ಶಹಾಪುರ: ಬೇಡಿದ ಫಲವನ್ನು ಕೊಡುವ ಶಿವನನ್ನು ಪೂಜಿಸಿ ಋಷಿ ಮುನಿಗಳು, ದೇವಾನು ದೇವತೆಗಳು, ಗಂಧರ್ವ ಕಿನ್ನರರು ಧನ್ಯತಾಭಾವದೊಂದಿಗೆ ವರವನ್ನು ಪಡೆದಿದ್ದು, ಶಾಸ್ತ್ರ ಪುರಾಣಗಳಿಂದ ತಿಳಿದು ಬಂದಿದೆ. ಆದ್ದರಿಂದ ಪ್ರತಿಯೊಬ್ಬ ಶಿವಭಕ್ತನಿಗೂ ಶಿವರಾತ್ರಿ ಸುದಿನವಾಗಿದೆ ಎಂದು ಹೋತಪೇಟೆ ಕೈಲಾಸ ಆಶ್ರಮದ ಶ್ರೀ ಶಿವಲಿಂಗ ಶರಣರು ತಿಳಿಸಿದರು.
ನಗರದ ಹಳಪೇಟೆಯಲ್ಲಿನ ಶ್ರೀ ಸಾವಳಗಿ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ನಿಮಿತ್ತ ಆಯೋಜಿಸಿದ್ದ ಜಾಗರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನಸ್ಸಿನ ನೆಮ್ಮದಿಗೆ ಧರ್ಮಮಾರ್ಗ ಅತ್ಯಂತ ಮಹತ್ವದ್ದಾಗಿದ್ದು, ಭಗವಂತನಲ್ಲಿ ನಂಬಿಕೆಯುಳ್ಳ ಭಕ್ತರು, ಭಕ್ತಿ ಸಫಲತೆ ಪಡೆಯುತ್ತಾರೆ ಎಂದು ತಿಳಿಸಿದರು.
ಪಿ.ಐ. ಹನುಮರೆಡ್ಡಿ ಮಾತನಾಡಿ, ಶ್ರದ್ಧೆಯಿಂದ ದೇವರ ಸ್ಮರಣೆ ಮಾಡಿದರೆ ಮನಸ್ಸಿಗೆ ಶಾಂತಿ ದೊರಕುತ್ತದೆ. ಪ್ರತಿಯೊಂದು ಸಮಾಜದ ಬಂಧುಗಳು ಒಂದೆಡೆ ಸೇರಿ ಆಚರಿಸುವ ಹಬ್ಬಗಳು ಸಾಮರಸ್ಯಕ್ಕೆ ಮೇಲ್ಪಂಕ್ತಿ ಎಂದರು.
ತಹಶೀಲ್ದಾರ್ ಜಗನ್ನಾಥರೆಡ್ಡಿ, ಗ್ರಾಮಾಂತರ ಸಿಪಿಐ ಶ್ರೀನಿವಾಸ ಅಲ್ಲಾಪುರ, ಯುವ ಮುಖಂಡ ಶಿವರಾಜ ದೇಶಮುಖ, ಉತ್ತರ ಕರ್ನಾಟಕ ಕರವೇ ಅಧ್ಯಕ್ಷ ಶರಣು ಬಿ. ಗದ್ದುಗೆ, ನಗರಸಭೆ ಮಾಜಿ ಉಪಾಧ್ಯಕ್ಷ ಡಾ| ಬಸವರಾಜ ಇಜೇರಿ ಮಾತನಾಡಿದರು. ನಗರಸಭೆ ಸದಸ್ಯ ಮಲ್ಲಿಕಾರ್ಜುನ ಗಂಗಾಧರ ಮಠ, ಲಾಲಹ್ಮದ್ ಖುರೇಶಿ, ಪ್ರಮುಖರಾದ ಡಾ| ಪ್ರಭುರಾಜ ಮಡ್ಡಿ, ಜಗದೀಶ ದೇಶಮುಖ, ಆನಂದ ದೇಶಮುಖ ಇದ್ದರು.
ಇದೇ ಸಂದರ್ಭದಲ್ಲಿ ಹೆಚ್ಚು ಅಂಕ ಗಳಿಸಿದ ಸುಪ್ರಿಯಾ, ಅರ್ಚಕ ಸಾಗರ ಸೇರಿದಂತೆ ಪೊಲೀಸ್ ಇಲಾಖೆ ಧರ್ಮಣ್ಣ ಜಂಗಳಿ, ಗುರಣ್ಣ ಬಾದ್ಯಾಪುರ, ಸೂಗುರೇಶ ಬಳಗಾರ, ಮಲ್ಲಣ್ಣ ಹಲಕರ್ಟಿ, ಸತ್ಸಂಗ ಭಜನಾ ಮಂಡಳಿಯ ಚಂದ್ರಶೇಖರ ಆನೇಗುಂದಿ ಅವರನ್ನು ಶ್ರೀ ಶಿವಲಿಂಗೇಶ್ವರ ತರುಣ ಸಂಘದಿಂದ ಸನ್ಮಾನಿಸಲಾಯಿತು. ಬಡಾವಣೆ ಹಿರಿಯರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು. ಕಲಾವಿದ ಗಂಗಾಧರ ಹೊಟ್ಟಿ ನಿರೂಪಿಸಿ, ವಂದಿಸಿದರು.