ಕಲಬುರಗಿ: ಹೈ.ಕ.ಭಾಗದ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರಿಗೆ 371(ಜೆ) ಕಲಂ ಅಡಿ ಬಡ್ತಿಯಲ್ಲಿ ಆಗುತ್ತಿರುವ ತಾರತಮ್ಯ ನಿವಾರಿಸಬೇಕೆಂದು ಒತ್ತಾಯಿಸಿ ಹೈ.ಕ.ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಹೈ. ಕ.ಭಾಗದ ಅಸಮಾನತೆ ನಿವಾರಣೆಗಾಗಿ ಜಾರಿಗೆ ತಂದ 371(ಜೆ)ನೇ ಕಲಂ ಅಡಿ ನೌಕರರ ಬಡ್ತಿಯ ಸಮಯದಲ್ಲಿ ಅನುಸರಿಸಬಹುದಾದ ಮಾರ್ಗದರ್ಶಕ ಸೂಚಿಗಳನ್ನು ಅನುಸರಿಸಿಲ್ಲ ಎಂದರು.
ರಾಜ್ಯ ವೃಂದ ಮತ್ತು ಸ್ಥಳೀಯ ವೃಂದದ ಜೇಷ್ಠತಾ ಪಟ್ಟಿಯನ್ನು ಏಕಕಾಲದಲ್ಲಿ ಚಾಲ್ತಿಯಲ್ಲಿಟ್ಟು ಪ್ರತಿಸಲ ನೀಡುವ ಬಡ್ತಿ ಪ್ರಕ್ರಿಯೆ ಸಂದರ್ಭದಲ್ಲಿ ಐಚ್ಛಿಕ ಆಯ್ಕೆಗೆ ಅವಕಾಶ ಕಲ್ಪಿಸುವಂತೆ, ರೋಸ್ಟರ್ ಬಿಂದುವಿಗೆ ಅನುಗುಣವಾಗಿ ಬಡ್ತಿಗೆ ಕೆಸಿಎಸ್ಆರ್ ನಿಯಮದಂತೆ ಬಡ್ತಿಗೆ ಪರಿಗಣಿಸಿ ರಾಜ್ಯವೃಂದದಲ್ಲಿ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.
ಹೈ.ಕ.ಭಾಗದವರಿಗೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬಡ್ತಿಗೆ ಅರ್ಹವಾಗಿರುವ ಹುದ್ದೆಗಳಲ್ಲಿ ಶೇ.8 ರಷ್ಟು ಮೀಸಲಾತಿ ನೀಡುವಂತೆ, ಈ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಸ್ತುತ ಜಾರಿಯಲ್ಲಿರುವ ಸರ್ಕಾರಿ ಆದೇಶಕ್ಕೆ ಸಚಿವ ಸಂಪುಟ ನಿರ್ಣಯದೊಂದಿಗೆ ತಿದ್ದುಪಡಿ ತರಲು ಆಗ್ರಹಿಸಿದರು.
ಶಾಸಕ ಅಮರನಾಥ ಪಾಟೀಲ, ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ಗೌರವಾಧ್ಯಕ್ಷ ರಾಜು ಲೆಂಗಟಿ, ವಿವೇಕಾನಂದ ಕುಲಕರ್ಣಿ, ಜಿಲ್ಲಾಧ್ಯಕ್ಷ ವಿ.ಎಸ್.ಕಟ್ಟಿಮನಿ, ಜಗನ್ನಾಥ ಊಟಗಿ, ಮಲ್ಲಪ್ಪ ಹಾಗೂ ಇತರರಿದ್ದರು.