Advertisement

Belgaum: ರಾಜಕೀಯ ಧ್ರುವೀಕರಣ: ಮರಾಠಿ ಅಭ್ಯರ್ಥಿಗಳಿಗೆ ಶರದ್‌ ಪವಾರ್‌ ಬೆಂಬಲ

11:54 PM Apr 09, 2023 | Team Udayavani |

ಬೆಳಗಾವಿ: ವಿಧಾನಸಭೆ ಚುನಾವಣೆ ಕಾವು ನಿಧಾನವಾಗಿ ಏರುತ್ತಿರುವಂತೆ ಗಡಿ ಭಾಗದ ಬೆಳಗಾವಿಯಲ್ಲಿ ಸದ್ದಿಲ್ಲದೆ ರಾಜಕೀಯ ಧ್ರುವೀಕರಣ ಪ್ರಕ್ರಿಯೆ ಆರಂಭವಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ.

Advertisement

ಬಿಜೆಪಿಯನ್ನು ಹೊರಗಿಟ್ಟು ಉಳಿದವರೆಲ್ಲರಿಂದ ಈ ಧ್ರುವೀಕರಣ ನಡೆದಿದೆ ಎಂಬುದು ಇಲ್ಲಿ ಸೂಕ್ಷ ¾ವಾಗಿ ಗಮನಿಸಬೇಕಾದ ಅಂಶ. ಬೆಳಗಾವಿ ದಕ್ಷಿಣ ಹಾಗೂ ಉತ್ತರ, ಖಾನಾಪುರ, ಬೆಳಗಾವಿ ಗ್ರಾಮೀಣ ನಿಪ್ಪಾಣಿ ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಈ ಧ್ರುವೀಕರಣ ನಡೆದಿದೆ. ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಇದು ಬಹಳ ಮಹತ್ವದ ಬೆಳವಣಿಗೆ. ಈ ಧ್ರುವೀಕರಣದಲ್ಲಿ ಕಾಂಗ್ರೆಸ್‌ ಜತೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿ, ಶರದ್‌ ಪವಾರ ಅವರ ಎನ್‌ಸಿಪಿ ಹಾಗೂ ಮರಾಠಾ ಸಮಾಜ ಪರಸ್ಪರ ಕೈಜೋಡಿಸಿವೆ. ಕರ್ನಾಟಕದಲ್ಲಿ ಈಗ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಅಧಿಕಾರಕ್ಕೆ ಬರಲು ಉತ್ತಮ ಅವಕಾಶವಿದೆ ಎಂದು ಶರದ್‌ ಪವಾರ ಹೇಳಿರುವುದು ಈ ಧ್ರುವೀಕರಣದ ಬೆಳವಣಿಗೆಗೆ ಪುಷ್ಟಿ ನೀಡಿದೆ.

ಕಳೆದ ವಿಧಾನಸಭೆ ಚುನಾವಣೆಯ ಹೀನಾಯ ಸೋಲು ಮತ್ತು ಮಹಾನಗರ ಪಾಲಿಕೆ ಚುನಾವಣೆಯಲ್ಲಿನ ಮುಖಭಂಗದ ನಂತರ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಗಡಿ ಭಾಗದಲ್ಲಿ ಅಸ್ತಿತ್ವವೇ ಇಲ್ಲದಂತಾಗಿದೆ. ಹೀಗಾಗಿ ಬೇರೆ ದಾರಿಯಿಲ್ಲದೆ ಸಮಿತಿಯ ನಾಯಕರು ಅನಿವಾರ್ಯವಾಗಿ ಎನ್‌ಸಿಪಿ ಮುಂದೆ ಮಂಡಿಯೂರಿದ್ದಾರೆ. ಇನ್ನೊಂದು ಕಡೆ ಗಡಿ ಜಿಲ್ಲೆಯಲ್ಲಿ ಎನ್‌ಸಿಪಿ ತನ್ನ ಅಸ್ತಿತ್ವ ಕಂಡುಕೊಳ್ಳುವುದು ಬಹಳ ಕಷ್ಟ ಎಂಬುದನ್ನು ಮನಗಂಡಿರುವ ಎನ್‌ಸಿಪಿ ಸಂಸ್ಥಾಪಕ ಶರದ್‌ ಪವಾರ, ಈ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಅಭ್ಯರ್ಥಿಗಳ ಬೆಂಬಲಕ್ಕೆ ನಿಲ್ಲಲು ನಿರ್ಧರಿಸಿರುವುದು ಗಮನಿಸಬೇಕಾದ ಸಂಗತಿ. ಇದರ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ತನ್ನ ಅಸ್ತಿತ್ವದ ಜತೆಗೆ ಎಂಇಎಸ್‌ ಮತ್ತು ಶಿವಸೇನೆ ಮೇಲೆ ನಿಯಂತ್ರಣ ಸಾಧಿಸಬಹುದು ಎಂಬುದು ಶರದ್‌ ಪವಾರ ಲೆಕ್ಕಾಚಾರ. ಇದಕ್ಕೆ ಪೂರಕವಾಗಿ ಎಂಇಎಸ್‌ ನಾಯಕರು ಈಗಾಗಲೇ ಶರದ್‌ ಪವಾರ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಮಹಾಮೈತ್ರಿ ಒಕ್ಕೂಟ?: ಬೆಳಗಾವಿ ಗಡಿ ವಿವಾದದ ವಿಷಯದಲ್ಲಿ ಮೊದಲಿಂದಲೂ ವಿಶೇಷ ಅಸಕ್ತಿಹೊಂದಿರುವ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ ಈಗ ಜಿಲ್ಲಾ ರಾಜಕಾರಣದಲ್ಲೂ ಮೂಗು ತೂರಿಸಲು ಮುಂದಾಗಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಜಿಲ್ಲೆಯ ಬಿಜೆಪಿಯೇತರ ನಾಯಕರ ಜತೆ ಶರದ್‌ ಪವಾರ ನಿರಂತರ ಸಂಪರ್ಕದಲ್ಲಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ವಾತಾವರಣ ಅನುಕೂಲಕರವಾಗಿದ್ದರೆ ಕಾಂಗ್ರೆಸ್‌, ಎಂಇಎಸ್‌ ಹಾಗೂ ಉದ್ಧವ ಠಾಕ್ರೆ ಅವರ ಶಿವಸೇನೆ ಜತೆ ಚುನಾವಣಾ ಹೊಂದಾಣಿಕೆಗೂ ಶರದ್‌ ಪವಾರ ಆಲೋಚನೆ ಮಾಡಿದ್ದಾರೆ. ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಅಥಣಿ, ನಿಪ್ಪಾಣಿ, ಬೆಳಗಾವಿ ಗ್ರಾಮೀಣ, ದಕ್ಷಿಣ ಹಾಗೂ ಉತ್ತರ, ಖಾನಾಪುರ, ಚಿಕ್ಕೋಡಿ-ಸದಲಗಾ ಕ್ಷೇತ್ರಗಳಲ್ಲಿ ಮರಾಠಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಶರದ್‌ ಪವಾರ ತಮ್ಮದೇ ಆದ ರಾಜಕೀಯ ತಂತ್ರ ಹೆಣೆಯುತ್ತಿದ್ದು ಕಾಂಗ್ರೆಸ್‌ ಹಾಗೂ ಎಂಇಎಸ್‌ ಜತೆ ಸೇರಿ ಕರ್ನಾಟಕ ಮಹಾಮೈತ್ರಿ ಒಕ್ಕೂಟ ರಚಿಸಲಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಅಂದುಕೊಂಡಂತೆ ಇದು ನಿಜವಾದರೆ ಈ ಚುನಾವಣೆಯಲ್ಲಿ ಗಡಿ ವಿವಾದ ವಿಷಯ ಬಹಳ ಪ್ರಾಮುಖ್ಯತೆ ಪಡೆಯಲಿದೆ. ಭಾವನಾತ್ಮಕವಾಗಿ ಮತದಾರರನ್ನು ಕಟ್ಟಿಹಾಕುವ ಪ್ರಯತ್ನ ಜೋರಾಗಿ ನಡೆಯಲಿದೆ.

ಈ ಬಾರಿ ಬೆಳಗಾವಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮರಾಠಿ ಪರ ಭಾಷಿಕರ ಸಂಘಟನೆ ನಿರ್ಧರಿಸಿದೆ. ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮಾಂತರ, ಖಾನಾಪುರ, ನಿಪ್ಪಾಣಿ ಮತ್ತು ಯಮಕನಮರಡಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕಾರ್ಯದಲ್ಲಿ ಮುಖಂಡರು ತೊಡಗಿದ್ದಾರೆ. ಚುನಾವಣೆ ಮತ್ತು ಅಭ್ಯರ್ಥಿಗಳ ಆಯ್ಕೆ ಸಂಬಂಧ ಎಂಇಎಸ್‌ ಮುಖಂಡರು ಶರದ್‌ ಪವಾರ್‌ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಅವರ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ ಪವಾರ ಅವರು ಚುನಾವಣೆ ಸಮಯದಲ್ಲಿ ಜಿಲ್ಲೆಗೆ ಆಗಮಿಸಿ ಎಂಇಎಸ್‌ ಅಭ್ಯರ್ಥಿಗಳ ಪರ ಪ್ರಚಾರ ಸಭೆಗಳನ್ನು ನಡೆಸಲಿದ್ದು ಎಂಇಎಸ್‌ ಸ್ಪರ್ಧಿಸಲು ಅಂತಿಮಗೊಳಿಸಿದ ಎಲ್ಲ ಆರು ಕ್ಷೇತ್ರಗಳು ಮತ್ತು ಆಕಾಂಕ್ಷಿ ಅಭ್ಯರ್ಥಿಗಳ ಮಾಹಿತಿಯನ್ನು ಪವಾರ ಅವರು ಪಡೆದುಕೊಂಡಿದ್ದಾರೆ. ಈ ಬಾರಿ ಬಂಡಾಯಗಾರರನ್ನು ನಿಭಾಯಿಸಲು ಮತ್ತು ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪವಾರ್‌ ಎಂಇಎಸ್‌ಗೆ ಸೂಚಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಎಂಇಎಸ್‌ ಪರವಾಗಿ ಪವಾರ ಅವರು ಬೆಳಗಾವಿಯಲ್ಲಿ ರ್ಯಾಲಿ ನಡೆಸಿದ್ದರು. ಆದರೆ ನಾಯಕರ ನಡುವಿನ ಭಾರೀ ಆಂತರಿಕ ವಿವಾದಗಳಿಂದಾಗಿ ಸಂಘಟನೆಯು ನಿರೀಕ್ಷಿತ ಫಲಿತಾಂಶವನ್ನು ಪಡೆಯುವಲ್ಲಿ ವಿಫಲವಾಗಿತ್ತು.

Advertisement

ದಕ್ಷಿಣದ ಮೇಲೆ ಕಣ್ಣು
ಎಂಇಎಸ್‌ನಲ್ಲಿನ ಈ ಎಲ್ಲ ಬೆಳವಣಿಗೆಗಳ ನಡುವೆ ಬೆಳಗಾವಿ ದಕ್ಷಿಣ ಕ್ಷೇತ್ರವನ್ನು ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್‌ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಆಸಕ್ತಿ ತೋರಿಸುತ್ತಿಲ್ಲ. ಬದಲಾಗಿ ತಮ್ಮ ಪರವಾಗಿರುವ ಎಂಇಎಸ್‌ ಅಭ್ಯರ್ಥಿಯ ಪರ ನಿಲ್ಲಲು ಸಹ ಯೋಚಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ ವಿರುದ್ಧ ಜಾತಿ ಸಮೀಕರಣದ ಲೆಕ್ಕಾಚಾರ ಆರಂಭವಾಗಿದೆ. ಅದರ ಭಾಗವಾಗಿಯೇ ಕಳೆದ ಕೆಲ ತಿಂಗಳ ಹಿಂದೆ ಮರಾಠಾ ಸಮಾಜದ ಬೃಹತ್‌ ಗುರುವಂದನಾ ಕಾರ್ಯಕ್ರಮ ನಡೆದಿದೆ. ಈ ಮೂಲಕ ಬಿಜೆಪಿ ವರಿಷ್ಠರಿಗೆ ಹಾಗೂ ಸ್ಥಳೀಯ ಶಾಸಕರಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಕನಿಷ್ಠ ಬೆಳಗಾವಿ ದಕ್ಷಿಣ ಕ್ಷೇತ್ರವನ್ನು ಪಡೆದುಕೊಳ್ಳಬೇಕು ಎಂಬ ಗುರಿಯೊಂದಿಗೆ ಸ್ಥಳೀಯ ಪ್ರಭಾವಿ ಕಾಂಗ್ರೆಸ್‌ ನಾಯಕರು ಮತ್ತು ಎನ್‌ಸಿಪಿ ಮನೆ ಬಾಗಿಲು ಬಡಿದಿರುವ ಎಂಇಎಸ್‌ ಇದಕ್ಕಾಗಿ ತೆರೆಮರೆಯಲ್ಲಿ ಎಲ್ಲ ರೀತಿ ಕಾರ್ಯತಂತ್ರ ಅರಂಭಿಸಿದೆ.

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next