Advertisement
ಇನ್ನೊಂದು ಪ್ರಸಂಗದಲ್ಲಿ ಕೈಲಾಸದಿಂದ ಪರಶಿವನು ಹೊರಗೆಲ್ಲೋ ಹೋಗಿದ್ದ ಸಂದರ್ಭದಲ್ಲಿ ಪಾರ್ವತಿಯು ತಾನು ಸ್ನಾನಮಾಡುವಾಗ ಒಳಕ್ಕೆ ಯಾರೂ ಬಾರದಂತೆ ಕಾವಲಿರಲು ಸ್ವಯಂಸೃಷ್ಟಿಸಿ ಜೀವನೀಡಿದ್ದ ಗಣೇಶನಿಗೆ ಆಜ್ಞಾಪಿಸಿದಳಂತೆ. ಅವನಾದರೋ ನಿಷ್ಠಾವಂತ ಕಾವಲುಗಾರನಾಗಿ ಸ್ವತಃ ಈಶ್ವರನೇ ಬಂದಾಗಲೂ ಅವನನ್ನು ತಡೆದು ನಿಲ್ಲಿಸಿದನಂತೆ. ಮುಂದೆ ನಡೆದ ಕತೆ ಎಲ್ಲರಿಗೂ ತಿಳಿದಿದೆ.
Related Articles
Advertisement
ನನ್ನ ಬಾಲ್ಯದ ಕಾಲದಲ್ಲಿ ನಾನು ಕಂಡ ನಮ್ಮ ಗೆಳತಿಯೊಬ್ಬಳ ತೋಟದ ಕಾವಲುಗಾರನ ಬಗ್ಗೆ ಹೇಳಲೇಬೇಕು. ಗೆಳತಿಯ ಮನೆಯವರು ಹಣ್ಣು-ತರಕಾರಿಗಳ ತೋಟವೊಂದನ್ನು ತುಂಬ ಚೆನ್ನಾಗಿ ಬೆಳೆಸಿದ್ದರು. ಹೇಗೆ ಮುನ್ನೆಚ್ಚರಿಕೆ ವಹಿಸಿದರೂ ಬೇಲಿ ಹಾರಿ ಹಣ್ಣುಗಳು, ತರಕಾರಿಗಳು, ತೆಂಗಿನಕಾಯಿಗಳನ್ನು ಯಾರೋ ಕದ್ದುಬಿಡುತ್ತಿದ್ದರು. ಅದಕ್ಕಾಗಿ ಅವರು ಕಾವಲುಗಾರರನ್ನು ನೇಮಕ ಮಾಡಿದ್ದರು. ಆದರೂ ಕಳ್ಳತನ ಕಡಿಮೆಯಾಗಲಿಲ್ಲ. ಕೊನೆಗೆ ಎಲ್ಲಿಂದಲೋ ಒಬ್ಬ ಈ ಕೆಲಸಕ್ಕೆ ಹುಡುಕಿಕೊಂಡು ಬಂದ. ಅವನು ಎತ್ತರವಾದ ಮನುಷ್ಯ ಕಟ್ಟುಮಸ್ತಾದ ಆಕಾರದವನು. ತೀಕ್ಷ್ಣವಾದ ಕಣ್ಣುಗಳು, ಚೂಪಾದ ಮೂಗು, ಕಪ್ಪಾದ ಬಣ್ಣ , ದಾಳಿಂಬೆ ಬೀಜದಂತ ದಂತಪಂಕ್ತಿ, ತಲೆಯ ಮೇಲೆ ದಟ್ಟವಾದ ಕೂದಲು, ವಿಶಾಲವಾದ ಅವನ ಹಣೆಯ ಮೇಲೆ ಮೂರೆಳೆ ವಿಭೂತಿ ಪಟ್ಟಿ , ಮಧ್ಯದಲ್ಲಿ ಅಗಲಾದ ಕುಂಕುಮ. ಕೊರಳಲ್ಲಿ ಸಣ್ಣ ರುದ್ರಾಕ್ಷಿ ಮಾಲೆ, ಖಾಕಿ ಬಣ್ಣದ ಪ್ಯಾಂಟು, ಅರ್ಧ ತೋಳಿನ ಶರ್ಟು, ಕಾಲಿನಲ್ಲಿ ಪೊಲೀಸರ ರೀತಿಯ ಬೂಟು. ನೋಡಲು ಇವನೇ ಸರಿಯಾದ ಆಳು ಎಂಬಂತಿದ್ದ. ಅವನು ಹದಿನೈದು ವರ್ಷ ಸೈನ್ಯದಲ್ಲಿ ಸೇವೆ ಮಾಡಿದ್ದನಂತೆ. ನಿವೃತ್ತನಾದ ನಂತರ ಸೆಕ್ಯೂರಿಟಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಅಲ್ಲಿಂದಲೂ ನಿವೃತ್ತನಾಗಿದ್ದನಂತೆ. ಇನ್ನೂ ಶಾರೀರಿಕವಾಗಿ ಬಲವಾಗಿದ್ದ ಅವನನ್ನು ನನ್ನ ಗೆಳತಿಯ ತಂದೆಯವರು ತೋಟಕ್ಕೆ ಕಾವಲುಗಾರನಾಗಿ ನೇಮಕಮಾಡಿಕೊಂಡರು. ಅವನ ಜೊತೆಯಲ್ಲಿ ಒಂದು ಸಾಕುನಾಯಿಯೂ ಇತ್ತು. ಅವನು ತೋಟದಲ್ಲಿ ರಾತ್ರಿಯ ವೇಳೆಯಲ್ಲಿಯೂ ಗಸ್ತು ತಿರುಗುತ್ತಿದ್ದನಂತೆ. ಜೊತೆಗೆ ಕೆಲವು ಹೊಸ ಉಪಾಯಗಳನ್ನೂ ಮಾಡಿದ. ಸಣ್ಣಸಣ್ಣ ಕುಡಿಕೆಗಳಿಗೆ ಹೊರಮೈಗೆಲ್ಲ ಕಂಕುಮ-ಅರಸಿನ ಬಳಿದು ಅವುಗಳ ಕುತ್ತಿಗೆಗೆ ಬಣ್ಣದ ದಾರಗಳನ್ನು ಸುತ್ತಿ ತೋಟದ ನಾಲ್ಕೂ ಮೂಲೆಗಳಲ್ಲಿದ್ದ ಮರಗಳಿಗೆ ತೂಗುಹಾಕಿದ. “ನಾನು ಚೌಡಿಕೆಯನ್ನು ಪೂಜೆಮಾಡಿ ಈ ಮಡಿಕೆಗಳಲ್ಲಿ ಆವಾಹನೆ ಮಾಡಿಸಿದ್ದೇನೆ. ಯಾರಾದರೂ ಬೇಲಿದಾಟಿ ಒಳಕ್ಕೆ ಬಂದರೆ ಆ ದೇವಿಯ ಕ್ರೂರದೃಷ್ಟಿಗೆ ಬಲಿಯಾಗುತ್ತಾರೆ. ಅವರು ಯಾರೇ ಆದರೂ ರಕ್ತಕಾರಿಕೊಂಡು ಬೀಳುತ್ತಾರೆ’ ಎಂದು ಪ್ರಚಾರ ಮಾಡಿದ. ತೋಟದಲ್ಲಿ ಅಲ್ಲಲ್ಲಿ ಗಿಡಗಳ ಬಳಿ ಹಳೆಯ ತಗಡಿನಲ್ಲಿ ವಿಕಾರವಾದ ಮುಖವಾಡಗಳನ್ನು ಮಾಡಿ ಗಿಡಗಳಿಗೆ ತೂಗುಹಾಕಿದ. ಅವನಿಗೆ ಯಾವ ದುಶ್ಚಟಗಳೂ ಇರಲಿಲ್ಲ. ಅವನ ವೇಷ, ಈ ರೀತಿಯ ಹಲವಾರು ರೀತಿಯ ಬೆದರುಬೊಂಬೆಗಳು ಜನರಲ್ಲಿ ಭಯವನ್ನು ಹುಟ್ಟಿಸಿಬಿಟ್ಟವು.
ನಾನು ಗೆಳತಿಯ ಜೊತೆಗೆ ಹೋಗಿದ್ದಾಗ ಈ ಅಚ್ಚರಿಗಳನ್ನು ನೋಡಿ ಏಕೆಂದು ಕೇಳಿದಾಗ ತಿಳಿದಿದ್ದು ಹೀಗೆ. ತೋಟಕ್ಕೆ ದಿಗ½ಂಧನ ಮಾಡಿದ್ದಾನೆ. ದೊಡ್ಡ ಬ್ಯಾಟರಿ ಹಿಡಿದುಕೊಂಡು ರಾತ್ರಿಕಾಲದಲ್ಲಿ ಆ ಮನುಷ್ಯ ಭೂತದಂತೆ ತೋಟದಲ್ಲೆಲ್ಲ ತಿರುಗಾಡುತ್ತಾನೆ. ಹಾಗಾಗಿ ಈಗ ಯಾವುದೇ ಕಳ್ಳತನವಾಗಿಲ್ಲ ಎಂದು. ನನಗೆ ಮಾಲೀಕರ ಮಗಳ ಗೆಳತಿಯೆಂದು ಆತ ವಿಶೇಷ ಗೌರವ ನೀಡುತ್ತಿದ್ದ. ನಾನೊಮ್ಮೆ ಅವನನ್ನು “”ಈ ರೀತಿ ಮಂತ್ರಮಾಟ ಮಾಡುವುದಕ್ಕೆ ಅರ್ಥವೇನಿದೆ?” ಎಂದು. ಅದಕ್ಕವನು, “”ಅದು ನಂಬಿಕೆಯ ಪ್ರಶ್ನೆ. ಇಲ್ಲಿನ ಜನಕ್ಕೆ ಮೂಢನಂಬಿಕೆಗಳಲ್ಲಿ ತುಂಬ ನಂಬಿಕೆಯಿದೆ, ಅದಕ್ಕಾಗಿ ನಾನು ಈ ಉಪಾಯವನ್ನು ಮಾಡಿದ್ದೇನೆ” ಎಂದ. ತೋಟದ ಮಧ್ಯದಲ್ಲಿ ಅಲ್ಲಲ್ಲಿ ಗೂಟಗಳನ್ನು ಹೂಳಿ ಅದಕ್ಕೆ ಹಳೆಯ ಗೋಣಿಚೀಲಗಳನ್ನು ನೇತುಹಾಕಿದ್ದ. ಅವುಗಳಲ್ಲಿ ಎರಡು ಕಣ್ಣುಗಳಂತೆ ತೂತುಮಾಡಿ ಅಲ್ಲಿ ಒಳಗಿನಿಂದ ಸಿಗರೇಟು ಪಾಕೀಟಿನ ಸುನ್ನಾರಿಯನ್ನು ಅಂಟಿಸಿದ್ದ. ಬೆಳಕು ಬಿದ್ದಾಗ ಅವು ಹೊಳೆಯುತ್ತಿದ್ದವು. ಸಾಲದ್ದಕ್ಕೆ ಅಂಚಿನಲ್ಲಿದ್ದ ಗಿಡಗಳ ಕೆಲವು ಕೊಂಬೆಗಳಿಗೆ ಸಣ್ಣಗೆಜ್ಜೆಗಳನ್ನು ಕಟ್ಟಿದ್ದ. ಅವು ಬೀಸುವ ಗಾಳಿಗೆ ಜಲ್ಜಲ್ ಎಂದು ಶಬ್ದಮಾಡುತ್ತಿದ್ದವು. ಕೆಲಸಕ್ಕೆ ಬರುತ್ತಿದ್ದ ಅಳುಮಕ್ಕಳಿಗೆ ರೋಚಕವಾದ ಭಯಮಿಶ್ರಿತ ಕಥೆಗಳನ್ನೂ ಹೇಳಿ ಅವರ ಮನಸ್ಸಿನಲ್ಲಿ ಅವ್ಯಕ್ತ ಭಯದ ವಾತಾವರಣ ಸೃಷ್ಟಿಮಾಡಿದ್ದ. ತೋಟದ ನಿರ್ವಹಣೆಯಲ್ಲಿ ಅವನ ಸೇವೆ ಬಹುಮುಖವಾಗಿರುತ್ತಿತ್ತು. ಕಸಕಡ್ಡಿಗಳನ್ನು ಶುಚಿಗೊಳಿಸಿ ಕಂಪೋಸ್ಟ್ ತಯಾರುಮಾಡುತ್ತಿದ್ದ. ಮಾಲೀಕರ ಮನೆಯ ದನಕರುಗಳನ್ನೂ ಬಹಳ ಜತನದಿಂದ ನೋಡಿಕೊಳ್ಳುತ್ತಿದ್ದ. ಕೊಟ್ಟಿಗೆಗಳು ಯಾವಾಗಲೂ ಶುಚಿಯಾಗಿರುವಂತೆ ನೋಡಿಕೊಳ್ಳುತ್ತಿದ್ದ. ಬಹಳ ವರ್ಷಗಳು ಆತನೇ ಕಾವಲುಗಾರನಾಗಿ ಕೆಲಸಕ್ಕಿದ್ದ. ನನ್ನ ಕಾಲೇಜು ವ್ಯಾಸಂಗ ಮುಗಿದು ವಿವಾಹವಾಗಿ ಬೇರೆ ಊರಿಗೆ ಹೋದರೂ ಊರಿಗೆ ಬಂದಾಗ ಅನೇಕ ಬಾರಿ ಗೆಳತಿಯನ್ನು ನೋಡಲು ಹೋಗುತ್ತಿದ್ದೆ. ಆಗೆಲ್ಲ ಅವನ ದರ್ಶನವಾಗುತ್ತಿತ್ತು. ಅವರ ತೋಟವಂತೂ ಮೊದಲಿಗಿಂತ ಇನ್ನೂ ಹೆಚ್ಚು ನಳನಳಿಸುವಂತಾಗಿತ್ತು. ಇದಾದ ನಂತರ ಕೆಲವು ದಶಕಗಳೇ ಕಳೆದುಹೋಗಿವೆ. ಆ ತೋಟದ ಜಮೀನು ಈಗ ರಸ್ತೆ ನಿರ್ಮಾಣಕ್ಕೋಸ್ಕರ ಸರ್ಕಾರದ ವಶವಾಗಿದೆ. ತೋಟವಿಲ್ಲದಿದ್ದರೂ ಅಲ್ಲಿ ಕಾಣುತ್ತಿದ್ದ ಮಾಯಾಲಮರಾಠಿಯಂತಹ ಆ ಕಾವಲುಗಾರನ ನೆನಪು ಮಾತ್ರ ಇನ್ನೂ ಊರಿಗೆ ಹೋದಾಗಲೆಲ್ಲ ಬರುವುದುಂಟು.
ಇನ್ನು ನಮ್ಮ ದೇಶದ ಗಡಿಗಳನ್ನು ಹಗಲು ರಾತ್ರಿಯೆನ್ನದೆ, ಚಳಿ, ಮಳೆಗಳನ್ನೂ ಲೆಕ್ಕಿಸದೆ ಪ್ರಕೃತಿಯ ವಿಕೋಪ ಕಾಲದಲ್ಲಿಯೂ ಶತ್ರು ಪಡೆಗಳ ಅಪ್ರಚೋದಕ ಧಾಳಿಗಳನ್ನೆದುರಿಸಿ ಕಾಯುತ್ತಿರುವ ದೇಶಭಕ್ತ ಗಡಿರಕ್ಷಣಾ ಪಡೆಯ ಕಾವಲುಗಾರರನ್ನು ಮರೆಯಲು ಸಾಧ್ಯವೇ ಇಲ್ಲ. ಅವರ ಬಗ್ಗೆ ಅಭಿಮಾನ ಮೂಡುತ್ತದೆ.
– ಬಿ.ಆರ್. ನಾಗರತ್ನ