Advertisement

ಅಗಲಿದ ಚಂಡೆ ವಾದಕ ಶಾಂತಾರಾಮ ಭಂಡಾರಿ

12:30 AM Mar 01, 2019 | |

ಮಂದಾರ್ತಿ ಮೇಳದ ಹಿರಿಯ ಚಂಡೆವಾದಕ ಉಪ್ಪಿನ ಪಟ್ಟಣ ಶಾಂತಾರಾಮ ಭಂಡಾರಿ ಇತ್ತೀಚೆಗೆ ನಿಧನರಾಗಿದ್ದಾರೆ. ಅವರ ನಿಧನದಿಂದ ಬಡಗುತಿಟ್ಟು ಓರ್ವ ಶ್ರೇಷ್ಠ ಚಂಡೆ ವಾದಕನನ್ನು ಕಳೆದು ಕೊಂಡಂತಾಗಿದೆ. 

Advertisement

ಒಡನಾಡಿ ಚಂಡೆವಾದಕ ರಾದ ಹೊಳೆಗದ್ದೆ ಗಜಾನನ ಭಂಡಾರಿ,ಗುಣವಂತೆ ಗಜಾನನ ದೇವಾಡಿಗ ಮತ್ತು ಸತ್ಯ ನಾರಾಯಣ ಭಂಡಾರಿಯವರಿಗೆ ಸಮದಂಡಿಯಾಗಿ ಬೆಳೆದು ಅವರೆಲ್ಲರ ಎದುರಿಗೆ ಸಮರ್ಥ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡ ಇವರು ಜೋಡಾಟಗಳಲ್ಲಿ ಅಮೃತೇಶ್ವರಿ ಮೇಳದಲ್ಲಿನ ಗಜಾನನ ಭಂಡಾರಿಯವರಿಗೆ ಸಮರ್ಥ ಪ್ರತಿಸ್ಪರ್ಧಿಯಾಗಿ ಸಾಲಿಗ್ರಾಮ ಮೇಳದಲ್ಲಿ 80ರ ದಶಕದಲ್ಲಿ ಗುರುತಿಸಿಕೊಂಡಿದ್ದರು.ಅಮೃತೇಶ್ವರಿ ಮೇಳದಲ್ಲಿ ಉಪ್ಪೂರರು ದುರ್ಗಪ್ಪ ಗುಡಿಗಾರ್‌ ಹೊಳೆಗದ್ದೆ ಗಜಾನನ ಭಂಡಾರಿಯವರ ಹಿಮ್ಮೇಳಕ್ಕೆ ಪ್ರತಿಸ್ಪರ್ಧಿಯಾಗಿ ಸಾಲಿಗ್ರಾಮ ಮೇಳದಲ್ಲಿ ಕಾಳಿಂಗ ನಾವಡರು ಹಾಗೂ ಶಾಂತಾರಾಮ ಭಂಡಾರಿಯವರ ಹಿಮ್ಮೇಳ ಜೋಡಾಟ ಪ್ರಿಯರನ್ನು ರಂಜಿಸಿತ್ತು.ಕೆಮ್ಮಣ್ಣು ಆನಂದ ಗಾಣಿಗರ ಚಂಡೆಯ ನಂತರ ಕಾಳಿಂಗ ನಾವಡರ ಭಾಗವತಿಕೆಗೆ ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯ ಮತ್ತು ಭಂಡಾರಿಯವರ ಹಿಮ್ಮೇಳ ರಂಗದಲ್ಲಿ ಕ್ರಾಂತಿಯನ್ನೇ ಮಾಡಿತ್ತು. ಕೆಮ್ಮಣ್ಣು ಆನಂದರು ಆ ವರೆಗೆ ಪ್ರಚಲಿತವಿಲ್ಲದ ಚಂಡೆಗೆ ಶ್ರುತಿ ಹೊಂದಾಣಿಕೆಯಲ್ಲಿ ಮೊದಲಿಗರಾದರೆ ಭಂಡಾರಿಯವರು ಈಗ ಬಡಗುತಿಟ್ಟಿನಲ್ಲಿ ಚಾಲ್ತಿ ಇರುವ ಐದಾರು ಚಂಡೆಗಳ ಬಹು ಚಂಡೆವಾದನಕ್ಕೆ ನಾಂದಿ ಹಾಡಿದವರು. 

 ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಗುರು ನಾರಣಪ್ಪ ಉಪ್ಪೂರ ಮತ್ತು ಮದ್ದಳೆ ಮಾಂತ್ರಿಕ ಬೇಳಂಜೆ ತಿಮ್ಮಪ್ಪ ನಾಯ್ಕರ ಶಿಷ್ಯರಾಗಿ ವಾದನ ಕಲೆಯಲ್ಲಿ ಪಳಗಿ 23ನೇ ವಯಸ್ಸಿನಲ್ಲಿವ್ರತ್ತಿ ಮೇಳಕ್ಕೆ ಸೇರಿ ಚಂಡೆವಾದಕರಾಗಿ ಜನಪ್ರಿಯತೆ ಪಡೆದರು.ಅಮೃತೇಶ್ವರಿ,ಇಡಗುಂಜಿ, ಸಾಲಿಗ್ರಾಮ, ಶಿರಸಿ, ಪೆರ್ಡೂರು, ಕುಮಟ, ಸೌಕೂರು, ಗೋಳಿಗರಡಿ, ಹಾಲಾಡಿ, ನೀಲಾವರ, ಮಡಾಮಕ್ಕಿ ಮೇಳದಲ್ಲಿ ಸೇವೆಸಲ್ಲಿಸಿದ್ದರು. ಭಾಗವತಿಕೆ,ಮದ್ದಳೆ ಹಾಗೂ ವೇಷಗಾರಿಕೆಯಲ್ಲೂ ಪರಿಣತಿ ಪಡೆದು ಸರ್ವಾಂಗೀಣ ಕಲಾವಿದರಾಗಿದ್ದರು. ಶ್ರೇಷ್ಠ ಪರಪಂಪರೆಯ ಚಂಡೆಗಾರರಾಗಿ, ಸ್ವಾಭಿಮಾನಿ ಕಲಾವಿದನಾಗಿ ಬದುಕಿದ ಭಂಡಾರಿಯವರ ನಿಧನದಿಂದ ಚಂಡೆ ಮದ್ದಳೆ ವಾದಕರು ಮತ್ತು ಹಾಸ್ಯ ಕಲಾವಿದರ ಕೊರತೆಯಿಂದ ಬಳಲುತ್ತಿರುವ ಬಡಗುತಿಟ್ಟಿನ ಹಿಮ್ಮೇಳರಂಗಕ್ಕೆ ತುಂಬಲಾರದ ನಷ್ಟವೇ ಸರಿ.

ಪ್ರೊ|ಎಸ್‌.ವಿ.ಉದಯ ಕುಮಾರ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next