ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಕೊಯಮತ್ತೂರಿನಲ್ಲಿ ಏಳು ಮಂದಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಮಾಸ್ಟರ್ ಮೈಂಡ್ ಸುನಿಲ್ ಯಾನೆ ಪಲ್ಸರ್ ಸುನಿ ಭೂಗತನಾಗಿದ್ದು, ಶೋಧಕಾರ್ಯ ಚುರುಕುಗೊಂಡಿದೆ.
ನಟಿ ನೀಡಿದ ದೂರಿನಂತೆ ದುಷ್ಕರ್ಮಿಗಳ ಮೇಲೆ 376 ಸೆಕ್ಷನ್ ಅಡಿಯಲ್ಲಿ ಅತ್ಯಾಚಾರ ಕೇಸನ್ನು ದಾಖಲಿಸಲಾಗಿದೆ. ಇದರೊಂದಿಗೆ ಬೆದರಿಕೆ, ಪಿತೂರಿ ಅಪರಾಧ ಸಂಬಂಧಿತ ಕೇಸು ಅಲ್ಲದೆ, ಮೊಬೈಲಿನಿಂದ ಬಲವಂತವಾಗಿ ಫೋಟೋ- ವಿಡಿಯೋ ಚಿತ್ರಿಸಿದ ಆರೋಪದ ಮೇಲೆ 66 ಇ ಸೆಕ್ಷನ್ನಂತೆ ಪೊಲೀಸರು ಪ್ರಕರಣ ದಾಖಲಿಸಲಾಗಿದೆ. ನಟಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಅತ್ಯಾಚಾರ ಆಗಿರುವುದು ದೃಢಪಟ್ಟಿರುವುದಾಗಿ ಪೊಲೀಸ್ ಮೂಲಗಳನ್ನು ಉಲ್ಲೇಖೀಸಿ ಕೆಲ ಮಾಧ್ಯಮಗಳು ವರದಿ ಮಾಡಿವೆ. ತ್ರಿಶೂರ್ನಲ್ಲಿ ಮಲಯಾಳಂ ಚಿತ್ರದ ಡಬ್ಬಿಂಗ್ ಕೆಲಸ ಮುಗಿಸಿ, ನಟಿ ಕಾರಿನಲ್ಲಿ ವಾಪಸಾಗುತ್ತಿದ್ದಾಗ ಈ ದುಷ್ಕೃತ್ಯ ಎಸಗಲಾಗಿತ್ತು.
ಪಲ್ಸರ್ ಸುನಿ ಕೈವಾಡ: ನಟಿಯ ಕಾರು ಚಾಲಕ ಮಾರ್ಟಿನ್ನನ್ನು ವಿಚಾರಣೆಗೊಳಪಡಿಸಿದಾಗ ಹಲವು ಸತ್ಯಗಳು ಹೊರಬಿದ್ದಿದ್ದು, ಮಾಜಿ ಚಾಲಕ ಪಲ್ಸರ್ ಸುನಿ ಕೈವಾಡ ಇರುವ ಬಗ್ಗೆ ಸುಳಿವು ಸಿಕ್ಕಿದೆ. ಎರಡು ತಿಂಗಳು ಮುಂಚೆಯೇ ಸುನಿ ಮತ್ತು ಮಾರ್ಟಿನ್ ನಿರಂತರ ಸಂಪರ್ಕದಲ್ಲಿದ್ದರು. ನಟಿಯ ಆಡಿ ಕಾರಿಗೆ ಉದ್ದೇಶಪೂರ್ವಕವಾಗಿ ಟೆಂಪೋ ಟ್ರಾವೆಲರನ್ನು ಢಿಕ್ಕಿ ಹೊಡೆಸಲಾಗಿದೆ ಎಂದು ಮಾರ್ಟಿನ್ ತಿಳಿಸಿದ್ದಾನೆ. ಪಲ್ಸರ್ ಸುನಿ ಮಲಯಾಳಂನ ಕೆಲವು ಸಿನಿತಾರೆ ಅಲ್ಲದೆ, ಮುಖೇಶ್ರಂಥ ರಾಜಕಾರಣಿಗಳ ಕಾರಿಗೂ ಚಾಲಕರಾಗಿ ಕೆಲಸ ಮಾಡಿದ್ದನು. ಸುನಿಲ್ನ ಆಪ್ತರನ್ನೂ ವಿಚಾರಣೆಗೊಳಪಡಿಸಲಾಗುತ್ತಿದೆ.
ಸ್ಟಾರ್ಗಳ ಖಂಡನೆ: ನಟಿ ಮೇಲೆ ಎಸಗಿರುವ ಲೈಂಗಿಕ ದೌರ್ಜನ್ಯವನ್ನು ಮಲಯಾಳಂ ಚಿತ್ರತಾರೆಗಳು ತೀವ್ರವಾಗಿ ಖಂಡಿಸಿದ್ದಾರೆ. ಸೂಪರ್ಸ್ಟಾರ್ ಮೋಹನ್ಲಾಲ್, “ಅಪರಾಧಿಗಳು ಪ್ರಾಣಿಗಿಂತ ಕಡೆಯಾಗಿ ವರ್ತಿಸಿದ್ದಾರೆ. ನಾವೆಲ್ಲ ಮೊಂಬತ್ತಿ ಹಿಡಿದು ಮೆರವಣಿಗೆ ನಡೆಸಿ ಅನುಕಂಪ ವ್ಯಕ್ತಪಡಿಸಿದರೆ ಪ್ರಯೋಜನವಿಲ್ಲ. ದುಷ್ಕೃತ್ಯದಲ್ಲಿ ಪಾಲ್ಗೊಂಡ ಯಾರನ್ನೂ ನ್ಯಾಯಾಲಯ ಸುಮ್ಮನೆ ಬಿಡಬಾರದು. ಅಪರಾಧಿಗಳಿಗೆ ಆದಷ್ಟು ಬೇಗ ಕಠಿನ ಶಿಕ್ಷೆ ವಿಧಿಸಬೇಕು’ ಎಂದಿದ್ದಾರೆ.
ಮಲಯಾಳಂ ಸಿನಿಮಾ ಕಲಾವಿದರ ಸಂಘದ ಅಧ್ಯಕ್ಷರೂ ಫೇಸ್ಬುಕ್ನಲ್ಲಿ “ಇದೊಂದು ಹೇಯ ಕೃತ್ಯ. ನಾವು ನಟಿಯನ್ನು ಸೋಲಲು ಬಿಡುವುದಿಲ್ಲ. ನಮ್ಮ ಮಗಳು, ತಂಗಿಗೆ ಇಂಥ ಅನ್ಯಾಯ ಆಗಬೇಕಾದರೆ ನಾವೇಕೆ ಸುಮ್ಮನಿರಬೇಕು?’ ಎಂದು ಪ್ರಶ್ನಿಸಿದ್ದಾರೆ.
ನಟ ಪೃಥ್ವಿರಾಜ್, “ದೇವರನಾಡಿನಲ್ಲಿ ಮಹಿಳೆಗೆ ಎಷ್ಟು ರಕ್ಷಣೆ ಇದೆಯೆಂದು ಇದರಿಂದ ಗೊತ್ತಾಗುತ್ತದೆ. ಪುರುಷರೆಲ್ಲ ತಲೆತಗ್ಗಿಸುವಂತೆ ದುರ್ಘಟನೆ ನಡೆದಿದ್ದು, ಇಂಥ ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಬೇಕು’ ಎಂದಿದ್ದಾರೆ. “ಕೆಮರಾ ಮುಂದೆ ಬರುವುದನ್ನು ಆದಷ್ಟು ಬೇಗ ನಿಲ್ಲಿಸುತ್ತೇನೆ. ನಟನೆಯನ್ನು ನಾನು ಅತಿಯಾಗಿ ಪ್ರೀತಿಸುತ್ತೇನೆ. ಆದರೆ, ಈ ಪ್ರೀತಿಯೇ ನನಗೆ ಮುಳುವಾಗುತ್ತಿದೆ ಎಂದು ಈ ನಟಿ ಕೆಲವು ದಿನಗಳ ಹಿಂದೆ ಹೇಳಿದ್ದರು. ಆ ಹೇಳಿಕೆಯ ಕಾರಣ ನನಗೆ ಈಗ ಅರಿವಾಗುತ್ತಿದೆ’ ಎಂದು ತಿಳಿಸಿದ್ದಾರೆ.