Advertisement

ಫರ್ಸಿ ನಾಡಲ್ಲಿ ಮಂಜು ಮುಸುಕಿದ ವಾತಾವರಣ

11:49 AM Jan 05, 2020 | Naveen |

„ಮಲ್ಲಿನಾಥ ಪಾಟೀಲ
ಶಹಾಬಾದ:
ವಿಶ್ವದ ಭೂಪಟದಲ್ಲಿಯೇ ಫರ್ಸಿ ನಾಡು, ಕಲ್ಲಿನ ಗಣಿ ಹಾಗೂ ಸಿಮೆಂಟ್‌ ಉದ್ಯಮದ ಮೂಲಕ ತನ್ನದೇ ಛಾಪು ಮೂಡಿಸಿರುವ ಶಹಾಬಾದ ನಗರದಲ್ಲಿ ಬೆಳಗ್ಗೆ ಮಂಜು ದಟ್ಟವಾಗಿ ಆವರಿಸಿ ರಸ್ತೆ ಕಾಣದಷ್ಟು ಕಾವಳ ಉಂಟಾಗಿ, ಪ್ರಕೃತಿ ಪ್ರಿಯರಿಗೆ ರಸದೌತಣ ನೀಡಿದಂತಾಗುತ್ತಿದೆ.

Advertisement

ನಗರದಲ್ಲಿ ಪ್ರತಿದಿನ ಬೆಳಗ್ಗೆ 6 ರಿಂದ 8ರ ವರೆಗೆ ಯಾವುದೇ ದಿಕ್ಕಿಗೂ ಕಣ್ಣು ಹಾಯಿಸಿದರೂ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ. ವಾಯು ವಿಹಾರಕ್ಕೆ ಹೊರಟ ಜನರಿಗೆ ಪಕ್ಕದ ಮನೆ, ರಸ್ತೆಯಲ್ಲಿ ಹೋಗುವ ಜನರು, ಎಲ್ಲವೂ ಅಸ್ಪಷ್ಟವಾಗಿ, ಅಸದೃಶ್ಯವಾಗಿ ಕಾಣುತ್ತಿದ್ದಾರೆ. ಪ್ರತಿನಿತ್ಯ ವಾಯುವಿಹಾರಕ್ಕೆ ಹೋಗುವ ಶಿಕ್ಷಕ ಹಾಗೂ ಯೋಗಪಟು ನಾಗರಾಜ ದಂಡಾವತಿ ಈ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೇ ತಮ್ಮ ಮೊಬೈಲ್‌ ಕ್ಯಾಮರಾದಿಂದ ಈ ಭಾಗದಲ್ಲಿ ಮೂಡುವ ಅಪರೂಪದ ಕ್ಷಣದ ದೃಶ್ಯಗಳನ್ನು ಸೆರೆಹಿಡಿದು “ಉದಯವಾಣಿ’ಗೆ ನೀಡಿದ್ದಾರೆ.

ಸುಣ್ಣದ ಅಂಶವನ್ನು ಹೊಂದಿರುವ ಇಲ್ಲಿನ ಭೂಮಿ ಬೇಸಿಗೆಯಲ್ಲಿ ಶಾಖದಿಂದ ಇನ್ನಷ್ಟು ಸೆಕೆ ಉತ್ಪತ್ತಿ ಮಾಡುತ್ತದೆ. ಮಳೆಗಾಲದಲ್ಲಿ ಸ್ವಲ್ಪ ಮಳೆಯಾದರೆ ಬಾಣೆಲೆ ಮೇಲೆ ನೀರು ಹಾಕಿದಂತಾಗುತ್ತದೆ. ಬಿಸಿಲ ನಾಡೆಂದೇ ಪ್ರಖ್ಯಾತಿ ಪಡೆದ ಈ ಭಾಗದಲ್ಲಿ ಇಂತಹ ರೋಚಕ ಕ್ಷಣಗಳು ಕಾಣುವುದೇ ಅಸಾಧ್ಯ ಎಂದು ತಿಳಿದುಕೊಂಡವರಿಗೆ ಪ್ರಕೃತಿ ಬದಲಾವಣೆ ಪಾಠ ಕಲಿಸಿದೆ ಎಂದು ಹೇಳುತ್ತಾರೆ ಮಾಲಗತ್ತಿ ಗ್ರಾಮದ ಸಿದ್ದು ಅಲ್ಲೂರ್‌ ಹಾಗೂ ಶಿವಕುಮಾರ ಕುಸಾಳೆ.

ಮಡಿಕೇರಿ, ಶೃಂಗೇರಿ, ಆಗುಂಬೆ, ಚಾರ್ಮುಡಿ ಘಾಟಗಳಲ್ಲಿ ಮಂಜು ಮುಸುಕಿದ ವಾತಾವರಣ ಸರ್ವೇ ಸಾಮನ್ಯವಾಗಿ ಕಂಡು ಬರುವ ದೃಶ್ಯಗಳು. ಇಂತಹ ಅಪರೂಪದ ಕ್ಷಣ ನಗರದಲ್ಲಿ ಸೃಷ್ಟಿಯಾಗುತ್ತಿರುವುದರಿಂದ ಪ್ರಕೃತಿ ಸೊಬಗನ್ನು ಜನರು ಆಸ್ವಾದಿಸುತ್ತಿದ್ದಾರೆ. ಈ ಮಂಜು ಮುಸುಕಿದ ವಾತಾವರಣದಿಂದ ವಾಹನ ಚಾಲಕರು ಮುಂಜಾವಿನಲ್ಲಿಯೂ ದೀಪ ಬೆಳಗಿಸಿ ಸಂಚರಿಸಬೇಕಾದ ಪರಿಸ್ಥಿತಿ ಬಂದೊದಗಿದೆ.

Advertisement

Udayavani is now on Telegram. Click here to join our channel and stay updated with the latest news.

Next