Advertisement

ಹಿರಿಯ ಪತ್ರಕರ್ತ ಉದಯಕುಮಾರ್‌ ಪೈ ಅಸೌಖ್ಯದಿಂದ ನಿಧನ

12:07 AM Aug 16, 2020 | mahesh |

ಉಡುಪಿ: “ಉದಯವಾಣಿ’ಯ ನಿವೃತ್ತ ಉಪ ಸಂಪಾದಕ, ಹಿರಿಯ ಪತ್ರಕರ್ತ, ಮಣಿಪಾಲ ಸಮೀಪದ ತ್ರಿಶಂಕುನಗರದ ನಿವಾಸಿ ಉದಯಕುಮಾರ್‌ ವಾಮನ ಪೈ (70) ಅವರು ಅಸೌಖ್ಯದಿಂದ ಆ. 14ರಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Advertisement

ಉದಯಕುಮಾರ್‌ ಪೈ ಅವರು ಉ.ಕ. ಜಿಲ್ಲೆ ಕುಮಟ ತಾಲೂಕಿನ ಕೋಡ್ಕಣಿಯವರು. ಹೊಟೇಲ್‌ ನೌಕರಿಯನ್ನು ಅರಸಿ ಚೆನ್ನೈಗೆ ಹೋದ ಅವರು ಹೊಟೇಲ್‌ ನೌಕರರನ್ನು ಒಂದುಗೂಡಿಸಿ ಕಥಾಪುಸ್ತಕಗಳನ್ನು ತರಿಸಿ ಓದಿಸುತ್ತಿದ್ದರು, ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಅಲ್ಲಿ ಕನ್ನಡ ಸಂಘದಲ್ಲಿಯೂ ಸಕ್ರಿಯರಾಗಿದ್ದರು. ಆರಂಭಿಕ ಹಂತದಲ್ಲಿ ಚೈನ್ನೈಯಲ್ಲಿ ಯುಎಸ್‌ಎಸ್‌ಆರ್‌ನ ಸೋವಿಯತ್‌ ಲ್ಯಾಂಡ್‌ ಪತ್ರಿಕೆಯಲ್ಲಿ ಕಂಪೋಸಿಟರ್‌ ಆಗಿ ಕೆಲಸ ಮಾಡಿದ್ದರು.

ಚಂದಮಾಮ ಪತ್ರಿಕೆಯಲ್ಲಿ ಕೆಲಸ ಮಾಡಿದ ಪೈಯವರು, ಬಳಿಕ ಚಿತ್ರದೀಪ, ವಿಜಯಚಿತ್ರದಲ್ಲಿ ಕಾರ್ಯನಿರ್ವಹಿಸಿದರು. ಮಣಿಪಾಲದ ರೂಪತಾರಾ ಪತ್ರಿಕೆಯಲ್ಲಿ ಕೆಲಸ ಮಾಡಿದ ಪೈಯವರು, ಬಳಿಕ ಕೊನೆಯ ಸುಮಾರು 15 ವರ್ಷಗಳ ಕಾಲ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಉದಯವಾಣಿಯ ಸಿನೆಮಾ ವಿಭಾಗವನ್ನು ನಿರ್ವಹಿಸುತ್ತಿದ್ದ ಅವರು ಸುದೀರ್ಘ‌ ಅವಧಿ ಸಿನೆಮಾ ಚಿತ್ರರಂಗದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದರು. ಕೊನೆಯ ಅವಧಿಯಲ್ಲಿ ಸುದ್ದಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು.

ಗೋಮತಿ ಮತ್ತು ಶ್ರೀರಾಮ್‌ ಎಂಬ ಅಂಕಿತದಲ್ಲಿ ಅಂಕಣ, ಲೇಖನಗಳನ್ನು ಬರೆಯುತ್ತಿದ್ದರು. ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಅತ್ಯುತ್ತಮ ಲೇಖನಕ್ಕೆ ಕೊಡಮಾಡುವ ಪ್ರಥಮ ಪ್ರಶಸ್ತಿಗೆ ಪೈಯವರು ಭಾಜನರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next