Advertisement

ಗುರುವಿಗಿಟ್ಟ ಬಾಣದ ಗುರಿ ಶಿಷ್ಯನಿಗೆ ನಾಟಿತೇ?

06:20 AM Aug 05, 2017 | |

ಮಂಡ್ಯ: ಕರ್ನಾಟಕದಲ್ಲಿ ಕಾಂಗ್ರೆಸ್‌ನ್ನು ಅಸ್ಥಿರಗೊಳಿಸುವ ಕಾರ್ಯಕ್ಕೆ ಮುಂದಾಗಿರುವ ಬಿಜೆಪಿ ಬಿಟ್ಟ ಐಟಿ ದಾಳಿಯ ಬಾಣದ ಗುರಿ “ಗುರುವಿನ ಬದಲು ಶಿಷ್ಯನಿಗೆ ನಾಟಿದೆ’ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಐದು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿ ಅಧಿಕಾರವುಂಡ ಹಿರಿಯ ಮುತ್ಸದ್ಧಿ ಎಸ್‌. ಎಂ.ಕೃಷ್ಣ ಕಮಲ ಪಾಳಯ ಸೇರಿದಾಗ
ಆದಾಯ ತೆರಿಗೆ ಅಧಿಕಾರಿಗಳ ದಾಳಿ ಭಯದಿಂದಲೇ ಪಕ್ಷಾಂತರ ಮಾಡಿದ್ದಾರೆಂಬ ಮಾತುಗಳು ರಾಜಕೀಯ ಮತ್ತು ಸಾರ್ವಜನಿಕ ಚರ್ಚೆಯ ಮುನ್ನಲೆಗೆ ಬಂದಿದ್ದವು.

ಎಸ್‌.ಎಂ.ಕೃಷ್ಣ ಹಾಗೂ ಅಳಿಯ ಸಿದ್ಧಾರ್ಥ ಅವರ ಆಸ್ತಿ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ದಾಳಿ ನಡೆಸಬಹುದೆಂಬ ಶಂಕೆ ಬಲವಾಗಿ ಮೂಡಿದ್ದವು. ಇದನ್ನು ಸೂಕ್ಷ್ಮವಾಗಿ ಗ್ರಹಿಸಿದ ಎಸ್‌.ಎಂ.ಕೃಷ್ಣ ಅವರು ಕುಟುಂಬಸ್ಥರ ಒತ್ತಡಕ್ಕೆ ಮಣಿದು ಬಿಜೆಪಿಗೆ ಒಲ್ಲದ ಮನಸ್ಸಿನಿಂದಲೇ ಸೇರ್ಪಡೆಗೊಂಡಿದ್ದರು ಎನ್ನಲಾಗಿದೆ.

ಎಸ್‌.ಎಂ.ಕೃಷ್ಣ ಕಮಲ ಪಾಳಯ ಸೇರಿದ ಮೇಲೆ ಅದಕ್ಕೊಂದು ತಾರ್ಕಿಕ ಅಂತ್ಯ ದೊರಕಿದಂತಾಗಿತ್ತು ಎಂಬ ಮಾತುಗಳು
ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಸಾರಥಿಯಂತಿದ್ದ ಡಿಕೆಶಿ: ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಕ್ಷರಶಃ ಅವರಿಗೆ ಸಾರಥಿಯಂತಿದ್ದವರು ಹಾಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್‌. 

Advertisement

ಪಕ್ಷ ಬಿಡುವವರೆಗೂ ಕೃಷ್ಣ ಅವರ ಶಿಷ್ಯರಾಗೇ ಗುರುತಿಸಿಕೊಂಡಿದ್ದರು. ಪಕ್ಷ ತೊರೆಯುವ ಸಮಯದಲ್ಲೂ ಕಾಂಗ್ರೆಸ್‌ ಬಿಡದಂತೆ ಡಿ.ಕೆ. ಶಿವಕುಮಾರ್‌ ಅವರು ಎಸ್‌.ಎಂ.ಕೃಷ್ಣರ ಮನವೊಲಿಸಲು ಮುಂದಾಗಿದ್ದರು. ಆದರೆ, ಎಸ್‌.ಎಂ.ಕೃಷ್ಣ ಐಟಿ ದಾಳಿ ನಡೆಸಬಹುದೆಂಬ ದೂರದೃಷ್ಟಿಯಿಂದ ಕಾಂಗ್ರೆಸ್‌ನಿಂದ ಕಾಲೆ¤ಗೆದು ಬಿಜೆಪಿ ಗುರಿಯಿಂದ ತಪ್ಪಿಸಿಕೊಂಡಿದ್ದರು.

ಗುರುವನ್ನು ಅನುಸರಿಸಲಿಲ್ಲ: ಎಸ್‌. ಎಂ.ಕೃಷ್ಣ ಕಾಂಗ್ರೆಸ್‌ ಬಿಟ್ಟ ನಂತರ ಅವರ ಗುರುವಿನ ಹಾದಿಯನ್ನು ಡಿ.ಕೆ.ಶಿವಕುಮಾರ್‌ ಅನುಸರಿಸಲಿಲ್ಲ. ಕಾಂಗ್ರೆಸ್‌ನಲ್ಲೇ ಉಳಿದುಕೊಂಡು ಮೈಸೂರು ಪ್ರಾಂತ್ಯದಲ್ಲಿ ಪ್ರಬಲ ಒಕ್ಕಲಿಗ ನಾಯಕನಾಗುವ ಕನಸು ಕಂಡಿದ್ದರು. ಇಂಧನ ಖಾತೆ ವಹಿಸಿಕೊಂಡು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದ ನಂತರ ಜೆಡಿಎಸ್‌ ಭಿನ್ನಮತೀಯ ಶಾಸಕರಿಗೆ ಬೆಂಬಲವಾಗಿ ನಿಂತರು. ಅವರ ವಿಶ್ವಾಸ ಗಳಿಸಿಕೊಂಡು ಒಕ್ಕಲಿಗ ನಾಯಕರಾಗಿ ಪ್ರವರ್ಧಮಾನಕ್ಕೆ ಬರಲು ಪ್ರಯತ್ನಿಸಿದ್ದರು.

ಮುಂದಿನ ಕೆಪಿಸಿಸಿ ಅಧ್ಯಕ್ಷರಾಗುವ ಕನಸು ಕಾಣುತ್ತಿದ್ದ ಶಿವಕುಮಾರ್‌ಗೆ ಆದಾಯ ತೆರಿಗೆ ಅಧಿಕಾರಿಗಳು ದೊಡ್ಡ ಶಾಕ್‌ ನೀಡಿದ್ದಾರೆ. ಎಸ್‌.ಎಂ.ಕೃಷ್ಣರಿಗೆ ಇಟ್ಟ ಐಟಿ ಬಾಣದ ಗುರಿ ಇದೀಗ ಅವರ ಶಿಷ್ಯ ಶಿವಕುಮಾರ್‌ಗೆ ಬಡಿದಿದೆ. 

ಸಂಚಲನ ಮೂಡಿಸಲಿಲ್ಲ: ಎಸ್‌.ಎಂ.ಕೃಷ್ಣ ಅವರು ಕಮಲ ಪಾಳಯ ಸೇರಿದ ನಂತರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳೂ ನಡೆಯಲಿಲ್ಲ, ಬಿಜೆಪಿ ಪಕ್ಷದೊಳಗೆ ಕೃಷ್ಣ ಸಂಚಲನವನ್ನೂ ಉಂಟುಮಾಡಲಿಲ್ಲ.

ಪಕ್ಷ ಸಂಘಟನೆಗೆ ಒಲವನ್ನೂ ತೋರದೆ ಪಕ್ಷದ ಎಲ್ಲಾ ಕಾರ್ಯಚಟುವಟಿಕೆಗಳಿಂದ ದೂರವೇ ಉಳಿದರು. ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಗಳಲ್ಲೂ ಒಂದು ದಿನದ ಪ್ರಚಾರ ನಡೆಸಿ ತಮ್ಮ ಕರ್ತವ್ಯ ಮುಗಿಸಿದರು.

ಈಗಲೂ ಬಿಜೆಪಿಯ ಸಭೆ-ಸಮಾರಂಭಗಳಲ್ಲಿ ಬಿಜೆಪಿ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳುವುದಕ್ಕೆ ಎಸ್‌.ಎಂ.ಕೃಷ್ಣ
ಬಯಸುತ್ತಿಲ್ಲ. ಬಿಜೆಪಿ ಪಕ್ಷದೊಳಗೆ ಕ್ರಿಯಾಶೀಲವಾಗಿರದೆ ಬಹುದೂರವೇ ಉಳಿದಂತೆ ಕಂಡುಬರುತ್ತಿದ್ದಾರೆ.

ಐಟಿ ದಾಳಿ ಭಯ ಕಾಡಿದ್ದು ನಿಜವೇ?: ಬಿಜೆಪಿ ಸೇರಿದ ಬಳಿಕ ಎಸ್‌.ಎಂ.ಕೃಷ್ಣ ಅವರ ರಾಜಕೀಯ ನಡೆಯನ್ನು ಗಮನಿಸಿದಾಗ ತಮ್ಮ ಹಾಗೂ ಅಳಿಯನ ವಿರುದ್ಧ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಬಹುದೆಂಬ ಭಯ ಅವರನ್ನು ಕಾಡಿದ್ದು ಸತ್ಯ ಎಂಬಂತೆ ತೋರುತ್ತದೆ. ಐಟಿ ದಾಳಿಯಿಂದ ಉಂಟಾಗಬಹುದಾದ ಮುಜುಗರದಿಂದ ತಪ್ಪಿಸಿಕೊಳ್ಳಲು, ಆನಂತರದ ಬೆಳವಣಿಗೆಗಳಿಂದ ರಾಜಕೀಯ ವರ್ಚಸ್ಸಿಗೆ ಆಗಬಹುದಾಗಿದ್ದ ಧಕ್ಕೆಯಿಂದ ಪಾರಾಗಲು ಅವರು ಬಿಜೆಪಿ ಸೇರುವ ನಿರ್ಧಾರ ಕೈಗೊಂಡಿರಬಹುದು. ಅವರ ನಿರ್ಧಾರದಿಂದ ಆದಾಯ ತೆರಿಗೆ ದಾಳಿಯಿಂದ ಪಾರಾಗಲು ಸಾಧ್ಯವಾಯಿತು ಎನ್ನುವ ಮಾತುಗಳು ಇದೀಗ ಜನಮಾನಸದೊಳಗೆ ಕೇಳಿಬರುತ್ತಿವೆ. ಭವಿಷ್ಯದಲ್ಲಿ ನನ್ನ ಹಾಗೂ ಕುಟುಂಬದವರ ಮೇಲೆ ನಡೆಯಬಹುದಿದ್ದ ಐಟಿ ದಾಳಿಯನ್ನು ಗ್ರಹಿಸಿದ್ದ ಎಸ್‌.ಎಂ.ಕೃಷ್ಣ ಅವರು ಪಕ್ಷ ಬಿಡುವ ಸಮಯದಲ್ಲಿ ಅವರ ವಿರುದಟಛಿ ಸಾಕಷ್ಟು ಟೀಕೆಗಳು ವ್ಯಕ್ತವಾದರೂ ಅವುಗಳಿಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ.

ದೇಶವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕತ್ವದ ಗುಣ ಮೋದಿ ಅವರಲ್ಲಿದೆ ಎಂದು ಹೊಗಳುತ್ತಲೇ ಕೇಸರಿ ವಸ್ತ್ರವನ್ನು ಹೆಗಲಿಗೇರಿಸಿಕೊಂಡು ಕಮಲ ಪಾಳಯವನ್ನು ಸೇರಿಕೊಂಡರು.

– ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next