Advertisement

ಆನಂದವನ್ನು  ಹೊರಗೇಕೆ  ಹುಡುಕುವಿರಿ?

03:50 AM Feb 24, 2017 | |

ಇತ್ತೀಚೆಗೆ ಊರಿಗೆ ಹೋಗಿದ್ದಾಗ ಆತ್ಮೀಯರ ಮನೆಗೆ ಹೋಗಿದ್ದೆ. ಸದಾ ಉತ್ಸಾಹದ ಚಿಲುಮೆಯಂತಿರುವ ಆಕೆ ಕೃಷಿಜೀವನದಲ್ಲಿ ತೊಡಗಿಸಿಕೊಂಡಿರುವ ಗೃಹಿಣಿ. ಕೃಷಿಜೀವನ ಎಂದರೆ ಸದಾ ತೋಟದ ಕೆಲಸ, ಕೂಲಿಗಳು, ದನಕರುಗಳ ಕೊಟ್ಟಿಗೆ ಕೆಲಸ, ಇನ್ನು ಮನೆಯಲ್ಲಿ ಮಕ್ಕಳು, ಮನೆಯವರಿಗೆ, ಕೆಲಸದವರಿಗೆ ಊಟ ಉಪಚಾರ. ಹೀಗೆ ಬೊಗಸೆ ತುಂಬಾ ಹಲವಾರು ಕೆಲಸಗಳು. ಇದಲ್ಲದೇ ವಯಸ್ಸಾದ ಹಿರಿಯರ ಬೇಕು- ಬೇಡಗಳ ಪೂರೈಕೆ, ನೆಂಟರಿಷ್ಟರ ಉಪಚಾರ, ಮಕ್ಕಳ ಓದಿನ ಕಡೆ ಗಮನ ಕೊಡಬೇಕು ಇದೆಲ್ಲವನ್ನೂ ನಗುನಗುತ್ತಲೇ ಪೂರೈಸುತ್ತ ಇರುವ ಆಕೆ ಮನೆಮುಂದೆ ಸುಂದರ ಹೂವಿನ ತೋಟವನ್ನೂ ಮಾಡಿರುವಳು. ಸ್ವಲ್ಪ ಬಿಡುವು ಸಿಕ್ಕರೂ ಸಾಕು, ಹೊಸ ಗಿಡಗಳನ್ನು ನಾಟಿಮಾಡುತ್ತ, ಕಳೆಕೀಳುತ್ತ ಅವುಗಳಿಗೆ ಗೊಬ್ಬರ, ನೀರು ಮತ್ತು ಔಷಧಿ ಸಿಂಪಡಣೆ ಹೀಗೆ ಗಿಡಗಳ ಆರೈಕೆ ಮಾಡುತ್ತ ಇರುವ ಅವಳನ್ನು ಕಂಡು ಬೆರಗಾಗಿ ಕೇಳಿದೆ, “”ಇಷ್ಟೆಲ್ಲ ಕೆಲಸಗಳ ನಡುವೆ ಇದನ್ನೂ ಮಾಡುತ್ತಿರುವೆಯಲ್ಲ? ಸಮಯ ಸಾಕಾಗುತ್ತ? ಸುಸ್ತಾಗುವುದಿಲ್ವ?”

Advertisement

ಅವಳು ನಗುತ್ತ, “”ನನ್ನ ಇಡೀ ದಿನದ ಕೆಲಸಗಳಿಗೆ ಶಕ್ತಿ ಕೊಡುವ ಟಾನಿಕ್‌ ಇದು. ಇದರಲ್ಲಿ ತೊಡಗಿಸಿಕೊಂಡರೆ ನನ್ನ ಆಯಾಸ ಪರಿಹಾರವಾಗಿ ಫ್ರೆಶ್‌ ಆಗುತ್ತೇನೆ. ಇದರಲ್ಲಿ ಸಿಗುವ ಹೊಸ ಹುರುಪು ನನ್ನ ಎಲ್ಲ ಕೆಲಸಕ್ಕೆ ಸ್ಫೂರ್ತಿ ಎನ್ನಬೇಕೆ? ಗಿಡಗಳನ್ನು, ಹೂವುಗಳನ್ನು ನೋಡುತ್ತ ಅವುಗಳ ಆರೈಕೆ ಮಾಡುತ್ತಿದ್ದಂತೆ ನನ್ನನ್ನೇ ನಾನು ಮರೆತುಬಿಡುತ್ತೇನೆ. ಇದು ನನಗೆ ಹೆಚ್ಚಿನ ಸಂತೋಷ ಕೊಡುತ್ತದೆ. ಈ ಹೂದೋಟವನ್ನು ನೋಡಿ ಇತರರು ಆನಂದ ಪಟ್ಟರಂತೂ ನನ್ನೊಳಗಿನ ಉತ್ಸಾಹ ಪುಟಿದೇಳುತ್ತದೆ”

ಪಟ್ಟಣದಲ್ಲಿ ವಾಸಿಸುತ್ತಿರುವ ದೀಪಾ ತನ್ನ ಪತಿ, ಮಕ್ಕಳಿಗೆ ತಿಂಡಿಕೊಟ್ಟು ಸ್ಕೂಲ್‌-ಆಫೀಸ್‌ ಎಂದು ಅವರು ಹೋದ ಮೇಲೆಯೂ ಗೇಟಿನ ಬುಡದಲ್ಲಿಯೇ ಕಾಯುತ್ತಿದ್ದಾಗ ಕೇಳಿದೆ. “”ಏನೇ? ಇನ್ನೂ ಯಾರಿಗಾಗಿ ಕಾಯುತ್ತಿರುವೆ, ತಿಂಡಿ ತಿನ್ನಬಾರದೆ?” ಅದಕ್ಕವಳು, ಅವಳಿನ್ನೂ ಬರಲಿಲ್ಲ, ಅವಳನ್ನು ನೋಡದಿದ್ದರೆ ನನಗೆ ಸಮಾಧಾನವಿಲ್ಲ ಎಂದು ಚಡಪಡಿಸಿದಳು. “”ಯಾರೆ ಅದೂ?” ಎಂದಾಗ, ದೂರದಿಂದ ಬರುತ್ತಿರುವ ಹಸುವನ್ನು ತೋರಿಸಿ, “”ಇವಳು ನನ್ನ ಇನ್ನೋರ್ವ ಗೆಳತಿ. ಇವಳನ್ನು ಮಾತಾಡಿಸಿ ತಿಂಡಿಕೊಟ್ಟ ನಂತರವೇ ನನ್ನ ತಿಂಡಿ” ಎಂದು ಹಸುವಿಗೆ ತಿಂಡಿಕೊಟ್ಟು, ಮುದ್ದುಮಾಡಿ, ಮಾತಾಡಿಸಿ ಕಳುಹಿಸಿದಳು. ನಂತರ, ಆಕೆ ತಿಂಡಿ ತಿನ್ನುತ್ತಾ, ಬಾಲ್ಯದಲ್ಲಿ ಹಸು-ಕರು ಎಂದು ತುಂಬಾ ಪ್ರೀತಿಸುತ್ತಿದ್ದ ನನಗೆ ಇಲ್ಲಿ ಅವುಗಳನ್ನು ಸಲಹುವುದಕ್ಕಂತೂ ಸಾಧ್ಯವಿಲ್ಲ. ಅದಕ್ಕೆ ಏನೋ ಸ್ವಲ್ಪ ತಿಂಡಿ ತಿನ್ನಿಸಿ ನನ್ನೊಳಗೇ ನಾನು ಸಂತೋಷ ಪಟ್ಟುಕೊಳ್ಳುತ್ತೇನೆ. ಇದು ನನ್ನ ಇಡೀ ದಿನಕ್ಕೆ ಜೋಶ್‌ ಕೊಡುತ್ತದೆ ಎಂದು ತನ್ನ ಸಂತೋಷದ ಮೂಲವನ್ನು ಹಂಚಿಕೊಂಡಳು.

ಈ ಆಂತರಿಕ ಸಂತೋಷವನ್ನು ಒಬ್ಬೊಬ್ಬರು ಒಂದೊಂದು ವಿಧದಲ್ಲಿ ಕಾಣಬಹುದು. ನಿವೃತ್ತ ಜೀವನದಲ್ಲಿರುವ ಹಲವರು ಸಮಾಜಸೇವೆಯ ಸಂಘಸಂಸ್ಥೆಗಳ ಜೊತೆ ಸೇರಿಕೊಂಡು ರಕ್ತದಾನ ಶಿಬಿರ ಇತ್ಯಾದಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವರು. ಇನ್ನು ಕೆಲವು ಗೃಹಿಣಿಯರು ಪಕ್ಕದ ಮನೆಯ ವೃದ್ಧದಂಪತಿಗಳಿಗೆ ಕೈಲಾದ ಸಹಾಯಮಾಡುತ್ತ ಸಂತೋಷಕಾಣುತ್ತಾರೆ. ಇಂತಹುದೇ ಕೆಲಸವೆಂದಿಲ್ಲ ಒಟ್ಟಿನಲ್ಲಿ ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೇ ತನಗಾಗಿ, ತನ್ನ ಸಂತೋಷಕ್ಕಾಗಿ ಮಾಡುವ ಕೆಲಸದಿಂದ ಆಂತರಿಕ ಸಂತೋಷವನ್ನು ಕಂಡುಕೊಳ್ಳಬಹುದು. ಕೆಲವರು ಚಿತ್ರಬಿಡಿಸುವುದು, ಹಾಡುವುದು, ಉತ್ತಮ ಪುಸ್ತಕಗಳನ್ನು ಓದುವುದು, ಪ್ರವಾಸ ಹೋಗುವುದು, ಚಿಕ್ಕ ಮಕ್ಕಳೊಡನೆ ಬೆರೆಯುವುದು, ಹಾಡುಗಳನ್ನು ಕೇಳುವುದು, ಪ್ರಕೃತಿಯ ನಡುವೆ ತಿರುಗಾಡಿ ನಿಸರ್ಗ ರಮಣೀಯ ದೃಶ್ಯಗಳನ್ನು ಕಣ್ಣು ತುಂಬಿಕೊಳ್ಳುತ್ತ¤, ಪ್ರಾಣಿ, ಪಕ್ಷಿಗಳು ಇತ್ಯಾದಿಗಳನ್ನು ನೋಡಿ ಆನಂದಿಸುವವರು. ಇನ್ನು ಕೆಲವರು ಮನೆಮುಂದೆ ಗುಬ್ಬಿ, ಕಾಗೆಗಳಿಗೆ ಕಾಳುಗಳನ್ನು ಹಾಕಿ ಅವುಗಳ ಸೇವನೆಯನ್ನು ನೋಡಿ, ಕೆಲವರು ತಾರಸಿಯ ಮೇಲೆ ಪಕ್ಷಿಗಳಿಗೆ ನೀರಿಟ್ಟು ಅವುಗಳು ಚಿಲಿಪಿಗುಟ್ಟುತ್ತ ನೀರು ಗುಟುಕರಿಸುವುದನ್ನು ನೋಡಿಯೂ ಆನಂದಿಸುವವರು.

ಆಂತರಿಕ ಸಂತೋಷವನ್ನು ಕಂಡು ಹಿಡಿದು ಅನುಭವಿಸಲು ಕಲಿತವರು ಜೀವನದಲ್ಲಿ ಸದಾ ಹೊಸತನವನ್ನು ಕಾಣುತ್ತಾರೆ. ಅವರು ಸದಾ ಕುತೂಹಲಿಗಳಾಗಿರುತ್ತಾರೆ ಮತ್ತು ಪಾಸೆಟಿವ್‌ ಆಲೋಚನೆ ಮಾಡುತ್ತಾ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಅವರು ಬದುಕಿನ ಸಂದರ್ಭಗಳನ್ನು ಸುಲಭವಾಗಿ ನಿಭಾಯಿಸಬಲ್ಲರು ಹಾಗೂ ಅವರಲ್ಲಿ ಸದಾ ಸಂತೋಷವೇ ತುಂಬಿಕೊಂಡಿರುವುದರಿಂದ ಇತರರಿಗೂ ಸಂತೋಷವನ್ನು ನೀಡುತ್ತಾ ಆರೋಗ್ಯದಿಂದ ನಳನಳಿಸುತ್ತಿರುವರು. ಬದುಕಿನ ಆಸಕ್ತಿ ಹಾಗೂ ಜೀವನೋತ್ಸಾಹದ ಮೂಲವೇ ಆಂತರಿಕ ಸಂತೋಷ.

Advertisement

ಈಗಿನ ತರಾತುರಿ, ಪೈಪೋಟಿ ಹಾಗೂ ಯಾಂತ್ರಿಕ ಬದುಕಿನಲ್ಲಿ ಸಿಲುಕಿ ನಲುಗುತ್ತಾ ಒತ್ತಡ, ಒಬೆಸಿಟಿ, ಖನ್ನತೆಯಿಂದ ಬಳಲುತ್ತಿರುವವರಿಗಂತೂ ಈ ಆಂತರಿಕ ಸಂತೋಷದ ಪ್ರವೃತ್ತಿ ವರದಾನವೇ ಆಗಿದೆ. ಜೀವನದಲ್ಲಿ ಹೆಚ್ಚಿನ ಸಾಧನೆ ಮಾಡಲು ಶಕ್ತಿ ಹಾಗೂ ಪ್ರೇರಣೆ. ಆದರೆ, ನಮ್ಮೊಳಗಿನ ಈ ಆನಂದವನ್ನು ನಾವೇ ಪ್ರಯತ್ನದಿಂದ ಕಂಡುಹಿಡಿಯಬೇಕು ಮತ್ತು ಅದಕ್ಕಾಗಿ ಶ್ರಮಿಸಬೇಕು. ನಾವು ಯಾವುದರಲ್ಲಿ ತೊಡಗಿಸಿಕೊಂಡರೆ ಈ ಹ್ಯಾಪಿನೆಸ್‌ ದೊರೆಯುತ್ತದೋ ಅದುವೇ ಮುಂದೆ ಪ್ರವೃತ್ತಿಯಾಗಿ ನಮ್ಮೊಳಗೆ ಬೇರೂರುತ್ತದೆ. ಆದ್ದರಿಂದ ಈ ಪ್ರವೃತ್ತಿ ಜೀವನಕ್ಕೆ ಪೂರಕವಾಗಿದ್ದರೆ ಬದುಕು ಬಂಗಾರ. ಒಂದೊಮ್ಮೆ ಈ ಪ್ರವೃತ್ತಿಯೇ ಬದುಕು ಕಟ್ಟಿಕೊಳ್ಳಲು ಪೂರಕವಾದ ವೃತ್ತಿಯಾಗಲೂ ಸಾಧ್ಯತೆಯಿದೆ. ಹಾಗಿದ್ದರೆ, ಬಾಳು ಸದಾ ನಂದನ.  

ಪ್ರತಿಯೊಬ್ಬರಿಗೂ ಅವರವರ ಜೀವ ಮುಖ್ಯ, ಜೀವಕ್ಕಿಂತಲೂ ಜೀವನ ಮುಖ್ಯವಾದರೆ, ಜೀವ ಜೀವನಕ್ಕಿಂತಲೂ ಜೀವನ ಪ್ರೀತಿ ಅತೀ ಮುಖ್ಯ. ಈ ಜೀವನ ಪ್ರೀತಿಯನ್ನು ಪಡೆಯ ಬೇಕಾದರೆ ಜೀವನೋತ್ಸಾಹ ಅತೀ ಅಗತ್ಯ. ಜೀವನೋತ್ಸಾಹದ ಮೂಲವೇ ಆಂತರಿಕ ಸಂತೋಷ. 

ಎಲ್ಲರೊಳಗೂ ಸಂತೋಷದ ಸಾಗರವೇ ತುಂಬಿಕೊಂಡಿದೆ. ಅದರ ಸೆಲೆಯನ್ನು ಕಂಡುಹಿಡಿದು ಪ್ರಕಟಪಡಿಸಲು ಕಲಿತಾಗ ನಾವು ಸಂತೋಷದ ಜುಳುಜುಳು ನಿನಾದವನ್ನು ಆಲಿಸಿ, ಅನುಭವಿಸಬಹುದು.

ನಮ್ಮೊಳಗಿನ ಈ ಸೆಲೆಯನ್ನು ಕಂಡು ಹಿಡಿಯಲು ಅದರ ಅರಿವು ನಮಗಾಗಬೇಕು. ಸೃಜನಾತ್ಮಕ ಚಟುವಟಿಕೆಯಿಂದ, ಧನಾತ್ಮಕ, ರಚನಾತ್ಮಕ, ಕ್ರಿಯಾತ್ಮಕ ಮತ್ತು ಕುತೂಹಲದ ಆಲೋಚನೆಯ ಪ್ರಯತ್ನದಿಂದ ಇದನ್ನು ಪಡೆಯಬಹುದು. ಮಕ್ಕಳಿಗೆ ಬಾಲ್ಯದಲ್ಲಿಯೇ ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಿತ್ತರೆ ಮುಂದೆ ಅವರು ಬದುಕನ್ನು ಸುಂದರವಾಗಿ ಕಟ್ಟಿಕೊಂಡು ಆನಂದಿಸಬಲ್ಲರು.

ಆಂತರಿಕ ಸಂತೋಷದ ಕೆಲಸಗಳಲ್ಲಿ ದುರುಪಯೋಗವಾಗದ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು. ಇಂಥ ಕೆಲಸಗಳಿಂದ ದುಡ್ಡು ಅಥವಾ ಯಾವುದೇ ಇತರ ಉತ್ಪಾದನೆ ಇಲ್ಲದೇ ಇರಬಹುದು ಆದರೆ ಜೀವ ಹಾಗೂ ಜೀವನಕ್ಕೆ ಇದರಿಂದ ಕಣ್ಣಿಗೆ ಕಾಣದೇ ಇರುವ ಪ್ರಯೋಜನ ಅನುಭವಿಸಿದವರೇ ಬಲ್ಲರು.

ಗೀತಾ ಸದಾ

Advertisement

Udayavani is now on Telegram. Click here to join our channel and stay updated with the latest news.

Next