Advertisement

ಸ್ವಾವಲಂಬನೆಗೆ ಬೇಕು ಶೂನ್ಯ ಬಂಡವಾಳ ಕೃಷಿ

12:25 AM Jul 07, 2019 | mahesh |

ಶೂನ್ಯ ಬಂಡವಾಳ ಕೃಷಿ ಎಂದರೆ ದುಡ್ಡು ಖರ್ಚು ಮಾಡದೆ ಬೆಳೆ ಬೆಳೆಯುವುದು. ಬಿತ್ತನೆ ಬೀಜ, ಕೀಟನಾಶಕ ಎಂದು ಸಬ್ಸಿಡಿಯಲ್ಲಿ ದೊರೆಯುವ ರಸಗೊಬ್ಬರಕ್ಕಾಗಿ ಸರದಿಯಲ್ಲಿ ಕಾದು ನಿಂತು ಹಣ ಖರ್ಚು ಮಾಡಿ ಬೆಳೆ ಬೆಳೆಯುವುದರ ಬದಲು ಕೊಟ್ಟಿಗೆಯಲ್ಲಿನ ಆಕಳಿನ ಸಗಣಿ, ಗಂಜಲ, ಬದುವಿನ ಮಣ್ಣು, ಬೆಲ್ಲ, ದ್ವಿದಳ ಧಾನ್ಯಗಳನ್ನು ಬಳಸಿ ಬೆಳೆ ಬೆಳೆಯುವುದೇ ನೈಸರ್ಗಿಕ ಕೃಷಿ.

Advertisement

ಇಲ್ಲಿ ರಸಗೊಬ್ಬರ, ಕೀಟನಾಶಕಗಳ ಅಗತ್ಯವಿಲ್ಲ. ಕೊಟ್ಟಿಗೆಯಲ್ಲಿ ಒಂದು ದೇಸಿ ಆಕಳು ಇದ್ದರೆ ಸಾಕು, ಇದರಿಂದ ಸುಮಾರು 30 ಎಕರೆಯಲ್ಲಿ ನೈಸರ್ಗಿಕ ಕೃಷಿ ಮಾಡಬಹುದು ಎನ್ನುತ್ತಾರೆ ಈಗಾಗಲೇ ಕೃಷಿಯಲ್ಲಿ ಯಶಸ್ಸು ಕಂಡಿರುವವರು. ಕೀಟದ ಸಮಸ್ಯೆ ತಡೆಯಲು ಮನೆಯಲ್ಲಿಯೇ ಕೀಟನಾಶಕ ತಯಾರಿಸಿಕೊಳ್ಳಬಹುದು. ಅದಕ್ಕಾಗಿ ಬೇಕಾದ ಔಷಧೀಯ ಸಸ್ಯಗಳನ್ನು ತೋಟದಲ್ಲಿ ಬೆಳೆಯಬಹುದು. ಉಳುಮೆಯ ಅಗತ್ಯವೂ ಕಡಿಮೆ. ಕೇವಲ ಅಲ್ಪಾವಧಿಯ ಬೆಳೆಗಳಿಗಷ್ಟೇ ಉಳುಮೆ ಮಾಡುವ ಅಗತ್ಯವಿದೆ. ಹೀಗಾಗಿ ಇದನ್ನು ಶೂನ್ಯ ಬಂಡವಾಳ ಕೃಷಿ ಎಂದು ಕರೆಯಲಾಗಿದೆ.

ಕೆಲವು ಮುಖ್ಯ ತಣ್ತೀಗಳು
·ಪ್ರಕೃತಿಯಿಂದ ಸುಲಭ, ಉಚಿತವಾಗಿ ಸಿಗುವ ಸಂಪನ್ಮೂಲ.
·ವಿಷಕಾರಿಯಲ್ಲದ ಉತ್ಪಾದನೆ
·ರಸಗೊಬ್ಬರ, ರಾಸಾಯನಿಕಗಳಿಂದ ಮುಕ್ತ.
·ನೈಸರ್ಗಿಕ ರೋಗನಿರೋಧಕ ರಕ್ಷಣೆ
·ನೆಲದ ಮಣ್ಣಿನ ರಕ್ಷಣೆ
·ನಿರಂತರ ಆದಾಯ
·ಕಡಿಮೆ ಬಂಡವಾಳದ ಬೇಸಾಯ
·ಪ್ರಕೃತಿಯ ಒಳಹರಿವು (ನೆಲಕ್ಕೆ ಪ್ರಕೃತಿ ರಕ್ಷಣೆ)
·ಮಣ್ಣಿನ ಮೇಲ್ಪದರ ಹೊದಿಕೆ.
·ಬಹುಬೆಳೆಗಳು
ದೇಸೀ ಆಕಳು ಅಗತ್ಯ
ನೈಸರ್ಗಿಕ ಕೃಷಿಗೆ ದೇಸೀ ಆಕಳು ಅತ್ಯಗತ್ಯ. ಇದರ ಸೆಗಣಿಯಲ್ಲಿ ಹೇರಳವಾದ ಜೀವಾಣುಗಳಿವೆ ಎನ್ನಲಾಗಿದೆ. ಅದರ ಗಂಜಲದಲ್ಲಿ ಅನೇಕ ಪೋಷಕಾಂಶಗಳಿವೆ. ಒಂದು ಗ್ರಾಂ ಸೆಗಣಿಯಿಂದ ಕೋಟ್ಯಂತರ ಜೀವಾಣು ಪಡೆಯಬಹುದು ಎನ್ನಲಾಗುತ್ತದೆ. ಒಂದು ದೇಸಿ ಹಸು ದಿನವೊಂದಕ್ಕೆ ಸುಮಾರು 10 ಕೆ.ಜಿ. ಸಗಣಿ ಹಾಕುತ್ತದೆ. 30 ಎಕರೆ ಕೃಷಿ ಮಾಡಲು ಒಂದು ದನ ಸಾಕಾಗುತ್ತದೆ.

ತರಕಾರಿ ಬೆಳೆಯಿರಿ
ಶೂನ್ಯ ಬಂಡವಾಳಕ್ಕೆ ಏಕಬೆಳೆ ಬೆಳೆಯುವ ಬದಲು ಅಂತರ ಬೆಳೆಯಾಗಿ 30 ದಿನಗಳಲ್ಲಿ ಬೆಳೆಯುವ ತರಕಾರಿ ಬೆಳೆಯಬೇಕು. ಈ ಪದ್ಧತಿ ಅಳವಡಿಸಿಕೊಂಡ ರೈತರು ಯಾವುದೇ ಸಾಲಬಾಧೆ ಅನುಭವಿಸಿಲ್ಲ.

ಮುಚ್ಚಿಗೆ
ಇದಕ್ಕೆ ಹಸಿ ಗೊಬ್ಬರ ಎಂದೂ ಕರೆಯ ಲಾಗುತ್ತದೆ. ಜೀವಾಮೃತ ಪೂರೈಕೆಯಾದ ಅನಂತರ ಹಿಕ್ಕೆಯ ರೂಪದ ಅನ್ಯದ್ರವ್ಯಗಳನ್ನು ಎರೆಹುಳುಗಳು ಭೂಮಿಯ ಮೇಲ್ಪದರಕ್ಕೆ ತಂದು ಹಾಕುತ್ತವೆ. ಇದರಲ್ಲಿ ಕೋಟ್ಯಂತರ ಸೂಕ್ಷ್ಮ ಜೀವಿಗಳು ಕಾರ್ಯನಿರ್ವಹಿಸುತ್ತವೆ. ಬೆಳೆಯ ಬೆಳವಣಿಗೆಗೆ ಸೂರ್ಯನ ಬಿಸಿಲಿನಿಂದ ಇವುಗಳ ರಕ್ಷಣೆ ಅಗತ್ಯ. ಮಣ್ಣಿನಿಂದ ಅಥವಾ ಕಸಕಡ್ಡಿಗಳನ್ನು ಹಾಕಿ ಅವುಗಳ ರಕ್ಷಣೆ ಮಾಡಲಾಗುತ್ತದೆ.

ಬೀಜಾಮೃತ
ಬಿತ್ತನೆ ಬೀಜಗಳಲ್ಲಿ ಇರಬಹುದಾದ ಶಿಲೀಂಧ್ರ, ಬ್ಯಾಕ್ಟೀ ರಿಯಾ ಅಥವಾ ಅವುಗಳ ತತ್ತಿಗಳು ಪೈರಿನ ಉತ್ತಮ ಬೆಳವಣಿಗೆಗೆ ಅಡ್ಡಿಯಾಗುತ್ತವೆೆ. ಅವುಗಳನ್ನು ಪ್ರಾರಂಭಿಕ ಹಂತಗಳಲ್ಲಿ ಇಲ್ಲವಾಗಿಸಲು ಬೀಜಾಮೃತ ಬಳಸಲಾಗುತ್ತದೆ. 100 ಕೆ.ಜಿ. ಬಿತ್ತನೆ ಬೀಜಕ್ಕೆ 5 ಕೆ.ಜಿ. ದೇಸಿ ಆಕಳ ಸಗಣಿ, 5 ಲೀಟರ್‌ ಗಂಜಲ, 50 ಗ್ರಾಂ ಸುಣ್ಣ, 20 ಲೀಟರ್‌ ನೀರು ಬೆರೆಸಿ ಸಿದ್ಧಪಡಿಸಿದ ದ್ರಾವಣವೇ ‘ಬೀಜಾಮೃತ.’ ಬಿತ್ತನೆಯ ಹಿಂದಿನ ದಿನ ರಾತ್ರಿಯೇ ಇದನ್ನು ಸಿದ್ಧಪಡಿಸಲಾಗುತ್ತದೆ. ಬಿತ್ತನೆಗೆ ಮುಂಚೆ ಬೀಜಗಳನ್ನು ಇದರಲ್ಲಿ ಅದ್ದಲಾಗುತ್ತದೆ. ಇದರಲ್ಲಿ ಟ್ರೈಕೋಡರ್ಮಾ ಎಂಬ ಜೀವಾಣುವಿದ್ದು , ಇದು ಬೀಜಗಳ ರಕ್ಷಣೆ ಮಾಡುತ್ತದೆ.

ಜೀವಾಮೃತ
ಇದನ್ನು ನೈಸರ್ಗಿಕ ಕೃಷಿಯ ಜೀವದ್ರವ್ಯ ಎಂದು ಕರೆಯಲಾಗುತ್ತದೆ. 200 ಲೀಟರ್‌ ನೀರಿಗೆ 10 ಕೆ.ಜಿ. ದೇಸಿ ಆಕಳಿನ ಸಗಣಿ, 10 ಲೀಟರ್‌ ಗಂಜಲ, 2 ಕೆ.ಜಿ. ಕಪ್ಪು ಬೆಲ್ಲ, 2 ಕೆ.ಜಿ. ದ್ವಿದಳ ಧಾನ್ಯಗಳ ಹಿಟ್ಟು, 2 ಹಿಡಿ ಹೊಲದ ಬದುವಿನ ಮಣ್ಣನ್ನು ಬೆರೆಸಲಾಗುತ್ತದೆ. ರಾಸಾಯನಿಕ ಗೊಬ್ಬರದ ಬದಲಾಗಿ ಈ ಮಿಶ್ರಣವನ್ನು ಬಳಸಲಾಗುತ್ತದೆ. ಇದು ನೆಲದಾಳದಲ್ಲಿರುವ ದೇಸಿ ಎರೆಹುಳುಗಳನ್ನು ಬಡಿದೆಬ್ಬಿಸುತ್ತದೆ. ತಿಂಗಳಿಗೆ ಎರಡು ಬಾರಿಯಂತೆ ಇದನ್ನು ಸಿಂಪಡಿಸಬೇಕು.

Advertisement

ಗಾಳಿಯಾಡುವಿಕೆ
ಮಣ್ಣಿನಲ್ಲಿ ಗಾಳಿಯಾಡುವಿಕೆಗೆ ರೈತರು ನಿಗಾ ವಹಿಸಬೇಕಿದೆ. ಬೆಳೆಯ ಬೆಳವಣಿಗೆಗೆ ಇದು ಅತ್ಯಗತ್ಯ. ಈ ನಾಲ್ಕು ಚಕ್ರಗಳನ್ನು ರೈತರು ಸರಿಯಾಗಿ ನಿಭಾಯಿಸಿದರೆ ಬಹುಪಾಲು ನೈಸರ್ಗಿಕ ಕೃಷಿ ಮುಕ್ತಾಯವಾದಂತೆ. ಇನ್ನಿತರ ಎಲ್ಲ ಕೃಷಿ ಪದ್ಧತಿ ಮಾದರಿಗಳಿಗೆ ಹೋಲಿಸಿದರೆ ನೈಸರ್ಗಿಕ ಕೃಷಿ ಪದ್ಧತಿ ಸುಲಭ, ಖರ್ಚೂ ಇಲ್ಲದೆ ಹೆಚ್ಚಿನ ಇಳುವರಿ ಪಡೆಯಬಹುದು.

·ಹೊರಗಡೆ ಯಾವುದೇ ಪದಾರ್ಥ ಕೊಳ್ಳುವಂತಿಲ್ಲ. ಗಿಡದ ಬೆಳವಣಿಗೆಗೆ ಬೇಕಾದ ಅಗತ್ಯತೆ ನಾವು ಕೃಷಿ ಭೂಮಿಯಿಂದಲೇ ಪಡೆಯಬಹುದು.

·ಶೇ. 98ರಿಂದ 98.5ರಷ್ಟು ಪೋಷಕಾಂಶ, ಗಾಳಿ, ನೀರು ಹಾಗೂ ಸೌರಶಕ್ತಿಯಿಂದ ಪಡೆಯಬಹುದು.

·ಉಳಿದ ಶೇ. 1.5 ಪೋಷಕಾಂಶ ಮಣ್ಣಿನಿಂದ ಅದೂ ಕೂಡ ಸಂಪೂರ್ಣ ಉಚಿತವಾಗಿ ಅತ್ಯುನ್ನತ ಪೋಷಕಾಂಶ ಹೊಂದಿದ ಮಣ್ಣಿನಿಂದ ಪಡೆಯಬಹುದು.

ಜಯಾನಂದ ಅಮೀನ್‌ ಬನ್ನಂಜೆ

Advertisement

Udayavani is now on Telegram. Click here to join our channel and stay updated with the latest news.

Next