Advertisement

ಕೊರೊನಾ ತಡೆಗೆ ಜಿಲ್ಲಾಡಳಿತ ಸಜ್ಜು

09:20 PM Mar 16, 2020 | Lakshmi GovindaRaj |

ಮೈಸೂರು: ಕೊರೊನಾ ವೈರಾಣು (ಕೋವಿಡ್‌-19) ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕು ಆಡಳಿತವನ್ನು ಸಜ್ಜುಗೊಳಿಸಲಾಗಿದ್ದು, ಜಿಲ್ಲಾದ್ಯಂತ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ತಿಳಿಸಿದರು.

Advertisement

ತಾಲೂಕು ಆಡಳಿತಗಳ ಜತೆಗೆ ಸಭೆ ನಡೆಸಿದ ನಂತರ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರು ನಗರದ ಜತೆಗೆ ಜಿಲ್ಲೆಯ ಗ್ರಾಮಾಂತರ ಪ್ರದೇಶ ಮತ್ತು ಪಟ್ಟಣ ಪ್ರದೇಶಗಳಲ್ಲೂ ಕೊರೊನಾ ಸೋಂಕು ಹರಡದಂತೆ ನಿಗಾವಹಿಸಬೇಕಿರುವುದರಿಂದ ಸಭೆ ನಡೆಸಿ, ತಾಲೂಕು ಆಡಳಿತವನ್ನು ಸಜ್ಜುಗೊಳಿಸಿರುವುದಾಗಿ ಹೇಳಿದರು.

ಜಿಲ್ಲೆಯಲ್ಲಿ 107 ಜನರನ್ನು ಸೋಂಕಿತರು ಎಂದು ನಿಗಾವಹಿಸಲಾಗಿತ್ತು. ಈ ಪೈಕಿ 54 ಜನರು ಮನೆಯಲ್ಲಿ 14 ದಿನಗಳ ಕಾಲ ಐಸೋಲೇಷನ್‌ ಮುಗಿಸಿದ್ದಾರೆ. 52 ಜನರನ್ನು 14 ದಿನಗಳ ಕಾಲ ಅವರ ಮನೆಯಲ್ಲಿರಿಸಿ ನಿಗಾವಹಿಸಲಾಗಿದೆ. ಒಬ್ಬರನ್ನು ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿ ಇರಿಸಲಾಗಿದೆ.

ಕೊರೊನಾ ಸೋಂಕು ತಗುಲಿರುವ ಶಂಕೆಯಲ್ಲಿ ಜಿಲ್ಲೆಯಲ್ಲಿ ಈವರೆಗೆ 8 ಜನರನ್ನು ತಪಾಸಣೆ ಮಾಡಲಾಗಿದ್ದು, ಅವರಲ್ಲಿ 7 ಜನರ ವರದಿ ನೆಗೆಟಿವ್‌ ಬಂದಿದೆ. ಒಂದು ಪ್ರಕರಣದ ವರದಿ ಬರಬೇಕಿದೆ. ಕೊಡಗಿನಿಂದ ಕಳುಹಿಸಲಾಗಿದ್ದ 2 ರಕ್ತದ ಮಾದರಿ ಕೂಡ ನೆಗೆಟಿವ್‌ ಬಂದಿದೆ ಎಂದರು.

ಹೊರ ರಾಜ್ಯದವರ ಮೇಲೂ ನಿಗಾ: ಸೋಂಕು ತಗುಲಿದವರನ್ನು ಮನೆ ಅಥವಾ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಲು ಜಿಲ್ಲೆಯಲ್ಲಿ ಹತ್ತು ಸ್ಕ್ರೀನಿಂಗ್‌ ತಂಡ ರಚಿಸಲಾಗಿದೆ. ಈ ಮೊದಲು ಕೊರೊನಾ ಬಾಧಿತ ದೇಶಗಳಿಂದ ಭಾರತಕ್ಕೆ ಬಂದವರ ಮೇಲಷ್ಟೇ ನಿಗಾವಹಿಸಲಾಗುತ್ತಿತ್ತು.

Advertisement

ಈಗ ಕೇರಳ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಕರ್ನಾಟಕದ ಗಡಿ ರಾಜ್ಯಗಳಲ್ಲೂ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ಕಾರಣ ಮಾ.17ರಿಂದ ಜಿಲ್ಲಾದ್ಯಂತ ಮುಂದಿನ ಆದೇಶದವರೆಗೆ ಎಲ್ಲ ರೀತಿಯ ಧಾರ್ಮಿಕ ಸಭೆ, ಸಮಾರಂಭ, ಜಾತ್ರೆ, ಸಂತೆ, ಉತ್ಸವಗಳನ್ನು ರದ್ದುಪಡಿಸಲಾಗಿದೆ. ನಿತ್ಯದ ಪೂಜೆ, ಪುನಸ್ಕಾರಗಳಿಗೆ ಯಾವುದೇ ನಿರ್ಬಂಧವಿಲ್ಲ. ಮದುವೆಗಳಿಗೆ ಇಂತಿಷ್ಟೇ ಜನ ಸೇರಬೇಕು ಎಂಬ ಮಿತಿ ಹೇರಿಲ್ಲ. ಆದರೆ, ಮದುವೆಗಳನ್ನು ಸರಳವಾಗಿ ಮಾಡುವಂತೆ ಮನವಿ ಮಾಡುತ್ತಿದ್ದೇವೆ ಎಂದರು.

ಯುಗಾದಿ ಸಂದರ್ಭದಲ್ಲಿ ಸ್ನಾನ ಮಾಡಲು ತಿ.ನರಸೀಪುರ ಮತ್ತು ನಂಜನಗೂಡಿಗೆ ಅಪಾರ ಸಂಖ್ಯೆಯಲ್ಲಿ ಜನ ಸೇರದೆ ಎಚ್ಚರಿಕೆವಹಿಸಬೇಕು. ಸಾರ್ವಜನಿಕರ ಸಹಕಾರವಿಲ್ಲದಿದ್ದರೆ ಸೋಂಕು ಹರಡುವಿಕೆ ತಡೆಗಟ್ಟುವುದು ಕಷ್ಟಸಾಧ್ಯ. ವಿಶ್ವಾದ್ಯಂತ ಬರುತ್ತಿರುವ ವರದಿಗಳಿಂದಾಗಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿ ನ್ಯಾಯಾಲಯ ಸೇರಿದಂತೆ ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌, ಉಪ ತಹಶೀಲ್ದಾರ್‌ ಹಂತದವರೆಗೆ ಕಂದಾಯ ಇಲಾಖೆಯ ಪ್ರಕರಣಗಳ ವಿಚಾರಣೆಯನ್ನು ಪ್ರತಿ ಮಂಗಳವಾರ ಮತ್ತು ಬುಧವಾರ ನಡೆಸಲಾಗುತ್ತದೆ. ಸದ್ಯ ಈ ವಿಚಾರಣೆಗಳಿಗೆ ಎರಡು ವಾರಗಳ ಕಾಲ ನಿರ್ಬಂಧ ವಿಧಿಸಿದ್ದು, ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲಾಗುವುದು. ಕಚೇರಿ ಕೆಲಸಗಳು ಎಂದಿನಂತೆ ನಡೆಯಲಿವೆ ಎಂದು ತಿಳಿಸಿದರು.

ಮುನ್ನೆಚ್ಚರಿಕಾ ಕ್ರಮ: ಸಾರ್ವಜನಿಕರ ದಿನ ನಿತ್ಯದ ಜೀವನಕ್ಕೆ ಬೇಕಾದ ಅಗತ್ಯವಸ್ತುಗಳ ವ್ಯಾಪಾರ, ವಹಿವಾಟಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಮಾಂಸ, ಕೋಳಿ ಮಾಂಸ ಮಾರಾಟ, ಬೀದಿ ಬದಿ ಮಾಂಸಾಹಾರ ಸೇವಿಸುವುದಕ್ಕೂ ಕೊರೊನಾಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಬೇಸಿಗೆ ಕಾಲವಾಗಿರುವುದರಿಂದ ಕಾಲರಾ, ಆರೋಗ್ಯ ದೃಷ್ಟಿಯಿಂದ ಸಾಂಕ್ರಮಿಕ ರೋಗಗಳು ಹರಡದಂತೆ ತಡೆಗಟ್ಟಲು ಸ್ಥಳೀಯ ಸಂಸ್ಥೆಗಳು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದೆ ಎಂದರು.

ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ಹೊಸದಾಗಿ ಐದು ವೆಂಟಿಲೇಟರ್‌ಗಳನ್ನು ಖರೀದಿಸಲು ಸರ್ಕಾರದ ಅನುಮತಿ ಕೇಳಿದ್ದು, ಶೀಘ್ರ ಅನುಮತಿ ದೊರೆಯುವ ವಿಶ್ವಾಸವಿದೆ ಎಂದ ಅವರು, ಕೊರೊನಾ ಸೋಂಕಿತರ ಬಗ್ಗೆ ನಿಗಾವಹಿಸಬೇಕಾದವರ ಸಂಖ್ಯೆ ಹೆಚ್ಚಾದರೆ ಜಿಲ್ಲಾಸ್ಪತ್ರೆಯ ಹೊಸ ಕಟ್ಟಡವನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು. ಮೈಸೂರು ಮಹಾ ನಗರಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸ್ನೇಹ ಸುದ್ದಿಗೋಷ್ಠಿಯಲ್ಲಿದ್ದರು.

ಮಾಹಿತಿ ನೀಡದಿದ್ದರೆ ಕ್ರಮ: ರೆಸಾರ್ಟ್‌, ಯೋಗ ಕೇಂದ್ರಗಳು, ಹೋಂಸ್ಟೇಗಳಿಗೆ ವಿದೇಶಿಯರು ಹಲವು ಮಾರ್ಗಗಳಿಂದ ಒಳಗೆ ಬಂದಿದ್ದರೆ, ಅಂಥವರನ್ನು ಹುಡುಕಿ ಪಟ್ಟಿಮಾಡಲಾಗುತ್ತಿದೆ. ವಿದೇಶಿಯರು ತಮ್ಮಲ್ಲಿ ತಂಗಿರುವ ಬಗ್ಗೆ ಹೋಟೆಲ್‌ಗ‌ಳವರು ಕಡ್ಡಾಯವಾಗಿ ಮಾಹಿತಿ ಕೊಡಬೇಕು. ಇಲ್ಲವಾದಲ್ಲಿ ಅಂಥವರನ್ನು ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಜತೆಗೆ ಕೊರೊನಾ ಸೋಂಕು ಹರಡುವಿಕೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧವೂ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next