಯಿಂದ ಯಥೇತ್ಛವಾಗಿ ದುಡ್ಡು ಹಾಕಿ ಲಕ್ಷಾಂತರ ರೂ. ಮೌಲ್ಯದ ಪುಸ್ತಕಗಳನ್ನು ತಂದು, ತಾಲೂಕಿನ 130 ಶಾಲಾ ಗ್ರಂಥಾಲಯಕ್ಕೆ, ವಿದ್ಯಾರ್ಥಿಗಳಿಗೆ ತಲುಪಿಸಿ ಆನಂದ ಪಟ್ಟರು.

Advertisement

ಇಷ್ಟೇ ಅಲ್ಲ, “ಕವಿಯ ನೆನೆದು’ ಅನ್ನೋ ಕಾರ್ಯಕ್ರಮ ಮಾಡಿ, ನಾಡಿನ ಸಾಹಿತಿಗಳು, ಕವಿಗಳ ಪರಿಚಯ, ಭಾಷಣ ಸಾಹಿತ್ಯವು 12,000ಕ್ಕೂ ಅಧಿಕ ವಿದ್ಯಾರ್ಥಿಗಳ ಮನಸ್ಸಲ್ಲಿ ಬೇರೂರುವಂತೆ ಮಾಡಿದರು. ಬರಡು ನೆಲದಲ್ಲಿ ಓದಿನ ಓಯಸಿಸ್‌ ಚಿಮ್ಮಬೇಕು ಅಂತಲೇ 7ನೇ ತರಗತಿ ದಾಟಿದ ವಿದ್ಯಾರ್ಥಿಗಳಿಗೆ “ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧೆ ಶುರು ಮಾಡಿದರು. ಇದರಲ್ಲಿ ಗೆದ್ದವರಿಗೆ ಪುಸ್ತಕ ಹಂಚಿ ಖುಷಿಪಟ್ಟಿದ್ದು ಇದೇ ಅನಂತ್‌. ಗೌಡರ ಬೀದಿಯ ಲತಾ ಮಂಜುನಾಥರನ್ನು ಕರೆಸಿ, ಕಲಾಕೃತಿಗಳನ್ನು ಹೇಗೆ ಮಾಡುವುದು ಎಂಬುದರ ಬಗ್ಗೆ ಶಾಲಾ ಮಕ್ಕಳಿಗೆ 12 ವಾರಗಳ ಕಾರ್ಯಾಗಾರ ಮಾಡಿಸಿದರು.

ಪರಿಷತ್‌ನ ಹಣ ಸಾಲುತ್ತಿಲ್ಲ ಅಂದಾಗ, ಹೇಳದೇ ಕೇಳದೆ ಕಿಸೆಯಿಂದ ದುಡ್ಡು ಹಾಕಿ ಪುಸ್ತಕ ಹಂಚಿಬಿಟ್ಟರು. ಸಮ್ಮೇಳನಗಳು, ಚರ್ಚೆಗಳು, ಸ್ಪರ್ಧೆಗಳು ಹೀಗೆ ಸಾಲು ಸಾಲು ಸಾರ್ಥಕ ಸೇವೆ ಮಾಡುತ್ತಾ ಹೋದರು; ದಿನಸಿ ವ್ಯವಹಾರದ ಜೊತೆ ಜೊತೆಗೆ. ಊರಲ್ಲಿ “ಇವನೇನೋ ಮಾಡೋಕೆ ಹೊರಟಿದ್ದಾನಲ್ಲಾ’ ಅಂತ ಅನಿಸುವ ಹೊತ್ತಿಗೆ, ನಾನಾ ಕಡೆಯಿಂದ ಸಾಧಕರು ಶಿಡ್ಲಘಟ್ಟದ ಕಡೆಗೆ ಬಂದು ಹೋದರು. ಅಷ್ಟರಲ್ಲಿ, ಅನಂತ್‌ ಅಧ್ಯಕ್ಷ ಹುದ್ದೆಯಿಂದ ಇಳಿಯಬೇಕಾಯಿತು.

ಆದರೇನು? ಕನ್ನಡ ಸಾರಸ್ವತ ಪರಿಚಾರಕೆ ಅಂತ ತಾವೇ ಶುರುಮಾಡಿ, ಅದರಡಿ ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ ಪ್ರಾರಂಭವಾಯಿತು. ಚಿಕ್ಕಬಳ್ಳಾಪುರ, ಗುಡಿಬಂಡೆ, ಬಾಗೇಪಲ್ಲಿ, ಚಿಂತಾಮಣಿ, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಎಲ್ಲೆಲ್ಲಿ ಬರಹಗಾರರಿದ್ದಾರೆ, ಸಾಧಕರಿದ್ದಾರೋ ಅವರನ್ನೆಲ್ಲ ಹುಡುಕಿ, ನೀವು ನಮ್ಮೂರಿಗೆ ಬರಬೇಕು ಅಂತ ಕೈ ಹಿಡಿದು ಕರೆದುಕೊಂಡು ಬಂದು ಪುಟ್ಟ ಸನ್ಮಾನ ಮಾಡಿ, ಸಾಧನೆ ಬಗ್ಗೆ ಹೇಳಿ, ಅವರ ಬದುಕು, ಬರಹದ ಅನುಭವಗಳನ್ನು ಶಿಡ್ಲಘಟ್ಟದ ಕಿವಿಗೆ ಈಗಲೂ ಬಿಡುತ್ತಿದ್ದಾರೆ, ಹೆಚ್ಚುಕಮ್ಮಿ ಮೂರು ವರ್ಷದಿಂದ ನಟ ಸೇತುರಾಮ್‌, ಖೈದಿಯಾಗಿದ್ದು ಕೊಂಡು ಪುಸ್ತಕ ಬರೆದ ಯಲ್ಲಪ್ಪ, ಹೈಕೋರ್ಟ್‌ ವಕೀಲ ಬೇ.ಕ ಮೂರ್ತಿಶ್ವರಯ್ಯ ಹೀಗೆ ಹಲವಾರು ಸಾಧಕರು ಓದಿನ ಅರಮನೆಗೆ ಬಂದು ಹೋಗಿದ್ದಾರೆ.

ಇದೇ ರೀತಿ, ಪ್ರತಿವರ್ಷ ಊರಲ್ಲಿ ಒಳ್ಳೆ ಅಂಕ ಪಡೆದ, ವಿಶಿಷ್ಟ ಸಾಧನೆ ಗೈದ ನೂರಾರು ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಉಸಾಬರಿ ಇವರದೇ. ಅದಕ್ಕಾಗಿ ಅನಂತ್‌, ಪ್ರತಿಭಾ ಪುರಸ್ಕಾರ ಟ್ರಸ್ಟ್‌ ಅಂತಲೂ ಮಾಡಿದ್ದಾರೆ. ಈ ಥರದ ಒಂದು ಟ್ರಸ್ಟ್‌ ಮಾಡೋಣ ಅಂದಾಗ, ದುಡ್ಡೆಲ್ಲಿಂದ ತರೋದು ಅನ್ನೋ ಅಪಸ್ವರ ಬಂತು. ಅದಕ್ಕೆ “ಅನಂತ ಐಡಿಯಾ’ಗಳನ್ನು ಮಾಡಿ, ಡೋನರ್‌ಗಳನ್ನು ಹಿಡಿದು, ಅದರಲ್ಲಿ ಒಂದಷ್ಟು ಹಣ ಕೂಡಿಟ್ಟು, ಇನ್ನೊಂದಷ್ಟು ಕೈ ಯಿಂದ ಹಾಕಿ- “ಅಬ್ಟಾ, ಈ ವರ್ಷ ಮುಗಿಸೋಣ. ಮುಂದಿನ ವರ್ಷ ನೋಡೋಣ’ ಅಂತಲೇ ಒಂದಷ್ಟು ವರ್ಷಗಳ ತಳ್ಳುತ್ತಿರುವಾಗ ಅತಿಥಿಯಾಗಿ ಬಂದ ಇನ್‌ಫೋಸಿಸ್‌ ನಾರಾಯಣ ಮೂರ್ತಿ, ಅನಂತರ ಯೋಜನೆಗಳಿಗೆ ಮನಸೋತು 10ಲಕ್ಷ ಕೊಟ್ಟರು. ಅದನ್ನು ಹಾಗೇ ಡಿಪಾಸಿಟ್‌ ಮಾಡಿ, ಇದರಿಂದ ಸ್ಫೂರ್ತಿಗೊಂಡು ಇನ್ನೊಂದಷ್ಟು ಜನ ಕೊಟ್ಟ ದೇಣಿಗೆಯನ್ನು ಒಗ್ಗೂಡಿಸಿದ್ದರಿಂದ ಇವತ್ತು 17 ಲಕ್ಷದ ತನಕ ಕ್ರೋಢೀಕರಣ ಮಾಡಿದ್ದಾರೆ. ಇದರ ಬಡ್ಡಿ ಗೊಂಚಲು ತೆಗೆದು ಪ್ರತಿವರ್ಷ ಎಲ್ಲ ವರ್ಗದವರಿಗೂ ಪ್ರತಿಭಾ ಪುರಸ್ಕಾರವನ್ನು ನೀಡುತ್ತಾ ಬಂದಿದ್ದಾರೆ. ಸಾಲದ್ದಕ್ಕೆ, ಊರಿನ ಹಿಹಿರಿಯ ನಾಗರಿಕರನ್ನು ಗುರುತಿಸಿ ಸನ್ಮಾನ ಕೂಡ ಮಾಡುತ್ತಾರೆ.

” ನನ್ನ ಅತ್ತೆ ಮರಣ ಹೊಂದಿದಾಗ, ಚಾಮರಾಜಪೇಟೆಯ ಸ್ಮಶಾನಕ್ಕೆ ಹೋಗಿದ್ದೆ. ಅಲ್ಲಿದ್ದ ಶವ ಸಂಸ್ಕಾರಕ್ಕೆ ಬಳಸುತ್ತಿದ್ದ ಸಿಲಿಕಾನ್‌ ಚೇಂಬರ್‌ ನೋಡಿ, ಇದನ್ನು ನಮ್ಮ ಊರಲ್ಲಿ ಏಕೆ ಮಾಡಿಸಬಾರದು ಅಂತ ಭಗೀರತ ಪ್ರಯತ್ನಮಾಡಿದೆ. ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು, ನಮ್ಮ ಶಾಸಕರು ನೆರವಿಗೆ ನಿಂತರು. ಈಗ ನೋಡಿ, ನಮ್ಮೂರ ರುಧ್ರಭೂಮಿ ಹೇಗೆ ಅಂತ? ಹೀಗೆ, ಸಮಾಜ ಕಾರ್ಯಕ್ಕೇ ಅಂತಲೇ ಶೇ. 25-30ರಷ್ಟು ಲಾಭದ ಹಣವನ್ನು ಸಮಾಜಕಾರ್ಯಕ್ಕೆ ಎತ್ತಿಡ್ತೇನೆ “ನಾನು ಅಂಗಡಿ ಇಟ್ಟರೂ, ನನ್ನ ಮೈಂಡ್‌ ವ್ಯವಹಾರಿಕವಾಗಿಲ್ಲ’ ಎನ್ನುತ್ತಾರೆ ಅನಂತಕೃಷ್ಣ.

ಈಗಲೂ ಅಷ್ಟೇ, ಊರಲ್ಲಿ ಶಂಕರಜಯಂತಿ ಬರಲಿ, ರಾಘವೇಂದ್ರಸ್ವಾಮಿ ಆರಾಧನೆಯೇ ನಡೆಯಲಿ, ಅಲ್ಲಿಗೆ ಅನನಂತ್‌ ಹಾಜರ್‌. ತಮ್ಮ ಜನಾಂಗದವರ ಸಾವೇನಾದರೂ ಆದರೆ, ಅನಂತರ ಎರಡು ಹೆಗಲ ಮೇಲೂ ಜವಾಬ್ದಾರಿ ಇದ್ದೇ ಇರುತ್ತದೆ. ಹೀಗಾಗಿ, ಊರಲ್ಲಿ ಯಾರೇ ಸಾಮಾಜಿಕ ಕಾರ್ಯ ಮಾಡ ಹೊರಟರೆ, ಅವರಿಗೆಲ್ಲ ಅನಂತ ಒಂದು ರೀತಿ ಹೊಂಗೆ ಮರದ ನೆರಳಂತೆ ಆಗಿದ್ದಾರೆ.

ರಕ್ತದಾನ
ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಯೋಧರಿಗೆ ರಕ್ತ ಬೇಕು ಅಂತಿ ತಿಳಿದಾಗ ಶಿಡ್ಲಘಟ್ಟದಲ್ಲಿ ಅನಂತ್‌ ನೇತೃತ್ವದಲ್ಲಿ ಶಿಬಿರ ನಡೆಯಿತು. ಹೆಚ್ಚು ಕಮ್ಮಿ 156 ಯೂನಿಟ್‌ ಬ್ಲಿಡ್‌ ಸಂಗ್ರಹವಾಯಿತು. ಜೊತೆಗೆ ದವಸ, ಧಾನ್ಯಗಳನ್ನು ಸಂಗ್ರಹಿಸಿ ಕೊಟ್ಟರು. ಇದು ಅಷ್ಟಕ್ಕೇ ನಿಲ್ಲಲಿಲ್ಲ. ಈಗಲೂ ಕೂಡ ಅನಂತ್‌ ಬ್ಲಿಡ್‌ ಡೊನೇಟ್‌ ಕ್ಯಾಂಪ್‌ಗ್ಳನ್ನು ಮಾಡುತ್ತಲೇ ಇದ್ದಾರೆ.

ಕಟ್ಟೆ ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next