Advertisement

ಲಾಕ್‌ಡೌನ್‌ನಲ್ಲಿ ಮಳೆ ಸಂಕಷ್ಟ

03:03 PM Apr 19, 2020 | Naveen |

ಶಹಾಬಾದ: ಬಿಸಿಲಿನ ತಾಪಕ್ಕೆ ಕಾದ ತಾಲೂಕಿನ ಹಲವೆಡೆ ಶುಕ್ರವಾರ ಸಂಜೆ ವೇಳೆಗೆ ಗುಡುಗು-ಮಿಂಚು ಸಹಿತ ಮಳೆಯಾಗಿದ್ದು, ಗಿಡ, ವಿದ್ಯುತ್‌ ಕಂಬಗಳು ಬಿದ್ದಿದ್ದು, ಒಂದು ಮನೆ ಕುಸಿದಿದೆ.

Advertisement

ಕೊರೊನಾ ಹರಡುವ ಭೀತಿಯಿಂದ ಕಳೆದ ಸುಮಾರು 20 ದಿನಗಳಿಂದ ಮನೆಯಲ್ಲೇ ಇರುವ ಜನತೆ ಬಿಸಿಲಿನ ತಾಪಕ್ಕೆ ಬೆಂಡಾಗಿದ್ದರು. ತಾಲೂಕಿನಲ್ಲಿ ಶುಕ್ರವಾರ ಗುಡುಗು ಸಹಿತ ಸುಮಾರು ಅರ್ಧ ಗಂಟೆ ಸುರಿದ ಮಳೆಗೆ ಇಳೆ ತಂಪಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಗಾಳಿ ಸಹಿತ ಮಳೆಗೆ ಅಲಸ್ಟಾಂ ಕಾಲೋನಿಯಲ್ಲಿ ಮರಗಳು ಉರುಳಿವೆ. ಅಲ್ಲದೇ ಮರಗಳ ಟೊಂಗೆಗಳು ಮುರಿದು ವಿದ್ಯುತ್‌ ತಂತಿ ಮೇಲೆ ಬಿದ್ದ ಪರಿಣಾಮ ಎರಡು ಗಂಟೆಗಳ ಕಾಲ ವಿದ್ಯುತ್‌ ಕಡಿತವಾಗಿತ್ತು.

ನಗರದ ರಾಮಾ ಮೊಹಲ್ಲಾ ಪ್ರದೇಶದಲ್ಲಿ ಮರವೊಂದು ಬಿದ್ದಿದ್ದ ಪರಿಣಾಮ ನಾಲ್ಕು ವಿದ್ಯುತ್‌ ಕಂಬಗಳು ಧರೆಗೆ ಉಳಿದಿವೆ. ಜೆಸ್ಕಾಂ ಸಿಬ್ಬಂದಿ ಜನರು ಗುಂಪಾಗಿ ಹೊರ ಬರಬಾರದೆಂದು ಎಚ್ಚರಿಸಿ, ಜನರನ್ನು ಚದುರಿಸಿ, ವಿದ್ಯುತ್‌ ಕಂಬಗಳ ದುರಸ್ತಿಗೆ ಕ್ರಮ ಕೈಗೊಂಡರು. ಇದರಿಂದ ನಗರದಲ್ಲಿ ಸಂಪೂರ್ಣ ವಿದ್ಯುತ್‌ ವ್ಯತ್ಯಯ ಉಂಟಾಯಿತು. ನಗರದ ಪಠಾಣಗಲ್ಲಿ ಪ್ರದೇಶದಲ್ಲಿ ಮಳೆಯಿಂದ ಚರಂಡಿ ತುಂಬಿ ಸುಮಾರು 10 ಮನೆಗಳಿಗೆ ನೀರು ನುಗ್ಗಿದ್ದು, ಕೆಲ ಮನೆಗಳ ಎದುರು ನೀರು ನಿಂತಿದ್ದರಿಂದ ಮನೆಯಿಂದ ಹೊರ ಬರಲು ಸಾಧ್ಯವಾಗಲಿಲ್ಲ.

ಇಂದಿರಾ ನಗರ ಮಡ್ಡಿ-2ರ ಕಾಳನೂರ ಓಣಿ ಪ್ರದೇಶದಲ್ಲಿ ವಿಕಲಚೇತನ್‌ ಶಂಕರ ಎನ್ನುವರ ಮನೆಯ ಗೋಡೆ ಕುಸಿದಿದ್ದರಿಂದ ಛಾವಣಿ ಸ್ವಲ್ಪ ಮಟ್ಟಿಗೆ ಬಿದ್ದಿದೆ. ಜೆಪಿ ಕಾಲೋನಿಯ ಕಾಶಪ್ಪ ಎನ್ನುವರ ಮನೆಯ ಮೇಲೆ ಮರವೊಂದು ಬಿದ್ದಿದ್ದರ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next