Advertisement

ನದಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಿನ್ನಡೆ

01:07 AM Jul 21, 2019 | Team Udayavani |

ಮಹಾನಗರ: ನದಿ ತೀರಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗದೆ ಹಿನ್ನಡೆಯಾಗಿದೆ.

Advertisement

ನಗರದ ಫಲ್ಗುಣಿ,ನೇತ್ರಾವತಿ ನದಿತೀರಗಳಲ್ಲಿ ಜಲ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಸಲ್ಲಿಸಿರುವ 13 ತೇಲುವ ಜೆಟ್ಟಿಗಳ ನಿರ್ಮಾಣ ಪ್ರಸ್ತಾವನೆ ಕಡತದಲೇ ಉಳಿದುಕೊಂಡಿದೆ. ಇದರ ಜತೆಗೆ ಕೇಂದ್ರ ಸರಕಾರದ ಸ್ವದೇಶ ದರ್ಶನ ಕೋಸ್ಟಲ್‌ ಟೂರಿಸಂ ಸರ್ಕ್ನೂಟ್‌ ಯೋಜನೆಯಡಿ ಮಂಗಳೂರಿನ ತಣ್ಣೀರುಬಾವಿ, ಸಸಿಹಿತ್ಲು ಬೀಚ್‌ಗಳಲ್ಲಿ ರೂಪಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸೌಲಭ್ಯಗಳ ಅಳವಡಿಕೆಗೆ ಅನುಮೋದನೆ ದೊರಕಿ ಎರಡು ವರ್ಷಗಳಾಗುತ್ತಾ ಬಂದರೂ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ.

ಫಲ್ಗುಣಿ ನದಿಯಲ್ಲಿ ಕೂಳೂರು ಸೇತುವೆ ಬಳಿ, ಬಂಗ್ರಕೂಳೂರು ನದಿ ಈ ತೀರ, ಸುಲ್ತಾನ್‌ ಬತ್ತೇರಿ, ತಣ್ಣೀರುಬಾವಿ ಸಮೀಪ ಕೂಳೂರು ಉತ್ತರ ಮರಳು ಮಿಶ್ರಿತ ಪ್ರದೇಶ, ಹಳೆ ಬಂದರು, ಕಸ್ಬಾ ಬೆಂಗ್ರೆ, ಹಳೆ ಬಂದರು ಫೆರಿ ಸಮೀಪ, ಬೆಂಗ್ರೆ ಸ್ಯಾಂಡ್‌ ಫೀಟ್‌ ಬಳಿ ಹಾಗೂ ನೇತ್ರಾವತಿ ನದಿತೀರದಲ್ಲಿ ಜಪ್ಪಿನಮೊಗರು ಹಳೆಯ ಫೆರಿ ಸಮೀಪ, ಉಳ್ಳಾಲ ಹಳೆಯ ಫೆರಿ ಬಳಿ, ಸಸಿಹಿತ್ಲು ಕಡಲ ತೀರದ ನಂದಿನ ನದಿ ತಟದ ಬಳಿ ಸಹಿತ ಒಟ್ಟು 26 ಕೋ.ರೂ. ವೆಚ್ಚದಲ್ಲಿ 13 ತೇಲುವ ಜಟ್ಟಿಗಳನ್ನು ನಿರ್ಮಿಸುವ ಪ್ರಸ್ತಾವನೆ ರೂಪಿಸಿ ರಾಜ್ಯ ಪ್ರವಾಸೋದ್ಯ ಮ ಇಲಾಖೆಗೆ ಸಲ್ಲಿಸಲಾಗಿತ್ತು.

ಜನವರಿಯಲ್ಲಿ ಕೂಳೂರು ಫಲ್ಗುಣಿ ನದಿಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ನದಿ ಉತ್ಸವ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ಇದರ ಬಳಿಕ ಫಲ್ಗುಣಿ ನದಿಯಲ್ಲಿ ಜಲಕ್ರೀಡೆಗಳನ್ನು ನಡೆಸಲು ಎರಡು ಸಂಸ್ಥೆಗಳಿಗೂ ಅನುಮತಿಯನ್ನು ಕೂಡ ನೀಡಲಾಗಿದೆ. ಆದರೆ ಸುಸಜ್ಜಿತವಾದ ತೇಲುವ ಜಟ್ಟಿಗಳ ನಿರ್ಮಾಣವಾಗದೆ ನದಿಯಲ್ಲಿ ವ್ಯವಸ್ಥಿತವಾಗಿ ಜಲಕ್ರೀಡೆಗಳನ್ನು ನಡೆಸಲು ಸಮಸ್ಯೆಯಾಗಿದೆ.

ಕಾರ್ಯಾನುಷ್ಠಾನಗೊಳ್ಳದ ಸ್ವದೇಶ ದರ್ಶನ
ಕರಾವಳಿ ತೀರಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 2015-16ನೇ ಸಾಲಿನಲ್ಲಿ ಸ್ವದೇಶ ದರ್ಶನ ಕೋಸ್ಟಲ್‌ ಟೂರಿಸಂ ಸರ್ಕ್ನೂಟ್‌ ಯೋಜನೆಯನ್ನು ಕೇಂದ್ರ ಸರಕಾರ ರೂಪಿಸಿತ್ತು. ಇದರಲ್ಲಿ ದ.ಕ. ಜಿಲ್ಲೆಯಲ್ಲಿ ತಣ್ಣೀರುಬಾವಿ, ಸಸಿಹಿತ್ಲು ಬೀಚ್‌ಗಳನ್ನು ಆಯ್ಕೆ ಮಾಡಿಕೊಂಡು 25,35,79,000 ರೂ. ವೆಚ್ಚದ ಯೋಜನ ವರದಿ ಸಿದ್ಧಪಡಿಸಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಮೂಲಕ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗಿತ್ತು.

Advertisement

ಯೋಜನೆಯಡಿ ತಣ್ಣೀರುಬಾವಿ, ಸಸಿಹಿತ್ಲು ಬೀಚ್‌ಗಳಲ್ಲಿ 25.35 ಕೋ.ರೂ. ವಿವಿಧ ಅಭಿವೃದ್ಧಿ ಕಾಮಗಾ ರಿಗಳು, ಸೌಲಭ್ಯಗಳ ಅಳವಡಿಕೆಗೆ ಅನುಮೋದನೆ ದೊರಕಿ ವರ್ಷವಾಗುತ್ತಾ ಬಂದರೂ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಬಾರದೆ ಈ ಎರಡೂ ಬೀಚ್‌ಗಳಲ್ಲಿ ಈಗಾಗಲೇ ರೂಪಿಸಿರುವ ಅಭಿವೃದ್ಧಿ ಯೋಜ ನೆಗಳು ಅನುಷ್ಠಾನವಾಗದೆ ಕಡತದಲ್ಲೇ ಬಾಕಿಯುಳಿದಿವೆ.

ಇದರಲ್ಲಿ 4.23 ಕೋ.ರೂ. ವೆಚ್ಚದಲ್ಲಿ ಪ್ರವಾಸಿ ಫೆಸಿಲಿಟೇಶನ್‌ ಕೇಂದ್ರ ಹಾಗೂ ಜೀವರಕ್ಷಕ ತರಬೇತಿ ಶಾಲೆ, 11.09 ಲಕ್ಷ ರೂ. ವೆಚ್ಚದಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು 49 ಬೆಂಚ್‌ಗಳು, 19.45 ಲಕ್ಷ ರೂ.ವೆಚ್ಚದಲ್ಲಿ 4 ಜೀವರಕ್ಷಕ ವಾಚ್‌ ಟವರ್‌, 4.01 ಲಕ್ಷ ರೂ. ವೆಚ್ಚದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ, 31.13 ಕೋ.ರೂ. ವೆಚ್ಚದಲ್ಲಿ ಸಾರ್ವಜನಿಕ ಸೇವಾ ಸೌಲಭ್ಯಗಳು, 20 ಲಕ್ಷ ರೂ, ವೆಚ್ಚದಲ್ಲಿ ಸೋಲಾನ್‌ ಬೀದಿದೀಪಗಳ ಅಳವಡಿಕೆ, 40 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ಕೆಮರಾ ಅಳವಡಿಕೆ, 75 ಲಕ್ಷ ರೂ. ವೆಚ್ಚದಲ್ಲಿ ಬೀಚ್‌ ಶುದ್ಧೀಕರಣ ಸಾಮಗ್ರಿಗಳು, 1 ಕೋ.ರೂ. ವೆಚ್ಚದಲ್ಲಿ ವಾಟರ್‌ಸ್ಫೋರ್ಟ್ಸ್ ಸಲಕರಣೆಗಳು, 20 ಲಕ್ಷ ರೂ. ವೆಚ್ಚದಲ್ಲಿ ವಾಕಿಟಾಕಿ, ಹ್ಯಾಂಡ್‌ ಮೈಕ್‌, ನಿಯಂತ್ರಣ ವ್ಯವಸ್ಥೆ ಸಹಿತ ಬೀಚ್‌ ನಿರ್ವಹಣ ಘಟಕ, 10 ಲಕ್ಷ ರೂ. ವೆಚ್ಚದಲ್ಲಿ ಬೀಚ್‌ ಮಾರ್ಷಲ್‌ ವಾಹನ, 15 ಲಕ್ಷ ರೂ. ವೆಚ್ಚದಲ್ಲಿ ಲೈಫ್‌ಬೋಯಿ, ರಕ್ಷಣಾ ಟ್ಯೂಬ್‌, ರಕ್ಷಣಾ ಬೆಡ್‌ಗಳು, 2 ಲಕ್ಷ ರೂ. ವೆಚ್ಚದಲ್ಲಿ ಕ್ಯುಬಿಕಲ್‌ ಶೋವರ್‌ ಬ್ಲಾಕ್‌, 4.80 ಕೋ.ರೂ. ವೆಚ್ಚದಲ್ಲಿ ಕುಳೂರು ಸೇತುವೆ ಬಳಿ, ಸುಲ್ತಾನ್‌ ಬತ್ತೇರಿ, ಬಂಗ್ರಕುಳೂರಿನಲ್ಲಿ ತೇಲುವ ಜೆಟ್ಟಿಗಳ ನಿರ್ಮಾಣ ಯೋಜನೆಗಳು ಒಳಗೊಂಡಿವೆ.

ಅನುಮೋದನೆಯ ನಿರೀಕ್ಷೆ
ಫಲ್ಗುಣಿ, ನೇತ್ರಾನದಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವ್ಯವಸ್ಥಿತ ಜೆಟ್ಟಿಗಳ ನಿರ್ಮಾಣ ಸಹಿತ ಮೂಲಸೌಕರ್ಯಗಳ ನಿರ್ಮಾಣಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆಯ ನಿರೀಕ್ಷೆಯಲ್ಲಿದ್ದೇವೆ. ನದಿ ತೀರಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಮಾಡಿ, ಮುಂದಿನ ದಿನಗಳಲ್ಲಿ ಜಲಪ್ರವಾಸೋದ್ಯಮ ವೇಗ ನೀಡುವ ನಿರೀಕ್ಷೆ ಇದೆ.
 - ಶಶಿಕಾಂತ್‌ ಸೆಂಥಿಲ್‌, ಜಿಲ್ಲಾಧಿಕಾರಿ, ದ.ಕ.

-ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next