Advertisement

ಪ್ರತ್ಯೇಕ ರಸ್ತೆ ಅಪಘಾತ ಏಳು ಮಂದಿ ದುರ್ಮರಣ”

06:25 AM Jan 09, 2018 | Team Udayavani |

ಚಿತ್ರದುರ್ಗ/ಸಾಗರ: ರಾಜ್ಯದ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಬೆಳಗಾವಿ ಜಿಲ್ಲೆ ಗೋಕಾಕ್‌ ತಾಲೂಕಿನ ಐವರು ಸ್ನೇಹಿತರು ಸೇರಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

Advertisement

ಲಾರಿ ಮತ್ತು ಕ್ರೂಸರ್‌ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟು, 8 ಮಂದಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಸೀಬಾರದ ರಾಷ್ಟ್ರೀಯ ಹೆದ್ದಾರಿ 4ರ ಚನ್ನನಾಯಕನಹಟ್ಟಿ ಸೇತುವೆ ಬಳಿ ಸೋಮವಾರ ಬೆಳಗಿನ ಜಾವ ಸಂಭವಿಸಿದೆ.

ಮೃತರನ್ನು ಕ್ರೂಸರ್‌ ಚಾಲಕ ಸುರೇಶ್‌ ಪಾಳೇಕಾರ, ಸ್ನೇಹಿತರಾದ ರಾಕೇಶ್‌, ಸಿದ್ಧಾರ್ಥ, ವಿನೋದ ಮತ್ತು ಶಿವಲಿಂಗ ಕುಕನೂರ್‌ ಎಂದು ಗುರುತಿಸಲಾಗಿದೆ. ಇನ್ನುಳಿದ ಎಂಟು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದಾವಣಗೆರೆ ಹಾಗೂ ಚಿತ್ರದುರ್ಗ ಆಸ್ಪತ್ರೆಗಳಿಗೆ  ದಾಖಲಿಸಲಾಗಿದೆ.

ಮೃತರು ಹಾಗೂ ಗಾಯಾಳುಗಳು ಸುಮಾರು 18ರಿಂದ 23 ವರ್ಷದವರಾಗಿದ್ದು ಎಂಜಿನಿಯರಿಂಗ್‌ ಸೇರಿ ವಿವಿಧ ಪದವಿ ವಿದ್ಯಾರ್ಥಿಗಳಾಗಿದ್ದಾರೆ. ಬೆಳಗಾವಿಯಿಂದ ಕಳೆದ ಶನಿವಾರ ಮಡಿಕೇರಿ-ಮೈಸೂರು ಕಡೆ ಪ್ರವಾಸ ತೆರಳಿದ್ದರು. ಭಾನುವಾರ ರಾತ್ರಿ 11:30 ಗಂಟೆಗೆ ಐಸೂರು ಹೊರ ವಲಯದಲ್ಲಿ ಊಟ ಮಾಡಿ ಅಲ್ಲಿಂದ ಹೊರಟ ಇವರು ಬೆಳಗಿನ ಜಾವ 5:30ರ ಸುಮಾರಿಗೆ ಅಪಘಾತಕ್ಕೆ ತುತ್ತಾಗಿದ್ದಾರೆ. ಚಾಲಕನ ಅತಿವೇಗ ಮತ್ತು ನಿದ್ರೆ ಮಂಪರೇ ಅಪಘಾತಕ್ಕೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ.

ಮೃತರು ಬೆಳಗಾವಿ ಜಿಲ್ಲೆ ಗೋಕಾಕ್‌ ತಾಲೂಕಿನ ಮುನ್ಯಾಳು, ಹಳ್ಳೂರು, ಸೈದಾಪುರ ಖಾನೇಹಟ್ಟಿ, ಗ್ರಾಮದವರು ಎಂದು ತಿಳಿದು ಬಂದಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Advertisement

ಕಬ್ಬಿಣದ ರಾಡು ತುಂಬಿಕೊಂಡು ಚಿತ್ರದುರ್ಗ ಕಡೆಯಿಂದ ದಾವಣಗೆರೆ ಮಾರ್ಗವಾಗಿ ತೆರಳುತ್ತಿದ್ದ ಯಮರೂಪಿ ಲಾರಿಗೆ ಚಿತ್ರದುರ್ಗದಿಂದ ಗೋಕಾಕ್‌ ಕಡೆ ಸಾಗುತ್ತಿದ್ದ ಕ್ರೂಸರ್‌ ವಾಹನ ಹಿಂಬದಿಯಿಂದ ಏಕಾಏಕಿ ಡಿಕ್ಕಿ ಹೊಡೆದಿದೆ. ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕ್ರೂಸರ್‌ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಹೆದ್ದಾರಿ ಗಸ್ತಿನಲ್ಲಿದ್ದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು  ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸಾಗಿಸಿ ಪ್ರಾಣ ರಕ್ಷಿಸಿದ್ದಾರೆ.

ಬೈಕ್‌ ಕಂದಕಕ್ಕೆ ಬಿದ್ದು ಇಬ್ಬರು ಸಾವು: ಬೈಕ್‌ ಕಂದಕಕ್ಕೆ ಬಿದ್ದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ತಲವಾಟದ ಎನ್‌ಎಚ್‌ 206ರಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹಸ್ವಂತೆ ಗ್ರಾಮದ ಯುವರಾಜ (25), ಮಂಜು (28) ಮೃತಪಟ್ಟವರು.

ಇವರಿಬ್ಬರೂ ಬೈಕ್‌ನಲ್ಲಿ ತೆರಳುತ್ತಿರುವಾಗ ತಾಳಗುಪ್ಪ ಸಮೀಪದ ತಲವಾಟ ಬಳಿ ಬೈಕ್‌ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಪೆಟ್ಟು ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.  ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next