ಬಾಗಲಕೋಟೆ: ಈ ಭಾಗದ ಪ್ರಮುಖ ನೀರಾವರಿ ಯೋಜನೆಗಳಾದ ಯುಕೆಪಿಗೆ ಬಿಡಿಗಾಸು ನೀಡಿದ ಕಾಂಗ್ರೆಸ್ ಸರ್ಕಾರವನ್ನು ಬರುವ ಚುನಾವಣೆಯಲ್ಲಿ ಕಿತ್ತೂಗೆಯಬೇಕು. ಶಾಸಕ- ಸಚಿವರನ್ನು ಮನೆಗೆ ಕಳುಹಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ಹೊಳೆ ಆಂಜನೇಯ ದೇವಸ್ಥಾನದ ಎದುರು ಬಿಜೆಪಿ ಜಿಲ್ಲಾ ಘಟಕ ಪಂಡಿತ ದೀನದಯಾಳ ಉಪಾಧ್ಯಾಯರ 150ನೇ ಜನ್ಮದಿನೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ವಿಸ್ತಾರಕ ಯೋಜನೆ ಮತ್ತು ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ಈ ಭಾಗದ ಜನರ ನಂಬಿಕೆಗೆ ದ್ರೋಹ ಮಾಡಿದೆ.
ಅದಕ್ಕಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಕೂಡಲಸಂಗಮದಲ್ಲಿ ಆಣೆ ಪ್ರಮಾಣ ಮಾಡಿ ಅ ಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಕೃಷ್ಣಾ ಮೆಲ್ದಂಡೆ ಯೋಜನೆಗೆ ವಾರ್ಷಿಕ ಹತ್ತು ಸಾವಿರ ಕೋಟಿ ನೀಡುತ್ತೇವೆ ಎಂದಿದ್ದರು. ಆದರೆ, ನಾಲ್ಕು ವರ್ಷದಲ್ಲಿ ಕೇವಲ 3,400 ಕೋಟಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ರೈತರು ಭೀಕರ ಬರದಿಂದ ತತ್ತರಿಸಿದ್ದಾರೆ. ಸಾಲಮನ್ನಾ ಕನಿಷ್ಠ 1 ಲಕ್ಷವರೆಗೆ ಮಾಡಬೇಕು. ರೈತರು- ನೇಕಾರರು ಎರಡು ಕಣ್ಣು ಇದ್ದಂತೆ. ನೇಕಾರರ ಸಾಲವನ್ನೂ ಶೀಘ್ರ ಮನ್ನಾ ಮಾಡಬೇಕು. ಕಾಂಗ್ರೆಸ್ಗರು ದಲಿತರಿಗೆ ಏನು ಮಾಡಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಟೀಕಿಸಿದರು.
ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಗೋವಿಂದಕಾರಜೋಳ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ, ಮಾಜಿ ಶಾಸಕರಾದ ಡಾ| ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಎಂ.ಕೆ. ಪಟ್ಟಣಶೆಟ್ಟಿ, ವೀರಣ್ಣ ಚರಂತಿಮಠ, ಜಿ.ಎಸ್. ನ್ಯಾಮಗೌಡ, ಶ್ರೀಕಾಂತ ಕುಲಕರ್ಣಿ, ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ|ಆರ್. ಮಾರುತೇಶ, ವೀರೇಶ ಕೂಡಲಗಿಮಠ, ರಾಜು ಮುದೇನೂರ, ರಾಜು ನಾಯ್ಕರ ಮುಂತಾದವರು ಹಾಜರಿದ್ದರು.