Advertisement

ಅಮೆರಿಕಾದಲ್ಲಿ ಶರಣ್‌ ರಾಜಕೀಯ !

08:03 PM Jul 25, 2019 | mahesh |

ಸಾಹಿತ್ಯ ಮತ್ತು ಸಂಭಾಷಣೆ ಬರೆಯುತ್ತಲೇ ನಿರ್ದೇಶನಕ್ಕಿಳಿದವರ ಸಂಖ್ಯೆಗೇನೂ ಕನ್ನಡದಲ್ಲಿ ಕಮ್ಮಿ ಇಲ್ಲ. ಈಗಾಗಲೇ ಬೆರಳೆಣಿಕೆಯಷ್ಟು ಮಂದಿ ಯಶಸ್ವಿ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಆ ಸಾಲಿಗೆ ಈಗ ಯೋಗಾನಂದ್‌ ಮುದ್ದಾನ್‌ ಕೂಡ ಹೊಸ ಸೇರ್ಪಡೆ. ಯೋಗಾನಂದ್‌ ಯಶಸ್ವಿ ಚಿತ್ರಗಳಿಗೆ ಸಂಭಾಷಣೆ ಬರೆದವರು. ಇದುವರೆಗೆ ಸುಮಾರು ಹದಿಮೂರಕ್ಕು ಹೆಚ್ಚು ಚಿತ್ರಗಳಿಗೆ ಮಾತುಗಳನ್ನು ಪೋಣಿಸಿರುವ ಯೋಗಾನಂದ್‌, “ಬಿರುಗಾಳಿ’ ಮೂಲಕ ಸಂಭಾಷಣೆಗಾರರಾಗಿ ಗುರುತಿಸಿಕೊಂಡರು. ಅದಕ್ಕೂ ಮುನ್ನ “ಆಪ್ತಮಿತ್ರ’ ಚಿತ್ರದ ಕೆಲ ಸೀನ್‌ಗಳಿಗೂ ಸಂಭಾಷಣೆ ಬರೆದಿದ್ದರು. ಆ ಬಳಿಕ “ತುಘಲಕ್‌’,”ಚಾರುಲತಾ’,”ಚಿಂಗಾರಿ’, “ವಜ್ರಕಾಯ’,”ಭಜರಂಗಿ’,”ಮುಕುಂದ ಮುರಾರಿ’,”ಚೌಕ’, “ಕಲಾಕಾರ್‌’, “ಟೈಗರ್‌’ ಮತ್ತು “ವಿಐಪಿ’ ಚಿತ್ರಗಳಿಗೆ ಇವರ ಮಾತುಗಳಿವೆ. ಈಗ ಶರಣ್‌ ಅಭಿನಯದ “ಅಧ್ಯಕ್ಷ ಇನ್‌ ಅಮೆರಿಕಾ’ ಚಿತ್ರವನ್ನು ನಿರ್ದೇಶಿಸಿದ್ದು, ಆ ಚಿತ್ರ ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ.

Advertisement

“ಅಧ್ಯಕ್ಷ ‘ ಕನ್ನಡದಲ್ಲಿ ಹಿಟ್‌ ಆಗಿರುವ ಚಿತ್ರ. ಆ “ಅಧ್ಯಕ್ಷ’ ಚಿತ್ರಕ್ಕೂ ಈಗ ಯೋಗಾನಂದ್‌ ಮಾಡುತ್ತಿರುವ “ಅಧ್ಯಕ್ಷ ಇನ್‌ ಅಮೆರಿಕಾ’ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ಅಂದಹಾಗೆ, ಇದು ರಿಮೇಕ್‌ ಚಿತ್ರನಾ? ಅದಕ್ಕೆ ಉತ್ತರಿಸುವ ನಿರ್ದೇಶಕ ಯೋಗಾನಂದ್‌ ಮುದ್ದಾನ್‌, “ಮಲಯಾಳಂ ಭಾಷೆಯಲ್ಲಿ ಬಂದ “ಟು ಸ್ಟೇಟ್‌’ ಚಿತ್ರದ ಎಳೆ ಇಟ್ಟುಕೊಂಡು, ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರ ಮಾಡಿದ್ದೇವೆ. ಇನ್ನು, ಇಲ್ಲೂ ಹಾಸ್ಯ ಪ್ರಧಾನವಾಗಿರಲಿದೆ. ಇಲ್ಲಿ ಶರಣ್‌ ಅವರ ಜೊತೆಯಲ್ಲಿ ಚಿಕ್ಕಣ್ಣ ಬದಲು ಹಾಸ್ಯ ನಟ ಶಿವರಾಜ್‌ ಕೆ.ಆರ್‌.ಪೇಟೆ ನಟಿಸಿದ್ದಾರೆ. ಶೇ.70 ರಷ್ಟು ಅಮೆರಿಕಾದಲ್ಲಿ ಚಿತ್ರೀಕರಿಸಿದ್ದು ಮರೆಯದ ಅನುಭವ. ಇನ್ನು, ಕಥೆ ವಿಷಯಕ್ಕೆ ಬರುವುದಾದರೆ, ಚಿತ್ರದ ನಾಯಕ ಅಧ್ಯಕ್ಷ ನಂತರ ಅಮೆರಿಕಾಕ್ಕೆ ಹೋಗಿ ಏನೆಲ್ಲಾ ಮಾಡುತ್ತಾರೆ ಅನ್ನೋದೇ ಹೈಲೈಟ್‌. ಇಡೀ ಚಿತ್ರದಲ್ಲಿ ಮನರಂಜನೆಯೇ ಪ್ರಧಾನವಾಗಿದೆ. ಎಂದಿನ ಶರಣ್‌ ಪುನಃ ಇಲ್ಲಿ ನೋಡುಗರನ್ನು ರಂಜಿಸಲಿದ್ದಾರೆ. ಶರಣ್‌ ಜೊತೆ ಕಾಣುವ ಪ್ರತಿ ಪಾತ್ರದಲ್ಲೂ ಹಾಸ್ಯ ಹಾಸುಹೊಕ್ಕಾಗಿದೆ. ಇದೊಂದು ಕಂಪ್ಲೀಟ್‌ ಪವರ್‌ ಪ್ಯಾಕ್‌ ಕಾಮಿಡಿ ಚಿತ್ರ. ಇಲ್ಲಿ ಹಳ್ಳಿಯ ಸೊಗಡಿದೆ. ಅಮೆರಿಕಾದ ಸೊಬಗೂ ಇದೆ. ಮಂಡ್ಯದ ಪಕ್ಕಾ ಲೋಕಲ್‌ ರಾಜಕೀಯವಿದೆ. ಅಮೆರಿಕಾದ ಲೈಫ್ಸ್ಟೈಲ್‌ ಕೂಡ ಇದೆ. ಇಡೀ ಚಿತ್ರ ಕಾಮಿಡಿಯ ಮೂಲಕವೇ ಸಾಗುತ್ತದೆ’ಎಂದು ವಿವರಿಸುತ್ತಾರೆ ನಿರ್ದೇಶಕ ಯೋಗಾನಂದ್‌ ಮುದ್ದಾನ್‌.

ಅಮೆರಿಕಾದಲ್ಲಿ ಅಧ್ಯಕ್ಷರ ಕಾರುಬಾರು ಇದೆ ಅಂದಮೇಲೆ ಇದು ಸಣ್ಣ ಬಜೆಟ್‌ನ ಚಿತ್ರವಂತೂ ಅಲ್ಲ, ದೊಡ್ಡ ಬಜೆಟ್‌ನಲ್ಲೇ ಚಿತ್ರ ತಯಾರಾಗಿದ್ದು, ಚಿತ್ರವನ್ನು ವಿಶ್ವ ಪ್ರಸಾದ್‌ ನಿರ್ಮಾಣ ಮಾಡಿದ್ದಾರೆ. ಇವರಿಗೆ ವಿವೇಕ್‌ , ವಿಜಯಾ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಚಿತ್ರದಲ್ಲಿ ಹರಿಕೃಷ್ಣ ಅವರ ಸಂಗೀತವಿದ್ದು, ಚಿತ್ರಕ್ಕೆ ಡಾ.ವಿ ನಾಗೇಂದ್ರ ಪ್ರಸಾದ್‌, ಕವಿರಾಜ್‌, ಯೋಗರಾಜ್‌ ಭಟ್‌, ಚೇತನ್‌ ಗೀತೆ ರಚಿಸಿದ್ದಾರೆ. ಚಿತ್ರದಲ್ಲಿ ರಾಗಿಣಿ, ರಂಗಾಯಣ ರಘು, ಅವಿನಾಶ್‌, ಚಿತ್ರಾಶೆಣೈ, ಸಾಧುಕೋಕಿಲ ಸುಂದರ್‌ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದ್ದು, ಹಿರಿಯ ನಿರ್ಮಾಪಕ ಶೈಲೇಂದ್ರಬಾಬು ಅವರು ವಿತರಣೆ ಹಕ್ಕು ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next