Advertisement

ಪೌರಕಾರ್ಮಿಕರಿಗೆ ಕ್ಷೇತ್ರವಾರು ಹೊಣೆ ನಿಗದಿ

03:31 PM Aug 23, 2022 | Team Udayavani |

ಹುಬ್ಬಳ್ಳಿ: ಮಹಾನಗರದ ಸ್ವಚ್ಛತಾ ಕಾರ್ಯ ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವ ನಿಟ್ಟಿನಲ್ಲಿ ಪ್ರತಿ ಪೌರ ಕಾರ್ಮಿಕರಿಗೂ ಕೆಲಸದ ಹೊಣೆಗಾರಿಕೆ ನೀಡಲಾಗಿದ್ದು, ಹಂತ ಹಂತವಾಗಿ ಪಾಲಿಕೆಯ ಎಲ್ಲಾ ವಲಯಗಳಿಗೂ ವಿಸ್ತರಿಸಲಾಗುತ್ತಿದೆ. ಈ ಕಾರ್ಯ ಹಂಚಿಕೆಯಿಂದ ಉತ್ತಮ ಫಲಿತಾಂಶ ವ್ಯಕ್ತವಾಗುವುದರ ಮೂಲಕ ಮಾನವ ಸಂಪನ್ಮೂಲ ಸದ್ಬಳಕೆಗೆ ನಾಂದಿ ಹಾಡಿದಂತಾಗಿದೆ.

Advertisement

ಪ್ರತಿ ವರ್ಷ ನೂರಾರು ಕೋಟಿ ಖರ್ಚು ಮಾಡುತ್ತಿದ್ದರೂ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ ಎನ್ನುವ ಆರೋಪ ಪಾಲಿಕೆ ಮೇಲಿದೆ. ಮಾನವ ಸಂಪನ್ಮೂಲ ಸದ್ಬಳಕೆಯಾಗುತ್ತಿಲ್ಲ, ಕೆಲವರು ಕೆಲಸ ಮಾಡದೆ ಕೇವಲ ಹಾಜರಿ ಹಾಕುತ್ತಿದ್ದಾರೆ. ಇದರಿಂದ ಪ್ರಾಮಾಣಿಕರ ಮೇಲೆ ಹೆಚ್ಚುವರಿ ಕೆಲಸ ಬೀಳುತ್ತಿದೆ ಎನ್ನುವ ದೂರುಗಳಿದ್ದವು. ಹೀಗಾಗಿಯೇ ಪ್ರತಿಯೊಬ್ಬರ ಪೌರ ಕಾರ್ಮಿಕರಿಗೂ ಕ್ಷೇತ್ರದ ಹೊಣೆಗಾರಿಕೆ ನಿಗದಿಪಡಿಸಲಾಗಿದೆ.

500-800 ಮೀಟರ್‌ಗೆ ಒಬ್ಬರು: ಪೊಲೀಸ್‌ ಇಲಾಖೆಯಲ್ಲಿ ಇರುವಂತೆ ಬೀಟ್‌ ವ್ಯವಸ್ಥೆ ಮಾದರಿಯಲ್ಲಿ ಪೌರಕಾರ್ಮಿಕರಿಗೆ ಪ್ರದೇಶವನ್ನು ಹಂಚಿಕೆ ಮಾಡಲಾಗಿದೆ. ಮಾರುಕಟ್ಟೆ ವ್ಯಾಪ್ತಿಯಲ್ಲಿ 500 ಮೀಟರ್‌, ಮನೆಗಳಿರುವ ಪ್ರದೇಶದಲ್ಲಿ 800 ಮೀಟರ್‌ಗೆ ಒಬ್ಬರಂತೆ ಪೌರ ಕಾರ್ಮಿಕರಿಗೆ ಜವಾಬ್ದಾರಿ ನೀಡಲಾಗಿದೆ. ಅಲ್ಲಿನ ರಸ್ತೆ ಹಾಗೂ ಗಟಾರು ಸ್ವಚ್ಛತೆ ಇವರ ಹೊಣೆಗಾರಿಕೆಯಾಗಿದೆ. ಬೆಳಗ್ಗೆ 6:30 ರಿಂದ ಮಧ್ಯಾಹ್ನ 2:30 ಗಂಟೆವರೆಗೆ ನೀಡಿದ ಪ್ರದೇಶದಲ್ಲಿ ತಪ್ಪದೆ ಕೆಲಸ ಮಾಡಬೇಕು. ಹಂಚಿಕೆ ಮಾಡಿದ್ದರಿಂದ ಪ್ರತಿಯೊಬ್ಬರಿಗೂ ಜವಾಬ್ದಾರಿ ಬಂದಂತಾಗಿದ್ದು, ಕೆಲಸದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ.

ಕಠಿಣ ಕ್ರಮದ ಅಸ್ತ್ರ: ಈ ಕಾರ್ಯದ ಮೇಲುಸ್ತುವಾರಿ ಆಯಾ ಪ್ರದೇಶದ ಜಮಾದಾರ ಹಾಗೂ ಆರೋಗ್ಯ ನಿರೀಕ್ಷಕರದ್ದು. ನಿಗದಿತ ಸಮಯದಲ್ಲಿ ಆಯಾ ಪ್ರದೇಶದಲ್ಲಿ ಸ್ವಚ್ಛತಾ ಕೆಲಸ ಆಗದಿದ್ದರೆ ಆರೋಗ್ಯ ನಿರೀಕ್ಷಕ ಹಾಗೂ ಜಮಾದಾರ ಮೇಲೆ ಕ್ರಮ ಆಗಲಿದೆ. ಕೆಲಸ ಮಾಡದ ಕಾಯಂ ಪೌರಕಾರ್ಮಿಕರಿಗೆ ಸಿ ಆ್ಯಂಡ್‌ ಆರ್‌ ಪ್ರಕಾರ ಶಿಸ್ತುಕ್ರಮ, ನೇರ ವೇತನ ಪೌರಕಾರ್ಮಿಕರಿಗೆ ನೊಟೀಸ್‌ ನೀಡಿ ವೇತನ ಕಡಿತ-ಇತರೆ ಕ್ರಮ ಹಾಗೂ ಗುತ್ತಿಗೆ ಕಾರ್ಮಿಕರಿದ್ದರೆ ಗುತ್ತಿದಾರನಿಗೆ ನೊಟೀಸ್‌ ಜಾರಿ ಮಾಡಿ ಸಂಬಂಧಿಸಿದ ಪೌರಕಾರ್ಮಿಕರ ವೇತನ ಕಡಿತಗೊಳಿಸುವ ಕ್ರಮ ಆಗಲಿದೆ.

ಪೌರಕಾರ್ಮಿಕರ ಹಂಚಿಕೆ: ಈ ಹಿಂದೆ ಕೆಲವೊಂದು ವಾರ್ಡ್‌ಗಳಿಗೆ ಹೆಚ್ಚುವರಿ ಪೌರಕಾರ್ಮಿಕರಿದ್ದರೆ ಕೆಲವೆಡೆ ಕೊರತೆಯಿತ್ತು. ಹೀಗಾಗಿ ಸರಕಾರಿ ಆದೇಶದಂತೆ 700 ಜನರಿಗೆ ಒಬ್ಬ ಪೌರಕಾರ್ಮಿಕರಂತೆ 82 ಹೊಸ ವಾರ್ಡ್‌ಗಳಿಗೆ ಹಂಚಿಕೆ ಮಾಡಲಾಗಿದೆ. ಆಟೋ ಟಿಪ್ಪರ್‌ ಹಾಗೂ ಟ್ಯ್ರಾಕ್ಟರ್‌ಗಳಿಗೆ ಸಹಾಯಕರ ಕೆಲಸಕ್ಕೆ ನೀಡಲಾಗಿದೆ. ದೊಡ್ಡ ಗಟಾರು ಸ್ವತ್ಛತೆ, ನಿವೇಶನ ಸ್ವಚ್ಛತೆ ಸೇರಿದಂತೆ ತಂಡದ ಆಧಾರದ ಮೇಲೆ ಕಾರ್ಯಗಳಿಗಾಗಿ ಪ್ರತಿಯೊಂದು ವಲಯದಲ್ಲಿ ಪೌರಕಾರ್ಮಿಕರ ತಂಡ ಮೀಸಲಿಡಲಾಗಿದೆ. ಗೈರಾದ ಸ್ಥಳಕ್ಕೆ ಇವರನ್ನು ನಿಯೋಜಿಸಿ ಅಂದಿನ ಕೆಲಸ ಪೂರ್ಣಗೊಳಿಸಲಾಗುತ್ತದೆ.

Advertisement

ಆಟೋ ಟಿಪ್ಪರ್‌ಗಳೂ ಹಂಚಿಕೆ

ಪಾಲಿಕೆಯಲ್ಲಿರುವ 193 ಆಟೋ ಟಿಪ್ಪರ್‌ಗಳಿಗೆ ತಲಾ ಒಂದಕ್ಕೆ ಇಂತಿಷ್ಟು ಪ್ರದೇಶ, 800-1000 ಮನೆಗಳ ಕಸ ಸಂಗ್ರಹ ಹೊಣೆ ನೀಡಲಾಗಿದೆ. ಆಟೋ ಟಿಪ್ಪರ್‌ಗಳಿಗೆ ಜಿಪಿಎಸ್‌ ಹಾಗೂ ಜಿಯೋ ಫಿನಿಶಿಂಗ್‌ ಅಳವಡಿಸಲಾಗಿದೆ. ನೀಡಿದ ಪ್ರದೇಶ ಬಿಟ್ಟು ಹೊರಹೋಗುವಂತಿಲ್ಲ. ಆರೋಗ್ಯ ನಿರೀಕ್ಷಕರಿಂದ ಹಿಡಿದು ಪಾಲಿಕೆ ಆಯುಕ್ತರವರೆಗೂ ಮೇಲ್ವಿಚಾರಣೆ ನಡೆಯುತ್ತಿದ್ದು, ಎಷ್ಟು ಮನೆಗಳಿಂದ ಕಸ ಸಂಗ್ರಹಿಸಲಾಗಿದೆ ಎಂಬುದು ಆರ್‌ಎಫ್‌ಐಡಿ ರೀಡಿಂಗ್‌ ಮೂಲಕ ಪತ್ತೆ ಹಚ್ಚಲಾಗುತ್ತಿದೆ. ಮಹಾನಗರದ ಜನಸಂಖ್ಯೆಗೆ ತಕ್ಕಂತೆ ಪೌರಕಾರ್ಮಿಕರಿದ್ದಾರೆ. ಆದರೆ ಬಂದು ಹೋಗುವ ಜನಸಂಖ್ಯೆಗೆ ಹೋಲಿಸಿದರೆ ಸುಮಾರು 200 ಪೌರ ಕಾರ್ಮಿಕರು ಅಗತ್ಯವಾಗಿದೆ. ಕಾನೂನು ಚೌಕಟ್ಟಿನಲ್ಲಿಯೇ ಈ ಕೊರತೆ ಸರಿದೂಗಿಸಲು ಯಂತ್ರಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದ್ದಾರೆ.

ಕೆಲ ಸದಸ್ಯರ ಅಪಸ್ವರ

ಹೊಸ ವ್ಯವಸ್ಥೆಗೆ ಕೆಲ ಪಾಲಿಕೆ ಸದಸ್ಯರು ಅಪಸ್ವರ ಎತ್ತಿದ್ದಾರೆ. ತಮ್ಮ ವಾರ್ಡಿಗೆ ಹೆಚ್ಚಿನ ಪೌರಕಾರ್ಮಿಕರು ಬೇಕು ಎನ್ನುವ ಕಾರಣಕ್ಕೆ ವಿರೋಧಿಸುತ್ತಿದ್ದಾರೆ. ಹೊಸ ಬಡಾವಣೆಗಳು, ಹೊರವಲಯದ ಪ್ರದೇಶಗಳಲ್ಲಿ ಜನಸಂಖ್ಯೆ ಕಡಿಮೆಯಿರುತ್ತದೆ. ಆದರೆ ಪ್ರದೇಶ ದೊಡ್ಡದಿರುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಿರುವುದರಿಂದ ಓರ್ವ ಕಾರ್ಮಿಕನಿಂದ ದೊಡ್ಡ ಪ್ರದೇಶ ಸ್ವಚ್ಛತೆ ಕಷ್ಟ ಎನ್ನುವುದು ಕೆಲ ಸದಸ್ಯರ ಅಭಿಪ್ರಾಯ.

ಈ ವಿರೋಧದ ಹಿಂದೆ ಹೆಸರಿಗಷ್ಟೇ ಹೆಚ್ಚು ಜನರನ್ನು ತೋರಿಸಿ ಕಡಿಮೆ ಕಾರ್ಮಿಕರಿಗೆ ಕೆಲಸ ಮಾಡಿಸುತ್ತಿರುವ ಕೆಲ ಗುತ್ತಿಗೆದಾರರು ಇದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಸ್ವತ್ಛತಾ ಕಾರ್ಯದಲ್ಲಿ ದೊಡ್ಡ ಬದಲಾವಣೆ ತರಲಿದೆ ಎಂಬುದು ಪಾಲಿಕೆ ಅಧಿಕಾರಿಗಳ ಅಭಿಪ್ರಾಯ. ಮಹಾನಗರದ ಸ್ವಚ್ಛತಾ ಕಾರ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬದಲಾವಣೆ ಮಾಡಲಾಗುತ್ತಿದ್ದು, ಇದರ ಭಾಗವಾಗಿ ಪ್ರತಿಯೊಬ್ಬ ಪೌರಕಾರ್ಮಿಕರಿಗೆ ಇಂತಿಷ್ಟು ಪ್ರದೇಶದ ಹೊಣೆಗಾರಿಕೆ ನೀಡಲಾಗಿದೆ. ತಪ್ಪಿದರೆ ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸ್ವಚ್ಛತಾ ಕಾರ್ಯದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ. ಯಾವುದೇ ದೂರುಗಳು ಬಾರದಂತೆ ಸ್ವಚ್ಛತಾ ಕಾರ್ಯ ನಡೆಯಬೇಕು ಎಂಬುದು ಈ ವ್ಯವಸ್ಥೆಯ ಮೂಲ ಉದ್ದೇಶವಾಗಿದೆ. –ಡಾ| ಬಿ.ಗೋಪಾಲಕೃಷ್ಣ, ಪಾಲಿಕೆ ಆಯುಕ್ತ

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next