Advertisement

Server problem: ಪಡಿತರ ಚೀಟಿ ತಿದ್ದುಪಡಿಗೆ “ಸರ್ವರ್‌’ ಸಮಸ್ಯೆ

03:01 PM Aug 22, 2023 | Team Udayavani |

ಹುಳಿಯಾರು: ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಪಡಿತರ ಚೀಟಿಯ ತಿದ್ದುಪಡಿ ಪ್ರಕ್ರಿಯೆಯನ್ನು ಸಾರ್ವಜನಿಕರ ಒತ್ತಾಯದ ಮೇರೆಗೆ ಶನಿವಾರದಿಂದ ಪುನಃ ಅವಕಾಶ ಕಲ್ಪಿಸಿದೆ. ಆದರೆ, ಸರ್ವರ್‌ ಸಮಸ್ಯೆಯಿಂದಾಗಿ ತಿದ್ದುಪಡಿ ಸುಗಮವಾಗಿ ನಡೆಯದೇ ಗ್ರಾಮೀಣ ಜನರು ಹೈರಾಣಾಗಿದ್ದಾರೆ.

Advertisement

ಹೊಸದಾಗಿ ಮದುವೆಯಾದ ಮಹಿಳೆಯರ ಹೆಸರು ಸೇರ್ಪಡೆ, ತಪ್ಪುಗಳ ತಿದ್ದುಪಡಿ, ಯಜಮಾನನ ಹೆಸರಿನಲ್ಲಿರುವ ಪಡಿತರ ಚೀಟಿ ಯಜಮಾನಿಗೆ ವರ್ಗಾವಣೆ, ವಿಳಾಸ ಬದಲಾವಣೆ, ಇತರೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಅದರಲ್ಲೂ, ಆ.21ರ ವರೆಗೆ ಮಾತ್ರ ಅವಕಾಶ ನೀಡಿದ್ದು, ಜನರು ಒಮ್ಮೆಲೆ ಸೇವಾ ಕೇಂದ್ರದ ಬಳಿ ಧಾವಿಸಿ ಬರುವಂತೆ ಮಾಡಿದೆ. ಆದರೆ, ದಿನವಿಡೀ ನಿಂತರೂ ಸರ್ವರ್‌ ಸ್ಥಗಿತದಿಂದ ಹೆಸರು ನೋಂದಾಯಿಸಲು ಸಾಧ್ಯವಾಗದೆ ಪರದಾಡು ವಂತಾಗಿದೆ.

ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮೀ ಯೋಜನೆಗೆ ಪಡಿತರ ಚೀಟಿಯಲ್ಲಿನ ಯಜಮಾನಿ ಫ‌ಲಾನುಭವಿ ಆಗುತ್ತಾರೆ. ಅಲ್ಲದೆ, ಅನ್ನಭಾಗ್ಯ ಯೋಜನೆಯಲ್ಲಿ ಒಬ್ಬರಿಗೆ 10 ಕೇಜಿ ಪಡಿತರ ವಿತರಿಸಲಾಗುತ್ತದೆ. ಈ ಎರಡೂ ಯೋಜನೆಯ ಸದ್ಬಳಕೆಗೆ ಪಡಿತರ ಚೀಟಿ ಅತೀ ಮುಖ್ಯವಾಗಿದೆ. ಹಾಗಾಗಿ, ಯಜಮಾನನ ಬದಲು ಯಜಮಾನಿ ಮಾಡಲು, ಹೊಸದಾಗಿ ಕುಟುಂಬದ ಸದಸ್ಯರನ್ನು ಸೇರ್ಪಡೆ ಮಾಡಲು ಜನ ಸೇವಾ ಕೇಂದ್ರದ ಮುಂದೆ ಜಮಾಯಿಸುತ್ತಿದ್ದಾರೆ.

ಕೆಲಸ ಕಾರ್ಯ ಬಿಟ್ಟು ಕಚೇರಿಗೆ ಅಲೆದಾಟ: ದೈನಂದಿನ ಕೂಲಿ ಕೆಲಸ ಬಿಟ್ಟು ಹಳ್ಳಿಗಳಿಂದ ಜನರು ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಪರಿಣಾಮ ಪ್ರತಿಯೊಂದು ಸೇವಾ ಕೇಂದ್ರದ ಬಳಿ ಜನಜಾತ್ರೆ ಸೇರುತ್ತಿದೆ. ವಿದ್ಯುತ್‌ ಕಣ್ಣಾ ಮುಚ್ಚಾಲೆ ಒಂದೆಡೆಯಾದರೆ ಸರ್ವರ್‌ ಕಡಿತದಿಂದ ಕೆಲಸಗಳು ವಿಳಂಬವಾಗುತ್ತಿವೆ. ಪರಿಣಾಮ ಊಟತಿಂಡಿ ಬಿಟ್ಟು ಬಿಸಿಲಿನಲ್ಲಿ ದಿನವಿಡಿ ಕಾಯುವಂತಾಗಿದೆ. ಇಡೀ ದಿನ ಕಾದರೂ ತಿದ್ದುಪಡಿ ಆಗದೆ ಕಾದು ಸುಸ್ತಾಗಿ ಬೇಸರದಿಂದ ಹಿಡಿಶಾಪ ಹಾಕಿ ಹಿಂದಿರುವುದು ಸಾಮಾನ್ಯವಾಗಿದೆ.

ಸರ್ವರ್‌ ಸಮಸ್ಯೆ ನಿವಾರಿಸಿ: ಸರ್ಕಾರ ಐದು ತಿಂಗಳ ನಂತರ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ. ಆದರೆ, ಸರ್ವರ್‌ ಸಮಸ್ಯೆ ಸರಿಪಡಿಸದೆ ನಿರ್ಲಕ್ಷಿಸಿರುವುದು ಜನರ ಮೂಗಿಗೆ ತಿದ್ದುಪಡಿಯ ತುಪ್ಪ ಸವರಿದಂತೆ ಆಗಿದೆ. ಸರ್ಕಾರಕ್ಕೆ ಪಡಿತರ ಚೀಟಿಯ ಸಮಸ್ಯೆ ಸರಿಪಡಿಸುವ ನೈಜ ಕಾಳಜಿಯಿದ್ದರೆ ಸರ್ವರ್‌ ಸಮಸ್ಯೆ ನಿವಾರಿಸಬೇಕಿದೆ. ಅಲ್ಲದೆ, ತಿದ್ದುಪಡಿಯ ಕಾಲಾವಕಾಶವನ್ನು ಮತ್ತಷ್ಟು ದಿನ ವಿಸ್ತರಿಸಬೇಕಿದೆ ಎಂದು ಗ್ರಾಹಕರು ಆಗ್ರಹಿಸಿದ್ದಾರೆ.

Advertisement

ಶನಿವಾರದಿಂದ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಸರ್ವರ್‌ ಸಮಸ್ಯೆಯಿಂದ ಇದೂವರೆಗೂ ಒಂದೇ ಒಂದು ತಿದ್ದುಪಡಿಯಾಗಿಲ್ಲ. ಸರ್ವರ್‌ ಸಮಸ್ಯೆ ಎಂದರೂ ಗ್ರಾಹಕರು ಸೇವಾ ಕೇಂದ್ರದ ಬಳಿ ಕುಳಿತು ಹತ್ತತ್ತು ನಿಮಿಷಕ್ಕೂ ಸರಿಯಾಯ್ತ ನೋಡಿ ಎಂದು ದುಂಬಾಲು ಬೀಳುತ್ತಿದ್ದಾರೆ. ಸಂಜೆ 4 ಗಂಟೆಯವರೆಗೆ ಕಾದು ಹಿಂದಿರುಗುತ್ತಾರೆ. ಪರಿಣಾಮ ಸೇವಾ ಕೇಂದ್ರದಲ್ಲಿ ಬೇರೆ ಕೆಲಸವೂ ಮಾಡಲಾಗದೆ 3 ದಿನದಿಂದ ನಷ್ಟ ಅನುಭವಿಸುತ್ತಿದ್ದಾರೆ.-ಬಿ.ಕೆ.ಈರಣ್ಣ , ಯಳನಾಡು ಸೇವಾ ಕೇಂದ್ರದ ನೌಕರ

ಪಡಿತರ ಚೀಟಿ ತಿದ್ದುಪಡಿಗೆ ಸರ್ವರ್‌ ಸಮಸ್ಯೆ ಎದುರಾಗಿದೆ. ಈಗಾಗಲೇ ಜನರು ನಮ್ಮ ಗಮನಕ್ಕೆ ತಂದಿದ್ದಾರೆ. ಈ ಸಮಸ್ಯೆ ಚಿಕ್ಕನಾಯಕನಹಳ್ಳಿಗೆ ಸಮೀತವಾಗಿಲ್ಲ, ಇಡೀ ರಾಜ್ಯದ್ದಾಗಿದೆ. ತಾಂತ್ರಿಕ ವಿಭಾಗಕ್ಕೆ ಈಗಾಗಲೇ ದೂರು ಸಲ್ಲಿಸಲಾಗಿದೆ. ಶೀಘ್ರದಲ್ಲೇ  ಸಮಸ್ಯೆ ಸರಿಪಡಿಸುವುದಾಗಿ ಮೇಲಧಿಕಾರಿ ಗಳು ತಿಳಿಸಿದ್ದಾರೆ. ಅಲ್ಲಿಯವರೆಗೆ ಜನರು ಸಮಾಧಾನದಿಂದ ಇರಬೇಕು. ಸಮಸ್ಯೆ ಖಂಡಿತ ಬಗೆಹರಿಯುತ್ತದೆ.-ನಾಗಮಣಿ, ತಹಶೀಲ್ದಾರ್‌, ಚಿಕ್ಕನಾಯಕನಹಳ್ಳಿ

ಕೆಲಸ ಕಾರ್ಯ ಬಿಟ್ಟು 15 ಕಿ.ಮೀ. ದೂರದ ಮೇಲನಹಳ್ಳಿಯಿಂದ ರೇಷನ್‌ ಕಾರ್ಡ್‌ ತಿದ್ದು ಪಡಿಗಾಗಿ ಹುಳಿಯಾರಿಗೆ ಬರುತ್ತಿದ್ದೇವೆ. ಬೆಳಗ್ಗೆ ಯಿಂದ ಸಂಜೆಯವರೆಗೆ ಕಾದರೂ ಸಮಸ್ಯೆ ಬಗೆ ಹರಿದಿಲ್ಲ. ಹೈರಣಾಗಿ ಹಿಂದಿರುಗುತ್ತಿದ್ದೇನೆ. ಊಟ ತಿಂಡಿಗೂ ಹೋಗದೆ ಸಾಲಿನಲ್ಲಿ ದಿನವೂ ನಿಲ್ಲುತ್ತಿದ್ದೇನೆ.-ಎಂ.ಎಚ್‌.ಶಾಂತಮೂರ್ತಿ, ಎಚ್‌.ಮೇಲನಹಳ್ಳಿ ನಿವಾಸಿ

 

– ಕಿರಣ್‌ಕುಮಾರ್‌

 

Advertisement

Udayavani is now on Telegram. Click here to join our channel and stay updated with the latest news.

Next