Advertisement

ಶಬರಿಮಲೆಯಲ್ಲಿ ಮಕರ ಜ್ಯೊತಿ ದರ್ಶನವಾಯಿತು

09:10 AM Jan 16, 2020 | sudhir |

ಶಬರಿಮಲೆ : ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಕೇರಳದ ಶಬರಿಮಲೆಯಲ್ಲಿ ಬುಧವಾರ ಸಂಜೆ ಮಕರ ಜ್ಯೋತಿ ದರ್ಶನವಾಯಿತು.

Advertisement

ಮಕರ ಜ್ಯೋತಿ ದರ್ಶನಕ್ಕೆ ಶಬರಿಮಲೆ ಸನ್ನಿಧಾನದ ಆಸುಪಾಸಿನ 9 ಕೇಂದ್ರಗಳಲ್ಲಿ ಮಕರಜ್ಯೋತಿ ವೀಕ್ಷಣೆಗೆ ಭಕ್ತರು ಸೇರಿದ್ದು.ಬುಧವಾರ ಸಂಜೆ ಜ್ಯೋತಿ ದರ್ಶನವಾಗುವುದರೊಂದಿಗೆ ಭಕ್ತರು ಪುನೀತರಾದರು.
ಮುಂಜಾನೆಯೇ ಈ ಸ್ಥಳಗಳಲ್ಲಿ ಭಕ್ತರು ತುಂಬಿಕೊಂಡಿದ್ದರು.

ಸನ್ನಿಧಾನದಲ್ಲಿರುವ ವಾವರ ಸ್ವಾಮಿಯ ನಡೆಯಲ್ಲಿ, ಅಗ್ನಿಕುಂಡದ ಸಮೀಪ,ಅಪ್ಪ-ಅರವಣ ವಿತರಣಾ ಕೌಂಟರ್ ಸಮೀಪ , ಅನ್ನದಾನ ಮಂಟಪದ ಬಳಿ,ಮರಕ್ಕೂಟಂನಲ್ಲಿ, ಮಾಳಿಗಪುರತ್ತಮ್ಮ ದೇವಸ್ಥಾನದಲ್ಲಿ , ಇನ್ಸಿನೇಟರ್ ಕೇಂದ್ರ, ಶರಮ್ ಗುತ್ತಿ, ಪಾಂಡಿತ್ತಾವಳ ದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು ಮಕರಜ್ಯೋತಿ ವೀಕ್ಷಿಸಿದರು.

ಪಿಳ್ಳಂಪಲ್ಲಿ,ನೀಲಕ್ಕಲ್,ಗಣೇಶ ಬೆಟ್ಟ ಪ್ರದೇಶದಲ್ಲೂ ಭಕ್ತರು ಸೇರಿಕೊಂಡಿದ್ದರು.

Advertisement

ಅಪಾಯ ಎದುರಾಗುವ ಹಿನ್ನೆಲೆಯಲ್ಲಿ ಬಹು ಮಹಡಿ ಕಟ್ಟಡಗಳ ಮೇಲೆ ಹಾಗೂ ಪಂಪಾ ನದಿಯ ಸನಿಹವಿರುವ ಹಿಲ್​ಟಾಪ್​ನಲ್ಲಿ ಮಕರ ಜ್ಯೋತಿ ವೀಕ್ಷಣೆಗೆ ಇಲ್ಲಿನ ಪೊಲೀಸರಿಂದ ನಿರ್ಬಂದ ಹೇರಲಾಗಿತ್ತು.

ಶಬರಿಮಲೆ ಶ್ರೀಅಯ್ಯಪ್ಪ ಸನ್ನಿಧಾನದಲ್ಲಿ ಮಕರಜ್ಯೋತಿ ವೀಕ್ಷಣೆಗೆ ಭಕ್ತರು ಭಾರಿ ಪ್ರಮಾಣದಲ್ಲಿ ಕ್ಷೇತ್ರಕ್ಕೆ ಬಂದು ಸೇರಿದ್ದರು.

ಜ.15ರಂದು ಪ್ರಾತಃ 2.09ಕ್ಕೆ ಮಕರ ಸಂಕ್ರಮಣ ಪೂಜೆ ನಡೆಸಲಾಯಿತು.ಈ ಹಿನ್ನೆಲೆಯಲ್ಲಿ ಜ.14ರ ತಡರಾತ್ರಿವರೆಗೂ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಜ.15 ರ ಬುಧವಾರ ಪ್ರಾತಃಕಾಲ 2.09ಕ್ಕೆ ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಮಣ ಪೂಜೆ ಮತ್ತು ಸಂಕ್ರಮಣಾಭಿಷೇಕ ನಡೆಸಲಾಯಿತು. ತಿರುವನಂತಪುರಂನ ಕಾವಾಡಿಯಾರ್ ಅರಮನೆಯ ವಿಶೇಷ ತುಪ್ಪವನ್ನು ಸನ್ನಿಧಾನಕ್ಕೆ ತರಲಾಗಿತ್ತು.

ಸಂಕ್ರಮಣ ಪೂಜೆ ಹಾಗೂ ಸಂಕ್ರಮಣ ಅಭಿಷೇಕ ನಡೆದ ಬಳಿಕ ಹರಿವರಾಸನಂ ಹಾಡಿನೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚಲಾಯಿತು.

ಪಂದಳ ಅರಮನೆಯಿಂದ ಜ.13ರ ಸೋಮವಾರ ಹೊರಟ ಪವಿತ್ರ ತಿರುವಾಭರಣಂಗಳನ್ನು ಹೊತ್ತುಕೊಂಡ ಮೆರವಣಿಗೆ ಜ.15ರ ಬುಧವಾರ ಅಪರಾಹ್ನ ಪಂಪಾಗೆ ತಲುಪಿತು. ಅಲ್ಲಿಂದ ಪಂದಳ ಅರಮನೆಯ ರಾಜಪ್ರತಿನಿಧಿಗಳ ಅನುಮತಿಯೊಂದಿಗೆ ಪಂಪಾ ಗಣಪತಿ ಸನ್ನಿಧಾನದ ಸಮೀಪ ದಾಟಿ ನೀಲಿಮಲೆ ಬೆಟ್ಟವನ್ನು ಏರಿ,ಕನ್ನಿ ಸ್ವಾಮಿಗಳು ತರುವ ಶರಗಳನ್ನು ಇಡುವ ಸ್ಥಳವಾದ ಶರಮ್‌ಗುತ್ತಿಯಲ್ಲಿ ಕೇರಳ ಸರಕಾರದ ಅಧೀನದ ತಿರುವಾಂಕೂರ್ ದೇವಸ್ವಂ ಬೋರ್ಡ್‌ನ ಅಧಿಕಾರಿಗಳು ತಿರುವಾಭರಣಂ ಮೆರವಣಿಗೆಯನ್ನು ಎದುರುಗೊಂಡು ಸ್ವಾಗತಿಸಿ,ಶಬರಿಮಲೆಯ ಅಯ್ಯಪ್ಪನ ಸಂಜೆ 6.40 ಸನ್ನಿಧಾನಕ್ಕೆ ಒಯ್ಯಲಾಯಿತು.

ಸಂಜೆ 6.48 ಕ್ಕೆ ಅಯ್ಯಪ್ಪ ಸ್ವಾಮಿಯ ಯೋಗಮುದ್ರಾ ವಿಗ್ರಹಕ್ಕೆ ತಿರುವಾಭರಣಂ ಗಳನ್ನು ತೊಡಿಸಿ,ವಿಶೇಷ ಅಲಂಕಾರಗಳನ್ನು ಮಾಡಿ ದೀಪಾರಾಧನೆ ಹಾಗೂ ವಿವಿಧ ವೈಧಿಕ ಕಾರ್ಯಗಳು ನಡೆಯಿತು.

ಸಂಜೆ 6.50 ರ ಹೊತ್ತಿಗೆ ಪೊನ್ನಂಬಲ ಬೆಟ್ಟದಲ್ಲಿ ಮಕರಜ್ಯೋತಿ ಕಾಣಿಸಿಕೊಂಡಿತು.

ಶಬರಿಮಲೆ ಸನ್ನಿದಾನದ ವಿರುದ್ಧ ದಿಕ್ಕಿನಲ್ಲಿರುವ ಪೊನ್ನಂಬಲಮೇಡು ಗಿರಿಯಲ್ಲಿ ಮಕರಜ್ಯೋತಿಯು ಮೂರು ಬಾರಿ ದೀಪ್ಯಮಾನವಾಗಿ ಮಿಣುಗಿ ಭಕ್ತ ಕೋಟಿಗೆ ದರ್ಶನ‌ ನೀಡಿತು.

ಕಳೆದ ವರ್ಷಕ್ಕಿಂತ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಶಬರಿಮಲೆಗೆ ಆಗಮಿಸಿರುವ ಹಿನ್ನೆಲೆಯಲ್ಲಿ ಕೇರಳ ಸರಕಾರ ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ಬಂದೋಬಸ್ತ್ ಮಾಡಿದೆ.

ಮಕರ ಜ್ಯೋತಿ ದರ್ಶನ ಹಿನ್ನೆಲೆಯಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಕೇರಳ‌ ಪೊಲೀಸ್ ಇಲಾಖೆಯ ಸಿಬಂದಿಗಳ ಜತೆ ರಾಪಿಡ್ ಆಕ್ಷನ್ ಫೋರ್ಸ್, ಎನ್.ಡಿ.ಆರ್.ಎಫ್ ಪಡೆಗಳ ಸಿಬಂದಿಗಳು ಭದ್ರತೆ ಹಾಗೂ ಭಕ್ತರ ಸುರಕ್ಷತೆಯ ನಿಟ್ಟಿನಲ್ಲಿ ಕರ್ತವ್ಯದಲ್ಲಿದ್ದರು.

ಹಿರಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಸಿಬಂದಿಗಳಿಗೆ ಕರ್ತವ್ಯ ಹಂಚಿಕೆ ಮಾಡಿದ್ದು,ಸೂಕ್ತ ಮಾರ್ಗದರ್ಶನ ನೀಡಿದ್ದು
ಯಾವುದೇ ಅಹಿತರ ಘಟನೆ ನಡೆಯದಂತೆ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

– ಪ್ರವೀಣ್ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next