Advertisement

ಹಿರಿ ಹಿರಿ ಹಿಗ್ಗಿಗೆ ಹಿರಿಯರೇ ಕಾರಣವಲ್ಲವೇ?

12:30 AM Sep 30, 2018 | |

ನಾನು/ನಾವು ದುಡಿಯುತ್ತಿದ್ದೇನೆ ಹಾಗಾಗಿ ಅವರನ್ನು ನೋಡಿಕೊಳ್ಳಲಾಗುತ್ತಿಲ್ಲ ಅಥವಾ ಆಗುವುದಿಲ್ಲ.. ಆದ ಕಾರಣ ಅವರಿಗೊಂದಿಷ್ಟು ಹಣವನ್ನು ಕಳಿಸಿದರಾಯಿತು ಅಥವಾ ಕೊಟ್ಟರಾಯಿತು. ನಾನೂ ಖುಷ್‌ ಅವರೂ ಖುಷ್‌! ಎಂಬ ಮನಸ್ಸುಗಳು ಹೆಚ್ಚಾಗುತ್ತಿವೆ.

Advertisement

ಹಿರಿಯ ನಾಗರಿಕರ ಕಲ್ಯಾಣ ಮತ್ತು ಸೇವಾ ಸೌಲಭ್ಯಗಳನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ ಹಾಗೂ ಹಿರಿಯರ ಪಾಲನಾ ನಿರ್ವಹಣೆ ಕಲ್ಯಾಣ ಕಾಯ್ದೆ-2007 ಅನ್ನು ಸಮರ್ಥವಾಗಿ ಜಾರಿಗೆ ತಂದಿರುವ ರಾಜ್ಯ ಎಂದು ಪರಿಗಣಿಸಿ ಕಳೆದ ವರ್ಷ ಕರ್ನಾಟಕಕ್ಕೆ ಬಂದ ಪ್ರಶಸ್ತಿಯನ್ನು  ನಮ್ಮ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಉಮಾಶ್ರೀಯವರು ಸ್ವೀಕರಿಸಿದ್ದರು. ಇದು ಒಂದು ಸಂತೋಷದ ವಿಷಯವಾದರೂ ಇನ್ನೊಂದು ಮಗ್ಗುಲಿಗೆ ಹೊರಳಿ ನೋಡಿದರೆ  ಇಂದಿಗೂ ಆತಂಕವೆನಿಸುತ್ತಿದೆ. ಕಾರಣವಿಷ್ಟೇ ಹಿರಿಯರಿಗೋಸ್ಕರ ಅಂದರೆ ಅವರ ಲಾಲನೆ ಪಾಲನೆಗೆ ಕಾನೂನನ್ನು ತರುವಷ್ಟು ಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ.  ಹಿರಿಯರು ತಮ್ಮ ಮಕ್ಕಳಿಂದ ದೂರ  ಉಳಿದು ಸ್ವತಂತ್ರವಾಗಿ ಅಥವಾ ಅನಾಥಾಶ್ರಮ ಸೇರಿ ಬದುಕನ್ನು ನೀಗಿಸುತ್ತಿದ್ದಾರೆ. ಅಂದರೆ ದಿನದಿನಕ್ಕೂ ಹೆತ್ತ ತಂದೆತಾಯಿಗಳನ್ನು ಮನೆಯಿಂದ ಹೊರಹಾಕುವ ಅಥವಾ ಸಾಗಹಾಕುವ ಮಕ್ಕಳು ಹೆಚ್ಚಾಗುತ್ತಿದ್ದಾರೆಂದೇ ಅರ್ಥ. ಇಂದಿನ ಪರಿಸ್ಥಿತಿಯಲ್ಲಿ ಹಿರಿಯರನ್ನು ಸರ್ಕಾರವೇ ಸರಿಯಾಗಿ ನೋಡಿಕೊಳ್ಳಲಾರದಂಥ ಸ್ಥಿತಿ ನಿರ್ಮಾಣವಾಗಿದೆ. ಇಂಥವರೆಲ್ಲರಿಗೂ ಸರ್ಕಾರ ಸರಿಯಾದ ಸೌಲಭ್ಯಗಳನ್ನು ಕಲ್ಪಿಸಿ, ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಸರ್ಕಾರ ಹಿರಿಯರಿಗೊಂದಿಷ್ಟು ಸೌಲಭ್ಯವನ್ನು ಕಲ್ಪಿಸಿಕೊಟ್ಟು ಅವರ ಜೀವನಕ್ಕೆ ಆಧಾರವನ್ನು ಒದಗಿಸಿ ಅವರ ಬದುಕನ್ನು ಹಸನುಗೊಳಿಸುತ್ತಿದೆ. ಅದು ಶ್ಲಾಘನೀಯ. ಹಾಗಾಗಿ ನಮ್ಮ ಸರ್ಕಾರಕ್ಕೆ ಪ್ರಶಸ್ತಿ. ಇದಕ್ಕೆ ಸಂತೋಷ ವ್ಯಕ್ತಪಡಿಸಬೇಕೋ ಇಲ್ಲಾ ವಿಷಾದ ವ್ಯಕ್ತ ಪಡಿಸಬೇಕೋ ಗೊತ್ತಾಗುತ್ತಿಲ್ಲ.

ಆಧುನಿಕ ಕಾಲಘಟ್ಟದಲ್ಲಿ ತನ್ನದೇ ಆದ ಪರಿಸ್ಥಿತಿಗಳಿಗೆ ಅನುಸಾರವಾಗಿ, ತನ್ನದೇ ಆದ ಜೀವನವನ್ನು ನಿರ್ವಹಣೆ ಮಾಡುವ ಸಲುವಾಗಿ ಸದಾ ಕಾರ್ಯೋನ್ಮುಖನಾಗಿರುವ  ಕಾರಣದಿಂದಲೋ ಅಥವಾ ಹಿರಿಯರ ಬಗ್ಗೆ  ಉಪಯೋಗಕ್ಕೆ ಬಾರದವರೆಂಬ ತಾತ್ಸಾರ ಮನೋಭಾವನೆಯಿಂದಲೋ ಏನೋ ಅವರ ಆರೈಕೆ ಮಾಡುವ ಭಾವನೆಯೇ ಕಡಿಮೆಯಾಗುತ್ತಿದೆ. ಬಾಲ್ಯಾವಸ್ಥೆಯಿಂದ  ಹಿಡಿದು ಚೆನ್ನಾಗಿ ವಿದ್ಯಾಭ್ಯಾಸ ಮಾಡಿಸಿ ನಂತರ  ಮದುವೆ ಮಾಡಿ ಮಕ್ಕಳಾಗುವ ತನಕ ಕಣ್ಣ ರೆಪ್ಪೆಯಂತೆ ಮಕ್ಕಳನ್ನು ಮೊಮ್ಮಕ್ಕಳನ್ನು ನೋಡಿಕೊಂಡಿದ್ದಕ್ಕೆ ಉತ್ತರವಾಗಿ ಮನೆಯಿಂದ ತಂದೆತಾಯಿಗಳನ್ನು ಹೊರಹಾಕುವುದೇ ಅವರಿಗೆ ಕೊಟ್ಟ ಮರ್ಯಾದೆ ಮತ್ತು ಜೀವನ ಪರ್ಯಂತ ನೆನೆಯುವ ನೆನಪಿನ ಕಾಣಿಕೆ. ನಾನು/ನಾವು ದುಡಿಯುತ್ತಿದ್ದೇನೆ ಹಾಗಾಗಿ ಅವರನ್ನು ನೋಡಿಕೊಳ್ಳಲಾಗುತ್ತಿಲ್ಲ ಅಥವಾ ಆಗುವುದಿಲ್ಲ.. ಆದ ಕಾರಣ ಅವರಿಗೊಂದಿಷ್ಟು ಹಣವನ್ನು ಕಳಿಸಿದರಾಯಿತು ಅಥವಾ ಕೊಟ್ಟರಾಯಿತು. ನಾನೂ ಖುಷ್‌ ಅವರೂ ಖುಷ್‌! ಎಂಬ ಮನಸ್ಸುಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಪರಿಚಯಸ್ಥರ ಮನೆಗೆಂದು ಬೆಂಗಳೂರಿಗೆ ಹೋದಾಗಿನ ನೆನಪೊಂದು ನನ್ನನ್ನು ದಿನಾ ಕಾಡುತ್ತಿರುತ್ತದೆ, ಅದೇನೆಂದರೆ ಅವರ ಪಕ್ಕದ ಮನೆಯವರು ಸಿರಿವಂತರು, ಎಲ್ಲಾ ಸೌಲಭ್ಯವುಳ್ಳವರು ಯಾವುದಕ್ಕೂ ಕಡಿಮೆ ಇಲ್ಲದವರು ಮತ್ತು ಮನೆಯೂ ತುಂಬಾ ಚೆನ್ನಾಗೇ ಇದೆ, ಅಂದರೆ ಸುಂದರವಾಗೇ ಕಟ್ಟಿಸಿದ್ದಾರೆ,ಯಾವ ವಿಐಪಿ ಕಟ್ಟಿರುವ ಮನೆಗಳಿಗಿಂತಲೂ ಕಡಿಮೆ ಏನಿಲ್ಲ.  ಆದರೆ ಏನಿರಬೇಕೋ..ಅದಿಲ್ಲ, ಯಾರಿರಬೇಕೋ.. ಅವರಿಲ್ಲ..! ಆ ಮನೆಯ ಯಜಮಾನರುಗಳು ಅನಾಥಾಶ್ರಮದಲ್ಲಿದ್ದಾರೆ, ಕಾರಣ ಅವರ ಮಕ್ಕಳು ಅಮೇರಿಕದ ಟೆಕ್ಸಾಸ್‌ನಲ್ಲಿ ಒಳ್ಳೆಯ ಕೆಲಸದಲ್ಲಿದ್ದಾರೆ, ಅವರು ಆ ಕೆಲಸವನ್ನು ಬಿಟ್ಟು ಇಲ್ಲಿಗೆ ಬರಲಾರರು, ಅಲ್ಲಿನ ವಾತಾವರಣಕ್ಕೆ ಅವರು ಹೊಂದಿಕೊಂಡು ಇಲ್ಲಿನದೆಲ್ಲವನ್ನು ತುತ್ಛವಾಗಿ ಕಾಣುತ್ತಿದ್ದಾರೆ. ಇನ್ನು ಇಲ್ಲಿರುವ ಅವರ ತಂದೆತಾಯಿಗಳು  ಇಲ್ಲಿನ ವಾತಾವರಣಕ್ಕೆ ಒಗ್ಗಿರುವುದರಿಂದ ಆಲ್ಲಿ ಹೋಗಲು ಇಷ್ಟಪಡರು, ಒಮ್ಮೆ ಇಷ್ಟ ಪಟ್ಟಿದ್ದರಂತೆ….! ಆದರೆ ಅವರನ್ನು ಅಮೇರಿಕಾಕ್ಕೆ ಕರೆದುಕೊಂಡು ಹೋಗಲು ಅವರ ಮಕ್ಕಳು ಇಷ್ಟ ಪಡಲಿಲ್ಲವಂತೆ..!  ಕೆಲದಿನಗಳ ನಂತರ ಆ ಪೋಷಕರಿಗೆ ಗೊತ್ತಾಯ್ತಂತೆ.. ಅಲ್ಲಿಗೆ ಅವರನ್ನು ಕರೆದೊಯ್ದರೆ ಮಕ್ಕಳ ಮರ್ಯಾದೆ ಹರಾಜಾಗುತ್ತಿತ್ತಂತೆ..! ಅದಕ್ಕಾಗೇ ಅವರು ತಂದೆತಾಯಿಗಳನ್ನು ಇಲ್ಲೇ ಬಿಟ್ಟಿದ್ದಾರೆ. ದಿನಕ್ಕೊಮ್ಮೆ ಫೋನಿನಲ್ಲಿ ಪ್ರೀತಿಯಿಂದ ಮಾತಾಡುತ್ತಾರೆ..!? ಆರೋಗ್ಯದ ಕಡೆಗೆ ಹೆಚ್ಚಿನ ಗಮನವಿಡಿ.. ಎಂಬ ಮಾತಿನಿಂದ ಅವರ ಕಾಳಜಿಯನ್ನು ತೋರುತ್ತಾರೆ..! ಆದರೆ ಆ ತಂದೆತಾಯಿಗಳು ನಿಟ್ಟುಸಿರು ಬಿಡುತ್ತಾರೆ..!. ಏನು ದುಡಿದರೇನು.. ಎಷ್ಟು ಸಂಪಾದಿಸಿದರೇನು…? ನಮ್ಮ ನಿಜವಾದ ಆಸ್ತಿ ನಮ್ಮ ಬಳಿಯಲ್ಲಿಲ್ಲ. ಇನ್ನು ಈ ಸ್ಥಿರಾಸ್ತಿಯನ್ನು ನೋಡಿಕೊಳ್ಳಲಾಗದು. ಈ ಮನೆಯನ್ನೂ ಸ್ವಚ್ಚಮಾಡಲಾಗದಷ್ಟೂ ಶಕ್ತಿ ನಮ್ಮಲ್ಲಿಲ್ಲದೇ ಊಟ ತಿಂಡಿ ಮಾಡಿಕೊಳ್ಳಲಾಗದೇ ಬಟ್ಟೆಬರೆ ತೊಳೆಯಲಾರದೇ ಬದುಕನ್ನು ಸಾಗಿಸುವುದು ಕಷ್ಟವೆನಿಸಿದ್ದರಿಂದ, ಅವರ ಮಕ್ಕಳ ಬಳಿ ಇದೆಲ್ಲವನ್ನೂ ಹೇಳಿಕೊಂಡಾಗ ಅವರು ನಾವು ತುಂಬಾ ಬ್ಯುಸಿಯಾಗಿರುವುದರಿಂದ ನಿಮ್ಮನ್ನು ನೋಡಿಕೊಳ್ಳಲು ಸಮಯ ಕೊಡುವುದಕ್ಕಾಗುವುದಿಲ್ಲ, ಆದ್ದರಿಂದ ನಿಮ್ಮನ್ನು ಒಂದು ಒಳ್ಳೆಯ ಪೇಯಿಂಗ್‌ ಗೆಸ್ಟ್‌ ಹೌಸ್‌ನಲ್ಲಿ ಇರಿಸುತ್ತೇವೆ.

ಅಲ್ಲಿ ನಿಮ್ಮನ್ನು ನಮಗಿಂತಲೂ ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಮ್ಮ ಹಲವು ಸ್ನೇಹಿತರು ಅವರ ತಂದೆತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸಿದ್ದಾರೆ. ಅವರೆಲ್ಲರೂ ಅಲ್ಲಿ ಆರೋಗ್ಯದಿಂದಿದ್ದಾರೆ, ಅಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಅಲ್ಲಿ ಸೇರಿಸುತ್ತೇವೆ ಎಲ್ಲಾ ಖರ್ಚುಗಳನ್ನು ನಾವೇ ಭರಿಸುತ್ತೇವೆ. ನೀವೇನೂ ಯೋಚಿಸಬೇಡಿ, ಎಂದಾಗ ಆ ಹೆತ್ತ ಕರುಳುಗಳಿಗೆ ಏನನ್ನಿಸಿರಬೇಕು ಹೇಳಿ..!? ಅಂತೆಯೇ ಆ ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿದರಂತೆ. ಸದ್ಯ ಅವರು  ಅಲ್ಲೇ ಯಾರೋ ಬಂದು ಹೋಗುವವರನ್ನು ಕಂಡು ಅವರಲ್ಲಿ ತಮ್ಮ ಮಕ್ಕಳನ್ನು ಕಂಡುಕೊಂಡಿದ್ದಾರೆ. ನನ್ನ ಪರಿಚಯಸ್ಥರು ಯಾವಾಗಲಾದರೊಮ್ಮೆ ಅವರನ್ನು ಮಾತನಾಡಿಸಲು ಆಶ್ರಮಕ್ಕೆ ಹೋದಾಗ, ನೋಡಿ ನಮ್ಮ ಸ್ಥಿತಿಯನ್ನು, ಎಲ್ಲವೂ ಇದ್ದು ನಾವು ಅನಾಥವಾಗಿದ್ದೇವೆ. ಕಾರಣ ನಾವು ನಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿದ್ದೇವೆ. ಓದಿಸಿದ ತಪ್ಪಿಗೆ ನಾವು ಇವತ್ತು ಯಾರೋ ಬೇಯಿಸಿದ ಊಟವನ್ನು ಯಾರೊಟ್ಟಿಗೋ ಕುಳಿತು ಊಟ ಮಾಡುತ್ತಿದ್ದೇವೆ, ಮನೆಯೇ ಮಂತ್ರಾಲಯವೆಂದು ತಿಳಿದ ನಾವು ಇಂದು ಅನಾಥಾಲಯದಲ್ಲಿದ್ದೇವೆ. ನೀವು ಮಾತ್ರ ನಾವು ಮಾಡಿದ ತಪ್ಪನ್ನು ಮಾಡಬೇಡಿ. ಮಕ್ಕಳಿಗೆ ಜಾಸ್ತಿ ಶಿಕ್ಷಣ ಕೊಡಿಸಬೇಡಿ. ಅವರು ನಿಮೊ¾ಟ್ಟಿಗೆ ಇರುವುದಿಲ್ಲ, ಹಾರಿಹೋಗುತ್ತಾರೆ.. ಹುಷಾರು..! ಎಂದರಂತೆ. ಹೀಗೆ ಹೇಳುವಾಗ ಆ ತಂದೆತಾಯಿ ಮನಸ್ಸಿನಲ್ಲಿ ಎಷ್ಟೊಂದು ದುಃಖವಿದ್ದಿರಬೇಕು  ಅಲ್ಲವೇ..? ಇಂಥ ಕಥೆಗಳು ನಮ್ಮ ಸುತ್ತಮುತ್ತ ನಡೆಯುತ್ತಿವೆ. ಆದರೂ ನಾವು ಯಾವುದಕ್ಕೂ ತಲೆಕೆಡಿಸಿಕೋಳ್ಳದಂತೆ ನಾವಾಯಿತು ನಮ್ಮ ಕೆಲಸವಾಯಿತು ಎಂದು ಅತ್ತ ಗಮನಹರಿಸದಂತಿದ್ದೇವೆ.. ಬೇರೆಯವರ ಸಮಸ್ಯೆಗೆ ನಾವೇಕೆ ತಲೆಕೆಡಿಸಿಕೊಳ್ಳಬೇಕು ಅಥವಾ ಎಷ್ಟು ಬಾರಿ ಸ್ಪಂದಿಸಬೇಕು..? ಅವರ ಮಕ್ಕಳಿಗೇ ಅಂಥ ಜವಾಬ್ದಾರಿ ಇಲ್ಲ.. ಇನ್ನು ನಮಗೆ ನಮ್ಮದೇ ಜವಾಬ್ದಾರಿಗಳಿವೆ ಅವುಗಳನ್ನೇ ನಿಭಾಯಿಸಲು ಆಗುತ್ತಿಲ್ಲ.. ಇನ್ನು ಇವುಗಳ ಗೊಡವೆಯೇಕೆ..? ಎಂದು ಹೇಳುವ ಜನರನೇಕವಿರುವುದರ ಕಾರಣ ಹಿರಿಯರು ಬೀದಿಯಲ್ಲಿ ಬೀಳುವ ಸ್ಥಿತಿ ಬಂದಿದೆ.

   ಪ್ರಿಯ ಒದುಗರೇ… ನಿಮಗೆ ಅವಕಾಶವಿದ್ದಾಗ ಅಥವಾ ಸಮಯ ಮಾಡಿಕೊಂಡು ಇಂಥ ಅನಾಥಾಶ್ರಮಗಳಿಗೆ ಭೇಟಿ ನೀಡಿ ಅವರೊಂದಿಗೆ ಸ್ವಲ್ಪ ಸಮಯ ಕಳೆದರೆ ಆಗ ಅವರ ದುಃಖ ದುಮ್ಮಾನಗಳನ್ನು ಹಂಚಿಕೊಳ್ಳುತ್ತಾರೆ.. ಅವರು ಹಗುರಾಗುತ್ತಾರೆ.. ಅದಕ್ಕಿಂತ ನಿಮ್ಮನ್ನು ಮಕ್ಕಳೆಂದೇ ತಿಳಿಯುತ್ತಾರೆ.. ಮನೆಗೆ ಹೊರಟಾಗ ಮತ್ತೂಮ್ಮೆ ಬನ್ನಿ ಎಂದು ಕೇಳಿಕೊಳ್ಳುತ್ತಾರೆ.. ಆಗ ಮತ್ತೂಮ್ಮೆ ಅವರನ್ನು ನೋಡಲು ಬರಲೇಬೇಕು ಅವರೊಡನೆ ಮಾತಾಡಬೇಕು.. ಎಂದು ನಮಗನ್ನಿಸುತ್ತದೆ. ಇಂಥ ಸ್ಥಿತಿಯಲ್ಲಿ ನಾವು ಅವರೊಡನೆ ಸ್ವಲ್ಪ$ ಸಮಯವನ್ನು ಹಂಚಿಕೊಂಡು ನಾಲ್ಕಾರು ಸವಿನುಡಿಗಳನ್ನಾಡಿ ಒಂದಿಷ್ಟು ಪ್ರೀತಿಯನ್ನು ತೋರಿಸಿದರೆ ಸಾಕು ಮತ್ತೇನನ್ನೂ ಬೇಡರು.  

Advertisement

ಆದ್ದರಿಂದ ಹಿರಿಯರನ್ನು ಮನೆಬಿಟ್ಟು ಓಡಿಸದೇ ಅವರನ್ನು ತಮ್ಮ ಜೊತೆಯಲ್ಲಿರಿಸಿಕೊಂಡು ಸಮಯಕ್ಕೊಂದಿಷ್ಟು ಊಟ ತಿಂಡಿಯನ್ನೊದಗಿಸಿ ನಾಲ್ಕಾರು ಮಾತುಗಳನ್ನು ನಗುನಗುತಾ ಆಡಿದರೆ ಸಾಕು. ಅದಕ್ಕಿಂತಾ ಬೇರೇನನ್ನೂ ಯೋಚಿಸುವುದಿಲ್ಲ, ಮತ್ತು ಬೇರೇನೊ ಅವರು ಕೇಳುವುದೂ ಇಲ್ಲ. ಇಷ್ಟನ್ನೂ ಮಾಡಲಾರದ ಇಂದಿನ ಪೀಳಿಗೆಯು ಅವರನ್ನು ಅನಾಥಾಶ್ರಮಕ್ಕೆ ಸೇರಿಸಿ ಅಥವಾ ತಂದೆತಾಯಿಗಳನ್ನು ತಮ್ಮ ಮನೆಯಲ್ಲಿ ಇರಿಸಿ ತಾವು ಆ ಮನೆಯಲ್ಲಿ ಇರದೇ ಆ ಮನೆಯನ್ನೇ ಅನಾಥಾಶ್ರಮವನ್ನಾಗಿಸಿದ್ದಾರೆ. ಹಣಗಳಿಸುವುದೇ ಮುಖ್ಯವಲ್ಲ.. ಅದು ಮುಖ್ಯವಾಗಿದ್ದರೆ ಮಕ್ಕಳನ್ನು ಅವರು ಓದಿಸುತ್ತಿರಲಿಲ್ಲ.. ಕಾರಣ ಅವರು ಹಣಕ್ಕೆ ಅಷ್ಟು ಮಹತ್ವವನ್ನು ಕೊಟ್ಟಿರಲಿಲ್ಲ. ನೆನಪಿರಲಿ… ನಾಳೆ ನಾವೂ ಮುದುಕರಾಗುತ್ತೇವೆ..! ಹಿರಿಯರೆನ್ನಿಸಿಕೊಳ್ಳುತ್ತೇವೆ..! ನಮ್ಮ ಮಕ್ಕಳಿಂದ ನಾವೂ ಇದೇ ತೆರನಾದ ಸ್ಥಿತಿಯನ್ನೆದುರಿಸಬಹುದು. ಆದ ಕಾರಣ ನಾವು ನಮ್ಮ ಮಕ್ಕಳೆದುರಿಗೆ ನಮ್ಮ ತಂದೆತಾಯಿಗಳನ್ನು ಪ್ರೀತಿಸೋಣ ನಮಗಲ್ಲದಿದ್ದರೂ ನಮ್ಮ ಮಕ್ಕಳಿಗೋಸ್ಕರ ಮತ್ತು ನಾಳೆಯ ನಮ್ಮ ಬದುಕಿಗೋಸ್ಕರ.

ಎಸ್‌.ಆರ್‌.ಎನ್‌.ಮೂರ್ತಿ, ಕೈಗಾ.

Advertisement

Udayavani is now on Telegram. Click here to join our channel and stay updated with the latest news.

Next