Advertisement

ಎಚ್ಚರ..ಬಡಿಗೆ ಹಿಡಿದು ಬರ್ತಿದಾರೆ!

03:28 PM May 01, 2020 | Naveen |

ಶಹಾಬಾದ: ಇವರು ಪೊಲೀಸರಲ್ಲ..ಆದರೂ ಕೈಯಲ್ಲಿ ಬಡಿಗೆ ಹಿಡಿದು, ಸೀಟಿ ಹೊಡೆಯುತ್ತಾ ಬಂದರೆ ಜನರೆಲ್ಲ ಮನೆಗೆ ಓಡಿಹೋಗುತ್ತಾರೆ. ಹೌದು! ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಭಂಕೂರ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ಜನ ಜಾಗೃತಿ ಮೂಡಿಸುತ್ತಿರುವ ರೀತಿ ಇದು.

Advertisement

ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದರೆ ಅಲ್ಲಿಗೆ ಬಡಿಗೆ ಹಿಡಿದು, ಸೀಟಿ ಹೊಡೆಯುತ್ತಾ ದೌಡಾಯಿಸಿ ಮನೆಗೆ ಹೋಗುವಂತೆ ಮಾಡುತ್ತಿದ್ದಾರೆ ಈ ಆಶಾ ಕಾರ್ಯಕರ್ತೆಯರು. ಅಲ್ಲದೇ ದಿನಸಿ ಅಂಗಡಿ, ತರಕಾರಿ ಅಂಗಡಿ ಎದುರು ನಿಲ್ಲುವ ಗ್ರಾಹಕರು, ಮಾಲೀಕರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ತಿಳಿ ಹೇಳುತ್ತಿದ್ದಾರೆ. ಇವರ ಕಾರ್ಯ ಇಷ್ಟಕ್ಕೇ ಸೀಮಿತವಾಗಿಲ್ಲ. ಜತೆಗೆ ಗ್ರಾಮದ ಪ್ರತಿಯೊಂದು ಓಣಿಗಳಲ್ಲಿಯೂ ಓಡಾಡುವ ಮೂಲಕ ಪಕ್ಕದ ಜಿಲ್ಲೆ, ರಾಜ್ಯದಿಂದ ಬಂದವರನ್ನು ಗುರುತಿಸಿ ತಾಲೂಕಾಡಳಿತಕ್ಕೆ ತಿಳಿಸುತ್ತಿದ್ದಾರೆ.

ತಾಲೂಕಾಡಳಿತದಿಂದ ಬಂದ ಆಹಾರ ಧಾನ್ಯಗಳ ಕಿಟ್‌ಗಳನ್ನು ಮತ್ತು ಹಾಲಿನ ಪಾಕೆಟ್‌ಗಳನ್ನು ಬಡ ಕುಟುಂಬದವರಿಗೆ ಹಂಚುವ ಜವಾಬ್ದಾರಿ ಹೊತ್ತಿದ್ದಾರೆ. ತಮ್ಮ ಜೀವವನ್ನು ಲೆಕ್ಕಿಸದೇ ಅಪಾಯಕಾರಿ ಪರಿಸ್ಥಿತಿಯಲ್ಲಿಯೂ ಮನೆ-ಮನೆಗೆ ತೆರಳಿ ಸಾರ್ವಜನಿಕರ ಆರೋಗ್ಯ ತಪಾಸಣೆಯನ್ನು ಇವರು ಮಾಡುತ್ತಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಮಲ್ಲಿನಾಥ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next